ಭಾರತಪ್ರಪಂಚವಿಶೇಷರಾಜಕೀಯಮನರಂಜನೆಅಪರಾಧಕ್ರೀಡೆಕರ್ನಾಟಕಇ- ಪೇಪರ್

ಬೈಕ್ ಟ್ಯಾಕ್ಸಿ ಚಾಲಕರಿಂದ ಪ್ರತಿಭಟನೆಗೆ ನಿರ್ಧಾರ

KannadaprabhaNewsNetwork | Published : Jun 10, 2025 1:53 AM

ಮೈಸೂರಿನ ನಗರದಲ್ಲಿ ಸುಮಾರು 250ಕ್ಕೂ ಹೆಚ್ಚು ಬೈಕ್ ಟ್ಯಾಕ್ಸಿ ಚಾಲಕರುಗಳಿದ್ದು,

ಕನ್ನಡಪ್ರಭ ವಾರ್ತೆ ಮೈಸೂರುಮೈಸೂರಿನಲ್ಲಿ ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವ ಬೈಕ್ ಟ್ಯಾಕ್ಸಿ ಅಸೋಸಿಯೇಷನ್ ವತಿಯಿಂದ ಭಾನುವಾರ ಒಂಟಿಕೊಪ್ಪಲ್ ನ ಚೆಲುವಾಂಬ ಉದ್ಯಾನವನದಲ್ಲಿ ಬೈಕ್ ಟ್ಯಾಕ್ಸಿ ಚಾಲಕರ ಸಭೆ ನಡೆಯಿತು.ಸಂಘದ ಅಧ್ಯಕ್ಷ ಮಹಾದೇವ ನಾಯಕ ನೇತೃತ್ವದಲ್ಲಿ ನಡೆದ ಈ ಸಭೆಯಲ್ಲಿ ಬೈಕ್ ಟ್ಯಾಕ್ಸಿ ಚಾಲಕರು ತಮ್ಮ ಕೋರಿಕೆಗಳನ್ನು ಮುಂದಿಟ್ಟು ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟಿಸಲು ತೀರ್ಮಾನಿಸಿದರು.ಮೈಸೂರಿನ ನಗರದಲ್ಲಿ ಸುಮಾರು 250ಕ್ಕೂ ಹೆಚ್ಚು ಬೈಕ್ ಟ್ಯಾಕ್ಸಿ ಚಾಲಕರುಗಳಿದ್ದು, ಇವರು ರಾಪಿಡ್ ಆಟೋ, ಉಬರ್ ಆಟೋ, ಓಲಾ ಆಟೋಗಳಂತೆ ತಮ್ಮ ಬೈಕುಗಳಲ್ಲಿ ಆನ್ಲೈನ್ ಮೂಲಕ ಬುಕ್ ಮಾಡಿದ ಗ್ರಾಹಕರನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಕರೆದುಕೊಂಡು ಹೋಗಿ ಬಿಡುವ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ, ಇವರು ಆನ್ಲೈನ್ ಮೂಲಕ ಬುಕ್ ಮಾಡಿದ ಗ್ರಾಹಕರ ಸ್ಥಳಗಳಿಗೆ ತೆರಳಿ ಅವರನ್ನು ತಮ್ಮ ಬೈಕುಗಳಲ್ಲಿ ಕೂರಿಸಿಕೊಂಡು 3 ಕಿ.ಮೀ.ಗೆ 30 ರೂ. ಮಾತ್ರ ಪ್ರಯಾಣ ದರ ತೆಗೆದುಕೊಂಡು ಗ್ರಾಹಕರನ್ನು ಕರೆದುಕೊಂಡು ಹೋಗುವ ಕೆಲಸ ಮಾಡುತ್ತಾರೆ, ಇದರಿಂದ ಅವರ ಮತ್ತು ಅವರ ಕುಟುಂಬದ ಜೀವನ ಸಾಗುತ್ತದೆ ಎಂದರು.ಈ ವೃತ್ತಿ ಮೂಲಕ ಸರ್ಕಾರಕ್ಕೂ ಕೂಡ ಜಿ.ಎಸ್‌.ಟಿ ರೂಪದಲ್ಲಿ ಹಣ ಪಾವತಿಸುತ್ತಾರೆ. ಹೀಗಿರುವಾಗ ನ್ಯಾಯಾಲಯಗಳು ಬೈಕ್ ಟ್ಯಾಕ್ಸಿ ವೃತ್ತಿಯನ್ನು ರದ್ದುಗೊಳಿಸಲು ಆದೇಶ ಹೊರಡಿಸಿದೆ, ಇದರಿಂದ ನಮಗೆ ತುಂಬಾ ತೊಂದರೆ ಆಗಿದೆ ನಮ್ಮ ಹೆಂಡತಿ ಮಕ್ಕಳ ಸಾಕಲು ತುಂಬಾ ಕಷ್ಟವಾಗುತ್ತದೆ. ಆದ್ದರಿಂದ ಸರ್ಕಾರ ನಮಗೆ ಬೇರೊಂದು ಪರಿಹಾರ ಮಾರ್ಗ ಒದಗಿಸಿಕೊಡಬೇಕು, ಇಲ್ಲದಿದ್ದರೆ ನ್ಯಾಯಾಲಯಕ್ಕೆ ಮನದಟ್ಟು ಮಾಡಿ ಬೈಕ್ ಟ್ಯಾಕ್ಸಿ ಓಡಿಸಲು ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸುವುದಾಗಿ ಸಂಘದ ಅಧ್ಯಕ್ಷ ಮಹಾದೇವ ನಾಯಕ ತಿಳಿಸಿದರು.ಈ ಬಗ್ಗೆ ನಮಗೆ ಬೈಕ್ ಟ್ಯಾಕ್ಸಿ ಓಡಿಸಲು ಅವಕಾಶ ಕೋರಿ ಅಥವಾ ನಮ್ಮ ಜೀವನಕ್ಕೆ ಪರ್ಯಾಯ ಹುದ್ದೆಯನ್ನು ಸೃಷ್ಟಿಸಿ ಕೊಡಬೇಕು ಎಂದು ಒತ್ತಾಯಿಸಿ ಈಗಾಗಲೇ ಸಾರಿಗೆ ಸಚಿವರು, ಮೈಸೂರಿನ ಶಾಸಕರು, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ. ನ್ಯಾಯಾಲಯವು ನಮ್ಮ ಈ ಮನವಿಯನ್ನು ಪರಿಷ್ಕರಿಸಿ ಬೈಕ್ ಟ್ಯಾಕ್ಸಿ ರದ್ಧತಿ ಆದೇಶವನ್ನು ಹಿಂದಕ್ಕೆ ಪಡೆಯಬೇಕು ಎಂದು ಅವರು ಕೋರಿದರು.ಬೈಕ್ ಟ್ಯಾಕ್ಸಿ ಸೇವೆಯಿಂದ ಗ್ರಾಹಕರ ತುರ್ತಿಗೆ ಉಪಯೋಗವಾಗುತ್ತಿದೆ. ಆಸ್ಪತ್ರೆ, ಕಚೇರಿ, ಬಸ್ ನಿಲ್ದಾಣ, ರೈಲು ನಿಲ್ದಾಣಗಳಿಂದ ತಮ್ಮ ಮನೆಗಳಿಗೆ ತೆರಳುವ ಗ್ರಾಹಕರು ಮತ್ತು ಇತರೆ ಅವಸರ ಕೆಲಸಗಳಿಗೆ ತೆರಳುವ ಗ್ರಾಹಕರಗಳು ಕರೆ ಮಾಡಿದ ತಕ್ಷಣ ಅವರ ಇರುವ ಸ್ಥಳಗಳಿಗೆ ಹೋಗಿ ಅವರನ್ನು ಹೇಳಿದ ಸ್ಥಳಗಳಿಗೆ ಸುರಕ್ಷಿತವಾಗಿ ಕರೆದೊಯ್ದು ಬಿಟ್ಟು ಬರುತ್ತೇವೆ ಎಂದು ಅವರು ಹೇಳಿದರು.ಈ ವೇಳೆ ಸಂಘಟನೆಯ ಮತ್ತೋರ್ವ ಸದಸ್ಯ ಎಂ. ಶಂಕರ್ ಮಾತನಾಡಿ, ಸರ್ಕಾರ ಯಾವುದೇ ತೀರ್ಮಾನಕ್ಕೆ ಬರೆದಿದ್ದಲ್ಲಿ ನಾವು ಜನತಾ ನ್ಯಾಯಾಲಯದ ಮೊರೆ ಹೋಗಬೇಕಾಗುತ್ತದೆ, ಪ್ರತಿಭಟನೆಗೆ ಇಳಿಯಬೇಕಾಗುತ್ತದೆ. ಆದ್ದರಿಂದ ಸರ್ಕಾರವು ನಮ್ಮ ಬದುಕಿಗೆ ಆಶ್ರಯವಾಗಬೇಕು. ಮತ್ತೆ ಬೈಕ್ ಟ್ಯಾಕ್ಸಿ ಓಡಿಸಲು ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.