ದಾಬಸ್ಪೇಟೆ: ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ದಿ ಮಂಡಳಿ(ಕೆಐಎಡಿಬಿ) ಸೋಂಪುರ ಹೋಬಳಿಯಲ್ಲಿ 525 ಎಕರೆ ಜಮೀನನ್ನು ಭೂಸ್ವಾದೀನಪಡಿಸಿಕೊಳ್ಳಲು ಅಧಿಸೂಚನೆ ಹೊರಡಿಸಿದ್ದು ಪರಿಹಾರ ಪಡೆಯಲು ಅಧಿಕಾರಿಗಳು ಹಾಗೂ ಬ್ರೋಕರ್ಗಳು ಸ್ವಾಧೀನವಾಗಿರುವ ಖಾಲಿ ಜಮೀನುಗಳಲ್ಲಿ ಗಿಡ ನೆಟ್ಟು ಸಾವಿರಾರು ಕೋಟಿ ವಂಚಿಸಲು ಯೋಜನೆ ರೂಪಿಸಿರುವ ಆರೋಪಗಳು ಕೇಳಿ ಬಂದಿದೆ.
ಸೋಂಪುರ ಹೋಬಳಿಯ ಕಂಬಾಳು, ಮಾಚನಹಳ್ಳಿ, ಘಂಟೆಹೊಸಹಳ್ಳಿ, ಕಾಸರಘಟ್ಟ ಗ್ರಾಮಗಳ ರೈತರ ಭೂಮಿಯನ್ನು ಕೆಐಎಡಿಬಿ ಖರೀದಿಸುತ್ತಿದೆ. ಆದರೆ, ಸರ್ಕಾರದ ಮಾನದಂಡಗಳ ಅಡಿಯಲ್ಲಿ ಹಣ ನಿಗದಿ ಮಾಡಿ ಖರೀದಿಸಿದರೂ ಮತ್ತೊಂದು ಮಾರ್ಗದಲ್ಲಿ ಬ್ರೋಕರ್ಗಳ ಮುಖಾಂತರ ಸರ್ಕಾರದ ಬೊಕ್ಕಸಕ್ಕೆ ಕನ್ನ ಹಾಕುವ ಹುನ್ನಾರ ನಡೆದಿದೆ ಎನ್ನಲಾಗಿದೆ.
ಹಳೆ ಗಿಡಗಳೆಂದು ಬಿಂಬಿಸುವ ಯತ್ನ:ಕಳೆದ ಡಿಸೆಂಬರ್-2023ರಲ್ಲಿ ಕೆಐಎಡಿಬಿ ರೈತರ ಜಮೀನನ್ನೂ ಭೂಸ್ವಾಧೀನ ಪಡಿಸಿಕೊಳ್ಳಲು ನೋಟಿಸ್ ಜಾರಿ ಮಾಡಿದೆ. ಇದರ ಪ್ರಕಾರ ಜಮೀನುಗಳಲ್ಲಿ ಹಿಂದಿನಿಂದಲೂ ಬೆಳೆದಿದ್ದ ಗಿಡಮರಗಳಿಗೆ ಪರಿಹಾರ ನೀಡುವ ಅವಕಾಶವಿದೆ. ಆದರೆ ರಾತ್ರೋರಾತ್ರಿ ಗಿಡ ತಂದು ನೆಟ್ಟು ಹಲವು ವರ್ಷಗಳಿಂದ ಜಮೀನಿನಲ್ಲಿ ಮರಗಿಡಗಳಿದ್ದು ಪರಿಹಾರ ಪಡೆದು ಸರ್ಕಾರಕ್ಕೆ ಮೋಸ ಮಾಡಲು ಕೆಲವರು ಮುಂದಾಗಿದ್ದಾರೆ.
ಸ್ವಾಧೀನಪಡಿಸಿಕೊಂಡಿರುವ ಬಹುಪಾಲು ಜಮೀನುಗಳಲ್ಲಿ ರೈತರು ರಾಗಿ, ಜೋಳ ಬೆಳೆಯುತ್ತಿದ್ದರು. ಶೇ.20ರಷ್ಟು ಭಾಗವಷ್ಟೇ ಗಿಡಮರಗಳನ್ನು ಬೆಳೆಸಿದ್ದರು. ಆದರೆ ಕಳೆದ ಎರಡು-ಮೂರು ತಿಂಗಳಿಂದ ಖಾಲಿಯಿದ್ದ ರೈತರ ಜಮೀನುಗಳಲ್ಲಿ ಲಕ್ಷಾಂತರ ಗಿಡಮರಗಳು ತಲೆ ಎತ್ತಿವೆ. ಈ ಗಿಡಮರಗಳು ಬಹಳ ವರ್ಷದಿಂದಲೇ ಬೆಳೆದಿದ್ದೇವೆ ಎಂದು ಬ್ರೋಕರ್ಗಳು ಬಿಂಬಿಸಿ ಪರಿಹಾರ ಪಡೆಯಲು ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ.
ಬೇರೆ ರಾಜ್ಯಗಳಿಂದ ಗಿಡ ಆಮದು:ರೈತರ ಜಮೀನುಗಳಲ್ಲಿ ಗಿಡ ನೆಡಲು ತೋಟಗಾರಿಕೆ ಇಲಾಖೆ ಮತ್ತು ಕೆಐಎಡಿಬಿ ಅಧಿಕಾರಿಗಳು ಬ್ರೋಕರ್ಗಳ ಮೂಲಕ ಆಂಧ್ರದ ರಾಜಮಂಡ್ರಿ ಹಾಗೂ ತಮಿಳುನಾಡಿನ ವಿವಿಧ ನರ್ಸರಿಗಳಿಂದ ರಾತ್ರೋರಾತ್ರಿ ಅಡಿಕೆ, ಮಾವು, ಹುಣಸೆ ಸೇರಿ ಲಕ್ಷಾಂತರ ಸಸಿಗಳನ್ನು ತಂದು ನೆಟ್ಟು, ಪರಿಹಾರದ ಹಣವನ್ನು ನೀಡಿ ಗುಳುಂ ಮಾಡುವ ಯೋಜನೆ ರೂಪಿಸುತ್ತಿದ್ದಾರೆ.
ಬ್ರೋಕರ್ಗಳ ಒಡಂಬಡಿಕೆ:ಬ್ರೋಕರ್ಗಳು ಲಕ್ಷಾಂತರ ಹಣ ವ್ಯಯಿಸುತ್ತಿದ್ದು ರೈತರೊಂದಿಗೆ ಒಡಂಬಡಿಕೆ ಮಾಡಿಕೊಂಡು ಇಲ್ಲವೇ ನಿಮಗೆ ಭೂ ಪರಿಹಾರ ನೀಡುವುದಿಲ್ಲವೆಂದು ಹೆದರಿಸಿ ಒಂದು ಎಕರೆಗೆ ಕನಿಷ್ಟ 25 ರಿಂದ 30 ಲಕ್ಷ ಹಣ ವಾಮಮಾರ್ಗದಲ್ಲಿ ಪಡೆಯುತ್ತಿದ್ದಾರೆ ಎನ್ನಲಾಗಿದೆ.
ಬಾಕ್ಸ್..........ರೈತರಿಗೆ 25%, ಬ್ರೋಕರ್ಗಳಿಗೆ 75% ಕಮಿಷನ್:
ಬ್ರೋಕರ್ ಗಳು ರೈತರ ಜಮೀನಲ್ಲಿ ಗಿಡಗಳನ್ನು ನೆಡಲು ಒಡಂಬಡಿಕೆ ಮಾಡಿಕೊಂಡಿದ್ದು, ಬಂದ ಪರಿಹಾರದಲ್ಲಿ ರೈತರಿಗೆ 25% ಹಣವನ್ನು ನೀಡಿ ಉಳಿದ 75% ಹಣವನ್ನು ಬ್ರೋಕರ್ ಗಳು ಪಡೆದುಕೊಳ್ಳಲು ಯೋಜನೆ ರೂಪಿಸಿರುವುದು ಒಂದು ಕಡೆಯಾದರೆ ಇನ್ನೂ ಕೆಲವು ಬ್ರೋಕರ್ ಗಳು ಎಕರೆಗೆ ಐದು ಲಕ್ಷ ಹಣ ನೀಡಿ ರೈತರಿಗೆ ಮೋಸ ಮಾಡಲು ಯೋಜನೆ ರೂಪಿಸಿದ್ದಾರೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.ಕೋಟ್.................ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರ ಅಥವಾ ಇಸ್ರೋದ ಸ್ಯಾಟಲೈಟ್ ಮ್ಯಾಪಿಂಗ್ ಆಧರಿಸಿಯೇ ಅಧಿಸೂಚಿತ ಜಮೀನುಗಳಿಗೆ ಪರಿಹಾರ ವಿತರಿಸಲಾಗುವುದು. ಅಧಿಸೂಚನೆ ಹೊರಡಿಸಿದ ನಂತರ ಹೆಚ್ಚಿನ ಪರಿಹಾರಕ್ಕಾಗಿ ಗಿಡ ತಂದು ನೆಟ್ಟು ಸಂಸ್ಥೆಗೆ ನಷ್ಟ ಉಂಟು ಮಾಡಿದರೆ ಸಂಬಂಧಪಟ್ಟ ವಿಶೇಷ ಭೂಸ್ವಾಧೀನಾಧಿಕಾರಿಯನ್ನೇ ಹೊಣೆಗಾರರನ್ನಾಗಿ ಮಾಡಲಾಗುತ್ತದೆ. ಅಂತಹ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು.
-ಡಾ.ಮಹೇಶ್, ಕೆಐಎಡಿಬಿ, ಸಿಇಒಕೋಟ್..............
ಕೆಐಎಡಿಬಿ ಅಧಿಕಾರಿಗಳು ಸರ್ಕಾರಕ್ಕೆ ನಷ್ಟ ಉಂಟು ಮಾಡುವ ಜೊತೆಗೆ ಬ್ರೋಕರ್ಗಳೊಂದಿಗೆ ಸೇರಿ ಸಸಿ ನೆಡಿಸುತ್ತಿದ್ದು, ರೈತರಿಗೆ ಇದರಿಂದ ಯಾವುದೇ ಅನುಕೂಲವಾಗುವುದಿಲ್ಲ. ಬದಲಿಗೆ ಮಧ್ಯವರ್ತಿ ಹಾಗೂ ಅಧಿಕಾರಿಗಳ ಜೇಬು ತುಂಬಲಿದೆ. ಆದ್ದರಿಂದ ಈ ಕುರಿತು ತನಿಖೆ ನಡೆಸುವುದು ಅಗತ್ಯ.-ಜಗದೀಶ್ ಚೌದರಿ, ಸ್ಥಳೀಯ ಮುಖಂಡ
ಪೋಟೋ 1 :ಸೋಂಪುರ ಹೋಬಳಿಯಲ್ಲಿ ಭೂಸ್ವಾಧೀನ ಜಮೀನಿನಲ್ಲಿ ಗಿಡ ನೆಡಲು ಗುಂಡಿ ತೋಡಿರುವುದು.
ಪೋಟೋ 2 :ಗಿಡಗಳು ಸಂಗ್ರಹಿಟ್ಟಿರುವುದು.
ಪೋಟೋ 4 :ಗಿಡಗಳನ್ನು ನೆಟ್ಟಿರುವುದು.