- ಇಸ್ರೋ ವಿಜ್ಞಾನಿ ಶ್ರೀನಾಥ ರತ್ನಕುಮಾರ್ ಅಭಿಮತ । ವಿಜ್ಞಾನ ರಸಪ್ರಶ್ನೆ ಸ್ಪರ್ಧೆ ವಿಜೇತರಿಗೆ ಬಹುಮಾನ - - -
(ವಿಜ್ಞಾನ ದಿನಾಚರಣೆ)- - - ಕನ್ನಡಪ್ರಭ ವಾರ್ತೆ ದಾವಣಗೆರೆ
ಸ್ವಾತಂತ್ರ್ಯದ ನಂತರ ಮೂಲಸೌಕರ್ಯಗಳ ಸಮಸ್ಯೆಗಳಿದ್ದರೂ ವಿಕ್ರಂ ಸಾರಾಭಾಯಿ ಬಾಹ್ಯಾಕಾಶದ ಅಧ್ಯಯಕ್ಕೆ ಆದ್ಯತೆ ನೀಡಿದರು. ಅಂದಿನ ಪ್ರಧಾನ ಮಂತ್ರಿಗಳ ಮನವೊಲಿಸಿ ವಿಜ್ಞಾನ ಕ್ಷೇತ್ರಕ್ಕೆ ಬೇಕಾದ ಮೂಲಭೂತ ಸೌಲಭ್ಯ, ಆರ್ಥಿಕ ನೆರವು ಒದಗಿಸಬೇಕೆಂದು ಕೋರಿದರು. ಇದರ ಪರಿಣಾಮ ಇಂದು ಬಾಹ್ಯಾಕಾಶ ಕ್ಷೇತ್ರದಲ್ಲಿ 4ನೇ ರಾಷ್ಟ್ರವಾಗಿ ಹೊರಹೊಮ್ಮಿದ್ದೇವೆ. ಹೀಗೆ ಭಾರತೀಯ ವಿಜ್ಞಾನ ಕ್ಷೇತ್ರಕ್ಕೆ ಸಾರಾಭಾಯಿ ಕೊಡುಗೆ ಅಪಾರವಾಗಿದೆ ಎಂದು ಇಸ್ರೋ ವಿಜ್ಞಾನಿ ಶ್ರೀನಾಥ ರತ್ನಕುಮಾರ್ ಹೇಳಿದರು.ನಗರದ ಎಂ.ಎಂ. ಶಿಕ್ಷಣ ಮಹಾವಿದ್ಯಾಲಯದಲ್ಲಿ ಶನಿವಾರ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ಜಿಲ್ಲಾ ಬಾಲ ಭವನ, ಎ.ಕೆ. ಫೌಂಡೇಷನ್ ಸಹಯೋಗದಲ್ಲಿ ಆಯೋಜಿಸಲಾಗಿದ್ದ ವಿಜ್ಞಾನ ರಸಪ್ರಶ್ನೆ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ ಮತ್ತು ವಿಜ್ಞಾನ ದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿಕ್ರಂ ಸಾರಾಭಾಯಿ ಅತ್ಯಂತ ಶ್ರೀಮಂತರಾಗಿದ್ದು, ಆಗಿನ ಕಾಲಕ್ಕೆ ಬೇಕಾದ ಎಲ್ಲ ಉದ್ಯಮಗಳನ್ನು ನಿರ್ವಹಿಸಿಕೊಂಡು ಹೋಗಬಹುದಾಗಿತ್ತು. ಆದರೆ ಉದ್ಯಮದ ಜೊತೆ ಸಮಾಜ ಸೇವೆ ಮಾಡಬೇಕು ಎಂಬ ಕಾರಣದಿಂದ ಎಲ್ಲ ಕ್ಷೇತ್ರಗಳಲ್ಲಿ ಅವರು ತಮ್ಮ ಛಾಪು ಮೂಡಿಸಿದರು. ಹಲವಾರು ಶಿಕ್ಷಣ ಮತ್ತು ವಿಜ್ಞಾನ ಸಂಸ್ಥೆಗಳನ್ನು ಕಟ್ಟಿ, ಮೌಲ್ಯಯುತ ಶಿಕ್ಷಣ ಕೊಡುವಲ್ಲಿ ಮೊದಲಿಗರಾದರು. ಬಾಹ್ಯಾಕಾಶ ಸಂಶೋಧನೆ ಮತ್ತು ಅಧ್ಯಯನಕ್ಕಾಗಿ ಇಸ್ರೋದಂತಹ ಸಂಸ್ಥೆ ಕಟ್ಟಿದ್ದರಿಂದಾಗಿ ಈಗ ನಾವು ಪ್ರಪಂಚದಲ್ಲಿಯೇ ಬಾಹ್ಯಾಕಾಶ ವಿಜ್ಞಾನದಲ್ಲಿ ನಾಲ್ಕನೇಯ ಸ್ಥಾನದಲ್ಲಿ ಮುಂಚೂಣಿಯಲ್ಲಿದ್ದೇವೆ ಎಂದರು.ಎ.ಕೆ. ಫೌಂಡೇಶನ್ನ ಸಂಸ್ಥಾಪಕ ಕೆ.ಬಿ. ಕೊಟ್ರೇಶ್ ಮಾತನಾಡಿ, ಪರಿಸರ ಅನ್ನುವುದು ನಮ್ಮೆಲ್ಲರಿಗೂ ಸಂಬಂಧಿಸಿದ್ದು ನಾವಿಂದು ಪರಿಸರಕ್ಕೆ ಹಲವಾರು ಬಗೆಗಳಲ್ಲಿ ಧಕ್ಕೆ ಆಗುತ್ತಿರುವುದನ್ನು ಕಂಡಿದ್ದೇವೆ. ನಮ್ಮ ಹೊಸ ಉದ್ಯಮ ಯಾವುದೇ ಆಗಿರಲಿ, ಅದರ ಉತ್ಪನ್ನವು ಮರುಬಳಕೆ ಆಗುವಂಥದ್ದಾಗಿದ್ದರೆ ಮಾತ್ರ ಪರಿಸರಕ್ಕೆ ಉತ್ತಮ ಕೊಡುಗೆ ಆಗಬಲ್ಲದು ಎಂದು ಹೇಳಿದರು.
ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ಶುಕ್ರವಾರ ನಡೆದ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನವನ್ನು ವಿತರಿಸಲಾಯಿತು. ಭೌತಶಾಸ್ತ್ರ ವಿಭಾಗದ ಪ್ರೊ. ಎಸ್.ಹಾಲಪ್ಪ ಅಧ್ಯಕ್ಷತೆ ವಹಿಸಿದ್ದರು. ಕರಾವಿಪ ಗೌರವಾಧ್ಯಕ್ಷ ಡಾ. ಜೆ.ಬಿ.ರಾಜ್, ಕಾರ್ಯದರ್ಶಿ ಎಂ.ಗುರುಸಿದ್ದ ಸ್ವಾಮಿ, ಡಾ. ಎಂ.ಆರ್. ಜಗದೀಶ್, ಎಂ.ಎಂ. ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಕೆ.ಟಿ. ನಾಗರಾಜ್ ನಾಯ್ಕ, ಜಿಲ್ಲಾ ಬಾಲಭವನ ಕಾರ್ಯಕ್ರಮ ಸಂಯೋಜಕಿ ಎಸ್.ಬಿ. ಶಿಲ್ಪ, ಕ್ವಿಜ್ ಶಿಕ್ಷಕರಾದ ಸಿದ್ದೇಶ ಕತ್ತಲಗೆರೆ, ಟಿ.ಸುರೇಶ್ ಪಾಲ್ಗೊಂಡಿದ್ದರು.- - - -1ಕೆಡಿವಿಜಿ38:
ದಾವಣಗೆರೆಯಲ್ಲಿ ವಿಜ್ಞಾನ ರಸಪ್ರಶ್ನೆ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ, ವಿಜ್ಞಾನ ದಿನ ಕಾರ್ಯಕ್ರಮವನ್ನು ಶ್ರೀನಾಥ ರತ್ನಕುಮಾರ್ ಉದ್ಘಾಟಿಸಿದರು.