ಮಂಗಳೂರು: ದೇಶದ ಪ್ರಥಮ ಗೃಹ ಸಚಿವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 150ನೇ ಜನ್ಮ ದಿನದ ಸ್ಮರಣಾರ್ಥ ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯವು ದೇಶಾದ್ಯಂತ ‘ಸರ್ದಾರ್@ 150 ಏಕತಾ ಮಾರ್ಚ್’ನ್ನು ಘೋಷಿಸಿದೆ. ಈ ಉಪಕ್ರಮದ ಅಂಗವಾಗಿ ದ.ಕ.ದ ಮಂಗಳೂರಿನಲ್ಲಿ ನ.10ರಂದು ಹಾಗೂ ಪುತ್ತೂರಿನಲ್ಲಿ ನ.12ರಂದು ಪಾದಯಾತ್ರೆ ನಡೆಸಲು ಉದ್ದೇಶಿಸಲಾಗಿದೆ ಎಂದು ಸಂಸದ ಕ್ಯಾ.ಬ್ರಿಜೇಶ್ ಚೌಟ ತಿಳಿಸಿದ್ದಾರೆ.ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಅಭಿಯಾನವು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜನಭಾಗಿದಾರಿ ರಾಷ್ಟ್ರ ನಿರ್ಮಾಣದ ದೃಷ್ಟಿಕೋನದ ಹಿನ್ನೆಲೆಯಲ್ಲಿ ದೇಶದ ಯುವಜನರಲ್ಲಿ ಏಕತೆ, ದೇಶಭಕ್ತಿ ಮತ್ತು ನಾಗರಿಕ ಜವಾಬ್ದಾರಿಯ ಭಾವನೆಯನ್ನು ಎಚ್ಚರಗೊಳಿಸುವ ಗುರಿ ಹೊಂದಿದೆ. ಈ ಮೂಲಕ ಯುವಜನರು ಏಕ್ ಭಾರತ್, ಆತ್ಮನಿರ್ಭರ ಭಾರತ್ ಆದರ್ಶಗಳನ್ನು ಅಳವಡಿಸಿಕೊಳ್ಳಲು ಪ್ರೋತ್ಸಾಹಿಸಲಾಗುತ್ತದೆ ಎಂದು ಹೇಳಿದರು.ಜನತೆ ಕೈಜೋಡಿಸಿ:
ಈ ಅಭಿಯಾನದ ಭಾಗವಾಗಿ ದೇಶವ್ಯಾಪಿ ರೀಲ್ಸ್ ಸ್ಪರ್ಧೆ, ಪ್ರಬಂಧ ಸ್ಪರ್ಧೆ, ಮತ್ತು ಸರ್ದಾರ್ ಎಟ್ 150 ಯಂಗ್ ಲೀಡರ್ಸ್ ಕಾರ್ಯಕ್ರಮಕ್ಕೆ ಈಗಾಗಲೇ ಕೇಂದ್ರ ಸಚಿವ ಡಾ.ಮನಸುಖ್ ಮಾಂಡವಿಯಾ ಅವರು ಚಾಲನೆ ನೀಡಿದ್ದು, ರಾಷ್ಟ್ರವ್ಯಾಪಿ ಆಯ್ಕೆಯಾಗುವ 150 ವಿಜೇತರು ರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಪಾದಯಾತ್ರೆಯಲ್ಲಿ ಭಾಗವಹಿಸುವ ಅವಕಾಶ ಪಡೆಯಲಿದ್ದಾರೆ. ರಾಷ್ಟ್ರೀಯ ಮಾರ್ಚ್ ನ.26ರಿಂದ ಡಿ.6ರವರೆಗೆ ಕರಮಸದ್ನಿಂದ ಸ್ಟ್ಯಾಚ್ಯೂ ಆಫ್ ಯೂನಿಟಿವರೆಗೆ 152 ಕಿ.ಮೀ. ಉದ್ದಕ್ಕೆ ನಡೆಯಲಿದೆ ಎಂದು ಹೇಳಿದರು.
ನಶಾ ಮುಕ್ತ ಭಾರತ್ ಪ್ರತಿಜ್ಞೆ: ಪಾದಯಾತ್ರೆಯ ದಿನ ‘ನಶಾ ಮುಕ್ತ ಭಾರತ್’ ಮತ್ತು ‘ಗರ್ವ್ ಸೆ ಸ್ವದೇಶಿ’ ಪ್ರತಿಜ್ಞೆಯನ್ನು ಸ್ವೀಕರಿಸಲಾಗುವುದು. ಪಾದಯಾತ್ರೆಯುದ್ದಕ್ಕೂ ಅಂಗಡಿ ಮುಂಗಟ್ಟಿನವರು, ಸಾರ್ವಜನಿಕರು ಸರ್ದಾರ್ ಪಟೇಲ್ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡಿ ಸಹಕರಿಸುವಂತೆ ಕ್ಯಾ.ಬ್ರಿಜೇಶ್ ಚೌಟ ಮನವಿ ಮಾಡಿದರು.ಎಲ್ಲ ನೋಂದಣಿ ಮತ್ತು ಚಟುವಟಿಕೆಗಳನ್ನು ‘ಮೈ ಭಾರತ್’ ಪೋರ್ಟಲ್ ಮೂಲಕ ನಡೆಸಲಾಗುತ್ತಿದೆ: https://mybharat.gov.in/pages/unity march ನಲ್ಲಿ ನೋಂದಣಿ ಮಾಡಿಕೊಂಡು ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದರು.ಮಂಗಳೂರು ವಿವಿ ಎನ್ಎಸ್ಎಸ್ ಸಂಯೋಜನಾಧಿಕಾರಿ ಡಾ. ಸೇಸಪ್ಪ ಅಮೀನ್, ಮೈ ಭಾರತ್ ಆಡಳಿತಾಧಿಕಾರಿ ಜಗದೀಶ್ ಕೆ., ಮೈ ಭಾರತ್ನ ಜಿಲ್ಲಾ ಯುವ ಅಧಿಕಾರಿ ಉಲ್ಲಾಸ್, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ದಿನೇಶ್ ಅಮ್ಟೂರು, ಯುವ ಮೋರ್ಚಾ ಜಿಲ್ಲಾಧ್ಯಕ್ಷ ನಂದನ್ ಮಲ್ಯ, ಪ್ರಮುಖರಾದ ಅರುಣ್ ಶೇಟ್ ಇದ್ದರು.