ಮೈಸೂರು: ಕೆ.ಆರ್.ನಗರದ ಮಹಿಳೆ ಕಿಡ್ನಾಪ್ ಪ್ರಕರಣದಲ್ಲಿ ಎಫ್ಐಆರ್ ದಾಖಲಾಗುವ ಮುನ್ನವೇ ಆರೋಪಿತ ಸತೀಶ್ ಬಾಬುವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಜೆಡಿಎಸ್ ಕಾರ್ಯಾಧ್ಯಕ್ಷರೂ ಆಗಿರುವ ಮಾಜಿ ಸಚಿವ ಸಾ.ರಾ.ಮಹೇಶ್ ಆರೋಪಿಸಿದರು. ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಎಫ್ಐಆರ್ ಆಗುತ್ತದೆ ಎಂದು ಇವರಿಗೆ ಮೊದಲೇ ಕನಸು ಬಿದ್ದಿತ್ತಾ? ರಾತ್ರಿ 9.05 ರಲ್ಲಿ ಎಫ್ಐಆರ್ ಆಗಿದೆ. ಆದರೆ ಅದಕ್ಕೂ ಮುನ್ನವೇ ಮಧ್ಯಾಹ್ನ 12 ಗಂಟೆಗೆ ಸತೀಶ್ ಬಾಬುವನ್ನು ಕರೆದುಕೊಂಡು ಹೋಗಿದ್ದಾರೆ ಎಂದು ದೂರಿದರು. ಸತೀಶ್ರನ್ನು ಕರೆದೊಯ್ದಿರುವ ದೃಶ್ಯ ಬೇಕರಿಯೊಂದರ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದು ಗೊತ್ತಾಗುತ್ತಿದ್ದಂತೆ ಬೇಕರಿಯ ಹಾರ್ಡ್ ಡಿಸ್ಕ್ ತೆಗೆದುಕೊಂಡು ಹೋಗಿ ಈಗ ಡಿಲೀಟ್ ಮಾಡಿ ಕೊಟ್ಟಿದ್ದಾರೆ. ಆದರೆ, ಮತ್ತೊಬ್ಬ ವ್ಯಕ್ತಿ ಆ ದೃಶ್ಯವನ್ನು ಮೊಬೈಲ್ ಮೂಲಕ ವೀಡಿಯೋ ಮಾಡಿ ಬೇರೊಬ್ಬರಿಗೆ ಕಳುಹಿಸಿದ್ದಾನೆ. ಇಷ್ಟೆಲ್ಲ ಸಾಕ್ಷಿಗಳು ನಮ್ಮ ಬಳಿ ಇವೆ. ಇದನ್ನು ನಮ್ಮ ವಕೀಲರು ನ್ಯಾಯಾಲಯಕ್ಕೆ ಸಲ್ಲಿಸಲಿದ್ದಾರೆ ಎಂದು ಹೇಳಿದರು.