ಗದಗ: ಕಪ್ಪತ್ತಗುಡ್ಡ ಪರಿಸರದಲ್ಲಿರುವ ಔಷಧಿ ಹಾಗೂ ಸುಗಂಧಿ ಸಸ್ಯಗಳನ್ನು ಉಳಿಸಿ ಬೆಳೆಸುವ ಅವಶ್ಯಕತೆ ಇದೆ ಎಂದು ಬೆಂಗಳೂರಿನ ಟ್ರಾನ್ಸ್ ಡಿಸಿಪ್ಲಿನರಿ ವಿಶ್ವವಿದ್ಯಾಲಯದ ಪ್ರೊ. ಡಾ. ಜಗನ್ನಾಥರಾವ್ ಹೇಳಿದರು.
ಒಕ್ಕೂಟದ ಉದ್ದೇಶ, ನಡೆದುಬಂದ ದಾರಿ ಕುರಿತು, ಕಪ್ಪತಗುಡ್ಡದಲ್ಲಿ ಅಳಿವಿನಂಚಿನಲ್ಲಿರುವ ವಿವಿಧ ಸಸ್ಯಗಳು ಅವುಗಳ ಮಹತ್ವ, ಅದಕ್ಕಾಗಿ ಮಾಡಬೇಕಿರುವ ಕ್ರಮಗಳು ಹಾಗೂ ಜೀವ ವೈವಿಧ್ಯ ಸಂರಕ್ಷಣೆಯಲ್ಲಿ ಆಗಬೇಕಾಗಿರುವ ಕೆಲಸ ಕಾರ್ಯಗಳು ಕುರಿತು ಮಾತನಾಡಿದರು.
ಸಸ್ಯ ಸಂಜೀವಿನಿಯ ಪ್ರಧಾನ ಸಂಚಾಲಕ ಡಿ.ಕೆ. ಮಹೇಶಕುಮಾರ ಅವರು ಒಕ್ಕೂಟದ ಧ್ಯೇಯೋದ್ದೇಶ, ಕ್ರಮಿಸಿದ ದಾರಿ, ರಾಜ್ಯಾದ್ಯಂತ ಹಮ್ಮಿಕೊಂಡ ಸಂಘಟನಾ ಸಭೆಗಳು, ಸಿದ್ಧತಾ ಸಭೆಗಳ ವಿವರಗಳನ್ನು ಸಭೆಯಲ್ಲಿ ಮಂಡಿಸಿದರು.ಜಿಲ್ಲಾ ಆಯುಷ್ ಅಧಿಕಾರಿ ಡಾ. ಎಂ.ಎಸ್. ಉಪ್ಪಿನ ಆಯುಷ್ ಇಲಾಖೆಯು ಒಕ್ಕೂಟದ ಕಾರ್ಯಕ್ರಮಗಳ ಅನುಷ್ಠಾನಗೊಳಿಸುವ ಕುರಿತು ಮಾತನಾಡಿದರು.
ಹುಲಕೋಟಿಯ ಕೆ.ವಿ.ಕೆ. ವಿಜ್ಞಾನಿ ಡಾ. ಎಚ್.ಆರ್. ಹಿರೇಗೌಡರ ಹಾಗೂ ಪಾರಂಪರಿಕ ವೈದ್ಯ ಡಾ. ಚನಮಲ್ಲಯ್ಯ ಕಂಬಿ ವಿಷಯ ಮಂಡಿಸಿದರು.
ಸಂವಾದದಲ್ಲಿ ಭಾಗಿಯಾಗಿದ್ದ ಒಕ್ಕೂಟದ ನಿರ್ದೇಶಕ ಬಾಲಚಂದ್ರ ಜಾಬಶೆಟ್ಟಿ ಮಾತನಾಡಿ, ಒಕ್ಕೂಟದ ರೂಪರೇಷೆಗಳ ಬಗ್ಗೆ ವಿವರಿಸಿದರು. ಶಿರಸಿಯ ಪ್ರಶಾಂತ ಜೋಶಿ ಸಾವಯವ ಹಾಗೂ ನೈಸರ್ಗಿಕ ಕೃಷಿಯ ಅನುಭವ ಹಂಚಿಕೊಂಡರು.ಬೆಂಗಳೂರಿನ ಮಾರುತಿ ರಾವ್ ಮಾತನಾಡಿ, ರೈತರು, ಖರೀದಿದಾರರು, ಮೌಲ್ಯ ವರ್ಧಕರ ಮಧ್ಯೆ ಸಮನ್ವಯ ಸಾಧಿಸಲು ಆ್ಯಪ್ ಸಿದ್ಧಗೊಳಿಸಲಾಗಿದ್ದು, ಅದರಿಂದಾಗುವ ಲಾಭಗಳ ಬಗ್ಗೆ ತಿಳಿಸಿದರು.
ಕಳೆದ 30 ವರ್ಷಗಳಿಂದ ಕಪ್ಪತಗುಡ್ಡದಲ್ಲಿ ಔಷಧೀಯ ಸಸ್ಯಗಳನ್ನು ವೈಜ್ಞಾನಿಕ ಪದ್ಧತಿಯಿಂದ ಸಂಗ್ರಹಿಸಿ ಆಯುರ್ವೇದ, ಸಾಂಪ್ರದಾಯಿಕ ಹಾಗೂ ಪಾರಂಪರಿಕ ವೈದ್ಯರಿಗೆ ಪೂರೈಸಿ ಜನಸಾಮಾನ್ಯರ ಆರೋಗ್ಯ ಸಂರಕ್ಷಣೆಯಲ್ಲಿ ತೊಡಗಿರುವ ಹೊಸಳ್ಳಿಯ ಕಸ್ತೂರೆವ್ವ ಹಾರೂಗೇರಿ ಅವರ ಸೇವೆ ಗುರುತಿಸಿ ಸನ್ಮಾನಿಸಲಾಯಿತು.ವಿವಿಯ ತೋಟಗಾರಿಕೆ ವಿಭಾಗದ ಡಾ. ಉಡಚಪ್ಪ ಪೂಜಾರ ಮುಂತಾದವರು ಮಾತನಾಡಿದರು. ಕುಲಪತಿ ಡಾ. ಎಸ್.ವಿ. ನಾಡಗೌಡ್ರ ಅಧ್ಯಕ್ಷೀಯ ಮಾತುಗಳನ್ನಾಡಿದರು. ನಂದಿವೇರಿ ಸಂಸ್ಥಾನ ಮಠದ ಶಿವಕುಮಾರ ಶ್ರೀಗಳು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಡಾ. ಬಸವರಾಜ ನಾವಿ ರೈತ ಗೀತೆ ಹಾಡಿದರು. ರುದ್ರಣ್ಣ ಗುಳಗುಳಿ ಸ್ವಾಗತಿಸಿದರು.
ಡಾ. ನಾಭೂಷಣ, ನೈಸರ್ಗಿಕ ಕೃಷಿಕ ದೇವರಡ್ಡಿ ಅಗಸನಕೊಪ್ಪ, ಬಸವರಾಜ ಶೈಲಪ್ಪನವರ ನಿರೂಪಿಸಿದರು. ಡಾ. ದೀಕ್ಷಿತ, ವಿಶ್ವವಿದ್ಯಾಲಯದ ಸಿಬ್ಬಂದಿ, ನೂರಾರು ರೈತರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.