ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಮೇ ೩೦ರ ಕನ್ನಡಪ್ರಭ ಪತ್ರಿಕೆಯಲ್ಲಿ ಸೋರುತಿಹುದು ಉಪಕಾರ ಕಾಲೋನಿ ಶಾಲೆ! ಎಂದು ವರದಿ ಪ್ರಕಟಿಸಿ ಜಿಲ್ಲಾಡಳಿತ ಗಮನ ಸೆಳೆದಿತ್ತು. ಆದರೆ ಕ್ಷೇತ್ರ ಶಿಕ್ಷಣಾಧಿಕಾರಿ ಕಾಲೋನಿಯ ಅಂಗನವಾಡಿ ಕೇಂದ್ರದಲ್ಲಿ ತಾತ್ಕಾಲಿಕವಾಗಿ ಶಾಲೆ ಆರಂಭವಾಗಲಿದೆ ಎಂದಿದ್ದರು. ಆದರೆ ಉಪಕಾರ ಕಾಲೋನಿಯ ಅಂಗನವಾಡಿ ಕೇಂದ್ರದಲ್ಲಿ ಅಂಗನವಾಡಿಗೆ ಬರುವ ಮಕ್ಕಳಿರುವ ಕಾರಣ ಅಲ್ಲಿ ಆಗಲಿಲ್ಲ. ಕಾಲೋನಿಯ ಸಮುದಾಯ ಭವನದಲ್ಲಿ ಸ್ಥಳಾಂತರ ಆಗಲು ಅಲ್ಲಿ ಬೋರ್ಡ್ ಇಲ್ಲದ ಕಾರಣ ಕಾಲೋನಿ ಬಳಿ ಖಾಸಗಿ ವ್ಯಕ್ತಿಯ ತೋಟದ ಮನೆಯ ಕೊಠಡಿಯಲ್ಲಿ ಶುಕ್ರವಾರ ಬಂದಷ್ಟು ಮಕ್ಕಳಿಗೆ ಶಾಲೆ ಆರಂಭಿಸಲಾಗಿದೆ.
ಗ್ರಾಮಸ್ಥರ ಸಹಕಾರ:ಕಾಲೋನಿಯ ಜನರೇ ತೋಟದ ಮನೆಯ ಮಾಲೀಕರ ಜೊತೆ ಮಾತನಾಡಿ ಶಾಲೆ ದುರಸ್ತಿಯಾಗುವ ತನಕ ಪಾಠ ಮಾಡಿಕೊಳ್ಳಲು ಅವಕಾಶ ಮಾಡಿ ಕೊಡಿ ಎಂದು ಕೇಳಿದಾಗ ತೋಟದ ಮಾಲೀಕರು ಒಪ್ಪಿದ್ದಾರೆ. ನಂತರ ಗ್ರಾಮಸ್ಥರೆಲ್ಲ ಸೇರಿ ಕೊಠಡಿ ಕ್ಲೀನ್ ಮಾಡಿ, ಶಾಲೆಯಲ್ಲಿದ್ದ ಕೆಲ ಸಾಮಾಗ್ರಿಗಳ ತಂದು ಕೊಟ್ಟ ಬಳಿಕ ಶಿಕ್ಷಕರು ಖುಷಿಯಿಂದಲೇ ಮೊದಲ ದಿನ ಶಾಲೆ ಆರಂಭಿಸಿದ್ದಾರೆ ಎಂದು ಗ್ರಾಮದ ಗಂಗಾಧರಸ್ವಾಮಿ ಹೇಳಿದ್ದಾರೆ. ಶಾಲೆಯ ಶಿಕ್ಷಕಿ ಗವ್ಯಮಣಿ ಮಾತನಾಡಿ, ಸದ್ಯಕ್ಕೀಗ ಖಾಸಗಿ ತೋಟದ ಕೊಠಡಿಯಲ್ಲಿ ಶಾಲೆ ಆರಂಭಿಸಿದ್ದೇವೆ. ಶಾಲಾ ದುರಸ್ತಿಯಾಗುವ ತನಕ ಕಷ್ಟನೋ ಸುಖನೋ ಮಕ್ಕಳಿಗೆ ಪಾಠ ಕಲಿಸುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.