ಬೇಕಾಬಿಟ್ಟಿ ಹಣ ಡ್ರಾ ಮಾಡಿ ಬಳಸಿದ ಶಾಲಾ ಮುಖ್ಯಸ್ಥರ ವಿಚಾರಣೆ ಇಂದು

KannadaprabhaNewsNetwork | Published : Feb 24, 2025 12:33 AM

ಸಾರಾಂಶ

ಆರ್ಥಿಕ ನಿಯಮ ಉಲ್ಲಂಘಿಸಿ ಬೇಕಾ ಬಿಟ್ಟಿ ಬ್ಯಾಂಕ್‌ ಖಾತೆಯಿಂದ ಡ್ರಾ ಮಾಡಿ ವೆಚ್ಚ ಮಾಡಿದ ಬಿಬಿಎಂಪಿಯ ಶಾಲಾ - ಕಾಲೇಜಿನ ಮುಖ್ಯಸ್ಥರ ವಿರುದ್ಧ ಕ್ರಮಕ್ಕೆ ಮುಂದಾಗಿರುವ ಬಿಬಿಎಂಪಿಯು ಸೋಮವಾರ ವಿಚಾರಣೆ ಕರೆದಿದೆ.

ಆಗಿರುವುದು ಏನು?

*ಶಾಲೆ, ಕಾಲೇಜುಗಳ ದುರಸ್ತಿಗೆ ಬಿಬಿಎಂಪಿಯಿಂದ ಹಣ

*ಆರ್ಥಿಕ ನಿಯಮದಂತೆ ಹಣ ಬಳಕೆಗೆ ಪಾಲಿಕೆ ಸೂಚನೆ

*ಅದರೆ ಮನಸ್ಸೋ ಇಚ್ಛೆ ಹಣ ಡ್ರಾ ಮಾಡಿರುವ ಶಿಕ್ಷಕರು

*ಬ್ಯಾಂಕ್ ಪಾಸ್‌ಬುಕ್‌ ಪರಿಶೀಲನೆ ವೇಳೆ ಅಕ್ರಮ ಪತ್ತೆ

*ನೋಟಿಸ್‌ ಜಾರಿ ಮಾಡಿರುವ ಬಿಬಿಎಂಪಿಯಿಂದ ತನಿಖೆ

ಕನ್ನಡಪ್ರಭ ವಾರ್ತೆ ಬೆಂಗಳೂರು

ಆರ್ಥಿಕ ನಿಯಮ ಉಲ್ಲಂಘಿಸಿ ಬೇಕಾ ಬಿಟ್ಟಿ ಬ್ಯಾಂಕ್‌ ಖಾತೆಯಿಂದ ಡ್ರಾ ಮಾಡಿ ವೆಚ್ಚ ಮಾಡಿದ ಬಿಬಿಎಂಪಿಯ ಶಾಲಾ - ಕಾಲೇಜಿನ ಮುಖ್ಯಸ್ಥರ ವಿರುದ್ಧ ಕ್ರಮಕ್ಕೆ ಮುಂದಾಗಿರುವ ಬಿಬಿಎಂಪಿಯು ಸೋಮವಾರ ವಿಚಾರಣೆ ಕರೆದಿದೆ.

ಬಿಬಿಎಂಪಿಯ ಕೇಂದ್ರ ಕಚೇರಿಯಲ್ಲಿ ಪದವಿ ಪೂರ್ವ ಕಾಲೇಜಿನ 18 ಮುಖ್ಯಸ್ಥರು ಹಾಗೂ ಪ್ರೌಢ ಶಾಲೆಯ 23 ಮುಖ್ಯೋಪಾಯರನ್ನು ವಿಚಾರಣೆ ನಡೆಸುವುದಕ್ಕೆ ನೋಟಿಸ್‌ ನೀಡಲಾಗಿದೆ. ಆಡಳಿತ ವಿಭಾಗದ ಸಹಾಯಕ ಆಯುಕ್ತ ಗಿರೀಶ್‌ ನಂದನ್‌ ವಿಚಾರಣಾಧಿಕಾರಿಯಾಗಿ, ಶಿಕ್ಷಣ ವಿಭಾಗದ ಉಪ ನಿರ್ದೇಶಕ ಲೋಕೇಶ್‌ ಮಂಡನಾಧಿಕಾರಿಯಾಗಿ ನೇಮಕ ಮಾಡಲಾಗಿದೆ.

ಬಿಬಿಎಂಪಿಯ ಬಜೆಟ್‌ನಲ್ಲಿ ಶಾಲಾ ಕಾಲೇಜು ವಾರ್ಷಿಕೋತ್ಸವ, ಪರೀಕ್ಷಾ ಶುಲ್ಕ, ಶೈಕ್ಷಣಿಕ ಪ್ರವಾಸ ಹಾಗೂ ಸಣ್ಣ-ಪುಟ್ಟ ರಿಪೇರಿಗಳಿಗೆ ಅಗತ್ಯವಿರುವ ಅನುದಾನವನ್ನು ಶಾಲಾ ಕಾಲೇಜು ಮುಖ್ಯಸ್ಥರ ಬ್ಯಾಂಕ್‌ ಖಾತೆಗೆ ಜಮಾ ಮಾಡಲಾಗುತ್ತದೆ.

ಜಮಾ ಮಾಡಲಾದ ಮೊತ್ತವನ್ನು ಮುಖ್ಯಸ್ಥರು ನಿಯಮಾನುಸಾರ ಡ್ರಾ ಮಾಡಿ ಬಳಕೆ ಮಾಡಬೇಕು. ಆದರೆ, ಬಿಬಿಎಂಪಿಯ 34 ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರು, 16 ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರು, 18 ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರು ಹಾಗೂ 2 ಪದವಿ ಕಾಲೇಜಿನ ಪ್ರಾಂಶುಪಾಲರು ಆರ್ಥಿಕ ನಿಯಮ ಉಲ್ಲಂಘಿಸಿರುವುದು ಕಂಡು ಬಂದಿದ್ದು, ಈ ಎಲ್ಲಾ ಮುಖ್ಯಸ್ಥರ ವಿರುದ್ಧ ವಿಚಾರಣೆ ನಡೆಸಿ ಕ್ರಮ ಕೈಗೊಳ್ಳುವುದಕ್ಕೆ ಮುಂದಾಗಿರುವ ಬಿಬಿಎಂಪಿಯು ಈಗಾಗಲೇ ನೋಟಿಸ್‌ ನೀಡಿದೆ. ಕೆಲವು ಮುಖ್ಯಸ್ಥರು ಲಕ್ಷಾಂತರು ರುಪಾಯಿ ಹಣ ಡ್ರಾ ಮಾಡಿರುವುದು ಬ್ಯಾಂಕ್‌ ಪಾಸ್‌ ಬುಕ್‌ ಪರಿಶೀಲನೆ ವೇಳೆ ಕಂಡು ಬಂದಿದೆ.

Share this article