ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಬೇಸಿಗೆ ರಜೆ ಉತ್ಸಾಹದಿಂದ ಕಳೆದಿದ್ದ ಶಾಲಾ ಮಕ್ಕಳನ್ನು ಗ್ರಾಮದ ಸರ್ಕಾರಿ ಪ್ರೌಢಶಾಲೆ, ಪ್ರಾಥಮಿಕ ಶಾಲೆ ಪ್ರಾರಂಭೋತ್ಸವದ ಹಿನ್ನೆಲೆಯಲ್ಲಿ ಎತ್ತಿನಗಾಡಿ ಮೂಲಕ ಮೆರವಣಿಗೆ ಮಾಡಿದರು. ಪೂರ್ಣಕುಂಭ ಹೊತ್ತ ಮಹಿಳೆಯರು, ಶಿಕ್ಷಣ ಸಂಯೋಜಕರು, ಪೋಷಕರು ಮತ್ತು ಶಿಕ್ಷಕರು ಮಂಗಳವಾದ್ಯದೊಂದಿಗೆ ಹೆಜ್ಜೆ ಹಾಕಿದರು. ಶಾಲಾ ಮಕ್ಕಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ವೈ.ಕೆ.ತಿಮ್ಮೇಗೌಡ ಹೂಗಳನ್ನು ನೀಡುವ ಮೂಲಕ ಮಕ್ಕಳನ್ನು ಶಾಲೆಗೆ ಸ್ವಾಗತಿಸಿದರು.
ಈ ವೇಳೆ ಬಿಇಒ ವೈ.ಕೆ.ತಿಮ್ಮೇಗೌಡ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಕಲಿತ ಮಕ್ಕಳು ಎಂತಹ ವಾತಾವರಣಕ್ಕೂ ಹೊಂದಿಕೊಳ್ಳುವ ಲಕ್ಷಣ ಹೊಂದಿದ್ದಾರೆ. ಅವರಿಗೆ ಸ್ಥಳೀಯ ಸಮಸ್ಯೆಗಳ ಆಳ -ಅಗಲದ ಬಗ್ಗೆ ಅರಿವಿರುತ್ತದೆ. ವ್ಯವಹಾರಿಕವಾಗಿ ಚತುರರಾಗಿರುತ್ತಾರೆ ಎಂದರು.ಸರ್ಕಾರಿ ಶಾಲೆಗಳಲ್ಲಿ ಪ್ರತಿಭಾನ್ವಿತ ಶಿಕ್ಷಕರ ಗುಣಮಟ್ಟದ ಭೋದನೆ ಇರುತ್ತದೆ. ಈಗಾಗಲೇ ಶಾಲಾ ಆರಂಭದ ದಿನವೇ ಉಚಿತ ಪಠ್ಯಪುಸ್ತಕ. ಸಮವಸ್ತ್ರ ನೀಡಲಾಗುತ್ತಿದೆ. ಬಿಸಿಯೂಟದ ಜೊತೆಗೆ ಸಿಹಿ ವಿತರಿಸಲಾಗಿದೆ ಎಂದು ತಿಳಿಸಿದರು.
ಶಾಲಾ ಪ್ರಾರಂಭೋತ್ಸವದಲ್ಲಿ ಶಿಕ್ಷಣ ಸಂಯೋಜಕ ಮೋಹನ್ಕುಮಾರ್, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಮಂಜು, ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಪ್ರಕಾಶ್, ಪ್ರೌಢಶಾಲಾ ಮುಖ್ಯ ಶಿಕ್ಷಕ ಮುತ್ತುರಾಜ್, ಎಸ್.ಡಿ.ಎಂ.ಸಿ ಅಧ್ಯಕ್ಷರು, ಸದಸ್ಯರು, ಶಾಲಾ ಶಿಕ್ಷಕರು, ಪೋಷಕರು ಸೇರಿದಂತೆ ಹಲವರಿದ್ದರು.