ಭಟ್ಕಳದಲ್ಲಿ ಪುರಾತನ ಪಶುಪತಿ ದೇವಸ್ಥಾನದ ನೂತನ ಶಿಲಾಮಯ ಕಟ್ಟಡಕ್ಕೆ ಶಿಲಾನ್ಯಾಸ
ಪಟ್ಟಣದ ಬೋಯಿರಕೇರಿಯ ಶ್ರೀ ಪಶುಪತಿ ದೇವಸ್ಥಾನದ ನೂತನ ಶಿಲಾಮಯ ಕಟ್ಟಡದ ಶಿಲಾನ್ಯಾಸ ನೆರವೇರಿತು.
ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ಶಾಲೆ, ದೇವಸ್ಥಾನಗಳ ನಿರ್ಮಾಣ ಪುಣ್ಯದ ಕೆಲಸವಾಗಿದೆ. ಅದರಂತೆ ಬಡಜನರ ಸೇವೆ ಮಾಡುವುದೂ ಕೂಡ ಪುಣ್ಯದ ಕಾರ್ಯವಾಗಿದೆ. 1500 ವರ್ಷ ಇತಿಹಾಸ ಹೊಂದಿರುವ ಪಶುಪತಿ ದೇವಸ್ಥಾನದ ನೂತನ ಶಿಲಾಮಯ ಕಟ್ಟಡ ಶಿಲನ್ಯಾಸ ನೆರವೇರಿದೆ. ಇಂತಹ ಪುರಾತನ ದೇವಸ್ಥಾನದ ಜೀರ್ಣೋದ್ಧಾರ ಆಗಬೇಕು. ದೇವಸ್ಥಾನ ನಿರ್ಮಾಣಕ್ಕೆ ಸರಕಾರದಿಂದ ಅನುದಾನ ಒದಗಿಸುವುದರ ಜೊತೆಗೆ ವೈಯಕ್ತಿಕವಾಗಿಯೂ ಸಹಾಯ ಮಾಡುವುದಾಗಿ ಹೇಳಿದರು.ಮಾಜಿ ಸಚಿವ ಶಿವಾನಂದ ನಾಯ್ಕ ಮಾತನಾಡಿ, ಊರಿನ ಯುವಕರು ಹಿರಿಯರ ಮಾರ್ಗದರ್ಶನದಲ್ಲಿ ಈ ದೇವಸ್ಥಾನದ ಜೀವನವನ್ನು ಕೈಗೊಂಡಿರುವುದು ಸಂತಸದ ವಿಚಾರ. ಈ ನೂತನ ದೇವಾಲಯ ಶೀಘ್ರದಲ್ಲೇ ಪೂರ್ಣಗೊಳ್ಳುವುದು ಎಂಬ ವಿಶ್ವಾಸ ಎದ್ದು ಇದಕ್ಕೆ ನಾನು ಸಹ ಸಹಕಾರ ನೀಡುತ್ತೇನೆ ಎಂದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ನಾಮಧಾರಿ ಸಮಾಜದ ಅಧ್ಯಕ್ಷ ಅರುಣ್ ನಾಯ್ಕ, ಉದ್ಯಮಿ ಪದ್ಮನಾಭ ಪ್ರಭು ಮಾತನಾಡಿದರು. ಶ್ರೀ ಪಶುಪತಿ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಗೋವಿಂದ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಚಂದ್ರಹಾಸ ಭಟ್, ಮಳ್ಳ ನಾಯ್ಕ ಉಪಸ್ಥಿತರಿದ್ದರು. ಪವಿತ್ರ ನಾಯ್ಕ ಪ್ರಾರ್ಥಿಸಿದರು. ಜೀರ್ಣೋದ್ಧಾರ ಸಮಿತಿಯ ಕಾರ್ಯದರ್ಶಿ ಶ್ರೀಕಾಂತ್ ನಾಯ್ಕ ಸ್ವಾಗತಿಸಿದರು. ಆಡಳಿತ ಮಂಡಳಿಯ ಉಪಾಧ್ಯಕ್ಷ ಕೃಷ್ಣ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಮನಮೋಹನ ನಾಯ್ಕ ವಂದಿಸಿದರು.