ಇಂದು ಶಾಲೆಗಳು ಪುನರಾರಂಭ: ಮಕ್ಕಳನ್ನು ಸ್ವಾಗತಿಸಲು ಶಿಕ್ಷಕರು ಸಕಲ ಸಿದ್ಧತೆ

KannadaprabhaNewsNetwork |  
Published : May 30, 2025, 01:01 AM IST

ಸಾರಾಂಶ

ಚಿಕ್ಕಮಗಳೂರುಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷದ ಮೊದಲ ದಿನವಾದ ಮೇ 30 ರಂದು ಜಿಲ್ಲೆಯಲ್ಲಿ ಶಾಲೆಗಳು ಪುನಾರಂಭವಾಗುತ್ತಿವೆ. ಶಾಲೆಗೆ ತೆರಳಲು ಮಕ್ಕಳು ಸಿದ್ಧರಾಗಿದ್ದರೆ, ಬರುವ ವಿದ್ಯಾರ್ಥಿಗಳಿಗೆ ಸ್ವಾಗತ ಕೋರಲು ಶಿಕ್ಷಕರು ಸಿದ್ಧತೆ ಮಾಡಿ ಕೊಂಡಿದ್ದಾರೆ.

- ಶಾಲಾ ಕೊಠಡಿ, ಬಿಸಿಯೂಟ ಸಿದ್ಧತೆಯ ಕೊಠಡಿಗಳು ಸ್ವಚ್ಛ, ಇಂದು ಮಕ್ಕಳಿಗೆ ವಿಶೇಷ ಸ್ವಾಗತ

-

- ಶಿಕ್ಷಕರು ಮನೆ, ಮನೆಗೆ ತೆರಳಿ ಮಕ್ಕಳನ್ನು ಕರೆ ತರಬೇಕೆಂದು

- ಶೇ.80 ರಷ್ಟು ಪುಸ್ತಕ ವಿತರಣೆ:

- ತಳಿರು ತೋರಣ, ರಂಗೋಲಿ ಬಿಡಿಸಿ ಶಾಲೆಗಳನ್ನು ಅಲಂಕರಿಸಬೇಕು

- ಮಕ್ಕಳ ಸ್ವಾಗತಿಸಲು ಎಲ್ಲ ಶಾಲೆಗಳು ಸಜ್ಜು

- ಮೊದಲ ದಿನವೇ ಸಿಹಿ ಊಟದ ಜತೆ ಬೇಯಿಸಿದ ಮೊಟ್ಟೆ ವಿತರಣೆಗೆ ಸುತ್ತೋಲೆ

- ಶಾಲಾ ಆವರಣದಲ್ಲಿ ಹಬ್ಬದ ವಾತಾವರಣ ಇರಬೇಕು

-

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷದ ಮೊದಲ ದಿನವಾದ ಮೇ 30 ರಂದು ಜಿಲ್ಲೆಯಲ್ಲಿ ಶಾಲೆಗಳು ಪುನಾರಂಭವಾಗುತ್ತಿವೆ. ಶಾಲೆಗೆ ತೆರಳಲು ಮಕ್ಕಳು ಸಿದ್ಧರಾಗಿದ್ದರೆ, ಬರುವ ವಿದ್ಯಾರ್ಥಿಗಳಿಗೆ ಸ್ವಾಗತ ಕೋರಲು ಶಿಕ್ಷಕರು ಸಿದ್ಧತೆ ಮಾಡಿ ಕೊಂಡಿದ್ದಾರೆ.

ಶಿಕ್ಷಕರು, ಮುಖ್ಯಶಿಕ್ಷಕರು ಮತ್ತು ಇತರೆ ಸಿಬ್ಬಂದಿ ಮೇ 29 ರಂದು ರಾಜ್ಯದ ಎಲ್ಲಾ ಪ್ರಾಥಮಿಕ, ಪ್ರೌಢಶಾಲೆಗಳಿಗೆ ಹಾಜರಾಗ ಬೇಕು. ಶಾಲಾ ಆವರಣ, ಕೊಠಡಿಗಳು, ಶೌಚಾಲಯ, ಮೇಲ್ಛಾವಣಿ ಹಾಗೂ ಬಿಸಿಯೂಟದ ಪರಿಕರಗಳನ್ನು ಸ್ವಚ್ಛಗೊಳಿಸಬೇಕು. ತಳಿರು ತೋರಣ, ರಂಗೋಲಿ ಬಿಡಿಸಿ ಶಾಲೆಗಳನ್ನು ಅಲಂಕರಿಸಬೇಕು. ಮೇ 30ರಂದು ಮಕ್ಕಳನ್ನು ಸ್ವಾಗತಿಸಲು ಎಲ್ಲ ಶಾಲೆಗಳು ಸಜ್ಜುಗೊಳ್ಳಬೇಕು ಎಂದು ಶಾಲಾ ಶಿಕ್ಷಣ ಇಲಾಖೆ ಸೂಚಿಸಿದೆ.

ಬಿಸಿಯೂಟಕ್ಕೆ ಅಗತ್ಯವಾದ ಪಡಿತರ, ಬೇಳೆ, ತರಕಾರಿ, ಮೊಟ್ಟೆ ತಂದಿಟ್ಟುಕೊಳ್ಳಬೇಕು. ಶುದ್ಧ ಕುಡಿಯುವ ನೀರು ಸಂಗ್ರಹಿಸ ಬೇಕು. ಅಡುಗೆ ಸಿಬ್ಬಂದಿ, ಸಿಹಿಯೂಟದ ಜತೆಗೆ ಮೊದಲ ದಿನವೇ ಬೇಯಿಸಿದ ಮೊಟ್ಟೆ ವಿತರಣೆ ಮಾಡಬೇಕು ಎಂದು ಸುತ್ತೋಲೆ ಹೊರಡಿಸಲಾಗಿದೆ.

ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರು, ಸದಸ್ಯರು, ಮುಖ್ಯ ಶಿಕ್ಷಕರು, ಶಿಕ್ಷಕರು ಹಾಗೂ ಇತರೆ ಸಿಬ್ಬಂದಿ ಮೇ 30 ರಂದು ಕಡ್ಡಾಯ ವಾಗಿ ಹಾಜರಿದ್ದು ಮಕ್ಕಳನ್ನು ಸ್ವಾಗತಿಸಬೇಕು. ಶಾಲಾ ಆವರಣದಲ್ಲಿ ಹಬ್ಬದ ವಾತಾವರಣ ಇರುವಂತೆ ನೋಡಿ ಕೊಳ್ಳಬೇಕು. ನಂತರ ಮಕ್ಕಳ ದಾಖಲಾತಿ ಕಡೆ ಗಮನಹರಿಸಬೇಕು. ಶಿಕ್ಷಕರು ಮನೆ, ಮನೆಗೆ ತೆರಳಿ ಮಕ್ಕಳನ್ನು ಕರೆ ತರಬೇಕೆಂದು ಸೂಚಿಸಲಾಗಿದೆ.

ನಾಳೆ ಶಾಲೆಗೆ ಬರುವ ಮುಖ್ಯಶಿಕ್ಷಕರು ಮತ್ತು ಸಹ ಶಿಕ್ಷಕರು ಶಾಲೆಯನ್ನು ಸ್ವಚ್ಛಗೊಳಿಸಿ, ತಣಿರು, ತೋರಣಗಳಿಂದ ಶಾಲೆ ಯನ್ನು ಸಿಂಗರಿಸಲು ಮಹಿಳಾ ಶಿಕ್ಷಕರು ಶಾಲೆಯ ಮುಂಭಾಗ ರಂಗೋಲಿ ಬಿಡಿಸಲು ಸಕಲ ತಯಾರಿಸಿ ನಡೆಸುತ್ತಿದ್ದು, ಬಿಸಿಯೂಟ ಕಾರ್ಯಕರ್ತೆಯರು ಅಡುಗೆ ಸಾಮಾಗ್ರಿಗಳನ್ನು ಸ್ವಚ್ಛಗೊಳಿಸಿ, ಸಿಹಿಯೂಟ ತಯಾರಿಸಲು ಅಣಿಯಾಗಿದ್ದಾರೆ. ಮೇ. 30 ರಂದು ಶಾಲೆಗೆ ಬರುವ ವಿದ್ಯಾರ್ಥಿಗಳಿಗೆ ಕೆಲವು ಶಾಲೆಯಲ್ಲಿ ಗುಲಾಬಿಹೂವು ನೀಡಿ ಸ್ವಾಗತಿಸಿದರೆ ಮತ್ತೆ ಕೆಲವು ಶಾಲೆಗಳಲ್ಲಿ ವಿದ್ಯಾರ್ಥಿಗಳ ಮೇಲೆ ಪುಷ್ಪವೃಷ್ಟಿ ಮಾಡುವ ಮೂಲಕ ಶಿಕ್ಷಕರು ವಿದ್ಯಾರ್ಥಿಗಳನ್ನು ಸ್ವಾಗತಿಸಲಿದ್ದಾರೆ.ಶೇ.80 ರಷ್ಟು ಪುಸ್ತಕ ವಿತರಣೆ:

ಈಗಾಗಲೇ ಕಾಫಿ ನಾಡಿಗೆ ರಾಜ್ಯ ಸರ್ಕಾರ ಶೇ. 89 ರಷ್ಟು ಪಠ್ಯಪುಸ್ತಕಗಳನ್ನು ನೀಡಿದ್ದರೆ, ಶಾಲೆಗಳಿಗೆ ಶೇ. 30 ರಷ್ಟು ಪುಸ್ತಕಗಳ ವಿತರಣೆ ಬಾಕಿ ಇದೆ. ಕಾಫಿ ನಾಡಿನಲ್ಲಿ ಬೇಡಿಕೆಗೆ ಅನುಗುಣವಾಗಿ 10,71,660 ಪುಸ್ತಕಗಳನ್ನು ಉಚಿತವಾಗಿ ವಿತರಣೆ ಮಾಡುತ್ತಿದ್ದು, 5,28,025 ಪುಸ್ತಕಗಳನ್ನು ಹಣಕ್ಕೆ ಮಾರಾಟ ಮಾಡಲಾಗುತ್ತಿದೆ. ಶೇ. 74.48 ರಷ್ಟು ಪುಸ್ತಕಗಳನ್ನು ಉಚಿತವಾಗಿ ಶೇ. 81.57 ರಷ್ಟು ಪುಸ್ತಕ ಮಾರಾಟ ಮಾಡಲಾಗುತ್ತಿದೆ.

ಚಿಕ್ಕಮಗಳೂರು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ 6,64,585 ಪುಸ್ತಕಗಳನ್ನು ಉಚಿತವಾಗಿ, 3,66,246 ಪುಸ್ತಕಗಳನ್ನು ಮಾರಾಟ ಮೂಲಕ ವಿತರಿಸಲಾಗುತ್ತಿದೆ. ಶೇ. 62 ರಷ್ಟು ಪುಸ್ತಕಗಳನ್ನು ಉಚಿತವಾಗಿ, ಶೇ.69.36 ರಷ್ಟು ಪುಸ್ತಕಗಳನ್ನು ಮಾರಾಟ ಮಾಡಲಾಗುತ್ತಿದೆ. ಒಂದು ಕಂಪನಿ ಮಾತ್ರ ಬಟ್ಟೆ ಸರಬರಾಜು ಮಾಡಿರುವುದರಿಂದ ಪ್ರತಿ ತಾಲೂಕಿಗೆ ಅರ್ಧ ದಷ್ಟು ಸಮವಸ್ತ್ರ ವಿತರಣೆಯಾಗಿದೆ. ಒಟ್ಟಾರೆ ವಿದ್ಯಾರ್ಥಿಗಳನ್ನು ಪ್ರೀತಿಯಿಂದ ಶಾಲೆಗೆ ಬರಮಾಡಿಕೊಳ್ಳಲು ಶಾಲೆಗಳಲ್ಲಿ ಸಕಲ ಸಿದ್ಧತೆಗಳು ನಡೆದಿವೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

400 ಕೋಟಿ ರು. ದರೋಡೆ ಪ್ರಮುಖ ಆರೋಪಿ ಬಂಧನ
ಕಾಂಗ್ರೆಸ್‌ನವರಿಗೆ ಬಜೆಟ್ ಅರ್ಥವಾಗಲ್ಲ: ಜೋಶಿ ಚಾಟಿ