ಮಾಗಡಿ: ಓದಿನ ಜೊತೆಗೆ ಮಕ್ಕಳಲ್ಲಿರುವ ಪ್ರತಿಭಾ ಪ್ರದರ್ಶನಕ್ಕೆ ವಿಜ್ಞಾನ ವಸ್ತು ಪ್ರದರ್ಶನ ಸಹಕಾರಿಯಾಗಿದ್ದು, ಮಕ್ಕಳು ಉತ್ಸಾಹದಿಂದ ಭಾಗವಹಿಸಿದ್ದಾರೆ ಎಂದು ಬಾಲಾಜಿ ನ್ಯಾಷನಲ್ ಪಬ್ಲಿಕ್ ಶಾಲೆ ಅಧ್ಯಕ್ಷ ರಂಗನಾಥ್ ಹೇಳಿದರು.
ಶಾಲಾ ಮುಖ್ಯ ಶಿಕ್ಷಕಿ ವಿ. ಶೀತಲ್ ಮಾತನಾಡಿ, ಓದಿನ ಜೊತೆಗೆ ಮಕ್ಕಳಿಗೆ ಯಾವ ವಿಷಯದಲ್ಲಿ ಹೆಚ್ಚು ಆಸಕ್ತಿ ಇದೆಯೋ, ಅದಕ್ಕೆ ಅವಕಾಶವನ್ನು ನಮ್ಮ ಶಾಲೆ ನೀಡಿದ್ದು, ಎಸ್ಎಸ್ಎಲ್ ಸಿ ವರೆಗೂ ಎಲ್ಲಾ ವಿದ್ಯಾರ್ಥಿಗಳು ವಸ್ತು ಪ್ರದರ್ಶನದಲ್ಲಿ ಭಾಗವಹಿಸಿದ್ದಾರೆ. ಕನ್ನಡ, ಇಂಗ್ಲಿಷ್, ಹಿಂದಿ, ವಿಜ್ಞಾನ, ಕಲೆ ವಿಭಾಗಗಳಾಗಿ ವಿಂಗಡಿಸಿದ್ದು, ಎಲ್ಲರೂ ಉತ್ಸಾಹದಿಂದ ಶಾಲೆಯಲ್ಲಿ ತಮಗೆ ಕೊಟ್ಟ ವಿಷಯವನ್ನು ತಯಾರು ಮಾಡಿಕೊಳ್ಳಲು ಯಶಸ್ವಿಯಾಗಿದ್ದಾರೆ. ಈ ವರ್ಷದ ವಸ್ತು ಪ್ರದರ್ಶನದಲ್ಲಿ ಪ್ರಮುಖವಾಗಿ 2028ರಲ್ಲಿ ಇಸ್ರೋದಿಂದ ಉಡಾವಣೆಯಾಗುವ ಚಂದ್ರಯಾನ- 4 ಮಾದರಿ ಮಾಡಿರುವುದು ಹೆಚ್ಚು ಆಕರ್ಷಣೆ ಪಡೆದಿದೆ ಎಂದರು.
ಶಾಲಾ ಮಕ್ಕಳು ನಡೆಸಿಕೊಟ್ಟ ವಸ್ತು ಪ್ರದರ್ಶನದಲ್ಲಿ ಮಾಗಡಿ ಶ್ರೀ ರಂಗನಾಥ ಸ್ವಾಮಿ, ಸೋಮೇಶ್ವರ ಸ್ವಾಮಿ ದೇವಸ್ಥಾನಗಳು, ಮಾಗಡಿ ಕೋಟೆ, ಸಾವನದುರ್ಗಾ ಬೆಟ್ಟ, ಚಂದ್ರಯಾನ- 4 ಮಾದರಿಗಳು ಪ್ರಮುಖ ಆಕರ್ಷಣೆಗಳಾಗಿದ್ದವು. ಉಳಿದಂತೆ ಚರ್ಚ್, ಮಸೀದಿ, ಪಾರ್ಕ್, ಕಟ್ಟಡಗಳ ಮಾದರಿ, ಜ್ಞಾನಪೀಠ ಪ್ರಶಸ್ತಿ ಪಡೆದ ಕವಿಗಳ ಪರಿಚಯ, ವಚನ ಸಾಹಿತಿಗಳು, ವಿಜ್ಞಾನ ವಸ್ತು ಪ್ರದರ್ಶನ, ಚಂದ್ರಯಾನ ಮಾದರಿ, ಭೂಮಂಡಲ ಪ್ರದರ್ಶನ, ರಾಕೆಟ್ ಉಡಾವಣೆ, ಹಿಂದಿ ಕವಿಗಳ ಪರಿಚಯ, ಇಂಗ್ಲಿಷ್ ಕವಿಗಳು, ಭಾಷೆಯ ವಿಚಾರ ಪ್ರದರ್ಶನ ಹೀಗೆ ಚಿಕ್ಕ ಮಕ್ಕಳಿಂದ ಪ್ರೌಢಶಾಲಾ ಮಕ್ಕಳವರೆಗೂ ಎಲ್ಲರ ಪ್ರದರ್ಶನಗಳನ್ನು ಅಚ್ಚುಕಟ್ಟಾಗಿ ಶಿಕ್ಷಕರು ಏರ್ಪಡಿಸಿದ್ದರು.ವಸ್ತು ಪ್ರದರ್ಶನವು ಪೋಷಕರ ಮತ್ತು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು. ಶಾಲಾ ಆಡಳಿತ ಮಾರ್ಗದರ್ಶಕರಾದ ಸುದರ್ಶನ್, ಕಾರ್ಯದರ್ಶಿ ಕುಮಾರಿದೇವಿ, ಶಿಕ್ಷಕಿ ಮೊನಿಷಾ, ಬೆಳಗುಂಬ ಗ್ರಾಪಂ ಮಾಜಿ ಅಧ್ಯಕ್ಷ ತಿರುಮಲೆ ಭೈರಪ್ಪ, ವಿಶ್ವನಾಥ್ ಸೇರಿ ಶಾಲಾ ಶಿಕ್ಷಕರು, ಮಕ್ಕಳು, ಪೋಷಕರು ಭಾಗವಹಿಸಿದ್ದರು.
(ಫೋಟೋ ಕ್ಯಾಪ್ಷನ್)ಮಾಗಡಿಯ ಬಾಲಾಜಿ ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಏರ್ಪಡಿಸಿದ್ದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಮಾಗಡಿ ರಂಗನಾಥಸ್ವಾಮಿ ದೇವಸ್ಥಾನದ ಮಾದರಿ ಆಕರ್ಷಣೆಯಾಗಿತ್ತು.