ಕ್ರೀಡೆಗೆ ವೈಜ್ಞಾನಿಕ ಬೆಂಬಲ, ನೈತಿಕ ಮೌಲ್ಯ ಅಗತ್ಯ

KannadaprabhaNewsNetwork |  
Published : Jul 13, 2026, 01:00 AM IST
ಧಾರವಾಡದಲ್ಲಿ ಆಯೋಜಿಸಿದ್ದ ಕ್ರೀಡಾ ವೈದ್ಯಕೀಯ, ಕ್ರೀಡಾ ವಿಜ್ಞಾನ ಹಾಗೂ ಡೋಪಿಂಗ್ ವಿರೋಧಿ ಶಿಕ್ಷಣ ಕುರಿತ ಈ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಶೂಟರ್ ಐಶ್ವರ್ಯ ಬಾಳೆಹೊಸೂರು ಹಾಗೂ ಐರನ್‌ಮ್ಯಾನ್ ಸದಾನಂದ ಅಮರಾಪುರ ಅವರನ್ನು ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ಇಲ್ಲಿಯ ಜೆಎಸ್‌ಎಸ್‌ ಉತ್ಸವ ಸಭಾಂಗದಲ್ಲಿ ಆಯೋಜಿಸಿದ್ದ ಕ್ರೀಡಾ ವೈದ್ಯಕೀಯ, ಕ್ರೀಡಾ ವಿಜ್ಞಾನ ಹಾಗೂ ಡೋಪಿಂಗ್ ವಿರೋಧಿ ಶಿಕ್ಷಣ ಕುರಿತ ಈ ರಾಷ್ಟ್ರೀಯ ವಿಚಾರ ಸಂಕಿರಣ ಯಶಸ್ವಿಯಾಯಿತು.

ಧಾರವಾಡ: ಆಸ್ಟ್ರೇಲಿಯಾದ ಕಾನ್ಸುಲೇಟ್‌ ಜನರಲ್‌ ಸಹಕಾರದಲ್ಲಿ ಕ್ರೀಡಾ ಸ್ಪೋರ್ಟ್ಸ್ ಮೆಡಿಸನ್‌ ಅಸೋಸಿಯೇಶನ್‌ ಹಲವು ಸಂಸ್ಥೆಗಳ ಜೊತೆಗೂಡಿ ಇಲ್ಲಿಯ ಜೆಎಸ್‌ಎಸ್‌ ಉತ್ಸವ ಸಭಾಂಗದಲ್ಲಿ ಆಯೋಜಿಸಿದ್ದ ಕ್ರೀಡಾ ವೈದ್ಯಕೀಯ, ಕ್ರೀಡಾ ವಿಜ್ಞಾನ ಹಾಗೂ ಡೋಪಿಂಗ್ ವಿರೋಧಿ ಶಿಕ್ಷಣ ಕುರಿತ ಈ ರಾಷ್ಟ್ರೀಯ ವಿಚಾರ ಸಂಕಿರಣ ಯಶಸ್ವಿಯಾಯಿತು.

ಕ್ರೀಡೆಯಲ್ಲಿ ವೈಜ್ಞಾನಿಕ ಬೆಂಬಲ ಹಾಗೂ ನೈತಿಕ ಮೌಲ್ಯಗಳ ಅಗತ್ಯತೆ ಹಿನ್ನೆಲೆಯಲ್ಲಿ ಆಯೋಜಿಸಲಾದ ಈ ರಾಷ್ಟ್ರೀಯ ವಿಚಾರ ಸಂಕಿರಣ ಕ್ರೀಡಾಪಟುಗಳ ಆರೋಗ್ಯ, ಸಾಧನೆ ಹೆಚ್ಚಿಸುವ ವೈಜ್ಞಾನಿಕ ತರಬೇತಿ ಹಾಗೂ ಉತ್ತಮ ಕ್ರೀಡೆ ಎಂಬ ಅಂಶಗಳ ಮೇಲೆ ಕೇಂದ್ರೀಕರಿಸಿತ್ತು.

ದಿನವಿಡೀ ನಡೆದ ವೈಜ್ಞಾನಿಕ ಅಧಿವೇಶನಗಳಲ್ಲಿ ತಜ್ಞರಾದ ಡಾ. ಅಶೋಕ್ ಅಹುಜಾ, ಡಾ. ಕಿರಣ್ ಕುಲಕರ್ಣಿ, ಡಾ. ಭರತ್ ಕುಮಾರ್, ಡಾ. ಲತಾ ಮುಷಣ್ಣವರ, ಪ್ರಶಾಂತ್ ಹಿಪ್ಪರಗಿ ಉಪನ್ಯಾಸ ನೀಡಿದರು.

ಕ್ರೀಡೆಯ ಸಂದರ್ಭದಲ್ಲಿ ಉಂಟಾದ ಗಾಯಗಳ ತಡೆಗಟ್ಟುವಿಕೆ, ವ್ಯಾಯಾಮ ಶರೀರಶಾಸ್ತ್ರ, ಪೌಷ್ಟಿಕಾಂಶ, ಬಯೋಮೆಕಾನಿಕ್ಸ್, ಮಾನಸಿಕ ಆರೋಗ್ಯ ಹಾಗೂ ನಾಡಾ ಮತ್ತು ವಾಡಾ ಸಂಸ್ಥೆಗಳ ಇತ್ತೀಚಿನ ಡೋಪಿಂಗ್ ವಿರೋಧಿ ನಿಯಮಗಳ ಕುರಿತು ವಿಚಾರಗೋಷ್ಠಿಗಳು ಹಾಗೂ ಸಂವಾದಗಳು ನಡೆದವು.

ಯುವ ಕ್ರೀಡಾಪಟುಗಳನ್ನು ಡೋಪಿಂಗ್‌ನಿಂದ ರಕ್ಷಿಸುವಲ್ಲಿ ಸಹಾಯಕ ಸಿಬ್ಬಂದಿಯ ಪಾತ್ರ, ವೈಜ್ಞಾನಿಕ ತರಬೇತಿ ವಿಧಾನಗಳು, ಆಹಾರ ಮತ್ತು ಪೌಷ್ಟಿಕಾಂಶ, ಕ್ರೀಡಾ ಮನೋವಿಜ್ಞಾನ, ಕ್ರೀಡಾ ದಂತಚಿಕಿತ್ಸೆ, ಗಾಯಗಳ ತಡೆ ಹಾಗೂ ಪುನರ್ವಸತಿ ಕುರಿತು ಉಪನ್ಯಾಸದಲ್ಲಿ ಒತ್ತು ನೀಡಲಾಯಿತು.

ಏಷ್ಯನ್ ಫುಟ್ಬಾಲ್ ಒಕ್ಕೂಟದ ಡೋಪಿಂಗ್ ಕಂಟ್ರೋಲ್ ಅಧಿಕಾರಿ ಡಾ. ಕಿರಣ್ ಕುಲಕರ್ಣಿ, ಕ್ರೀಡೆಯಲ್ಲಿ ಡೋಪ್ ಮಾದರಿ ಸಂಗ್ರಹಿಸುವ ಪ್ರಕ್ರಿಯೆಯ ಪ್ರಾಯೋಗಿಕ ಪ್ರದರ್ಶನ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಪೊಲೀಸ್ ಅಧೀಕ್ಷಕ ಗುಂಜನ್ ಆರ್ಯ, ಭಾರತದಲ್ಲಿ ಸುಸ್ಥಿರ ಕ್ರೀಡಾ ಪರಿಸರ ನಿರ್ಮಾಣಕ್ಕೆ ಕ್ರೀಡಾ ವೈದ್ಯಕೀಯ, ಕ್ರೀಡಾ ವಿಜ್ಞಾನ ಹಾಗೂ ಡೋಪಿಂಗ್ ವಿರೋಧಿ ಶಿಕ್ಷಣದ ಸಮನ್ವಯ ಅತ್ಯಗತ್ಯ. ನಮ್ಮ ಕ್ರೀಡಾಪಟುಗಳು ಹಾಗೂ ಸಹಾಯಕ ಸಿಬ್ಬಂದಿಗೆ ವಿಜ್ಞಾನ ಮತ್ತು ನೈತಿಕತೆ ಎರಡರಲ್ಲೂ ಸಮರ್ಪಕ ಅರಿವು ಮೂಡಿಸಬೇಕು ಎಂದರು.

ಜೆಎಸ್‌ಎಸ್ ಸಂಸ್ಥೆ ಕಾರ್ಯದರ್ಶಿ ಡಾ. ಅಜಿತ್ ಪ್ರಸಾದ, ಅಲ್ಪಾವಧಿಯ ಫಲಿತಾಂಶಗಳಿಗಾಗಿ ಕ್ರೀಡೆಯಲ್ಲಿ ಆರೋಗ್ಯ ಮತ್ತು ಪ್ರಾಮಾಣಿಕತೆಯನ್ನು ಎಂದಿಗೂ ಬಲಿಕೊಡಬಾರದು. ಕ್ರೀಡಾಪಟುಗಳು ಕ್ರೀಡೆ ಹಾಗೂ ಶಿಕ್ಷಣ ಎರಡರಲ್ಲೂ ಶ್ರೇಷ್ಠತೆಯನ್ನು ಸಾಧಿಸಬೇಕು ಎಂದರು.

ಶೂಟರ್ ಐಶ್ವರ್ಯ ಬಾಳೆಹೊಸೂರು ಮಾತನಾಡಿ, ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲಲು ಕ್ರೀಡಾ ವೈದ್ಯರು, ತರಬೇತುದಾರರು, ಫಿಸಿಯೋಥೆರಪಿಸ್ಟ್‌ಗಳು ಹಾಗೂ ಕ್ರೀಡಾ ಮನೋವಿಜ್ಞಾನಿಗಳ ಬಲಿಷ್ಠ ಬೆಂಬಲ ಅತ್ಯಗತ್ಯ ಎಂದರು.

ಶೂಟರ್ ಐಶ್ವರ್ಯ ಬಾಳೆಹೊಸೂರು ಹಾಗೂ ಐರನ್‌ಮ್ಯಾನ್ ಸದಾನಂದ ಅಮರಾಪುರ ಅವರನ್ನು ಸನ್ಮಾನಿಸಲಾಯಿತು. ಡಾ. ಗುರುರಾಜ ಪೌರಣಿಕ್ ನಿರೂಪಿಸಿದರು. ಸಾಯ್ ಕಬಡ್ಡಿ ತರಬೇತುದಾರ ರಂಗನಾಥ್ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪರ್ಯಾಯ ಬೆಳೆಯಿಂದ ಮಣ್ಣಿನ ಫಲವತ್ತತೆ ಹೆಚ್ಚಳ
ಗದಗ ಜಿಲ್ಲೆಯ 898 ಮಕ್ಕಳಲ್ಲಿ ಅಪೌಷ್ಟಿಕತೆ!