ಕಸ್ತೂರಿರಂಗನ್ ವರದಿಯನ್ನೇ ಸಂಪೂರ್ಣವಾಗಿ ಕೈಬಿಡಿ: ಶಾಸಕ ಆರಗ ಜ್ಞಾನೇಂದ್ರ

KannadaprabhaNewsNetwork |  
Published : Sep 04, 2026, 01:45 AM IST
ಫೋಟೋ 03 ಟಿಟಿಎಚ್ 01: ಶಾಸಕ ಆರಗ ಜ್ಞಾನೇಂದ್ರ ನೇತೃತ್ವದಲ್ಲಿ ನಡೆದ ವಿವಿದ ರಾಜಕೀಯ ಪಕ್ಷಗಳ ಮುಖಂಡರು,ಸಂಘಸಂಸ್ಥೆಗಳು ಹಾಗೂ ಸಹಕಾರಿ ಸಂಘಟನೆಗಳ ಪ್ರತಿನಿಧಿಗಳು ಮತ್ತು ಸಾರ್ವಜನಿಕರು ಪಾಲ್ಗೊಂಡಿದ್ದ ಸಭೆಯ ನಿರ್ಣಯವನ್ನು ಸರ್ಕಾರಕ್ಕೆ ಸಲ್ಲಿಸಲಾಯ್ತು. | Kannada Prabha

ಸಾರಾಂಶ

ಪಶ್ಚಿಮಘಟ್ಟ ವ್ಯಾಪ್ತಿಯ ಜನರ ಬದುಕಿಗೆ ಮಾರಕವಾಗಿರುವ ಕಸ್ತೂರಿ ರಂಗನ್ ವರದಿಯನ್ನೇ ಸಮಗ್ರವಾಗಿ ಕೈ ಬಿಡುವಂತೆ ಆಗ್ರಹಿಸಿ ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ

ಪಶ್ಚಿಮಘಟ್ಟ ವ್ಯಾಪ್ತಿಯ ಜನರ ಬದುಕಿಗೆ ಮಾರಕವಾಗಿರುವ ಕಸ್ತೂರಿ ರಂಗನ್ ವರದಿಯನ್ನೇ ಸಮಗ್ರವಾಗಿ ಕೈ ಬಿಡುವಂತೆ ಆಗ್ರಹಿಸಿ ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಲಾಯಿತು.

ಶಾಸಕ ಆರಗ ಜ್ಞಾನೇಂದ್ರ ನೇತೃತ್ವದಲ್ಲಿ ಗುರುವಾರ ಪಟ್ಟಣದ ಗೋಪಾಲಗೌಡ ರಂಗಮಂದಿರದಲ್ಲಿ ನಡೆದ ವಿವಿದ ರಾಜಕೀಯ ಪಕ್ಷಗಳ ಮುಖಂಡರು, ಸಂಘಸಂಸ್ಥೆಗಳು ಹಾಗೂ ಸಹಕಾರಿ ಸಂಘಟನೆಗಳ ಪ್ರತಿನಿಧಿಗಳು ಮತ್ತು ಸಾರ್ವಜನಿಕರು ಪಾಲ್ಗೊಂಡಿದ್ದು 7 ನೇ ಅಧಿಸೂಚನೆ ಬಗ್ಗೆ ತೀವ್ರ ವಿರೋಧ ವ್ಯಕ್ತವಾಯಿತು. ಸಭೆಯಲ್ಲಿ ಪಾಲ್ಗೊಂಡಿದ್ದವರ ಪೂರ್ಣ ಒಪ್ಪಿಗೆ ಹಾಗೂ ಒಕ್ಕೊರಲ ತೀರ್ಮಾನದೊಂದಿಗೆ ಕಸ್ತೂರಿ ರಂಗನ್ ವರದಿಯನ್ನೇ ಸಮಗ್ರವಾಗಿ ಕೈಬಿಡುವಂತೆ ಸರ್ಕಾರವನ್ನು ಒತ್ತಾಯಿಸುವ ನಿರ್ಣಯವನ್ನು ಕೈಗೊಳ್ಳಲಾಯಿತು.

ಸಮಾಲೋಚನಾ ಸಭೆಯ ನೇತೃತ್ವವನ್ನು ವಹಿಸಿದ್ದ ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಇದೊಂದು ರಾಜಕೀಯ ಮೀರಿದ ವಿಷಯ. ಅರಣ್ಯ ಇಲಾಖೆಯ ಕಿರುಕುಳದಿಂದ ನಾವು ಈ ಪ್ರದೇಶದಲ್ಲಿ ಹುಟ್ಟಿದ್ದೇ ತಪ್ಪಾಯ್ತು ಎಂಬಂತಹ ಸ್ಥಿತಿ ನಿರ್ಮಾಣವಾಗಿದೆ. ಜನರ ಬದುಕಿಗೆ ಮಾರಕವಾಗಿರುವ ಈ ವಿಚಾರಕ್ಕೆ ಸಂಬಂಧಿಸಿ ರಾಜಕೀಯ ಚೌಕಟ್ಟನ್ನು ಮೀರಿ ಸಂಘಟಿತರಾಗಿ ನಿರ್ಣಯ ಕೈಗೊಳ್ಳುವ ಅನಿವಾರ್ಯತೆ ಎದುರಾಗಿದೆ. ಆದ್ದರಿಂದ ಈ ವರದಿ ಜಾರಿಯಾಗಬಾರದು. ಹೊಸದಾಗಿ ಸಮಗ್ರ ಸರ್ವೇ ಆಗಬೇಕಿದೆ ಎಂದೂ ಆಗ್ರಹಿಸಿದರು.

ಪಾಶ್ಚಿಮಾತ್ಯರಿಂದ ಕಲುಷಿತಗೊಂಡಿರುವ ವಾತಾವರಣವನ್ನು ತಿಳಿಗೊಳಿಸುವ ಸಲುವಾಗಿ ಪಶ್ಚಿಮಘಟ್ಟದಿಂದ ಜನರನ್ನು ಒಕ್ಕಲೆಬ್ಬಿಸುವ ಪ್ರಯತ್ನ ನಡೆದಿದೆ. ಅವರ ಹಣದಲ್ಲೆ ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿದೆ. ಇದಕ್ಕೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳುವ ಸಲುವಾಗಿ ತಾಲೂಕಿನ ಒಕ್ಕೊರಲ ನಿರ್ಣಯ ಕೇಂದ್ರ ರಾಜ್ಯ ಸರ್ಕಾರಗಳ ಗಮನ ಸೆಳೆಯಬೇಕಿದೆ. ಹೀಗಾಗಿ ಪ್ರತಿಯೊಬ್ಬರೂ ಈ ವರದಿಯನ್ನು ವಿರೋಧಿಸಿ ಸರ್ಕಾರಕ್ಕೆ ಪತ್ರಗಳನ್ನು ಬರೆಯಬೇಕು ಎಂದೂ ಹೇಳಿದರು.

ಈ ಬಗ್ಗೆ ವೈಜ್ಞಾನಿಕವಾಗಿ ತಳಮಟ್ಟದಲ್ಲಿ ಸಮೀಕ್ಷೆ ನಡೆಸುವಂತೆ ಕೇಂದ್ರ ಸಚಿವ ಉಪೇಂದ್ರ ಯಾದವ್ 2023 ರಲ್ಲಿ ಸಂಜಯ್ ಕುಮಾರ್ ನೇತೃತ್ವದಲ್ಲಿ ಸಮಿತಿ ರಚನೆಯಾಗಿದೆ. ಸಮಿತಿ ಸ್ಥಳಕ್ಕೆ ಹೋಗಿ ಜನಾಭಿಪ್ರಾಯದೊಂದಿಗೆ ವರದಿ ನೀಡಲಿದೆ. ಸರ್ಕಾರ ಇದಕ್ಕೆ 2027 ರವರೆಗೆ ಅವಕಾಶ ನೀಡಿದೆ. ಅರಣ್ಯ ಉಳಿಸೋದಕ್ಕೆ ಹಾಲಿ ಇರುವ ಕಾಯ್ದೆಗಳೇ ಸಾಕು. ಹೊಸ ಕಾಯ್ದೆಯ ಅಗತ್ಯವಿಲ್ಲ ಎಂದೂ ಹೇಳಿದರು.

ಮುಖ್ಯ ಭಾಷಣಕಾರರಾಗಿದ್ದ ದಿಗಂತ್ ಬಿಂಬೈಲು ಮಾತನಾಡಿ, ವಿದೇಶಿ ಪ್ರಭಾವ ಹಾಗೂ ಲಾಗಾಯ್ತಿನಿಂದ ಅಧಿಕಾರಿಗಳ ನಿರ್ಲಕ್ಷ್ಯದ ಪರಿಣಾಮ ಈ ಸ್ಥಿತಿ ನಿರ್ಮಾಣವಾಗಿದ್ದು ನಾವು ಇಂದಿಗೂ ಬ್ರಿಟೀಷರ ಆಳ್ವಿಕೆಯಲ್ಲೇ ಇದ್ದೀವಾ ಎಂಬಂತಾಗಿದೆ. ಸಮಸ್ಯೆಗಳಿಗೆ ಸೋತು ಜನರು ಗುಳೆ ಹೋಗುವಂತಹ ವಾತಾವರಣ ನಿರ್ಮಿಸುವುದು ಇದರ ಹಿಂದಿನ ಮರ್ಮ ಎಂದರು.

ತಾಲೂಕು ಜೆಡಿಎಸ್ ಅಧ್ಯಕ್ಷ ಕುಣಜೆ ಕಿರಣ್ ಪ್ರಭಾಕರ್ ಮಾತನಾಡಿ, ಈ ಸಮಸ್ಯೆ ಗುಜರಾತಿನಿಂದ ಕೇರಳದವರೆಗಿದೆ. ಇದರಲ್ಲಿ ರಾಜಕೀಯ ಭಿನ್ನಾಭಿಪ್ರಾಯ ಮರೆತು ಒಗ್ಗಟ್ಟಿನಿಂದ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಬೇಕಿದೆ ಎಂದು ಶಾಸಕರ ಚಿಂತನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಸುಪ್ರೀಕೋರ್ಟಿನ ಹಸಿರುಪೀಠದ ಆದೇಶದನ್ವಯ ವರದಿಯ 7 ನೇ ಅಧಿಸೂಚನೆಯಲ್ಲಿ ತಾಲೂಕಿನ 157 ಗ್ರಾಮಗಳನ್ನು ಸೂಕ್ಷ್ಮ ಪ್ರದೇಶಗಳೆಂದು ಗುರುತಿಸಲಾಗಿದ್ದು ಇದರಲ್ಲಿ ಶಾಲಾ ಕಾಲೇಜುಗಳು, ಜನವಸತಿ, ಕೃಷಿಭೂಮಿ, ಸಂಪರ್ಕ ರಸ್ತೆಗಳು, ಸರ್ಕಾರಿ ಕಚೇರಿಗಳು, ಧಾರ್ಮಿಕ ಕೇಂದ್ರಗಳನ್ನು ಒಳಗೊಂಡಿದ್ದು ಅದಿಸೂಚನೆ ಆಧಾರದಲ್ಲಿ ಜಾರಿಯಾದರೆ ಮಲೆನಾಡಿನ ಜನರು ಗುಳೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದೂ ಮನವಿಯಲ್ಲಿ ತಿಳಿಸಲಾಗಿದೆ.

ವೇದಿಕೆಯಲ್ಲಿ ತಾಲೂಕು ವಕೀಲರ ಸಂಘಧ ಅಧ್ಯಕ್ಷ ಎಂ.ಎನ್. ರಮೇಶ್, ಮ್ಯಾಮ್ಕೋಸ್ ಉಪಾಧ್ಯಕ್ಷ ಹುಲ್ಕುಳಿ ಮಹೇಶ್, ಸಹಕಾರಿ ಮುಖಂಡ ಕೆ.ನಾಗರಾಜ ಶೆಟ್ಟಿ ಹಾಗೂ ನಾರಾಯಣ ಭಟ್, ಕೃಷಿಕ ಸಮಾಜದ ಅಧ್ಯಕ್ಷ ಹೊಸ್ಮನೆ ಸತೀಶ್, ಮಂಡಲ ಬಿಜೆಪಿ ಅಧ್ಯಕ್ಷ ಹೆದ್ದೂರು ನವೀನ್, ಸಚಿನ್ ಗರಗ ಇತರರು ಇದ್ದರು. ಸಭೆಯ ನಂತರ ಪ್ರಮುಖ ಬೀದಿಯಲ್ಲಿ ಮೆರವಣಿಗೆಯಲ್ಲಿ ಸಾಗಿ ತಾಲೂಕು ಕಚೇರಿ ಎದುರು ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಸಭೆಯ ನಿರ್ಣಯವನ್ನು ಕಳುಹಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೊಡ್ಡಮತಿಘಟ್ಟದಲ್ಲಿ ಜೈವಿಕ ಕೀಟನಾಶಕಗಳ ಬಳಕೆ ಕುರಿತು ಜಾಗೃತಿ
ಕಿಂಗ್‌ಪಿನ್‌’ ಕನ್ನಾಳೆ ಆಪ್ತರ ಮನೆಗೆ ಸಿಐಡಿ ಲಗ್ಗೆ