ಮಾನ್ವಿ: ಸಮೀಪದ ರಬ್ಬಣಕಲ್ನಲ್ಲಿರುವ ಪುರಸಭೆ ಕುಡಿಯುವ ನೀರು ಪೂರೈಸುವ ಪಂಪ್ಹೌಸ್ ಹಾಗೂ ಶುದ್ಧೀಕರಣ ಘಟಕಗಳಿಗೆ ಶಾಸಕ ಹಂಪಯ್ಯನಾಯಕ ಪುರಸಭೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಪುರಸಭೆ ಮುಖ್ಯಾಧಿಕಾರಿ ಪರಶುರಾಮ ಮಾತನಾಡಿ, ಮಾನ್ವಿ ಪಟ್ಟಣಕ್ಕೆ ಕುಡಿವ ನೀರು ಸರಬರಾಜು ಮಾಡುವ ಪೈಪ್ಲೈನ್ ಒಡೆದಿರುವುದರಿಂದ ದುರಸ್ತಿ ಕಾಮಗಾರಿ ಕೈಗೊಳ್ಳಲಾಗಿದ್ದು, ಶೀಘ್ರವೇ ಕಾಮಗಾರಿ ಪೂರ್ಣಗೊಳಿಸಿ ಪಟ್ಟಣಕ್ಕೆ ನಿಯಮಿತವಾಗಿ ನೀರು ಪೂರೈಕೆ ಮಾಡುವುದಕ್ಕೆ ಕ್ರಮ ಕೈಗೊಳ್ಳಲಾಗುವುದು. ರಬ್ಬಣಕಲ್ನಲ್ಲಿರುವ ಕುಡಿವ ನೀರಿನ ಕೆರೆಯಲ್ಲಿ 3.5 ಮೀಟರ್ ನೀರು ಸಂಗ್ರಹವಿದ್ದು, ಇನ್ನು 10 ದಿನಗಳವರೆಗೆ ಪೂರೈಸಲು ಸಾಧ್ಯವಾಗಲಿದೆ. ಈ ಭಾಗದಲ್ಲಿ ಉತ್ತಮವಾದ ಮಳೆಯಾಗಿರುವುದರಿಂದ ತಾಲೂಕಿನ ಕಾತರಕಿ ಗ್ರಾಮದಲ್ಲಿನ ತುಂಗಭದ್ರ ನದಿಯಲ್ಲಿನ ಜಾಕ್ ವೇಲ್ನಲ್ಲಿ ನೀರು ಸಂಗ್ರಹವಾಗಿದೆ ಹಾಗೂ ನದಿಯಲ್ಲಿ ಹಾಕಲಾದ 5 ಕೊಳವೆ ಬಾವಿಗಳಿಂದಲು ನೀರು ಉತ್ತಮವಾಗಿ ದೊರೆಯುತ್ತಿದ್ದು ಪುರಸಭೆ ಸಿಬ್ಬಂದಿ ಕುಡಿಯುವ ನೀರು ಪೂರೈಸುವುದಕ್ಕೆ ಅಗತ್ಯ ಸಿದ್ಧತೆ ಕೈಗೊಂಡಿರುವುದಾಗಿ ತಿಳಿಸಿದರು.
ಪುರಸಭೆಯಿಂದ ನೀರು ಪೂರೈಕೆ ಮಾಡುವ ಪೈಪ್ಲೈನ್ ದುರಸ್ತಿಯಿಂದಾಗಿ ಪಟ್ಟಣಕ್ಕೆ ಕಳೆದ 8 ದಿನಗಳಿಂದ ನೀರು ಸರಬರಾಜು ಸ್ಥಗಿತಗೊಂಡಿದ್ದರಿಂದ ಸಾರ್ವಜನಿಕರು, ತೀವ್ರ ಆಕ್ರಶ ವ್ಯಕ್ತಪಡಿಸುತ್ತಿರುವ ಹಿನ್ನೆಲೆ ಇಂದು ಶಾಸಕರ ನೇತೃತ್ವದಲ್ಲಿ ಪುರಸಭೆ ಸದಸ್ಯರು, ಅಧಿಕಾರಿಗಳು , ಪರಿಶೀಲನೆ ನಡೆಸಿದರು.ಈ ವೇಳೆ ಮುಖಂಡರು, ಅಧಿಕಾರಿ, ಸಿಬ್ಬಂದಿ ಇದ್ದರು.