ಬೆಂಗಳೂರು : ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ ಸಂಬಂಧಿಸಿದಂತೆ ಕಡಿಮೆ ಭೂಸ್ವಾಧೀನ ಮಾಡಬಹುದಾದ ಮತ್ತು ಗ್ರಾಮಗಳನ್ನು ಹೆಚ್ಚಾಗಿ ಬೇರೆಡೆಗೆ ಸ್ಥಳಾಂತರಿಸುವ ಸಾಧ್ಯತೆ ಕಡಿಮೆ ಇರುವ ಜಾಗದಲ್ಲಿ ವಿಮಾನನಿಲ್ದಾಣ ನಿರ್ಮಿಸುವ ಕುರಿತು ಸರ್ಕಾರ ಚರ್ಚೆ ನಡೆಸಿದೆ. ವಿಧಾನಸೌಧದಲ್ಲಿ ಬುಧವಾರ ಬೆಂಗಳೂರಿಗೆ 2ನೇ ವಿಮಾನನಿಲ್ದಾಣ ಸಂಬಂಧ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಸಭೆ ನಡೆಸಲಾಯಿತು.
ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣ ನಿರ್ಮಾಣ ಸಂಬಂಧ ಈಗಾಗಲೇ ಗುರುತಿಸಲಾಗಿರುವ ಕನಕಪುರ ರಸ್ತೆಯ ಚೂಡಹಳ್ಳಿ, ಸೋಮನಹಳ್ಳಿ ಮತ್ತು ನೆಲಮಂಗಲ-ಕುಣಿಗಲ್ ರಸ್ತೆಯಲ್ಲಿ ಸ್ಥಳ ಗುರುತಿಸುವುದು, ಕೇಂದ್ರದ ತಂಡ ನೀಡಿರುವ ವರದಿ, ಮೂರೂ ಸ್ಥಳಗಳಲ್ಲಿ ವಿಮಾನನಿಲ್ದಾಣ ನಿರ್ಮಾಣಕ್ಕೆ ಸಂಬಂಧಿಸಿದಂತೆ ರೂಪಿಸಲಾಗಿರುವ ಕಾರ್ಯಸಾಧ್ಯತಾ ವರದಿಗಳ ಕುರಿತಂತೆ ಚರ್ಚಿಸಲಾಯಿತು. 3 ಸ್ಥಳಗಳ ಪೈಕಿ ಚೂಡಹಳ್ಳಿ ಮತ್ತು ಸೋಮನಹಳ್ಳಿಯಲ್ಲಿ ಗುರುತಿಸಲಾಗಿರುವ ಸ್ಥಳಗಳಲ್ಲಿ ವಿಮಾನ ನಿಲ್ದಾಣ ನಿರ್ಮಾಣದ ಸಾಧ್ಯತೆ ಬಗ್ಗೆ ಮಾಹಿತಿ ನೀಡುವಂತೆ ಸಭೆಯಲ್ಲಿ ಸೂಚಿಸಲಾಯಿತು.
ಸದ್ಯ ಚೂಡಹಳ್ಳಿಯಲ್ಲಿ 4655 ಎಕರೆ, ಸೋಮನಹಳ್ಳಿಯಲ್ಲಿ 4376 ಎಕರೆ ಭೂಮಿಯಿದ್ದು, ಎರಡೂ ಪ್ರದೇಶಗಳನ್ನು ಒಟ್ಟು ಗೂಡಿಸಿದರೆ 9 ಸಾವಿರ ಎಕರೆಗೂ ಹೆಚ್ಚಿನ ಭೂಮಿ ಸಿಗಲಿದ್ದು, ಅಲ್ಲಿ ವಿಮಾನನಿಲ್ದಾಣ ನಿರ್ಮಾಣ ಸಾಧ್ಯತೆ. ಜತೆಗೆ ಕಡಿಮೆ ಭೂಸ್ವಾಧೀನ ಮಾಡಬಹುದಾದ ಅಥವಾ ಕಡಿಮೆ ಗ್ರಾಮಗಳನ್ನು ಸ್ವಾಧೀನ ಪಡಿಸಿಕೊಳ್ಳಬಹುದಾದ ಸ್ಥಳವನ್ನು ಅಂತಿಮಗೊಳಿಸುವಂತೆಯೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧಿಕಾರಿಗಳಿಗೆ ನಿರ್ದೇಶಿಸಿದರು.
ಉಳಿದಂತೆ ಸಭೆಯಲ್ಲಿ, ಭೂಸ್ವಾಧೀನ ಪ್ರಕ್ರಿಯೆ ಮತ್ತು ಯೋಜನೆಯಿಂದ ವನ್ಯಜೀವಿಗಳ ಮೇಲಾಗುವ ಪರಿಣಾಮಗಳ ಕುರಿತು ತಾಂತ್ರಿಕ ಅಧ್ಯಯನ ನಡೆಸುವುದು ಹಾಗೂ ಸೋಮನಹಳ್ಳಿ ಪ್ರದೇಶವು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ಸಮೀಪದಲ್ಲಿದ್ದು ಅದರ ಬಗ್ಗೆಯೂ ವರದಿ ಸಿದ್ಧಪಡಿಸಿ, ಅನುಮತಿ ಪಡೆಯಬೇಕಿರುವ ಕುರಿತಂತೆ ಚರ್ಚಿಸಲಾಯಿತು.
ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಬೆಂಗಳೂರು ಸಮೀಪ ಎರಡನೇ ವಿಮಾನನಿಲ್ದಾಣ ನಿರ್ಮಾಣಕ್ಕೆ ಸಂಬಂಧಿಸಿದಂತೆ ಚರ್ಚಿಸಲಾಗಿದೆ. ಈ ಹಿಂದೆ ನಡೆದಿದ್ದ ಪ್ರಕ್ರಿಯೆಗಳ ವಿವರಣೆ ಪಡೆದಿದ್ದೇನೆ. ಸದ್ಯ ಗುರುತಿಸಲಾಗಿರುವ ಜಾಗಗಳ ಪೈಕಿ ಖಾಸಗಿಯವರಿಂದ ಕಡಿಮೆ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಬಹುದಾದ ಮತ್ತು ಕಡಿಮೆ ಗ್ರಾಮಗಳನ್ನು ಸ್ಥಳಾಂತರಿಸಬಹುದಾದ ಸ್ಥಳವನ್ನು ನಿಗದಿ ಮಾಡಿ ತಾಂತ್ರಿಕ ಕಾರ್ಯಸಾಧ್ಯತಾ ವರದಿ ನೀಡುವಂತೆ ತಿಳಿಸಿದ್ದೇನೆ ಎಂದು ಹೇಳಿದರು.