ಕಾರವಾರ: ಮುಂಬೈನ ನೆಹರು ವಿಜ್ಞಾನ ಕೇಂದ್ರದಲ್ಲಿ ಕೇಂದ್ರ ಸರ್ಕಾರದ ಸಂಸ್ಕೃತಿ ಮಂತ್ರಾಲಯದ ವಿಜ್ಞಾನ ವಸ್ತುಸಂಗ್ರಹಾಲಯಗಳ ರಾಷ್ಟ್ರೀಯ ಮಂಡಳಿಯಿಂದ ಆಯೋಜಿಸಿದ್ದ ರಾಷ್ಟ್ರಿಯ ವಿಜ್ಞಾನ ವಿಚಾರ ಗೋಷ್ಠಿಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದ ಕೃತಿಕಾ ಮಹೇಶ ಭಟ್ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಕುಮಟಾದ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ಹೈಸ್ಕೂಲಿನ ವಿದ್ಯಾರ್ಥಿನಿಯಾಗಿರುವ ಕೃತಿಕಾ ಜಿಲ್ಲೆ, ರಾಜ್ಯಕ್ಕೆ ಹೆಮ್ಮೆಯ ಸಾಧನೆ ಮಾಡಿದ್ದಾರೆ. ಮಹೇಶ ಭಟ್ ತೆಪ್ಪ ಹಾಗೂ ರೂಪಾ ಮಹೇಶ ಭಟ್ ದಂಪತಿಯ ಪುತ್ರಿಯಾಗಿರುವ ಈಕೆಯ ಸಾಧನೆಗೆ ಮುಖ್ಯಾಧ್ಯಾಪಕರು, ಶಿಕ್ಷಕರು, ಆಡಳಿತ ಮಂಡಳಿ ಪದಾಧಿಕಾರಿಗಳು ಅಭಿನಂದಿಸಿದ್ದಾರೆ.ದೊಡ್ಮನೆ ಸೇ.ಸ. ಸಂಘದ ಅಧ್ಯಕ್ಷ, ನಿರ್ದೇಶಕ ಅನರ್ಹ
ಸಿದ್ದಾಪುರ: ತಾಲೂಕಿನ ಕರ್ಕಿಮಕ್ಕಿಯ ದೊಡ್ಮನೆ ಗ್ರೂಪ್ ಗ್ರಾಮಗಳ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಹಾಗೂ ಓರ್ವ ನಿರ್ದೇಶಕರನ್ನು ಮೂರು ವರ್ಷಗಳವರೆಗೆ ಅನರ್ಹಗೊಳಿಸಿ ಶಿರಸಿಯ ಸಹಕಾರಿ ಸಂಘಗಳ ಸಹಾಯಕ ನಿಬಂಧಕರ ನ್ಯಾಯಾಲಯ ಆದೇಶ ನೀಡಿದ್ದು, ಸಂಘದ ಅಧ್ಯಕ್ಷ ಸುಬ್ರಾಯ ನಾರಾಯಣ ಭಟ್ಟ ಹಾಗೂ ನಿರ್ದೇಶಕ ವಿವೇಕ ಸುಬ್ರಾಯ ಭಟ್ಟ ಅನರ್ಹಗೊಂಡಿದ್ದಾರೆ.ಸಂಘದ ಸದಸ್ಯ ಪ್ರಕಾಶ ರಾಮಚಂದ್ರ ಹೆಗಡೆ ಅವರು ನೀಡಿದ ದೂರು ಪರಿಗಣಿಸಿದ ನ್ಯಾಯಾಲಯ ಪ್ರತಿವಾದಿಗಳಿಗೆ ಕಳೆದ ಅ. ೨೨ರಂದು ಕಚೇರಿಗೆ ಹಾಜರಾಗಿ ಅಹವಾಲು ತಿಳಿಸಲು ಅವಕಾಶ ನೀಡಿತ್ತು. ಪ್ರತಿವಾದಿಗಳು ಲಿಖಿತ ಹೇಳಿಕೆಯನ್ನು ನೀಡಿ ಅಹವಾಲು ಸಲ್ಲಿಸಿದ್ದು, ಸಂಘದಲ್ಲಿ ಸದಸ್ಯರ ಹಣಕಾಸಿನ ಅನಿವಾರ್ಯ ಪ್ರಸಂಗಗಳಲ್ಲಿ ಅರ್ಹತೆಗಿಂತ ಹೆಚ್ಚಿಗೆ ಸಾಲ ನೀಡಿದ್ದು ಇದೆ. ಸಂಘದ ಇತ್ತೀಚಿನ ಬೈಲಾ ಪ್ರಕಾರ ಮಿತಿಗಿಂತ ಹೆಚ್ಚಿಗೆ ಸಾಲ ಮತ್ತು ಬಡ್ಡಿ ರಿಯಾಯಿತಿ ನೀಡಿಲ್ಲ. ಈ ಬಗ್ಗೆ ಲೆಕ್ಕಪರಿಶೋಧನಾ ವರದಿಯಲ್ಲಿ ಆಕ್ಷೇಪಣೆ ನಮೂದು ಸಹಿತ ಇರುವುದಿಲ್ಲ. ದೂರುದಾರರು ಈ ಬಗ್ಗೆ ದಾಖಲೆ ನೀಡುತ್ತಾರೆಯೇ ಎಂದು ಲಿಖಿತ ಹೇಳಿಕೆಯಲ್ಲಿ ಕೇಳಿದ್ದರು.ಈ ತಕರಾರನ್ನು ವಿಮರ್ಶಿಸಿದ ನ್ಯಾಯಾಲಯ ಕೆಡಿಸಿ ಬ್ಯಾಂಕ್ನ ೨೦೨೧- ೨೨ರ ಸಾಲಿನ ಆಂತರಿಕ ತಪಾಸಣೆ ವರದಿ ಆಧರಿಸಿ ಆದೇಶ ನೀಡಿದ್ದು, ಸಂಘದ ಪೋಟ್ ನಿಯಮದ ಪ್ರಕಾರ ಸದಸ್ಯರಿಗೆ ನೀಡಬಹುದಾದ ಸಾಲ ಪ್ರಕರಣಗಳಲ್ಲಿ ಮಿತಿಮೀರಿ ಸಾಲ ನೀಡಿರುವುದು, ಸಂಘದ ಕಾಯ್ದೆ ಉಲ್ಲಂಘಿಸಿರುವುದು ಸಾಬೀತಾಗಿದೆ. ಇಲಾಖೆಯ ಅನುಮತಿ ಪಡೆಯದೇ ಏಕಕಾಲಿಕ ಸಾಲ ತಿರುವಳಿ ಮಾಡಿದೆ. ಇದು ಸಂಘದ ಬೈಲಾ ಉಲ್ಲಂಘನೆಯಾಗಿದೆ. ಹೀಗಾಗಿ ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ ೧೯೫೯ ಕಲಂ೨೯(ಸಿ)೮(ಬಿ) ಪ್ರಕಾರ ಸಂಘದ ಅಧ್ಯಕ್ಷ ಸುಬ್ರಾಯ ನಾರಾಯಣ ಭಟ್ಟ ಮತ್ತು ನಿರ್ದೇಶಕ ವಿವೇಕ ಸುಬ್ರಾಯ ಭಟ್ಟ ಅವರನ್ನು ಮುಂದಿನ ೩ ವರ್ಷಗಳವರೆಗೆ ದೊಡ್ಮನೆ ಸಹಕಾರಿ ಸಂಘದಲ್ಲಿ ಮತ್ತು ಇತರೆ ಯಾವುದೇ ಸಹಕಾರ ಸಂಘಗಳ ಆಡಳಿತ ಮಂಡಳಿ ಸದಸ್ಯರನ್ನಾಗಿ ಮುಂದುವರಿಯಲು ಮತ್ತು ಆಡಳಿತ ಮಂಡಳಿ ಚುನಾವಣೆಗೆ ಸ್ಪರ್ಧಿಸಲು ಅನರ್ಹರನ್ನಾಗಿ ಘೋಷಿಸಲಾಗಿದೆ ಎಂದು ತನ್ನ ಆದೇಶದಲ್ಲಿ ತಿಳಿಸಿದೆ.