ಪರಿಸರ ರಕ್ಷಣೆಗೆ ಸ್ವಯಂ ಪ್ರಜ್ಞೆ ಬಹಳ ಮುಖ್ಯ: ಡಾ. ಬಂಜಗೆರೆ ಜಯಪ್ರಕಾಶ್

KannadaprabhaNewsNetwork |  
Published : Jun 06, 2025, 01:06 AM IST
11 | Kannada Prabha

ಸಾರಾಂಶ

ಅಭಿವೃದ್ಧಿಶೀಲ ರಾಷ್ಟ್ರಗಳಿಗಿಂತ ಅಭಿವೃದ್ಧಿ ಹೊಂದಿದ ಅಮೆರಿಕದಂತಹ ದೇಶಗಳು ವಿಪರೀತ ವಸ್ತುಗಳ ಬಳಕೆಯಿಂದ ಪರಿಸರ ನಾಶಕ್ಕೆ ಕಾರಣವಾಗಿವೆ. ಮೊದಲೆಲ್ಲಾ ಭಾರತ ವಸ್ತುಗಳನ್ನು ಮರು ಬಳಕೆಗೆ ಹೆಸರಾಗಿತ್ತು. ಈಗ ಭಾರತಕ್ಕೂ ವಸ್ತುಗಳನ್ನು ಬಳಸಿ ಬಿಸಾಡುವ ಮುಂದುವರೆದ ದೇಶಗಳ ರೋಗ ಬಂದಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ಪರಿಸರ ರಕ್ಷಣೆಗೆ ಸ್ವಯಂ ಪ್ರಜ್ಞೆ ಬಹಳ ಮುಖ್ಯ. ವಸ್ತುಗಳ ಬಳಕೆಗೆ ಮೀತಿ ಹೇರಿಕೊಳ್ಳದಿದ್ದರೆ ಪರಿಸರ ರಕ್ಷಣೆಯಾಗುವುದಿಲ್ಲ ಮತ್ತು ಪ್ಲಾಸ್ಟಿಕ್ ಬಳಕೆಯೂ ನಿಲ್ಲುವುದಿಲ್ಲ ಎಂದು ಸಂಸ್ಕೃತಿ ಚಿಂತಕ ಡಾ. ಬಂಜಗೆರೆ ಜಯಪ್ರಕಾಶ್ ತಿಳಿಸಿದರು.

ಜೆ.ಪಿ.ನಗರದಲ್ಲಿರುವ ಒಡನಾಡಿ ಗಂಡು ಮಕ್ಕಳ ಪುನರ್ವಸತಿ ಕೇಂದ್ರದ ರಾಜಶೇಖರ ಕೋಟಿ ಸಭಾಂಗಣದಲ್ಲಿ ಬೋಧಿ ವೃಕ್ಷ ಸೊಸೈಟಿ ಫಾರ್ ಡೆವಲಪ್‌ ಮೆಂಟ್ ಗುರುವಾರ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ, ಪರಿಸರ ಪ್ರಜ್ಞಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಅಭಿವೃದ್ಧಿಶೀಲ ರಾಷ್ಟ್ರಗಳಿಗಿಂತ ಅಭಿವೃದ್ಧಿ ಹೊಂದಿದ ಅಮೆರಿಕದಂತಹ ದೇಶಗಳು ವಿಪರೀತ ವಸ್ತುಗಳ ಬಳಕೆಯಿಂದ ಪರಿಸರ ನಾಶಕ್ಕೆ ಕಾರಣವಾಗಿವೆ. ಮೊದಲೆಲ್ಲಾ ಭಾರತ ವಸ್ತುಗಳನ್ನು ಮರು ಬಳಕೆಗೆ ಹೆಸರಾಗಿತ್ತು. ಈಗ ಭಾರತಕ್ಕೂ ವಸ್ತುಗಳನ್ನು ಬಳಸಿ ಬಿಸಾಡುವ ಮುಂದುವರೆದ ದೇಶಗಳ ರೋಗ ಬಂದಿದೆ ಎಂದರು.

11ನೇ ಅಪಾಯದ ಗಂಟೆ ಬಾರಿಸಿದೆ. ಭೂಮಿ ಮೀತಿ ಮೀರಿದ ಒತ್ತಡದಲ್ಲಿದೆ. ದೆಹಲಿಯಲ್ಲಿ ವರ್ಷದಲ್ಲಿ 3 ತಿಂಗಳು ವಾಸ ಮಾಡಲಾಗದ ಪರಿಸ್ಥಿತಿಯನ್ನು ಕಾಣುತ್ತಿದ್ದೇವೆ. ನೀರು ಯಾಕೇ ಕಲುಷಿತವಾಗುತ್ತಿದೆ? ಯಾರೂ ಕಲುಷಿತ ಮಾಡುತ್ತಿದ್ದಾರೆ ಎಂಬುದನ್ನು ಗಂಭೀರವಾಗಿ ಅವಲೋಕಿಸಬೇಕು ಎಂದರು.

ಶ್ರೀಮಂತರು, ನಗರವಾಸಿಗಳು ತಮ್ಮ ಕಾರು ಶುಚಿ ಮಾಡಲು, ಶ್ವಾನ ತೊಳೆಯಲು ಎಷ್ಟು ನೀರು ಬಳಸುತ್ತಾರೆ. ಲಾನ್‌ ನಲ್ಲಿ ಹೂ ಗಿಡ ಹೊಳೆಯಲು ಎಷ್ಟು ರಾಸಾಯನಿಕ ಹಾಕುತ್ತಿದ್ದಾರೆ. ವಿವಾಹ ಸಮಾರಂಭಗಳಲ್ಲಿ ಶೇ.60 ಊಟವನ್ನು ಎಸೆಯಲಾಗುತ್ತದೆ. ಎಲ್ಲೆಡೆ ಪ್ಲಾಸ್ಟಿಕ್ ಬಾಟಲ್ ಬಳಕೆ ಕಾಣುತ್ತಿದ್ದೇವೆ. ಭೂಮಿ ಲೂಟಿ ಮಾಡುವುದನ್ನು ಮತ್ತು ದೌರ್ಜನ್ಯ ನಿಲ್ಲಿಸದಿದ್ದರೆ ಅಪಾಯ ಕಾದಿದೆ ಎಂದು ಅವರು ಎಚ್ಚರಿಸಿದರು.

ಇದೇ ವೇಳೆ ಕರ್ನಾಟಕ ರಾಜ್ಯ ಮಾಹಿತಿ ಹಕ್ಕು ಆಯೋಗದ ನಿವೃತ್ತ ಆಯುಕ್ತ ಕೆ.ಎಂ. ಚಂದ್ರೇಗೌಡ ಅವರಿಗೆ ಪರಿಸರ ಪ್ರಜ್ಞಾ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಸಾಮಾಜಿಕ ಹೋರಾಟಗಾರ ಅಹಿಂದ ಜವರಪ್ಪ, ಒಡನಾಡಿ ನಿರ್ದೇಶಕರಾದ ಸ್ಟ್ಯಾನ್ಲಿ, ಪರಶುರಾಮ್, ಕರ್ನಾಟಕ ರಾಜ್ಯ ನೈಸರ್ಗಿಕ ಕೃಷಿ ಆಂದೋಲನದ ಸಂಚಾಲಕ ಡಾ. ಸ್ವಾಮಿ ಆನಂದ್, ಬೋಧಿವೃಕ್ಷ ಸೊಸೈಟಿ ಫಾರ್ ಡೆವಲಪ್‌ಮೆಂಟ್ ಅಧ್ಯಕ್ಷ ಎಂ.ಎಸ್. ಚಂದ್ರ, ಬಿಲ್ಡ್ ಎಕ್ಸ್ ಕಂಪನಿಯ ನಿರ್ದೇಶಕರಾದ ಡಿ. ಪ್ರಕಾಶ್, ಎ.ಸಿ. ಬ್ರಿಜೇಶ್ ಮೊದಲಾದವರು ಇದ್ದರು.

ಇದಕ್ಕೂ ಮುನ್ನ ವರುಣಕೆರೆ ದಂಡೆಯಲ್ಲಿ 250 ಸಸಿಗಳನ್ನು ನೆಡುವ ಕಾರ್ಯಕ್ಕೆ ವಿಧಾನಪರಿಷತ್ತು ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಚಾಲನೆ ನೀಡಿದರು.

PREV

Recommended Stories

ರಾಜ್ಯದಲ್ಲಿ 5 - 6 ದಿನ ಮಳೆ ಇಳಿಮುಖ : 26ರಿಂದ ಮತ್ತೆ ಮಳೆ
ಎಮ್ಮೆ ಕೊಡಿಸುವುದಾಗಿ ಪ್ರೇಮ್‌ಗೆ ವಂಚನೆ : ₹4.75 ಲಕ್ಷ ಮೋಸ