ಕನ್ನಡಪ್ರಭ ವಾರ್ತೆ ಪಾವಗಡ
ರಾತ್ರಿಪೂರ್ತಿ ಕಗ್ಗತ್ತಲು: ಈ ಸಂಬಂಧ ಬೆಸ್ಕಾಂ ಉಪವಿಭಾಗದ ಮೇಲಾಧಿಕಾರಿಗಳ ಆದೇಶದ ಮೇರೆಗೆ ಇಲ್ಲಿನ ಬೆಸ್ಕಾಂ ಇಲಾಖೆಯ ಎಇಇ ಕೃಷ್ಣಮೂರ್ತಿ ಹಾಗೂ ಮಂಗಳವಾಡ ಬೆಸ್ಕಾಂ ವಿಭಾಗದ ಸಹಾಯಕ ಎಂಜಿನಿಯರ್ ಆ.8ರಂದು ನಿಡಗಲ್ ಗ್ರಾಮಕ್ಕೆ ಭೇಟಿ ನೀಡಿ, ಅನಧಿಕೃತ ಮನೆಗಳ ವಿದ್ಯುತ್ ಸಂಪರ್ಕ ಕಡಿತಕ್ಕೆ ಆದೇಶಿಸಿದ್ದರು. ಈ ಆದೇಶದ ಬೆನ್ನಲೇ ಕುಪಿತರಾದ ನಿಡಗಲ್ ದುರ್ಗದ ಗ್ರಾಮಸ್ಥರು ಬೆಸ್ಕಾಂ ವಿರುದ್ಧ ಪ್ರತಿಭಟನೆಗೆ ಸಜ್ಜಾಗಿ ನಮ್ಮೂರಿಗೆ ಕರೆಂಟ್ ಬೇಡವೇ ಬೇಡ ಎಂದು ಆಕ್ರೋಶ ವ್ಯಕ್ತಪಡಿಸಿ ಬೀದಿ ದೀಪ ಸೇರಿದಂತೆ ಎಲ್ಲ ವಿದ್ಯುತ್ ಲೈನ್ ಕಟ್ ಮಾಡಿದ್ದರೆನ್ನಲಾಗಿದೆ. ಇದರಿಂದ ಆ.8ರ ಗುರುವಾರ ರಾತ್ರಿ ಗ್ರಾಮಪೂರ್ತಿ ಕರೆಂಟ್ ಇಲ್ಲದೇ ಇಡೀ ಗ್ರಾಮ ಕಗ್ಗತ್ತಲಿಂದ ಕೂಡಿತ್ತು.
ಪ್ರತಿಭಟನೆ: ಸಮಸ್ಯೆ ನಿವಾರಣೆ ಹಿನ್ನಲೆಯಲ್ಲಿ ಆ.9ರಂದು ಶುಕ್ರವಾರ ಆರಸೀಕೆರೆ ಠಾಣೆಯ ಪೊಲೀಸ್ ಬಂದೋಬಸ್ತಿನೊಂದಿಗೆ ಸ್ಥಳಕ್ಕೆ ಆಗಮಿಸಿದ ಮೇರೆಗೆ ಬೆಸ್ಕಾಂನ ಎಇಇ ಹಾಗೂ ಎಇ ಲೈನ್ಮ್ಯಾನ್ ಇತರೆ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರನ್ನು ಮನವೊಲಿಸಲು ಮುಂದಾಗುತ್ತಿದ್ದಂತೆ ನೂರಾರು ಮಂದಿ ಬೀದಿಗಿಳಿದು ಬೆಸ್ಕಾಂ ವಿರುದ್ದ ಪ್ರತಿಭಟನೆ ನಡೆಸಿದರು. ಇಲ್ಲಿನ ನಾಗಭೂಷಣ್ ಎಂಬ ವಿಕಲಚೇತನ ವ್ಯಕ್ತಿ ಪ್ಲೊರ್ ಮಿಲ್ ಹಾಕಿಕೊಂಡಿದ್ದು, ಬೆಸ್ಕಾಂನಿಂದ ಮಾಹಿತಿ ನೀಡಿದರೂ ಕಳೆದ ಎರಡು ವರ್ಷದ 30ಸಾವಿರ ಕರೆಂಟ್ ಬಿಲ್ಲು ಕಟ್ಟುತ್ತಿಲ್ಲ. ಆತನಿಗೆ ಸೇರಿದ್ದ ಪ್ಲೋರ್ ಮಿಲ್ ವಿದ್ಯುತ್ ಸಂಪರ್ಕ ಕಡಿತಗೊಳಿಸದೇ ನಮ್ಮ ಮನೆಗಳ ಸಂಪರ್ಕ ಕಡಿತಕ್ಕೆ ಆದೇಶ ನೀಡಿದ್ದು ತಪ್ಪು ಎಂದು ವಾದಿಸಿದರು.ನಕ್ಸಲ್ ಪೀಡಿತ ಪ್ರದೇಶವೆಂದು ಭಾಗ್ಯಜ್ಯೋತಿ: ಇಲ್ಲಿ 70ಕ್ಕಿಂತ ಹೆಚ್ಚು ಎಸ್ಸಿ ಎಸ್ಟಿ ಹಾಗೂ ಮುಸ್ಲಿಂ ಸಮುದಾಯದ ಕುಟುಂಬಗಳು ವಾಸವಿದ್ದು ಅತ್ಯಂತ ಹಿಂದುಳಿದಿದ್ದ ಕಾರಣ ನಿಡಗಲ್ ದುರ್ಗದ ಗ್ರಾಮವನ್ನು ನಕ್ಸಲ್ ಪೀಡಿತ ಪ್ರದೇಶವೆಂದು ಘೋಷಿಸಲಾಗಿದೆ. ಇಲ್ಲಿನ ವೆಂಕಟರಮಣಪ್ಪಶಾಸಕರಾಗಿದ್ದ ವೇಳೆ ಇಲ್ಲಿನ ಬಡ ಜನತೆಯ ಅನುಕೂಲಕ್ಕಾಗಿ ಭಾಗ್ಯಜ್ಯೋತಿ ಯೋಜನೆ ಅಡಿಯಲ್ಲಿ ಮನೆಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸಿಕೊಟ್ಟಿದ್ದರು. ಕಳೆದ 15ವರ್ಷದಿಂದ ಕರೆಂಟ್ ಬಿಲ್ಲು ಕೇಳಿದವರೇ ಇಲ್ಲ. ಈಗ ಅನಧಿಕೃತ ಸಂಪರ್ಕ ಎಂದು ಪರಿಗಣಿಸಿ ಬೆಸ್ಕಾಂ ಅಧಿಕಾರಿಗಳು ಏಕಾಏಕಿ ಕಂಬದಿಂದ ಎಳೆದ ಮನೆಗಳ ವಿದ್ಯುತ್ ಸಂಪರ್ಕದ ವೈರು ಕಡಿತಗೊಳಿಸಿದ್ದು, ನ್ಯಾಯವೇ ನಮ್ಮ ಗ್ರಾಮಕ್ಕೆ ಕರೆಂಟ್ ಇಲ್ಲದಿದ್ದರೂ ನಾವು ಜೀವನ ಮಾಡುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಯಾವುದೂ ಅಕ್ರಮ ಇಲ್ಲ ಎಂದು ವಾದ: ಇದೇ ವೇಳೆ ಮುಖಂಡ ಹಾಗೂ ಮಾಜಿ ಗ್ರಾಪಂ ಸದಸ್ಯ ಮಹರಾಜ್ ಮಾತನಾಡಿ, ಪ್ಲೋರ್ ಮಿಲ್ ವಿದ್ಯುತ್ ಸಂಪರ್ಕದ ಬಿಲ್ಲು ನೀಡಿದ ವಿಚಾರ ಹಾಗೂ ಮನೆಗಳ ವಿದ್ಯುತ್ ಸಂಪರ್ಕದ ವಿಚಾರವಾಗಿ ಇಲ್ಲಿನ ಗ್ರಾಮದ ವ್ಯಕ್ತಿಯೊಬ್ಬ ಮೇಲಾಧಿಕಾರಿಗಳಿಗೆ ದೂರು ಸಲ್ಲಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಈ ಹಿನ್ನಲೆಯಲ್ಲಿ ಏಕಾಎಕಿ ಗ್ರಾಮಕ್ಕೆ ಭೇಟಿ ನೀಡಿದ ಬೆಸ್ಕಾಂ ಅಧಿಕಾರಿಗಳು ಮಾಹಿತಿ ನೀಡದೇ ಮನೆಗಳ ಸಂಪರ್ಕದ ವಿದ್ಯುತ್ ವೈರು ಕಟ್ ಆದೇಶ ನೀಡಿದ್ದರು. ಅತ್ಯಂತ ಹಿಂದುಳಿದಿದ್ದ ಹಿನ್ನಲೆಯಲ್ಲಿ ನಿಡಗಲ್ ಗ್ರಾಮ ನಕ್ಲಲ್ ಪೀಡಿತ ಪ್ರದೇಶ ವ್ಯಾಪ್ತಿಗೆ ಒಳಪಟ್ಟಿದ್ದು ವೆಂಕಟರಮಣಪ್ಪ ಶಾಸಕರಾಗಿದ್ದ ವೇಳೆ ಭಾಗ್ಯಜ್ಯೋತಿ ಯೋಜನೆಗೆ ಸೇರ್ಪಡೆ ಮಾಡುವ ಮೂಲಕ ಮನೆಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಆದೇಶಿಸಿದ್ದರು. ಈ ಹಿನ್ನಲೆಯಲ್ಲಿ ವಿದ್ಯುತ್ ಸಂಪರ್ಕ ಪಡೆದಿದ್ದೇವೆ. ಅನಧಿಕೃತ ಸಂಪರ್ಕವಲ್ಲ ಎಂದು ತಳ್ಳಿಹಾಕಿದರು. ನಂತರ ಗ್ರಾಮಸ್ಥರ ಮನವಿ ಮೇರೆಗೆ ಅಕ್ರಮ ಸಂಪರ್ಕಗಳನ್ನು ಸಕ್ರಮ ಮಾಡಿಕೊಳ್ಳಲು ಅವಕಾಶ ನೀಡಿದ ನಂತರ ಪರಿಸ್ಥಿತಿ ಸುಧಾರಿಸಿತು. ಈ ವೇಳೆ ಬೆಸ್ಕಾಂ ಸಹಾಯಕ ಎಂಜಿನಿಯರ್ ಚೌಡಪ್ಪ ಹಾಗೂ ಹಿರಿಯ ಮುಖಂಡ ಗೋವಿಂದಪ್ಪ, ಪರಮೇಶ್, ಪಾಲಾಕ್ಷಿ, ಜಗದೀಶ, ಪಾಲ್ಗೂಣಪ್ಪ ಗ್ರಾಮದ ಹಿರಿಯ ಮುಖಂಡರು ಇದ್ದರು. ದೂರಿನ ಹಿನ್ನಲೆಯಲ್ಲಿ ಅನಧಿಕೃತ ವಿದ್ಯುತ್ ಸಂಪರ್ಕ ಪಡೆದ ಮನೆಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದೇವೆ. ಭಾಗ್ಯಜ್ಯೋತಿ ಯೋಜನೆ ಅಡಿ ವಿದ್ಯುತ್ ಕಲ್ಪಿಸಿದ್ದ ಬಗ್ಗೆ ಮಾಹಿತಿ ಇಲ್ಲ. ಈ ಬಗ್ಗೆ ಪರಿಶೀಲಿಸುತ್ತೇವೆ. ಮೀಟರ್ ಆಳವಡಿಕೆಗೆ ಕಾಲವಕಾಶ ನೀಡಿದ್ದು ಈಗ ಮನೆಮನೆ ಹಾಗೂ ಬೀದಿ ದೀಪದ ವಿದ್ಯುತ್ ಸಂಪರ್ಕ ಕಲ್ಪಿಸಿಕೊಡುತ್ತಿದ್ದೇವೆ. - ಕೃಷ್ಣಮೂರ್ತಿ, ಬೆಸ್ಕಾಂ ಎಇಇ