ವಿದ್ಯಾರ್ಥಿ ಜೀವನದಲ್ಲಿ ತಾನು ಕಲಿತ ಸ್ಥಳ, ಅಲ್ಲಿನ ವಾತಾವರಣವನ್ನು ಮರೆಯಬಾರದು. ವಿಭಾಗದ ಬಗ್ಗೆ ಸದಾ ಹೆಮ್ಮೆ ಮತ್ತು ಕೃತಜ್ಞತೆ ಇರಬೇಕು. ಹಿರಿಯ ವಿದ್ಯಾರ್ಥಿಗಳೇ ವಿಭಾಗದ ಆಸ್ತಿ ಎಂದು ತುಮಕೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಸಂಯೋಜಕ ಡಾ. ಸಿಬಂತಿ ಪದ್ಮನಾಭ ಕೆ. ವಿ. ಅವರು ತಿಳಿಸಿದರು.
ಕನ್ನಡಪ್ರಭ ವಾರ್ತೆ ತುಮಕೂರು
ವಿದ್ಯಾರ್ಥಿ ಜೀವನದಲ್ಲಿ ತಾನು ಕಲಿತ ಸ್ಥಳ, ಅಲ್ಲಿನ ವಾತಾವರಣವನ್ನು ಮರೆಯಬಾರದು. ವಿಭಾಗದ ಬಗ್ಗೆ ಸದಾ ಹೆಮ್ಮೆ ಮತ್ತು ಕೃತಜ್ಞತೆ ಇರಬೇಕು. ಹಿರಿಯ ವಿದ್ಯಾರ್ಥಿಗಳೇ ವಿಭಾಗದ ಆಸ್ತಿ ಎಂದು ತುಮಕೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಸಂಯೋಜಕ ಡಾ. ಸಿಬಂತಿ ಪದ್ಮನಾಭ ಕೆ. ವಿ. ಅವರು ತಿಳಿಸಿದರು.
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವತಿಯಿಂದ ಮಂಗಳವಾರದಂದು ಆಯೋಜಿಸಿದ್ದ ಪಂಚದೀಪ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಇಂದಿನ ಯುವ ಪೀಳಿಗೆಯಲ್ಲಿ ಅನೇಕ ಮಂದಿಗೆ ಬೇರೆಯವರ ಸಲಹೆಗಳನ್ನು ಸ್ವೀಕರಿಸುವ ಗುಣಗಳು ಕಡಿಮೆ. ವಿದ್ಯಾರ್ಥಿ ಜೀವನದಲ್ಲಿ ಯಾವ ಸಲಹೆಗಳನ್ನು ಸ್ವೀಕರಿಸಬೇಕು ಮತ್ತು ಯಾವುದನ್ನು ತಿರಸ್ಕರಿಸಬೇಕು ಎಂಬ ವಿವೇಚನೆ ಇರಬೇಕಾದುದು ಅತ್ಯಗತ್ಯ ಎಂದರು.
ಜೀವನದಲ್ಲಿ ಮುಂದಿನ ಹೆಜ್ಜೆಯನ್ನು ಇಡುವ ಸಂದರ್ಭದಲ್ಲಿ ಸಣ್ಣ ಸಣ್ಣ ಆಕರ್ಷಣೆಗಳು ಬರುವುದು ಸಹಜ. ಅದಕ್ಕೆ ಮರುಳಾಗಿ ನೀವು ಅಡ್ಡದಾರಿ ಅಥವಾ ಸುಲಭದ ದಾರಿಯನ್ನು ಹುಡುಕಿಕೊಂಡಾಗ ನಿಮ್ಮ ಗುರಿ ಸಾಧನೆಯ ಪಯಣ ಅರ್ಧಕ್ಕೇ ನಿಲ್ಲಬಹುದು. ಆದ್ದರಿಂದ ಸವಾಲುಗಳನ್ನು ಧೈರ್ಯವಾಗಿ ಎದುರಿಸುತ್ತಾ, ಮುಂದಿನ ಹೆಜ್ಜೆ ಇಡುವಾಗ ಎಚ್ಚರ ವಹಿಸಬೇಕು ಎಂದರು.
ಪ್ರತಿವರ್ಷ ವಿದ್ಯಾರ್ಥಿಗಳು ಕಾಲೇಜಿಗೆ ಬಂದು ಪದವಿ ಮುಗಿಸಿ ಹೋಗುವುದು ಒಂದು ಸಾಮಾನ್ಯ ಪ್ರಕ್ರಿಯೆ. ಆದರೆ ಕೇವಲ ಅಷ್ಟಕ್ಕೇ ಸೀಮಿತವಾಗದೆ, ವಿಭಾಗದೊಂದಿಗೆ ನಿರಂತರ ಒಡನಾಟ ಮತ್ತು ಬಾಂಧವ್ಯವನ್ನು ಹೊಂದಿರುವುದು ಹೆಚ್ಚು ಹೆಮ್ಮೆಯ ವಿಚಾರ ಎಂದರು. ಉಪನ್ಯಾಸಕರಾದ ಡಾ. ಪೃಥ್ವಿರಾಜ ಟಿ., ಡಾ. ಸುಲೋಚನಾ ಜಿ. ಎಸ್., ವಿಷ್ಣುವರ್ಧನ್ ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.