ಧಾರವಾಡ: ಪ್ರತ್ಯೇಕ ಪಾಲಿಕೆಗೆ ಆಗ್ರಹಿಸಿ ಧಾರವಾಡದಲ್ಲಿ ಹೋರಾಟ ಹಂತ-ಹಂತವಾಗಿ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ರಾಜ್ಯಪಾಲರಿಗೆ ಪತ್ರ ಬರೆದು ಹೋರಾಟಗಾರರ ನಿಯೋಗದೊಂದಿಗೆ ಚರ್ಚಿಸಲು ಸಮಯ ಕೇಳಿದ್ದಾರೆ.
ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ಬೇಡ, ಬೃಹತ್ ಮಹಾನಗರ ಪಾಲಿಕೆ ಮಾಡುವುದಾಗಿ ಇತ್ತೀಚೆಗೆ ನಡೆದ ಪಾಲಿಕೆ ಸಾಮಾನ್ಯ ಸಭೆಯಲ್ಲಿ ತೀರ್ಮಾನ ಆಗಿತ್ತು. ಈ ಹಿನ್ನೆಲೆಯಲ್ಲಿ ಶುರುವಾದ ಹೋರಾಟ ಇದೀಗ ಅನಿರ್ದಿಷ್ಟಾವಧಿಗೆ ಬಂದು ತಲುಪಿದೆ. ಜತೆಗೆ ಬಿಜೆಪಿ ಮುಖಂಡರೇ ಇದಕ್ಕೆ ಕಾರಣವೆಂದು ಹೋರಾಟಗಾರರ ಪ್ರಹ್ಲಾದ ಜೋಶಿ ಅವರಿಗೂ ಮನವಿ ಸಲ್ಲಿಸಿದ್ದರು ಎಂಬುದನ್ನು ಇಲ್ಲಿ ಸ್ಮರಿಸಬಹುದು.
ಈ ಹಿನ್ನೆಲೆಯಲ್ಲಿ ಜೋಶಿ ಅವರು ರಾಜ್ಯಪಾಲರಿಗೆ ಚರ್ಚಿಸಲು ಸಮಯ ಕೋರಿದ್ದಾರೆ. ಪ್ರತ್ಯೇಕ ಪಾಲಿಕೆಯ ಹೋರಾಟಕ್ಕೆ ಬೆಂಬಲವಾಗಿಯೇ ನಾವು ಸಹ ಬಂದಿದ್ದು, ಯಾವುದೇ ಕಾರಣಕ್ಕೂ ಹೋರಾಟ ನಿಲ್ಲಿಸಲು ಬಂದಿದ್ದೇವೆ ಎಂಬ ಭಾವನೆ ಬೇಡ. ಕೇಂದ್ರ ಸಚಿವರ ಸೂಚನೆಯಂತೆ ಅವರು ರಾಜ್ಯಪಾಲರಿಗೆ ಬರೆದ ಪತ್ರ ತಮಗೆ ತಲುಪಿಸಿದ್ದು ಬೇಗನೆ ರಾಜ್ಯಪಾಲರು ಸಮಯ ನಿಗದಿ ಮಾಡುವ ಸಾಧ್ಯತೆ ಇದೆ ಎಂದು ಅರುಣ ಜೋಶಿ ಹೋರಾಟಗಾರರಿಗೆ ತಿಳಿಸಿದರು.2ನೇ ದಿನಕ್ಕೆ ಹೋರಾಟ:
ಹೈಕೋರ್ಟ್ ವಕೀಲರ ಸಂಘದ ಅಧ್ಯಕ್ಷ ಬಿ.ಡಿ. ಹಿರೇಮಠ, ವೆಂಕಟೇಶ ಮಾಚಕನೂರ, ಗುರುರಾಜ ಹುಣಸೀಮರದ, ಮನೋಜ ಪಾಟೀಲ, ಮಹಾದೇವ ಹೊರಟ್ಟಿ, ಅರವಿಂದ ಏಗನಗೌಡರ, ವೀರಣ್ಣ ಮತ್ತಿಕಟ್ಟಿ, ವಸಂತ ಅರ್ಕಾಚಾರಿ, ಈಶ್ವರ ಶಿವಳ್ಳಿ ಸೇರಿದಂತೆ ನೂರಾರು ಹೋರಾಟಗಾರರು ಇದ್ದರು.