ಕನ್ನಡಪ್ರಭ ವಾರ್ತೆ ಕಡೂರು
ರಸ್ತೆಯಲ್ಲಿ ನಿಂತಿದ್ದ ಲಾರಿಗೆ ಟಿಟಿ ವಾಹನ ಡಿಕ್ಕಿಯಾದ ಸ್ಥಳಕ್ಕೆಬಂದ ಐಶರ್ ವಾಹನ ಟಿಟಿಗೆ ಗುದ್ದಿದ ಪರಿಣಾಮ ಸಂಭವಿಸಿದ ಸರಣಿ ಅಪಘಾತದಲ್ಲಿ ಟಿಟಿಯಲ್ಲಿದ್ದ ಒಬ್ಬರು ಮೃತಪಟ್ಟು, ಓರ್ವ ಚಾಲಕ ಹಾಗೂ 12 ಮಂದಿ ಗಂಭೀರವಾಗಿ ಗಾಯ ಗೊಂಡಿರುವ ಧಾರುಣ ಘಟನೆ ಕಡೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಹಾಸನ ಸಮೀಪದ ವಂಗರೇ ಗ್ರಾಮದ ಮಂಜುನಾಥ್ (40) ಸ್ಥಳದಲ್ಲಿ ಮೃತಪಟ್ಟ ದುರ್ಧೈವಿ.
ದೇವರ ಹರಕೆ ತೀರಿಸಲು ಹಾಸನದ ಕಡೆಯಿಂದ ಉಕ್ಕಡಗಾತ್ರಿಗೆ ತೆರಳುತ್ತಿದ್ದ ಒಂದೇ ಕುಟುಂಬದ ಹದಿಮೂರು ಸದಸ್ಯರಿದ್ದ ಟಿಟಿ ವಾಹನ ಬೆಳಗಿನ ಜಾವ ಸುಮಾರು 5 ಗಂಟೆ ಸಮಯದಲ್ಲಿ ಶಿವಮೊಗ್ಗ ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಬಯಲು ಬಸಪ್ಪ ದೇವಾಲಯದ ಬಳಿ ನಿಂತಿದ್ದ ಲಾರಿಗೆ ಗುದ್ದಿ ಸಂಭವಿಸಿದ ಅಪಘಾತದಲ್ಲಿ ವಾಹನದಲ್ಲಿದ್ದ ಹಾಸನ ಸಮೀಪದ ವಂಗರೇ ಗ್ರಾಮದ ಮಂಜುನಾಥ್ ಸ್ಥಳದಲ್ಲೆ ಸಾವನ್ನಪ್ಪಿದ್ದು ಉಳಿದವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಕಡೂರು ಸಮೀಪ ಸಂಭವಿಸಿದೆ.ಟಿಟಿ ವಾಹನದಲ್ಲಿ ಇದ್ದ ರಂಗಪ್ಪ, ಅಶ್ವಿನಿ, ಲಕ್ಷ್ಮಿ ಭೂಮಿಕಾ, ನಾಗರಾಜು, ಪ್ರೀತಮ್, ಸಾಗರ್, ದೊರೆಸ್ವಾಮಿ, ಸಂಜಯ್ ಸೇರಿದಂತೆ ಇತರರಿಗೆ ಗಂಭೀರ ಗಾಯಗಳಾಗಿದ್ದು ಅವರಿಗೆ ಪ್ರಥಮ ಚಿಕಿತ್ಸೆ ಕೊಡಿಸಿ ಹಾಸನ ಜಿಲ್ಲೆಯ ಜಿಲ್ಲಾ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ.
ಈ ಸ್ಥಳಕ್ಕೆ ಬಂದ ಐಶರ್ ವಾಹನ ಅಪಘಾತವಾಗಿ ನಿಂತಿದ್ದ ಟಿಟಿ ಗಾಡಿಗೆ ಡಿಕ್ಕಿ ಹೊಡೆದ ಪರಿಣಾಮ ಲಾರಿ ಚಾಲಕನಿಗೆ ಗಂಭೀರ ಗಾಯ ಆಗಿದ್ದು ಕಡೂರಿನ ಚೇತನ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲು ಮಾಡಲಾಗಿದೆ. ಕಡೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದು, ಸಬ್ ಇನ್ಸ್ಪೆಕ್ಟರ್ ಗಳಾದ ಧನಂಜಯ್, ನವೀನ್ ಸೇರಿದಂತೆ ಪೊಲೀಸ್ ಸಿಬ್ಬಂದಿ ಗಾಯಾಳುಗಳಿಗೆ ಚಿಕಿತ್ಸೆ ಕೊಡಿಸಿ ಮುಂದಿನ ಕ್ರಮಕೈಗೊಂಡಿದ್ದು ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆಫೋಟೋ: ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಟಿಟಿ ಗಾಡಿ