ಕನ್ನಡಪ್ರಭ ವಾರ್ತೆ ಚಿತ್ತಾಪುರ
ಪಟ್ಟಣದಲ್ಲಿ ಕೆಲ ತಿಂಗಳುಗಳಿಂದ ಅಂಗಡಿಗಳ ಸರಣಿ ಕಳ್ಳತನವಾಗುತ್ತಿದ್ದು ಕಳ್ಳತನ ಮಾಡಿರುವದು ಸಿಸಿ ಟಿವಿಯಲ್ಲಿ ಸೆರೆಯಾಗಿದ್ದರೂ ಕಳ್ಳರನ್ನು ಹಿಡಿಯುವ ಕಾರ್ಯ ನಡೆದಿರುವಾಗಲೇ ಗುರುವಾರ ತಡರಾತ್ರಿಯಲ್ಲಿ ಲಾಡ್ಜಿಂಗ್ ಕ್ರಾಸ್ ಬಳಿ ೪ ಅಂಗಡಿಗಳನ್ನು ಕಳ್ಳತನವಾಗಿರುವ ಪ್ರಕರಣ ಬೆಳಕಿಗೆ ಬಂದಿದ್ದು ನೊಡಿದರೆ ಚಿತ್ತಾಪುರ ಪಟ್ಟಣವು ಕಳ್ಳರಿಗೆ ಹಾಟ್ಸ್ಪಾಟ್ ಆಗಿ ಪರಿವರ್ತನೆಯಾಗುತ್ತಿದೆಯೇ ಎನ್ನುವ ಅನುಮಾನ ಮೂಡುತ್ತಿದೆ.ಪಟ್ಟಣದಲ್ಲಿ ಬುದವಾರ ಸಂತೆ, ಬಸ್ ನಿಲ್ದಾಣಗಳಲ್ಲಿ ಹಾಡಹಗಲೇ ಮೊಬೈಲ್, ಬಂಗಾರದ ಒಡವೆಗಳು ಕಳ್ಳತನಗಳು ನಿರಂತಕವಾಗಿ ನಡೆಯುತ್ತಿರುವದು ಮತ್ತು ಪಟ್ಟಣಕ್ಕೆ ಪ್ರವೇಶ ಪಡೆಯುವ ಮುಖ್ಯರಸ್ತೆ, ಲಾಡ್ಜೀಂಗ್ ಕಾಸ್ ಏರಿಯಾದಲ್ಲಿ ಮಧ್ಯರಾತ್ರಿವರೆಗೂ ವಾಹನ ಸವಾರರು ಹಾಗೂ ಜನರು ತಿರುಗಾಡುತ್ತಾರೆ. ಇಷ್ಟಾದರೂ ಕಳ್ಳರು ಯಾರದೇ ಭಯವಿಲ್ಲದೇ ಮುಖ್ಯ ರಸ್ತೆಯಲ್ಲಿ ಬರುವ ಅಂಗಡಿಗಳ ಶೆಟರ್ ಮುರಿದು ಕಳ್ಳತನ ಮಾಡುತ್ತಿರುವುದು ನೋಡಿದರೆ ಅವರಿಗೆ ಪೊಲೀಸ್ ಇಲಾಖೆಯ ಬಗ್ಗೆ ಕಿಂಚಿತ್ತೂ ಭಯ ಇಲ್ಲದಂತಾಗಿದೆ. ವಿಚಿತ್ರವೆಂದರೆ ಕಳ್ಳತನ ಆಗಿರುವ ಎಲ್ಲಾ ಅಂಗಡಿಗಳಲ್ಲಿ ಸಿಸಿ ಟಿವಿಗಳಿದ್ದು ಕಳ್ಳತನ ಮಾಡಿರುವ ಕುರಿತ ಚಿತ್ರಗಳು ಸೆರೆಯಾಗಿವೆ. ಇಷ್ಟಾದರೂ ಕೂಡಾ ಕಳ್ಳರನ್ನು ಹಿಡಿಯಲು ಸಾಧ್ಯವಾಗುತ್ತಿಲ್ಲದಿರುವುದು ಪೊಲೀಸ್ ಇಲಾಖೆಯ ಕಾರ್ಯವೈಖರಿ ಬಗ್ಗೆ ಸಾರ್ವಜನಿಕ ವಲಯದಲ್ಲಿ ಮಾತನಾಡುತ್ತಿರುವದು ಕೇಳಿಬರುತ್ತಿದೆ.
ಒಂದು ಕಾಲದಲ್ಲಿ ಶಾಂತಿ, ಸುವ್ಯವಸ್ಥೆಗೆ ಪ್ರಸಿದ್ದಿಯಾಗಿದ್ದ ಚಿತ್ತಾಪುರ ಪಟ್ಟಣದಲ್ಲಿ ನಿರಂತರವಾಗಿ ಕಳ್ಳತನ ಪ್ರಕರಣಗಳು ನಡೆಯುತ್ತಿದ್ದರೂ ಕೂಡಾ ಪೊಲೀಸ್ ಇಲಾಖೆಯು ಇದನ್ನು ತಡೆಯುವಲ್ಲಿ ಸಾಧ್ಯವಾಗದಿರುವುದು ಜನರ ಕೆಂಗಣ್ಣಿಗೆ ಗುರಿಯಾಗಿದೆ.ಸ್ಥಳೀಯರ ನಿದ್ದೆಗೆಡಿಸಿದ ಕಳ್ಳತನಪಟ್ಟಣದಲ್ಲಿ ಕಳ್ಳರು ನಿರ್ಭಿತವಾಗಿ ತಮ್ಮ ಕೈಚಳಕವನ್ನು ತೊರಿಸುತ್ತಿದ್ದರೂ ಖಾಕಿ ಪಡೆ ಮಾತ್ರ ಅವರನ್ನು ಹಿಡಿಯುವಲ್ಲಿ ಇಲ್ಲಿಯವರೆಗೆ ಸಾಧ್ಯವಾಗಿಲ್ಲ. ಇದು ಪಟ್ಟಣದ ವ್ಯಾಪಾರಸ್ಥರ ನಿದ್ದೆಗೆಡಿಸಿದ್ದು ಸ್ಥಳಿಯ ನಾಗರಿಕರಲ್ಲಿಯೂ ಸಹ ಭಯದ ವಾತಾವರಣ ನಿರ್ಮಾಣವಾಗಿದೆ. ಸಿಸಿ ಟೀವಿ ದೃಶ್ಯಗಳು ಕಳೆದ ಕೆಲ ಪ್ರಕರಣಗಳಲ್ಲಿ ಎಲ್ಲಾ ಆಧಾರಗಳಿದ್ದರೂ ಕಳ್ಳರನ್ನು ಹಿಡಿಯುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದನ್ನು ನೊಡಿದರೆ ಸಾರ್ವಜನಿಕ ರಕ್ಷಣೆ ಹೇಗೆ ಮಾಡುತ್ತಾರೆ ಎನ್ನುವ ಪ್ರಶ್ನಾತೀತ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಕೂಡಲೇ ಚಿತ್ತಾಪುರ ಪೊಲೀಸ್ ಇಲಾಖೆ ವತಿಯಿಂದ ವ್ಯಾಪಾರಸ್ಥರು ಮತ್ತು ಸಾರ್ವಜನಿರಲ್ಲಿ ಮುಂಜಾಗ್ರತೆ ಕುರಿತು ಮಾಹಿತಿ ನೀಡುವ ಕೆಲಸ ಇಲಾಖೆ ವತಿಯಿಂದ ಮಾಡಬೇಕಾದೆ.