ಕನ್ನಡಪ್ರಭ ವಾರ್ತೆ ಸುಬ್ರಹ್ಮಣ್ಯ/ಮಂಗಳೂರು
ಕ್ರಿಸ್ಮಸ್, ವೀಕೆಂಡ್ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಭಾನುವಾರ ಮಾತ್ರವಲ್ಲದೆ, ಸೋಮವಾರವೂ ಜನದಟ್ಟಣೆ ಹೆಚ್ಚಿದೆ.ದೂರದೂರುಗಳಲ್ಲಿ ವಾಸವಾಗಿದ್ದ ನೂರಾರು ಮಂದಿ ಕ್ರಿಸ್ಮಸ್ ಸಂಭ್ರಮದಲ್ಲಿ ಪಾಲ್ಗೊಳ್ಳಲು ದಕ್ಷಿಣ ಕನ್ನಡಕ್ಕೆ ಆಗಮಿಸಿದ್ದು ಒಂದೆಡೆಯಾದರೆ, ರಜೆ ಇರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಇತರೆಡೆಗಳ ಪ್ರವಾಸಿಗರೂ ಆಗಮಿಸಿದ್ದಾರೆ. ಹೀಗಾಗಿ ಜಿಲ್ಲೆಯ ಪ್ರಮುಖ ದೇವಾಲಯಗಳಲ್ಲಿ ಭಕ್ತ ಜನಜಂಗುಳಿ ತುಸು ಜಾಸ್ತಿಯೇ ಇತ್ತು. ಸಂಜೆ ವೇಳೆ ಬೀಚ್ಗಳು ಜನದಟ್ಟಣೆಯ ಕೇಂದ್ರಗಳಾಗಿದ್ದವು. ಉಳಿದಂತೆ ರೆಸಾರ್ಟ್ಗಳು, ಮಾಲ್ಗಳಲ್ಲೂ ಎಂದಿಗಿಂತ ಹೆಚ್ಚಿನ ರಶ್ ಕಂಡುಬಂದಿದೆ.ಇದೀಗ ಮದುವೆ ಸೀಜನ್ ಕೂಡ ಆಗಿರುವುದರಿಂದ ಊರು, ಪರವೂರಿನ ನೂರಾರು ಮಂದಿ ಊರಿಗೆ ಮರಳಿದ್ದಾರೆ. ಹೀಗಾಗಿ ಜಿಲ್ಲೆಯ ಪ್ರಮುಖ ಹೊಟೇಲ್ಗಳು ಬಹುತೇಕ ಬುಕ್ ಆಗಿವೆ. ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳ ಪ್ರಕಾರ ಇತ್ತೀಚಿನ ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಇಷ್ಟೊಂದು ಸಂಖ್ಯೆಯ ಪ್ರವಾಸಿಗರು ಕರಾವಳಿಗೆ ಆಗಮಿಸಿದ್ದಾರೆ.ದ.ಕ. ಜಿಲ್ಲೆಯ ಪ್ರಮುಖ ಬೀಚ್ಗಳಾದ ಪಣಂಬೂರು, ಸುರತ್ಕಲ್, ಸೋಮೇಶ್ವರ ಕಡಲ ಕಿನಾರೆಗಳಲ್ಲಿ ಭಾನುವಾರ, ಸೋಮವಾರ ಸಾವಿರಾರು ಮಂದಿ ಸೇರಿದ್ದರು.ಇನ್ನೂ ಒಂದು ವಾರ ಇದೇ ಸ್ಥಿತಿ:ವರ್ಷಾಂತ್ಯದ ಸಂಭ್ರಮಕ್ಕೆ ಇನ್ನು ಒಂದೇ ವಾರ ಬಾಕಿ ಉಳಿದಿದ್ದು, ಅದುವರೆಗೂ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಶುಕ್ರದೆಸೆ. ಹೊಸ ವರ್ಷಾಚರಣೆಗೆ ಜಿಲ್ಲೆಯ ಅನೇಕ ಕಡೆಗಳಲ್ಲಿ ವಿವಿಧ ಹೊಟೇಲ್ಗಳು, ಸಂಘಟನೆಗಳಿಂದ ಭರ್ಜರಿ ಸಿದ್ಧತೆ ನಡೆದಿದೆ. ಅವುಗಳಲ್ಲಿ ಪಾಲ್ಗೊಳ್ಳಲು ಈಗಾಗಲೇ ಟಿಕೆಟ್ ಭರ್ಜರಿ ಸೇಲಾಗುತ್ತಿದೆ.ಕಂಬಳ ಆಕರ್ಷಣೆ:ಸದಾ ಬೆಂಕಿಯ ಮೇಲಿನ ಬಾಣಲೆಯಂತೆ ವಾತಾವರಣ ಇರುವ ದಕ್ಷಿಣ ಕನ್ನಡದಲ್ಲಿ ಇದೀಗ ಚಳಿಯ ವಾತಾವರಣ. ಸೆಕೆಯೂ ಅಷ್ಟಾಗಿಲ್ಲ. ಇದೂ ಕೂಡ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಇವೆಲ್ಲದರ ಜತೆಗೆ ವಾರಾಂತ್ಯಗಳಲ್ಲಿ ನಡೆಯುವ ಕಂಬಳ ಕ್ರೀಡೆಗಳಲ್ಲಿ ಪಾಲ್ಗೊಳ್ಳಲು ಸಾವಿರಾರು ಮಂದಿ ಪರವೂರಿನ ಜನರು ಉತ್ಸುಕತೆಯಿಂದ ಆಗಮಿಸುತ್ತಿದ್ದಾರೆ. ಕೊರೋನಾ ಬಳಿಕ ಜಿಲ್ಲೆಯ ಪ್ರವಾಸೋದ್ಯಮ ಮತ್ತೆ ಗರಿಗೆದರಲು ಆರಂಭವಾಗಿದೆ.ಕುಕ್ಕೆಗೆ ಭಕ್ತಸಾಗರ: ಪ್ರಸಿದ್ಧ ಪುಣ್ಯಕ್ಷೇತ್ರ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಕ್ರಿಸ್ಮಸ್ ರಜೆಯ ದಿನವಾದ ಸೋಮವಾರವೂ ಸಹಸ್ರಾರು ಭಕ್ತರು ಆಗಮಿಸಿ ಶ್ರೀ ದೇವರ ದರುಶನ ಪಡೆದರು.ಶ್ರೀ ಕ್ಷೇತ್ರದಲ್ಲಿ ಜಾತ್ರೆ ಸಂಪನ್ನವಾದರೂ ಜನಜಾತ್ರೆ ಮುಂದುವರಿದಿದೆ. ಸುಬ್ರಹ್ಮಣ್ಯಕ್ಕೆ ಭಾನುವಾರದಂತೆ ಸೋಮವಾರವೂ ಭಕ್ತ ಸಾಗರವೇ ಹರಿದು ಬಂದಿತ್ತು. ಲಕ್ಷಕ್ಕೂ ಅಧಿಕ ಮಂದಿ ಶ್ರೀ ದೇವರ ದರುಶನ ಮಾಡಿ ಪ್ರಸಾದ ಸ್ವೀಕರಿಸಿದರು. ಜಾತ್ರಾ ಸಮಯಕ್ಕಿಂತಲೂ ಅಧಿಕ ಮಂದಿ ಸೋಮವಾರವೂ ಆಗಮಿಸಿದ್ದರು.
ಭಾನುವಾರ ರಾತ್ರಿ ಶ್ರೀ ದೇವರ ಜಾತ್ರಾ ಮಹೋತ್ಸವ ಸಮಾಪನದ ದಿನ ಹಿನ್ನೆಲೆ ನೀರಿನಲ್ಲಿ ಬಂಡಿ ಉತ್ಸವ ನೆರವೇರಿತು. ಈ ಸಂದರ್ಭ ಶ್ರೀ ದೇವಳದ ಹೊರಾಂಗಣ ಪ್ರವೇಶಕ್ಕೂ ಹೆಚ್ಚಿನ ತ್ರಾಸ ಪಡಬೇಕಾಯಿತು.ಶ್ರೀ ದೇವರ ದರುಶನಕ್ಕಾಗಿ ಮಾರುದ್ದದ ಸರದಿ ಸಾಲಿನಲ್ಲಿ ಸಾಗಿ ಬಂದು ಭಕ್ತರು ಶ್ರೀ ದೇವರ ದರುಶನ ಪಡೆದು ಪ್ರಸಾದ ಸ್ವೀಕರಿಸಿದರು. ಶ್ರೀ ದೇವಳದ ಹೊರಾಂಗಣದಲ್ಲಿ ಸುಮಾರು ೮ ಸಾಲುಗಳಲ್ಲಿ ಭಕ್ತರು ಶ್ರೀ ದೇವರ ದರುಶನಕ್ಕೆ ತೆರಳಿದರು. ಷಣ್ಮುಖ ಪ್ರಸಾದ ಭೋಜನ ಶಾಲೆ ಮಾತ್ರವಲ್ಲದೆ ಆದಿಸುಬ್ರಹ್ಮಣ್ಯ ಭೋಜನ ಶಾಲೆಯಲ್ಲಿ ಬಫೆ ಮಾದರಿಯಲ್ಲಿ ಭೋಜನ ಪ್ರಸಾದ ವಿತರಣೆಗೆ ವ್ಯವಸ್ಥೆ ಮಾಡಿತ್ತು. ಸುಬ್ರಹ್ಮಣ್ಯ ಪೊಲೀಸರು ದೇವಳದ ಭದ್ರತಾ ಸಿಬ್ಬಂದಿ, ದೇವಳದ ಸಿಬ್ಬಂದಿ, ಗೃಹರಕ್ಷಕ ದಳದವರು ಭಕ್ತರಿಗೆ ಬೇಕಾದ ಸೂಕ್ತ ಮಾರ್ಗದರ್ಶನವನ್ನು ನೀಡಿದರು.
* ಪುಣ್ಯ ಸ್ನಾನಕ್ಕೂ ಜನಸಾಗರಕುಮಾರಧಾರ ನದಿಯಲ್ಲಿ ಪುಣ್ಯ ಸ್ನಾನ ಮಾಡಲು ಸೋಮವಾರ ಮುಂಜಾನೆ ಭಕ್ತರ ದಂಡೇ ಆಗಮಿಸಿತ್ತು. ಕುಮಾರಧಾರ ಸ್ನಾನಘಟ್ಟವು ಭಕ್ತರಿಂದ ತುಂಬಿ ತುಳುಕಿತ್ತು. ಇಲ್ಲಿ ಭಕ್ತರಿಗೆ ಧ್ವನಿವರ್ಧಕದ ಮೂಲಕ ವಿಶೇಷ ಮಾಹಿತಿಗಳನ್ನು ಬಿತ್ತರಿಸುವ ಕಾರ್ಯವು ನಿರಂತರವಾಗಿ ಶ್ರೀ ದೇವಳದಿಂದ ಮಾಡಲಾಯಿತು.
ದೇವಸ್ಥಾನದ ಒಳಾಂಗಣ, ಹೊರಾಂಗಣ, ದೇವಳದ ಕಲ್ಯಾಣ ಮಂಟಪ, ರಥಬೀದಿ, ಆದಿಸುಬ್ರಹ್ಮಣ್ಯ, ಕುಮಾರಧಾರ ಮೊದಲಾದೆಡೆ ಭಕ್ತಸಾಗರವೇ ಕಂಡು ಬಂತು. ಹೆಚ್ಚಿನ ಪ್ರಮಾಣದಲ್ಲಿ ಜನರು ಸೇರಿದ್ದರೂ ಶ್ರೀ ದೇವಳದ ವತಿಯಿಂದ ವ್ಯವಸ್ಥಿತವಾಗಿ ಪ್ರಸಾದವನ್ನು ಹಾಗೂ ಭೋಜನವನ್ನು ವಿತರಿಸಲಾಯಿತು.ಬೆಳಗ್ಗೆ ೬ ಗಂಟೆಯಿಂದಲೇ ಭಕ್ತರು ಮಾರುದ್ದದ ಸರದಿ ಸಾಲಿನಲ್ಲಿ ತೆರಳಿ ದೇವರ ದರ್ಶನ ಪಡೆದರು. ಆಶ್ಲೇಷ ಬಲಿ ಸೇವೆಗೆ ಮತ್ತು ಸೇವೆಗಳ ಸಂಕಲ್ಪಕ್ಕಾಗಿ ಕೂಡ ಅಧಿಕವಾದ ಸರದಿಯ ಸಾಲು ಕಂಡು ಬಂತು. ಜಾತ್ರೆ ಬಳಿಕ ಸೋಮವಾರ ಪ್ರಧಾನ ಸೇವೆಯಾದ ಸರ್ಪಸಂಸ್ಕಾರ ಆರಂಭವಾದುದರಿಂದ ಆದಿಸುಬ್ರಹ್ಮಣ್ಯ ಸರ್ಪಸಂಸ್ಕಾರ ಯಾಗಶಾಲಾ, ಆದಿಸುಬ್ರಹ್ಮಣ್ಯ ಭೋಜನಶಾಲಾ ಪರಿಸರದಲ್ಲಿ ಭಕ್ತ ಸಂದಣಿ ಅಧಿಕವಾಗಿತ್ತು.
* ದಾಖಲೆ ಪ್ರಮಾಣದ ಅನ್ನದಾನಕುಕ್ಕೆಯಲ್ಲಿ ಅನ್ನದಾನ ಶ್ರೇಷ್ಠವಾಗಿರುವುದರಿಂದ ಸೋಮವಾರವೂ ದಾಖಲೆ ಪ್ರಮಾಣದಲ್ಲಿ ಭಕ್ತರು ಭೋಜನ ಪ್ರಸಾದ ಸ್ವೀಕರಿಸಿದ್ದಾರೆ. ಷಣ್ಮುಖ ಪ್ರಸಾದ ಭೋಜನ ಶಾಲೆ, ಗಣಪತಿ ದೇವಸ್ಥಾನ, ಶೃಂಗೇರಿ ಮಠ ಮತ್ತು ಆದಿಸುಬ್ರಹ್ಮಣ್ಯ ಭೋಜನ ಶಾಲೆಯಲ್ಲಿ ಭಕ್ತರು ಅನ್ನದಾನ ಸ್ವೀಕರಿಸಿದ್ದಾರೆ. ಬೆಳಗ್ಗೆ ೧೦.೩೦ರಿಂದ ಸಂಜೆ ೪.೩೦ರ ತನಕ ನಿರಂತರವಾಗಿ ಭೋಜನ ವಿತರಣೆಯಾಯಿತು. ರಾತ್ರಿ ೭.೩೦ರಿಂದ ೧೧ ಗಂಟೆಯ ತನಕವೂ ಪ್ರಸಾದ ಭೋಜನವನ್ನು ಭಕ್ತರು ಸ್ವೀಕರಿಸಿದರು.
* ಕೊಠಡಿಗಳಿಲ್ಲದೆ ಸಮಸ್ಯೆ:ಶ್ರೀ ದೇವಳದ ವಸತಿ ಗೃಹಗಳು, ಖಾಸಗಿ ವಸತಿಗೃಹಗಳು ತುಂಬಿತ್ತು. ಈ ಕಾರಣದಿಂದಾಗಿ ದೂರದೂರಿನ ಭಕ್ತರು ಸುಳ್ಯ, ಉಪ್ಪಿನಂಗಡಿ, ಪುತ್ತೂರು ಮೊದಲಾದೆಡೆ ಕೊಠಡಿಗಳನ್ನು ಪಡೆದು ವಾಸ್ತವ್ಯ ಹೂಡಿದ್ದರು. ಶ್ರೀ ದೇವಳದಿಂದ ಆದಿಸುಬ್ರಹ್ಮಣ್ಯ ಭೋಜನಶಾಲೆ, ಷಣ್ಮುಖ ಪ್ರಸಾದ ಭೋಜನ ಶಾಲೆ ಮೊದಲಾದೆಡೆ ಭಕ್ತರಿಗೆ ರಾತ್ರಿ ವಾಸ್ತವ್ಯ ಹೂಡಲು ವ್ಯವಸ್ಥೆ ಮಾಡಲಾಗಿತ್ತು. ಹಾಗಿದ್ದರೂ ಇಲ್ಲಿಯೂ ಸ್ಥಳಾವಕಾಶ ಕೊರತೆ ಬಂದಾಗ ರಥಬೀದಿಯಲ್ಲಿ, ನೆರಳಿನ ಚಪ್ಪರದ ಅಡಿಯಲ್ಲಿ, ಕಲ್ಯಾಣ ಮಂಟಪ, ಆಡಳಿತ ಕಚೇರಿ ಬಳಿ ಆಶ್ರಯ ಪಡೆದುಕೊಂಡರು. ಕೊಠಡಿಯ ಸಮಸ್ಯೆಯಿಂದಾಗಿ ಭಕ್ತರು ಹೆಚ್ಚಿನ ತೊಂದರೆ ಪಡಬೇಕಾಯಿತು.ಭಕ್ತರೊಂದಿಗೆ ಅವರನ್ನು ಕರೆತಂದ ವಾಹನಗಳ ಸಂಖ್ಯೆಯು ಅಧಿಕವಾಗಿ ಕ್ಷೇತ್ರದಲ್ಲಿ ಕಂಡು ಬಂದಿತ್ತು. ಈ ಕಾರಣದಿಂದಾಗಿ ಬಿಲದ್ವಾರ ಪಾರ್ಕಿಂಗ್, ಸವಾರಿ ಮಂಟಪ ಪಾರ್ಕಿಂಗ್, ಹನುಮಂತ ಗುಡಿ ಸಮೀಪದ ಪಾರ್ಕಿಂಗ್, ಹಳೆಯ ಅರಣ್ಯ ಇಲಾಖೆ ಕಚೇರಿ ಬಳಿಯ ಪಾರ್ಕಿಂಗ್, ಅಕ್ಷರಾ ವಸತಿ ಗೃಹದ ಸಮೀಪದ ಪಾರ್ಕಿಂಗ್, ಪ್ರಾಥಮಿಕ ಶಾಲಾ ಆಟದ ಮೈದಾನ, ಆದಿಸುಬ್ರಹ್ಮಣ್ಯ, ವಾಹನಗಳಿಂದ ತುಂಬಿತ್ತು. ಪಾರ್ಕಿಂಗ್ ಸ್ಥಳ ತುಂಬಿದ ಕಾರಣ ಅನಿವಾರ್ಯವಾಗಿ ಕುಮಾರಧಾರದಿಂದ ಇಂಜಾಡಿ ತನಕ, ಬೈಪಾಸ್ ರಸ್ತೆ, ನೂಚಿಲ ರಸ್ತೆ, ಸರಕಾರಿ ಬಸ್ ನಿಲ್ದಾಣ ಬಳಿ ರಸ್ತೆ, ಆದಿಸುಬ್ರಹ್ಮಣ್ಯ ರಸ್ತೆ, ದೇವರಗದ್ದೆ ರಸ್ತೆಗಳ ಇಕ್ಕೆಲಗಳಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡಲಾಗಿತ್ತು. ಅಧಿಕ ವಾಹನಗಳ ಆಗಮನದಿಂದಾಗಿ ಆಗಾಗ್ಗೆ ರಸ್ತೆಯಲ್ಲಿ ವಾಹನ ದಟ್ಟಣೆ ಕಂಡು ಬರುತ್ತಿತ್ತು.