ಕನ್ನಡ ಭಾಷೆ ಉಳಿಸಿಕೊಳ್ಳಲು ಗಂಭೀರ ಚಿಂತನೆ ಅಗತ್ಯ: ಪ್ರೊ.ಚಂದ್ರಶೇಖರ ಅಕ್ಕಿ

KannadaprabhaNewsNetwork |  
Published : Nov 24, 2024, 01:46 AM IST
ಮೂಡಲಗಿ:  ಇಲ್ಲಿಯ ಆರ್‍ಡಿಎಸ್ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಮೂಡಲಗಿ ಘಟಕದಿಂದ ಹಮ್ಮಿಕೊಂಡ 16ನೇ ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಗಣ್ಯರು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಅಮೃತಭೋದ ಮಹಾಸ್ವಾಮಿಗಳು, ಶಿವಾಪೂರ(ಹ) ಮಹಾಸ್ವಾಮಿಗಳು, ಶಾಸಕ ಬಾಲಚಂದ್ರ ಜಾರಕಿಹೊಳಿ, ಸಂಸದ ಈರಣ್ಣಾ ಕಡಾಡಿ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಪ್ರೊ.ಚಂದ್ರಶೇಖರ ಅಕ್ಕಿ, ಮಂಗಲಾ ಮೆಟಗುಡ್ಡ ಅನೇಕರು ಉಪಸ್ಥಿತರಿದ್ದರು. | Kannada Prabha

ಸಾರಾಂಶ

ಯಾವುದೇ ಒಂದು ಭಾಷೆಯ ಅಳಿವು-ಉಳಿವಿನ ಮೂಲ ಸಮಸ್ಯೆ ಶಿಕ್ಷಣ ಮಾಧ್ಯಮದಲ್ಲಿಯೇ ಇರುತ್ತದೆ. ಇಂಗ್ಲಿಷ್ ಭಾಷೆಗೆ ಈಗಾಗಲೇ ಜಗತ್ತಿನ ಬಹಳಷ್ಟು ಭಾಷೆಗಳು ಬಲಿಯಾಗಿವೆ. ಈಗ ಕನ್ನಡವೂ ಆತಂಕದಲ್ಲಿರುವುದು ದುರಂತ. ಉದ್ಯೋಗದ ಹಪಾಹಪಿ ಹೆಚ್ಚಿಸುವ ಮೂಲಕ ಕನ್ನಡ ಸೇರಿದಂತೆ ಇತರ ಭಾಷಿಕರ ಬದುಕನ್ನೇ ಇಂದು ಇಂಗ್ಲಿಷ್‌ ಕಸಿದುಕೊಳ್ಳುತ್ತಿದೆ ಎಂದು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಪ್ರೊ.ಚಂದ್ರಶೇಖರ ಅಕ್ಕಿ ಕಳವಳ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಮೂಡಲಗಿ

ಪ್ರೊ.ಕೆ.ಜಿ.ಕುಂದಣಗಾರ ಪ್ರಧಾನ ವೇದಿಕೆಯಾವುದೇ ಒಂದು ಭಾಷೆಯ ಅಳಿವು-ಉಳಿವಿನ ಮೂಲ ಸಮಸ್ಯೆ ಶಿಕ್ಷಣ ಮಾಧ್ಯಮದಲ್ಲಿಯೇ ಇರುತ್ತದೆ. ಇಂಗ್ಲಿಷ್ ಭಾಷೆಗೆ ಈಗಾಗಲೇ ಜಗತ್ತಿನ ಬಹಳಷ್ಟು ಭಾಷೆಗಳು ಬಲಿಯಾಗಿವೆ. ಈಗ ಕನ್ನಡವೂ ಆತಂಕದಲ್ಲಿರುವುದು ದುರಂತ. ಉದ್ಯೋಗದ ಹಪಾಹಪಿ ಹೆಚ್ಚಿಸುವ ಮೂಲಕ ಕನ್ನಡ ಸೇರಿದಂತೆ ಇತರ ಭಾಷಿಕರ ಬದುಕನ್ನೇ ಇಂದು ಇಂಗ್ಲಿಷ್‌ ಕಸಿದುಕೊಳ್ಳುತ್ತಿದೆ ಎಂದು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಪ್ರೊ.ಚಂದ್ರಶೇಖರ ಅಕ್ಕಿ ಕಳವಳ ವ್ಯಕ್ತಪಡಿಸಿದರು.

ಪಟ್ಟಣದ ಆರ್‌ಡಿಎಸ್ ಶಿಕ್ಷಣ ಸಂಸ್ಥೆ ಆವರಣದ ಪ್ರೊ.ಕೆ.ಜಿ. ಕುಂದಣಗಾರ ವೇದಿಕೆಯಲ್ಲಿ ಬೆಳಗಾವಿ ಜಿಲ್ಲಾ 16ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದರು.

ಮಾತೃಭಾಷೆಯಲ್ಲಿ ಓದುವ, ಬರೆಯುವ, ಮಾತನಾಡುವ ಮಗು ಸಹಜವಾಗಿಯೇ ಕಲಿತದ್ದನ್ನೆಲ್ಲ ಅರಗಿಸಿಕೊಂಡು ಜ್ಞಾನ, ವಿಜ್ಞಾನ, ತಂತ್ರಜ್ಞಾನಗಳಲ್ಲಿ ನೈಜ ನೈಪುಣ್ಯತೆ ಮೆರೆಯುತ್ತದೆ. ಸೃಜನಾತ್ಮಕ ಶಕ್ತಿಯನ್ನೂ ಪಡೆಯುತ್ತದೆ. ಇವರಿಂದ ಕನ್ನಡ ಕಲಿಕಾ ಮಾಧ್ಯಮವನ್ನೇ ಕಸಿದುಕೊಂಡರೆ ಭಾಷೆ ಇಲ್ಲ, ಭಾಷೆ ಇಲ್ಲವಾದರೆ ಸಂಸ್ಕೃತಿಯಿಲ್ಲ, ಸಂಸ್ಕೃತಿ ಇಲ್ಲವಾದರೆ ಬದುಕೇ ಇಲ್ಲ. ಅದು ಇದ್ದೂ ಸತ್ತಂತಹ ಸ್ಥಿತಿ. ಹೀಗಾಗಿ ಕನ್ನಡ ಭಾಷೆ ಉಳಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಗಂಭೀರವಾಗಿ ಚಿಂತನೆ ಮಾಡಬೇಕಿದೆ ಎಂದು ಹೇಳಿದ ಅವರು, ಖಾಸಗಿ ಶಾಲೆಗಳ ಆಂಗ್ಲಭಾಷಾ ವ್ಯಾಮೋಹವೇ ಈ ಎಲ್ಲ ಸಮಸ್ಯೆಯ ಮೂಲ. ಅದಕ್ಕೆ ಭಾಷಾ ಮಾಧ್ಯಮಗಳು ಹಿಡಿದ ವಿವಾದದ ಹಾದಿಯೂ ಕಾರಣ. 1ರಿಂದ 4ನೇ ತರಗತಿವರೆಗೆ ಕನ್ನಡವೇ ಕಡ್ಡಾಯವಾಗಿ ಶಿಕ್ಷಣ ಮಾಧ್ಯಮವಾಗಬೇಕು. ಆದರೆ, ಸರಿಯಾಗಿ ಅನುಷ್ಠಾನ ಆಗುತ್ತಿಲ್ಲ. ಕನ್ನಡ ಕಡ್ಡಾಯದ ವಿರುದ್ಧ ಬಂದಿರುವ ಸುಪ್ರೀಂ ಕೋರ್ಟ್ ತೀರ್ಪು ಕರ್ನಾಟಕದ ಪಾಲಿಗೆ ಮರಣ ಶಾಸನವಾಗಿದೆ ಎಂದು ಕಳವಳ ವ್ಯಕ್ತಪಡಿಸಿದ ಅವರು, ಬಹುಪಾಲು ಉದ್ಯಮಗಳು ಹೊರಗಿನವರವುಗಳೇ ಆಗಿದ್ದು, ಕನ್ನಡಿಗರು ಉದ್ಯೋಗ ವಂಚಿತರಾಗಿದ್ದಾರೆ. ಇದನ್ನು ಸರಿಪಡಿಸಿ ಆಯೋಗಗಳು ನೀಡಿರುವ ವರದಿಯನ್ನು ಕಟ್ಟುನಿಟ್ಟಾಗಿ ಅಲ್ಲದಿದ್ದರೂ ತುಸು ಮಟ್ಟಿಗಾದರೂ ಅನುಷ್ಠಾನಕ್ಕೆ ತರಬೇಕು ಎಂದು ಸಲಹೆ ನೀಡಿದರು.

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಾಳಾಸಾಹೇಬ ಲೋಕಾಪುರ ಮಾತನಾಡಿ, ಕನ್ನಡ ಭಾಷೆ ಇಂದು ಬಿಕ್ಕಟ್ಟಿನಲ್ಲಿದೆ. ವ್ಯವಹಾರ, ಸಂವಹನದಲ್ಲಿ ಕನ್ನಡ ಮರೆಯಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಸಂಸದ ಜಗದೀಶ ಶೆಟ್ಟರ ಮಾತನಾಡಿ, ನಮ್ಮ ಭಾಷೆಯ ಬಗ್ಗೆ ಅಭಿಮಾನ ಇರಬೇಕು. ತಮಿಳುನಾಡು, ತೆಲಗು, ಆಂಧ್ರಪ್ರದೇಶ, ಮಹಾರಾಷ್ಟ್ರ ಆಯಾ ಭಾಷೆಗಳು ಹೇಗೆ ಮುಖ್ಯವಾಗಿಯೋ ಅದೇ ರೀತಿ ಕರ್ನಾಟಕದಲ್ಲಿ ಕನ್ನಡ ಮುಖ್ಯ. ಇತರೆ ಭಾಷೆಗಳನ್ನೂ ಕಲಿಯಬೇಕು. ಆಡಳಿತ ವ್ಯವಹಾರ ಕನ್ನಡದಲ್ಲಿ ಇರುವಂತೆ ನೋಡಿಕೊಳ್ಳಬೇಕು. ನ್ಯಾಯಾಂಗ ವ್ಯವಸ್ಥೆಯಲ್ಲಿಯೂ ಕನ್ನಡ ಬಳಕೆ ಆಗಬೇಕು. ಕನಿಷ್ಠ ಶೇ.50-60ರಷ್ಟು ಕನ್ನಡ ಬಳಕೆಯಾಗಬೇಕು. ಪುಸ್ತಕ ಹಾಗೂ ಕನ್ನಡ ದಿನಪತ್ರಿಕೆ ಓದುವ ಚಟ ಬೆಳೆಸಿಕೊಳ್ಳಬೇಕು ಎಂದರು.

ಕಸಾಪ ಜಿಲ್ಲಾಧ್ಯಕ್ಷೆ ಮಂಗಳಾ ಮೆಟಗುಡ್ಡ ಆಶಯ ನುಡಿಗಳನ್ನಾಡಿದರು. ತಾಲೂಕು ಅಧ್ಯಕ್ಷ ಡಾ.ಸಂಜಯ ಶಿಂಧಿಹಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಪುರಸಭೆ ಅಧ್ಯಕ್ಷೆ ಖುರ್ಷಾದಾಬೇಗಂ ನದಾಫ್‌, ಉಪಾಧ್ಯಕ್ಷೆ ಭೀಮವ್ವ ಪೂಜೇರಿ, ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುಭಾಷ ಢವಳೇಶ್ವರ, ಸಂತೋಷ ಪಾರ್ಶಿ, ತಹಸೀಲ್ದಾರ್‌ ಶಿವಾನಂದ ಬಬಲಿ, ಬಿಇಒಗಳಾದ ಅಜೀತ ಮನ್ನಿಕೇರಿ, ಜಿ.ಬಿ. ಬಳಗಾರ, ತಾಪಂ ಇಒ ಎಫ್.ಜಿ. ಚಿನ್ನನವರ, ಪುರಸಭೆ ಮುಖ್ಯಾಧಿಕಾರಿ ತುಕಾರಾಮ ಮಾದರ, ಜಿಲ್ಲೆಯ ವಿವಿಧ ತಾಲೂಕುಗಳ ಕಸಾಪ ಅಧ್ಯಕ್ಷರು, ಅನೇಕ ಸಾಹಿತಿಗಳು, ಲೇಖಕರು, ಕವಿಗಳು, ಕನ್ನಡ ಪರ ಸಂಘಟನೆಗಳ ಪ್ರಮುಖರು, ಪುರಸಭೆ ಸದಸ್ಯರು, ಗಣ್ಯರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಸ್ಪರ್ಧಾತ್ಮಕ ಜಗತ್ತಿನಲ್ಲಿ ಅನೇಕ ವಿಷಯಗಳ ಮಧ್ಯೆ ಕನ್ಮಡ ಭಾಷೆಯನ್ನು ಮರೆಯುವಂತಾಗಬಾರದು.ಬೇರೆ ಭಾಷೆಯ ಮಾತನಾಡಬೇಕಾದ ಅನಿವಾರ್ಯತೆ ಇದೆ. ಪ್ರಾದೇಶಿಕ ಭಾಷೆಗೆ ಆದ್ಯತೆ ನೀಡುವುದರ ಜತೆಗೆ ಉಳಿದ ಭಾಷೆಗಳನ್ನು ಕಲಿಯಬೇಕು. ಕನ್ನಡ ಶಿಕ್ಷಣ ಸಂಸ್ಥೆಗಳನ್ನು ಉಳಿಸಬೇಕಾದ ಅಗತ್ಯವಿದೆ.

-ಈರಣ್ಣ ಕಡಾಡಿ ರಾಜ್ಯಸಭಾ ಸದಸ್ಯ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ