ಶಿವಕುಮಾರ ಕುಷ್ಟಗಿ
ನಗರಸಭೆಗೆ ತೆರಳಿದಾಗಲೆಲ್ಲ ಅಧಿಕಾರಿಗಳು ಸರ್ವರ್ ಸಮಸ್ಯೆ ಇದೆ, ನಾಲ್ಕೈದು ದಿನ ಬಿಟ್ಟು ಬನ್ನಿ ಎನ್ನುತ್ತಾರೆ. ನಾಲ್ಕೈದು ದಿನ ಬಿಟ್ಟರೂ ಅದೇ ರಾಗ, ಅದೇ ಹಾಡು.
ಇಲ್ಲಿ ಮಾತ್ರ ಸಮಸ್ಯೆ ಏಕೆ?: ಸರ್ವರ್ಗಳ ಸಮಸ್ಯೆ ಆಗುವುದು ಸಾಮಾನ್ಯ. ಆದರೆ 30ನೇ ವಾರ್ಡಿನಲ್ಲಿ ಸರ್ವರ್ ಕಳೆದ 3 ತಿಂಗಳುಗಳಿಂದ ಸ್ಥಗಿತಗೊಂಡಿದೆ. ಅದೇಗೆ ಒಂದೇ ವಾರ್ಡಿಗೆ ಸಮಸ್ಯೆಯಾಗುತ್ತದೆ? ಪ್ರತ್ಯೇಕ ವಾರ್ಡಿಗೊಂದು ಸರ್ವರ್ ಅಳವಡಿಸಲಾಗಿದೆಯೇ? ಬೇರೆ ವಾರ್ಡ್ಗಳಲ್ಲಿ ಈ ಸಮಸ್ಯೆ ಉಂಟಾದಲ್ಲಿ ಎರಡೇ ದಿನಗಳಲ್ಲಿ ಸರಿಯಾಗುತ್ತದೆ. ಆದರೆ 30ನೇ ವಾರ್ಡ್ನ ಸರ್ವರ್ ಯಾಕೆ ತಿಂಗಳಾನುಗಟ್ಟಲೇ ಸರಿ ಹೋಗುತ್ತಿಲ್ಲ ಎನ್ನುವುದು ಸಹಜವಾಗಿಯೇ ಎಲ್ಲರಲ್ಲಿಯೂ ಆಶ್ಚರ್ಯಕ್ಕೆ ಕಾರಣವಾಗಿದೆ.ಜಿಲ್ಲಾಧಿಕಾರಿಗಳೇ ಆಡಳಿತಾಧಿಕಾರಿ: ಪ್ರಸ್ತುತ ನಗರಸಭೆಯ ಆಡಳಿತಾಧಿಕಾರಿಗಳು ಜಿಲ್ಲಾಧಿಕಾರಿಗಳೇ ಇದ್ದಾರೆ. ನಗರಸಭೆಯ ಅಧಿಕಾರಿಗಳು ಸರಿಯಾಗಿ ಕೆಲಸ ನಿರ್ವಹಿಸದೇ ಇರುವಾಗ ಪರಿಶೀಲಿಸಿ ಸರಿಪಡಿಸುವುದು, ತಪ್ಪಿತಸ್ಥರ ಮೇಲೆ ಕ್ರಮ ತೆಗೆದುಕೊಳ್ಳುವುದೇ ಇದೇ ಜಿಲ್ಲಾಧಿಕಾರಿಗಳು. ಆದರೆ ತಿಂಗಳಾನುಗಟ್ಟಲೇ ವಾರ್ಡ್ ನಂ. 30ರ ಸರ್ವರ್ ಸಮಸ್ಯೆ ಹಾಗೆಯೇ ಇದ್ದರೂ ಜಿಲ್ಲಾಧಿಕಾರಿಗಳು ಅದೇಕೆ ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಇದು ಅವರಿಗೆ ಸಮಸ್ಯೆಯಾಗಿ ಕಾಣುತ್ತಿಲ್ಲವೇ? ಅಥವಾ ಹೇಗಾದರೂ ನಡೆಯುತ್ತದೆ ಎನ್ನುವ ಉದಾಸೀನವೋ ತಿಳಿಯದಾಗಿದೆ ಎನ್ನುತ್ತಾರೆ ನಿವಾಸಿಗಳು.
ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಅವಳಿ ನಗರದಲ್ಲಿನ ಜನರು ಫಾರಂ 3 ಸೇರಿದಂತೆ ನಗರಸಭೆಯ ಕಾಗದ ಪತ್ರಗಳಿಗಾಗಿ ಅಲೆಯುವಂತಿಲ್ಲ, ಅವರು ಅರ್ಜಿ ಸಲ್ಲಿಸಿದ ಎರಡು ದಿನಗಳಲ್ಲಿ ಅವರ ದಾಖಲೆಗಳು ಅವರಿಗೆ ಸಿಗುತ್ತವೆ, ಅದಕ್ಕಾಗಿ ಎಲ್ಲ ವ್ಯವಸ್ಥೆ ಮಾಡಿದ್ದೇವೆ ಎನ್ನುತ್ತಾರೆ. ಪ್ರಭುಗಳತ್ತ ಪ್ರಭುತ್ವ(ಪ್ರಪ್ರ) ಯೋಜನೆ ಜಾರಿ ಮಾಡಿ ಸಿಎಂ ಅವರಿಂದ ಉದ್ಘಾಟನೆ ಮಾಡಿಸಿದ್ದಾರೆ. ಆದರೆ 33ನೇ ವಾರ್ಡ್ನ ಸರ್ವರ್ ಸಮಸ್ಯೆ ಹಲವಾರು ತಿಂಗಳುಗಳಿಂದ ಬಗೆಹರಿದಿಲ್ಲ.ಬೆಂಗಳೂರಿನತ್ತ ಬೊಟ್ಟು: ಈ ಸಮಸ್ಯೆ ಕುರಿತು ನಗರಸಭೆ ಅಧಿಕಾರಿಗಳು ಬೆಂಗಳೂರಿನತ್ತ ಬೊಟ್ಟು ಮಾಡುತ್ತಿದ್ದಾರೆ. ಸಮಸ್ಯೆ ಬಗೆಹರಿಸುವವರೇ ಕೈಚೆಲ್ಲಿ ಕುಳಿತಾಗ ಅಲ್ಲಿನ ನಿವಾಸಿಗಳು ಯಾರನ್ನು ಕೇಳಬೇಕು?
ಅಲೆದಾಟ: ಫಾರಂ 3 ಸೇರಿದಂತೆ ಅಗತ್ಯ ದಾಖಲೆಗಳಿಗಾಗಿ ಕಳೆದ 3 ತಿಂಗಳಿಂದ ಅಲೆದು ಅಲೆದು ಸುಸ್ತಾಗಿದ್ದೇವೆ. ಮನೆ ಕಟ್ಟಲು ಬ್ಯಾಂಕ್ಗಳಿಂದ ಸಾಲ ಸಿಗುತ್ತಿಲ್ಲ. ಮಕ್ಕಳ ಶಿಕ್ಷಣಕ್ಕಾಗಿ ಶಿಕ್ಷಣ ಸಾಲ ದೊರಕುತ್ತಿಲ್ಲ. ಹೊಸ ನಿವೇಶನ ಖರೀದಿ ಮಾಡುವವರಿಗೆ ತೊಂದರೆಯಾಗಿದೆ. ಅಧಿಕಾರಿಗಳು ಕೂಡಲೇ ಸಮಸ್ಯೆ ಬಗೆಹರಿಸಿ ಸಾರ್ವಜನಿಕರಿಗೆ ಅಗತ್ಯವಾಗಿರುವ ದಾಖಲೆಗಳು ಸಕಾಲದಲ್ಲಿ ಸಿಗುವಂತೆ ಮಾಡಬೇಕು ಎನ್ನುತ್ತಾರೆ 30ನೇ ವಾರ್ಡ್ ನಿವಾಸಿಗಳು.ಪ್ರಯೋಜನವಾಗಿಲ್ಲ: ಸರ್ವರ್ ಸಮಸ್ಯೆಯಿಂದಾಗಿ ನಮ್ಮ ವಾರ್ಡಿನ ನಿವಾಸಿಗಳಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಈ ಕುರಿತು ಅಧಿಕಾರಿಗಳಿಗೆ ಹಲವಾರು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ 30ನೇ ವಾರ್ಡಿನ ಸದಸ್ಯರಾದ ಪದ್ಮಾ ಕಟಗಿ ತಿಳಿಸಿದರು.