ಅಳ್ನಾವರ ಆಸ್ಪತ್ರೆಗೆ ಕಾಯಂ ಎಂಬಿಬಿಎಸ್‌ ವೈದ್ಯರ ಭರವಸೆ

KannadaprabhaNewsNetwork |  
Published : Feb 18, 2026, 02:15 AM IST
ಅಳ್ನಾವರದಲ್ಲಿ ಮಂಗಳವಾರ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸುತ್ತಿರುವ ಜಿಲ್ಲಾಧಿಕಾರಿ ಸ್ನೇಹಲ್ ಆರ್. | Kannada Prabha

ಸಾರಾಂಶ

ಅಧಿಕಾರಿಗಳು ಕಚೇರಿಯಲ್ಲಿ ಮಾತ್ರವಲ್ಲದೆ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಪರಿಶೀಲಿಸಬೇಕು. ಜನಸಾಮಾನ್ಯರೊಂದಿಗೆ ನೇರ ಸಂಪರ್ಕ ಹೆಚ್ಚಿಸಲು ತಿಂಗಳಿಗೆ ಕನಿಷ್ಠ ಒಂದು ಬಾರಿ ತಾಲೂಕು ಮಟ್ಟದಲ್ಲಿ ಸಾರ್ವಜನಿಕ ಸಭೆ ಮಾಡಬೇಕೆಂದು ಜಿಲ್ಲಾಧಿಕಾರಿ ಹೇಳಿದರು.

ಅಳ್ನಾವರ:

ಅಳ್ನಾವರ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಚಿಕಿತ್ಸೆ ನೀಡಲು ಎಂಬಿಬಿಎಸ್‌ ವೈದ್ಯರ ಕೊರತೆ ನೀಗಿಸಲು ಜಿಲ್ಲಾಡಳಿತ ಗಮನ ಹರಿಸಿದೆ ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಹೇಳಿದರು.

ಪಟ್ಟಣದಲ್ಲಿ ಮಂಗಳವಾರ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ ಅವರು, ಇಲ್ಲಿಯ ನಿವಾಸಿಗಳು ಪ್ರಸ್ತಾಪಿಸಿದ ಅನೇಕ ಸಮಸ್ಯೆಗಳನ್ನು ಪರಿಶೀಲಿಸಿ ಸಂಬಂಧಿಸಿದ ಇಲಾಖೆಗಳಿಂದ ಮಾಹಿತಿ ಪಡೆದು ಹಂತ-ಹಂತವಾಗಿ ಪರಿಹರಿಸಲು ಪ್ರಯತ್ನಿಸುತ್ತೇನೆ. ತಾಲೂಕು ಕೇಂದ್ರವಾಗಿರುವ ಅಳ್ನಾವರದ ಸರ್ಕಾರಿ ಆಸ್ಪತ್ರೆಯಲ್ಲಿ ಕಳೆದ ಏಳು ವರ್ಷದಿಂದ ಕಾಯಂ ಎಂಬಿಬಿಎಸ್‌ ವೈದ್ಯರಿಲ್ಲ ಎನ್ನುವುದು ಗಂಭೀರ ಸಮಸ್ಯೆ. ಆದಷ್ಟು ಶೀಘ್ರ ಪರಿಹಾರ ನೀಡಲಾಗುವುದು ಎಂದರು.

ಸಾರ್ವಜನಿಕರ ಅಹವಾಲುಗಳು ಕೇವಲ ಅರ್ಜಿ ರೂಪದಲ್ಲಿ ಉಳಿಯದೇ ನಿಗದಿತ ಅವಧಿಯಲ್ಲಿ ಪರಿಹಾರ ಸಿಗುವಂತೆ ಕ್ರಮ ಕೈಗೊಳ್ಳಲಾಗುವುದು ಎಂದ ಅವರು,

ಅಧಿಕಾರಿಗಳು ಕಚೇರಿಯಲ್ಲಿ ಮಾತ್ರವಲ್ಲದೆ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಪರಿಶೀಲಿಸಬೇಕು. ಜನಸಾಮಾನ್ಯರೊಂದಿಗೆ ನೇರ ಸಂಪರ್ಕ ಹೆಚ್ಚಿಸಲು ತಿಂಗಳಿಗೆ ಕನಿಷ್ಠ ಒಂದು ಬಾರಿ ತಾಲೂಕು ಮಟ್ಟದಲ್ಲಿ ಸಾರ್ವಜನಿಕ ಸಭೆ ಮಾಡಲು ಸೂಚಿಸಿದ್ದೇನೆ ಎಂದರು. ಇದೇ ವೇಳೆ ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ ನಾಗರಿಕರು ರಸ್ತೆ, ಕುಡಿಯುವ ನೀರು, ಆಸ್ಪತ್ರೆ ಸೌಲಭ್ಯ, ಭೂ ದಾಖಲೆ, ಮನೆ ಹಂಚಿಕೆ, ವಿದ್ಯುತ್ ಸಮಸ್ಯೆ ಸೇರಿದಂತೆ ಅನೇಕ ವಿಷಯಗಳ ಕುರಿತು ಮನವಿ ಸಲ್ಲಿಸಿದರು.

ಸಭೆಯ ಪೂರ್ವದಲ್ಲಿ ಜಿಲ್ಲಾಧಿಕಾರಿಗಳು ತಹಸೀಲ್ದಾರ್‌ ಕಚೇರಿಗೆ ಭೇಟಿ ನೀಡಿದರು. ವಿಷಯ ನಿರ್ವಾಹಕರು, ಕಂದಾಯ ನಿರೀಕ್ಷಕರು, ಶಿರಸ್ತೆದಾರ ಮತ್ತು ಗ್ರಾಮ ಆಡಳಿತ ಅಧಿಕಾರಿಗಳಿಂದ ವಿವಿಧ ಯೋಜನೆಗಳ ಪ್ರಗತಿಯ ಬಗ್ಗೆ ಮಾಹಿತಿ ಪಡೆದುಕೊಂಡರು. ಪಟ್ಟಣದ ಮೂಲಕ ಹಾಯ್ದು ಹೋಗುವ ರಾಜ್ಯ ಹೆದ್ದಾರಿ 93 ರ ಪೈಕಿ ನಾಲ್ಕೂವರೆ ಕಿಮಿ ರಸ್ತೆ ಹದಗೆಟ್ಟಿದ್ದು, ಅಭಿವೃದ್ಧಿಪಡಿಸಿ ಅಪಘಾತ ತಪ್ಪಿಸುವಂತೆ ಅನೇಕರು ಮನವಿ ಸಲ್ಲಿಸಿ ಆಗ್ರಹಿಸಿದರು.

ತಾಲೂಕಿನ ಇಂದಿರಮ್ಮನ ಕೆರೆಯನ್ನು ಪ್ರವಾಸಿ ತಾಣವನ್ನಾಗಿಸಲು ಹುಲಿಕೇರಿ ಗ್ರಾಮಸ್ಥರು ಮನವಿ ಸಲ್ಲಿಸಿದರೆ, ಪಟ್ಟಣದಲ್ಲಿರುವ ಶೌಚಾಲಯಗಳನ್ನು ದುರಸ್ತಿ ಮಾಡಿಸಿ ಸಾರ್ವಜನಿಕರ ಬಳಕೆಗೆ ಅನುಕೂಲ ಮಾಡಲು ಕೊಡುವುದು, ಪಟ್ಟಣದ ಮೂಲಭೂತ ಸೌಕರ್ಯಕ್ಕೆ ವಾರ್ಷಿಕ ₹ 5 ಕೋಟಿ ಅನುದಾನ ನೀಡುವುದು ಸೇರಿದಂತೆ ಗ್ರಂಥಾಲಯ ಪ್ರಾರಂಭ ಮತ್ತು ಆಶ್ರಯ ನಿವಾಸಿಗಳಿಗೆ ಮನೆಯ ಹಕ್ಕುಪತ್ರ ನೀಡುವಂತೆ ಮನವಿಗಳು ಸಲ್ಲಿಕೆಯಾದವು.

ಅರಣ್ಯ ಮರಗಳನ್ನು ಬೆಳೆಸಲು ಹಸ್ತಾಂತರಿಸಿರುವ ಪಟ್ಟಣದ ಸರ್ವೇ ನಂಬರ್‌ 47ನ್ನು ಮರಳಿ ಜಿಲ್ಲಾಡಳಿತದ ವಶಕ್ಕೆ ಪಡೆದು ಕೈಗಾರಿಕಾ ವಲಯ ನಿರ್ಮಾಣಕ್ಕೆ ಒದಗಿಸುವಂತೆ ಪಪಂ ಮಾಜಿ ಅಧ್ಯಕ್ಷ ಅಮೋಲ ಗುಂಜೀಕರ ಜಿಲ್ಲಾಧಿಕಾರಿಗೆ ಮನವಿ ಮಾಡಿದರು.

ಈ ವೇಳೆ ಪ್ರಭಾರ ತಹಸೀಲ್ದಾರ್ ಡಾ. ಡಿ.ಎಚ್. ಹೂಗಾರ, ಅಧಿಕಾರಿಗಳಾದ ಹನುಮಂತ ಕೊಚ್ಚರಗಿ, ಶಿರಸ್ತೇದಾರ ಅಜ್ಜಪ್ಪ ಮಂಗಳಗಟ್ಟಿ, ಎಂ.ಎಸ್. ಬಿರಾದಾರ, ರಾಜಶೇಖರ ಅನಗೌಡರ, ಡಾ. ಸುನೀಲ ಬನ್ನಿಗೋಳ, ರವಿಚಂದ್ರ ಪಾಟೀಲ, ಸಂಪತಕುಮಾರ ಒಡೆಯರ, ಗುರು ಸುಣಗಾರ, ಡಾ. ಕೆ.ಎನ್. ತನುಜಾ ಮತ್ತಿತರರು ಇದ್ದರು.

45 ಅರ್ಜಿ ಸ್ವೀಕಾರ..

ಜಿಲ್ಲಾಧಿಕಾರಿಗಳ ಅಹವಾಲು ಸ್ವೀಕಾರ ಸಮಯದಲ್ಲಿ 10 ಕಂದಾಯ, 5 ಗ್ರಾಪಂ, 17 ಪಪಂ, 3 ಶಿಕ್ಷಣ ಇಲಾಖೆ, ಒಂದು ಪೊಲೀಸ್, ಮೂರು ಆರೋಗ್ಯ, ಎರಡು ಗ್ರಂಥಾಲಯ, ಒಂದು ಕ್ರೀಡೆ, ಮೂರು ಹೆಸ್ಕಾಂ ಸೇರಿದಂತೆ ಒಟ್ಟು 45 ಅರ್ಜಿಗಳು ಸ್ವೀಕಾರವಾಗಿವೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗ್ರಾಮಸಭೆ ಅಭಿಪ್ರಾಯ ಯೋಜನೆಯಾಗಿ ಜಾರಿಯಾಗಲಿ: ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ
ಮಕ್ಕಳಲ್ಲಿ ಧಾರ್ಮಿಕ ಶ್ರೀಮಂತಿಕೆ ಬೆಳೆಸಲಿ: ಗವಿಸಿದ್ದೇಶ್ವರ ಶ್ರೀ