ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಸೋಮವಾರದಿಂದ ನ್ಯಾಯಬೆಲೆ ಅಂಗಡಿಗಳು ತೆಗೆದಿದ್ದರಿಂದ ಪಡಿತರ ಅಕ್ಕಿ ಸಿಗುತ್ತದೆ ಎಂದು ಬೆಳಗ್ಗೆಯಿಂದ ಕಾದವರಲ್ಲಿ ಕೆಲವರಿಗೆ ಸಂಜೆಯ ವೇಳೆಗೆ ಸಿಕ್ಕಿದೆ. ಉಳಿದವರು ಪಡಿತರ ಸಿಗದೆ ವಾಪಸ್ಸಾದರು. ಮಂಗಳವಾರವೂ ಸಹಾ ಇದೆ ತರಹ ಪುನರಾವರ್ತನೆಯಾಯಿತು.
ಸರ್ವರ್ ಪ್ರಾಯೋಗಿ ಹಂತದಲ್ಲಿದೆ. ಇದರಿಂದ ಪಡಿತರದಲ್ಲಿ ಸಿಗುವ ಅಕ್ಕಿಯನ್ನೇ ನಂಬಿಕೊಂಡಿರುವ ಬಡವರಿಗೆ ಅಕ್ಕಿ ಸಿಗದೆ ವಂಚಿತರಾಗುವಂತಾಗಿದೆ. ಇದರಿಂದ ನ್ಯಾಯಬೆಲೆ ಅಂಡಗಿಗಳ ಮಾಲೀಕರೂ ಆತಂಕಗೊಳ್ಳುವಂತಾಗಿದೆ. ತಿಂಗಳಕೊನೆಯಲ್ಲಿ ಹೇಗಪ್ಪ ಆಹಾರಪದಾರ್ಥಗಳನ್ನು ವಿತರಿಸುವುದು ಎಂಬ ಚಿಂತೆಗೀಡಾಗಿದ್ದಾರೆ. ಪಡಿತರ ಅಂಗಡಿಗಳಿಗೆ ಬೀಗಸರ್ವರ್ ಸಮಸ್ಯೆಯಿಂದಾಗಿ ಪಡಿತರ ಅಂಗಡಿಗಳಿಗೆ ಬೀಗ ಜಡಿದಿದ್ದೇವೆ. ರಾಗಿ ಗೋದಾಮಿನಲ್ಲಿ ದಾಸ್ತಾನಿಲ್ಲವೆಂದು ಮೊದಲು 15 ದಿನ ಅಕ್ಕಿ ಎತ್ತುವಳಿಗೆ ಅವಕಾಶ ನೀಡಿಲ್ಲ. ಬಳಿಕ ಮಳೆ ಕಾರಣದಿಂದ ರಾಗಿ ಸಹ ಹಾಸನದಿಂದ ನಗರಕ್ಕೆ ಬಾರದೆ ಮತ್ತಷ್ಟು ವಿಳಂಬವಾಯಿತು. ನಮಗೆ ಮೊದಲಿದ್ದ ಹಳೇ ಸರ್ವರ್ ನೀಡಿದರೆ ಉತ್ತಮ ಅದರಿಂದ ಕಾರ್ಡ್ ದಾರರಿಗೆ ಪಡಿತರ ವಿತರಿಸಿ ನೆಮ್ಮದಿಯಾಗಿರಬಹುದು. ಹೊಸ ಸರ್ವರ್ ನಿಂದ ಜನರ ಬಳಿ ಬೈಸಿಕೊಳ್ಳುವುದೇ ಆಗಿದೆ ಎಂಬುದು ಬಹುತೇಕ ಪಡಿತರ ವಿತರಕರ ಅಭಿಪ್ರಾಯವಾಗಿದೆ.
ಇತ್ತ ಆಹಾರ ಇಲಾಖೆ ಅಧಿಕಾರಿಗಳು ಮಾತ್ರ ಸಮಸ್ಯೆ ನೀಗಿಸಲು ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ ಕಾಯಿರಿ ಎಂಬ ಉತ್ತರ ನೀಡುತ್ತಿದ್ದಾರೆ. ಆದರೆ ಯಾವಾಗ ಹೊಸ ಸರ್ವರ್ ಕಾರ್ಯರೂಪಕ್ಕೆ ಬರಲಿದೆ ಎಂಬುದನ್ನು ಸ್ಪಷ್ಟವಾಗಿಲ್ಲ.