ಆರ್. ಉಗ್ರೇಶ್ ಅಭಿಮಾನಿ ಬಳಗ ಹಾಗೂ ಲಯನ್ಸ್ ಕ್ಲಬ್ ಜನರ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಿ ವೃದ್ಧರ ಕಣ್ಣಿಗೆ ನವ ಚೈತನ್ಯದ ದೃಷ್ಟಿ ನೀಡುತ್ತಿರುವುದು ಸಮಾಜ ಮೆಚ್ಚುವಂತಹದ್ದು.
ಕನ್ನಡಪ್ರಭ ವಾರ್ತೆ ಶಿರಾ
ಆರ್ಥಿಕವಾಗಿ ಹಿಂದುಳಿದ ಗ್ರಾಮೀಣ ಪ್ರದೇಶದ ಬಡ ಕುಟುಂಬಗಳ ವೃದ್ಧರ, ತಾಯಂದಿರ ದೃಷ್ಟಿಗೆ ಹೊಸ ಚೈತನ್ಯ ನೀಡಿ, ವೃದ್ಧಾಪ್ಯದಲ್ಲೂ ಕೂಡ ದೃಷ್ಟಿ ಚೆನ್ನಾಗಿರಬೇಕೆಂಬ ಉದ್ದೇಶದಿಂದ ಶಿರಾ ತಾಲೂಕಿನ ಹಲವಾರು ಭಾಗಗಳಲ್ಲಿ ಉಚಿತ ಕಣ್ಣಿನ ಶಸ್ತ್ರಚಿಕಿತ್ಸಾ ಶಿಬಿರ ಆಯೋಜಿಸುವ ಮೂಲಕ ಸೇವೆ ಮಾಡುತ್ತಿದ್ದೇವೆ. ಇಂಥ ಸೇವೆಗಳು ಜನ ಮಾನಸದಲ್ಲಿ ಅಚ್ಚಳಿಯದೆ ಉಳಿಯಲಿದ್ದು, ನಮಗೆ ತಂದೆ- ತಾಯಂದಿರ ಸೇವೆ ಮಾಡಿದ ತೃಪ್ತಿ ದೊರಕಲಿದೆ ಎಂದು ಜೆಡಿಎಸ್ ರಾಜ್ಯ ಪರಿಷತ್ ಸದಸ್ಯ ಆರ್.ಉಗ್ರೇಶ್ ಹೇಳಿದರು.
ಅವರು ತಾಲೂಕಿನ ತೊಗರಗುಂಟೆ ಶ್ರೀ ಅಮ್ಮಾಜಮ್ಮ ಕಲ್ಯಾಣ ಮಂಟಪದಲ್ಲಿ ಲಯನ್ಸ್ ಕ್ಲಬ್, ಆರ್. ಉಗ್ರೇಶ್ ಅಭಿಮಾನಿ ಬಳಗ, ವೈಷ್ಣವಿ ಲಯನ್ಸ್ ಸಂಸ್ಥೆ ಸಹಯೋಗದೊಂದಿಗೆ ಉಚಿತ ಕಣ್ಣಿನ ಶಸ್ತ್ರಚಿಕಿತ್ಸಾ ಶಿಬಿರ ಉದ್ಘಾಟಿಸಿ ಮಾತನಾಡಿದರು. ಕೊಟ್ಟ, ತಡಕಲೂರು, ಹೊಸೂರು, ಶಿರಾ ಭಾಗಗಳಲ್ಲಿ ಉಚಿತ ಕಣ್ಣಿನ ಶಸ್ತ್ರಚಿಕಿತ್ಸಾ ಶಿಬಿರ ಆಯೋಜನೆ ಮಾಡಿ ೪೦೦ ಜನರಿಗೆ ದೃಷ್ಟಿಯ ನವ ಚೈತನ್ಯ ಮೂಡಿಸಿದ್ದೇವೆ. ಶಿರಾ ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿ ಕೇಂದ್ರದಲ್ಲಿ ಇಂತಹ ಶಿಬಿರಗಳನ್ನು ಆಯೋಜಿಸಿ, ಬಡವರಿಗೆ ಆರೋಗ್ಯ ಸೇವೆ ನೀಡುವುದೇ ನಮ್ಮ ಗುರಿ, ಜನರ ಸೇವೆಯಲ್ಲಿಯೇ ಭಗವಂತನನ್ನು ಕಾಣಲಿದ್ದೇನೆ ಎಂದರು.
ಶಿರಾ ಲಯನ್ಸ್ ಕ್ಲಬ್ ಅಧ್ಯಕ್ಷ ಡಾ.ಮಂಜುನಾಥ್, ಶಿರಾ ಲಯನ್ಸ್ ಕ್ಲಬ್ ಸಾಮಾಜಿಕ ಕಳಕಳಿ ಇಟ್ಟುಕೊಂಡು ಉಚಿತ ಕಣ್ಣಿನ ಶಸ್ತ್ರಚಿಕಿತ್ಸಾ ಶಿಬಿರ ನಡೆಸಿ , ಫಲಾನುಭವಿಗಳನ್ನು ಬೆಂಗಳೂರಿನ ವೈಷ್ಣವಿ ಐ ಕೇರ್ ನಲ್ಲಿ ಕಣ್ಣಿನ ಶಸ್ತ್ರಚಿಕಿತ್ಸೆ ನೆರವೇರಿಸಿ, ಮತ್ತೆ ಸ್ವಗ್ರಾಮಗಳಿಗೆ ಕರೆ ತಂದು ಬಿಡಲಿದ್ದೇವೆ, ಎಲ್ಲವೂ ಉಚಿತವಾಗಿರಲಿದೆ ಎಂದರು.
ಪಿಎಲ್ ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಟಿ. ಡಿ. ಮಲ್ಲೇಶ್ ಮಾತನಾಡಿ, ಆರ್. ಉಗ್ರೇಶ್ ಅಭಿಮಾನಿ ಬಳಗ ಹಾಗೂ ಲಯನ್ಸ್ ಕ್ಲಬ್ ಜನರ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಿ ವೃದ್ಧರ ಕಣ್ಣಿಗೆ ನವ ಚೈತನ್ಯದ ದೃಷ್ಟಿ ನೀಡುತ್ತಿರುವುದು ಸಮಾಜ ಮೆಚ್ಚುವಂತಹದ್ದು ಎಂದರು.
ಮೇಲ್ಕುಂಟೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಲಕ್ಷ್ಮಣ್, ಮುಖಂಡ ಲಕ್ಕನಹಳ್ಳಿ ಮಂಜುನಾಥ್, ಡಾ. ಅನಿತಾ, ಡಾ. ರಂಗಸ್ವಾಮಿ, ಡಾ. ಭರತ್ ಗೌಡ, ಮೇಲ್ಕುಂಟೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಟಿ.ಡಿ. ನರಸಿಂಹಮೂರ್ತಿ, ಮುಖಂಡ ನಿಸರ್ಗ ಸುರೇಶ್ , ಗೊಲ್ಲಹಳ್ಳಿ ನಾಗಣ್ಣ , ಗ್ರಾಮ ಪಂಚಾಯಿತಿ ಸದಸ್ಯರಾದ ಚಂದ್ರಕುಮಾರ್, ನಾಗರಾಜು, ಚಂದ್ರು, ಮಾಜಿ ಸದಸ್ಯ ಉಮೇಶ್, ಎಸ್. ಎಸ್. ಮೆಡಿಕಲ್ ನಾಗಣ್ಣ, ಕೊಟ್ಟ ರಮೇಶ್, ಸುನಿಲ್ ಗೌಡ, ಧರಣೀಶ್, ರವಿ ಗೌಡ, ಹರೀಶ್ ಗೌಡ, ಯಶ್, ವನಿತಾ, ಕರಿಯಣ್ಣ, ಪುಟ್ಟ ಸಿದ್ದ ಯಾದವ್, ಜಗದೀಶ್ ಹಲವಾರು ಮುಖಂಡರು ಹಾಜರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.