ವಿವಿಧ ವಾರ್ಡುಗಳ ಕಾಮಗಾರಿ ವೀಕ್ಷಿಸಿದ ಶೇಷಾದ್ರಿ

KannadaprabhaNewsNetwork | Published : Mar 28, 2025 12:36 AM

ರಾಮನಗರ: ಯುಐಡಿಎಫ್ ಯೋಜನೆ ಅಡಿಯಲ್ಲಿ ನಗರಸಭೆ ವ್ಯಾಪ್ತಿಯ ವಾರ್ಡುಗಳಲ್ಲಿ ಪ್ರಗತಿಯಲ್ಲಿರುವ ವಿವಿಧ ಕಾಮಗಾರಿಗಳನ್ನು ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ(ಶಶಿ), ಸದಸ್ಯರು ಮತ್ತು ಅಧಿಕಾರಿಗಳು ವೀಕ್ಷಣೆ ಮಾಡಿದರು.

ರಾಮನಗರ: ಯುಐಡಿಎಫ್ ಯೋಜನೆ ಅಡಿಯಲ್ಲಿ ನಗರಸಭೆ ವ್ಯಾಪ್ತಿಯ ವಾರ್ಡುಗಳಲ್ಲಿ ಪ್ರಗತಿಯಲ್ಲಿರುವ ವಿವಿಧ ಕಾಮಗಾರಿಗಳನ್ನು ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ(ಶಶಿ), ಸದಸ್ಯರು ಮತ್ತು ಅಧಿಕಾರಿಗಳು ವೀಕ್ಷಣೆ ಮಾಡಿದರು.

7ನೇ ವಾರ್ಡಿನ ಅಗ್ರಹಾರದಲ್ಲಿ ಕಾಂಕ್ರೀಟ್ ರಸ್ತೆ ಕಾಮಗಾರಿ, ಎಂ.ಜಿ.ರಸ್ತೆಯ ಡಾಂಬರೀಕರಣ, ಸೀರಹಳ್ಳಕ್ಕೆ ತಡೆಗೋಡೆ ನಿರ್ಮಾಣ ಹೀಗೆ ಪ್ರಗತಿಯಲ್ಲಿರುವ ವಿವಿಧ ಕಾಮಗಾರಿಗಳನ್ನು ವೀಕ್ಷಿಸಿದ ಕೆ.ಶೇಷಾದ್ರಿ, ನಗರಸಭೆಯ ಅಧಿಕಾರಿಗಳಿಂದ ಕೆಲವೊಂದು ಅಗತ್ಯ ಮಾಹಿತಿಗಳನ್ನು, ಗುಣಮಟ್ಟದ ವಿಚಾರಗಳನ್ನು ಸಂಗ್ರಹಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯುಗಾದಿ ಹಬ್ಬದ ಕೆಲ ದಿನಗಳಲ್ಲಿ ಶ್ರೀರಾಮ ರಥೋತ್ಸವ ನಡೆಯಲಿದೆ. ರಥೋತ್ಸವ ಸುಗಮವಾಗಿ ಸಾಗಲು ಅನುಕೂಲವಾಗುವಂತೆ ಅಗ್ರಹಾರ , ಎಂ.ಜಿ.ರಸ್ತೆ ಮತ್ತು ಛತ್ರದ ಬೀದಿ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ಮೊದಲ ಆಧ್ಯತೆ ಕೊಡಲಾಗಿದೆ ಎಂದು ತಿಳಿಸಿದರು.

ಅಗ್ರಹಾರ ರಸ್ತೆಯ ಪಶ್ಚಿಮ ಭಾಗಕ್ಕೆ ಅಭಯ ಆಂಜನೇಯಸ್ವಾಮಿ ದೇವಾಲಯವಿದೆ. ಅಗ್ರಹಾರ ರಸ್ತೆ ಪೂರ್ವದಿಂದ ಪಶ್ಚಿಮದ ಕಡೆ ತಗ್ಗು ಇದೆ. ಹೀಗಾಗಿ ಮಳೆ ನೀರು ರಭಸವಾಗಿ ಹರಿದರೆ ದೇವಸ್ಥಾನದ ಒಳಗೆ ನುಗ್ಗುವ ಸಾಧ್ಯತೆ ಇದೆ ಎಂದು ಆ ಭಾಗದ ನಾಗರೀಕರು ಗಮನ ಸೆಳೆದಾಗ, ಅಧ್ಯಕ್ಷ ಕೆ.ಶೇಷಾದ್ರಿ ಈ ವಿಚಾರದಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರಸಭಾ ವ್ಯಾಪ್ತಿಯಲ್ಲಿ ಯುಐಡಿಎಫ್ ಯೋಜನೆಯಡಿ 3778.02 ಲಕ್ಷ ರು. ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆಗಳನ್ನು ನಿರ್ಮಿಸಲಾಗುತ್ತಿದೆ. ನಗರ ವ್ಯಾಪ್ತಿಯಲ್ಲಿ 41 ಕಾಂಕ್ರೀಟ್ ರಸ್ತೆಗಳ ಕಾಮಗಾರಿ ಪ್ರಗತಿಯಲ್ಲಿದೆ. ವಾರ್ಡ್ ಸಂಖ್ಯೆ 2ರಲ್ಲಿ 10 ರಸ್ತೆಗಳು, ವಾರ್ಡ್ ಸಂಖ್ಯೆ 4ರಲ್ಲಿ 3 ರಸ್ತೆಗಳು, ವಾರ್ಡ್ ಸಂಖ್ಯೆ 6ರಲ್ಲಿ 4 ರಸ್ತೆಗಳು, ವಾರ್ಡ್ ಸಂಖ್ಯೆ 7ರಲ್ಲಿ 4 ರಸ್ತೆಗಳು, ವಾರ್ಡ್ ಸಂಖ್ಯೆ 8ರಲ್ಲಿ 6 ರಸ್ತೆಗಳು, ವಾರ್ಡ್ ಸಂಖ್ಯೆ 9ರಲ್ಲಿ 2 ರಸ್ತೆಗಳು, ವಾರ್ಡ್ ಸಂಖ್ಯೆ 12ರಲ್ಲಿ 4 ರಸ್ತೆಗಳು, ವಾರ್ಡ್ ಸಂಖ್ಯೆ 13ರಲ್ಲಿ 2 ರಸ್ತೆಗಳು, ವಾರ್ಡ್ ಸಂಖ್ಯೆ 14ರಲ್ಲಿ 1 ರಸ್ತೆ, ವಾರ್ಡ್ ಸಂಖ್ಯೆ 8ರಲ್ಲಿ 6 ರಸ್ತೆಗಳು, ವಾರ್ಡ್ ಸಂಖ್ಯೆ 9ರಲ್ಲಿ 2 ರಸ್ತೆಗಳು, ವಾರ್ಡ್ ಸಂಖ್ಯೆ 12ರಲ್ಲಿ 4 ರಸ್ತೆಗಳು, ವಾರ್ಡ್ ಸಂಖ್ಯೆ 13ರಲ್ಲಿ 2 ರಸ್ತೆಗಳು, ವಾರ್ಡ್ ಸಂಖ್ಯೆ 14ರಲ್ಲಿ 1 ರಸ್ತೆ, ವಾರ್ಡ್ ಸಂಖ್ಯೆ 18ರಲ್ಲಿ 2 ರಸ್ತೆಗಳು ಮತ್ತು ವಾರ್ಡ್ ಸಂಖ್ಯೆ 24ರಲ್ಲಿ 3 ರಸ್ತೆಗಳನ್ನು ಕಾಂಕ್ರೀಟ್ ರಸ್ತೆಗಳನ್ನಾಗಿ ಪರಿವರ್ತಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಈ ಎಲ್ಲಾ ರಸ್ತೆಗಳಲ್ಲೀ ಯುಟಿಲಿಟಿ ಡಕ್ಟ್ ಪೈಪ್‌ಲೈನ್ ಅಳವಡಿಸಲಾಗುತ್ತಿದೆ. ವಾರ್ಡ್ ಸಂಖ್ಯೆ 7ರಲ್ಲಿ ಎಲ್ಲಾ 4 ರಸ್ತೆಗಳ ಕಾಂಕ್ರೀಟಿಕರಣ ಮುಗಿದಿದೆ. ಯುಟಿಲಿಟಿ ಡಕ್ಟ್ ಪೈಪ್‌ಲೈನ್ ಭಾಗಕ್ಕೆ ಕಾಬಲ್‌ಸ್ಟೋನ್‌ಗಳನ್ನು ಅಳವಡಿಲಾಗುತ್ತಿದೆ ಎಂದು ತಿಳಿಸಿದರು.

ಈ ಹಿಂದೆ ಭಕ್ಷಿ ಕೆರೆ ಏರಿ ಒಡೆದು ಹೋಗಿ ಸೀರಳ್ಳದಲ್ಲಿ ಪ್ರವಾಹ ಉಂಟಾಗಿತ್ತು. ಸೀರಳ್ಳದ ಭಾಗದ ವಾರ್ಡುಗಳಲ್ಲಿ ನೆರೆವುಂಟಾಗಿತ್ತು. ಇದೀಗ ಸೀರಳ್ಳಕ್ಕೆ ತಡೆಗೋಡೆ ನಿರ್ಮಾಣ ಕಾಮಗಾರಿಯನ್ನು ಕೈಗೆತ್ತಿಕೊಂಡಿದ್ದೇವೆ. ಯು.ಐ.ಡಿ.ಎಫ್ ಯೋಜನೆಯಡಿ 1292.80 ಲಕ್ಷ ರು. ವೆಚ್ಚದಲ್ಲಿ ಈ ಕಾಮಗಾರಿ ಆರಂಭವಾಗಿದೆ ಎಂದರು.

ಸೀರಳ್ಳದ ಒಟ್ಟು 875 ಮೀಟರ್ ಉದ್ದದ ತಡೆಗೋಡಿ ನಿರ್ಮಾಣವಾಗಬೇಕಾಗಿದೆ. ಆದರೆ ಸಧ್ಯಕ್ಕೆ 200 ಮೀಟರ್ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದೆ. 450 ಮೀಟರ್ ತಡೆಗೋಡೆ ಕಾಮಗಾರಿ ಪ್ರಗತಿಯಲ್ಲಿದೆ. ಉಳಿದ ಕಾಮಗಾರಿಯನ್ನು ಹಂತ ಹಂತವಾಗಿ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.

ರಾಮನಗರದ ಸಮಗ್ರ ಅಭಿವೃದ್ಧಿಗೆ ಭರವಸೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ಮಾಜಿ ಸಂಸದ ಡಿ.ಕೆ.ಸುರೇಶ್, ಹಾಲಿ ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಅವರ ಸಹಕಾರದಲ್ಲಿ ನಗರಸಭಾವ್ಯಾಪ್ತಿಯಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಅಭಿವೃದ್ದಿ ಕಾಮಗಾರಿಗಳು ನಡೆಯುತ್ತಿವೆ ಎಂದು ಕೆ.ಶೇಷಾದ್ರಿ ಹೇಳಿದರು.

ನಗರಸಭೆ ಉಪಾಧ್ಯಕ್ಷ ಆಯಿಷಾ ಬಾನು, ಸದಸ್ಯರಾದ ಸೋಮಶೇಖರ್, ಪಾರ್ವತಮ್ಮ, ಮುತ್ತುರಾಜ್, ಆಯುಕ್ತ ಡಾ.ಜಯಣ್ಣ, ಅಧಿಕಾರಿಗಳು, ಮುಖಂಡರಾದ ಗೂಳಿ ಗೌಡ, ಮಾವಿನ ಸಸಿ ವೆಂಕಟೇಶ್ ಮತ್ತಿತರರು ಹಾಜರಿದ್ದರು.

27ಕೆಆರ್ ಎಂಎನ್ 3.ಜೆಪಿಜಿ

ರಾಮನಗರ ನಗರಸಭೆ ವ್ಯಾಪ್ತಿಯ ವಾರ್ಡುಗಳ ಕಾಮಗಾರಿಯನ್ನು ಅಧ್ಯಕ್ಷ ಕೆ.ಶೇಷಾದ್ರಿ, ಸದಸ್ಯರು ಹಾಗೂ ಅಧಿಕಾರಿಗಳು ವೀಕ್ಷಣೆ ಮಾಡಿದರು.