- 200 ಕೋಟಿ ರು ವೆಚ್ಚದಲ್ಲಿ ಕೃಷಿ ಭಾಗ್ಯ ಯೋಜನೆಗೆ ಸಂಪುಟ ಅನುಮೋದನೆ
- ಎನ್ .ಚಲುವರಾಯಸ್ವಾಮಿಕನ್ನಡಪ್ರಭ ವಾರ್ತೆ ನಾಗಮಂಗಲರಾಜ್ಯದಲ್ಲಿ 100 ಹೈಟೆಕ್ ಹಾರ್ವೆಸ್ಟ್ ಹಬ್ ಸ್ಥಾಪನೆ ಸೇರಿದಂತೆ 200 ಕೋಟಿ ರು. ವೆಚ್ಚದಲ್ಲಿ ಕೃಷಿ ಭಾಗ್ಯ ಯೋಜನೆಗೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಶೀಘ್ರದಲ್ಲಿಯೇ ಅನುಷ್ಠಾನಗೊಳಿಸಲಾಗುವುದು ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ತಾಲೂಕಿನ ದೇವಲಾಪುರದ ಕರ್ನಾಟಕ ಪಬ್ಲಿಕ್ ಶಾಲಾ ಆವರಣದಲ್ಲಿ ಜಿಲ್ಲಾಡಳಿತ, ಕೃಷಿ ಮತ್ತು ಜಲಾನಯನ ಇಲಾಖೆ ಆಯೋಜಿಸಿದ್ದ ಜಲಾನಯನ ಮೇಳ ಹಾಗೂ ಪ್ರಧಾನ ಮಂತ್ರಿ ಸಿಂಚಾಯಿ ಯೋಜನೆಯಡಿ ಫಲಾನುಭವಿಗಳಿಗೆ ಪರಿಕರ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.ರಾಜ್ಯದ 223 ತಾಲೂಕುಗಳು ಬರಪೀಡಿತ ಎಂದು ಘೋಷಣೆಯಾಗಿದೆ. 17 ಸಾವಿರ ಕೋಟಿ ರು. ಪರಿಹಾರ ಕೋರಿದ್ದೇವೆ. ಆದರೆ, ಕೇಂದ್ರ ಸರ್ಕಾರದಿಂದ ಈವರೆಗೂ ಯಾವುದೇ ನೆರವು ಮತ್ತು ಪೂರಕವಾದ ಸ್ಪಂದನೆ ದೊರೆತಿಲ್ಲ. ರೈತರ ಪರ ರಾಜ್ಯ ಸರ್ಕಾರ 1500 ಕೋಟಿ ರು. ವಿಮೆ ಹಣ ಮಾಡಿದ್ದು, ಈಗಾಗಲೇ ರೈತರಿಗೆ 230 ಕೋಟಿ ರು. ವಿಮೆ ಪಾವತಿಯಾಗಿದೆ ಎಂದರು.
ರಾಜ್ಯ ಸರ್ಕಾರ ಜನಪರ ಯೋಜನೆ ಅನುಷ್ಠಾನ ಮಾಡುತ್ತಿದೆ. ಅಧಿಕಾರಕ್ಕೆ ಬಂದ ಕೂಡಲೇ ನಾಲ್ಕು ಪ್ರಮುಖ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ನುಡಿದಂತೆ ನಡೆದಿದ್ದೇವೆ ಎಂದರು.ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳೇ ಪ್ರಭುಗಳು. ಚುನಾವಣೆಯಲ್ಲಿ ಯೋಗ್ಯರನ್ನು ಆಯ್ಕೆ ಮಾಡುವ ಅಧಿಕಾರ ಜನರ ಕೈಯಲ್ಲಿರುತ್ತದೆ. ಅದನ್ನು ಸರಿಯಾಗಿ ಬಳಸಿಕೊಳ್ಳಬೇಕು. ಅವಕಾಶ ಸಿಕ್ಕಾಗ ಜನರಿಗೆ ಸಹಾಯ ಮಾಡಬೇಕು. ನೀವು ನೀಡಿರುವ ಜವಾಬ್ದಾರಿಯನ್ನು ಅತ್ಯಂತ ಕಾಳಜಿವಹಿಸಿ ಮಾಡುತ್ತಿದ್ದೇನೆ ಎಂದರು.
ರಾಜ್ಯಾದ್ಯಂತ ಸಂಪೂರ್ಣ ಮಳೆಯಾಶ್ರಿತ ಪ್ರದೇಶದಲ್ಲಿ ಜಲಾನಯನ ಇಲಾಖೆ ಮೂಲಕ ರೈತರ ಆರ್ಥಿಕ ಅಭಿವೃದ್ಧಿಗೆ ಪೂರಕವಾಗಿ ಹಲವು ಸೌಲಭ್ಯ ಕಲ್ಪಿಸಲಾಗುತ್ತಿದೆ. ತಾಲೂಕಿನ ದೇವಲಾಪುರ ಮತ್ತು ದೇವರಮಲ್ಲನಾಯ್ಕನಹಳ್ಳಿ ಗ್ರಾಪಂ ವ್ಯಾಪ್ತಿಯ 17 ಹಳ್ಳಿಗಳ 1689 ರೈತರಿಗೆ ಶೇ.80ರಷ್ಟು ಸಬ್ಸಿಡಿಯೊಂದಿಗೆ 2 ಕೋಟಿಗೂ ಅಧಿಕ ವೆಚ್ಚದಲ್ಲಿ ಜೀವನೋಪಾಯ ಸಾಧನಾ ಸಲಕರಣೆ ನೀಡಲಾಗುತ್ತಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಈ ಯೋಜನೆ ಜಾರಿಯಾಗಲಿದೆ ಎಂದರು.ರಾಜ್ಯದಲ್ಲಿ ಕೃಷಿ, ಶಿಕ್ಷಣ, ಪಶು ಇಲಾಖೆ ಸೇರಿದಂತೆ ಬಹುತೇಕ ಎಲ್ಲ ಇಲಾಖೆಗಳಲ್ಲಿಯೂ ಸಾವಿರಾರು ಹುದ್ದೆಗಳು ಖಾಲಿಯಿದ್ದು, 13 ಸಾವಿರ ಶಿಕ್ಷಕರ ನೇಮಕಾತಿ ಮಾಡಲಾಗುವುದು. ಅಂತೆಯೇ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೂ ಅಗತ್ಯ ಕ್ರಮ ವಹಿಸಲಾಗುವುದು. ಹೇಮಾವತಿ ಜಲಾಶಯದಿಂದ ಜಿಲ್ಲೆಗೆ ನೀರು ಹರಿಸುವ ನಾಲೆಗಳ ದುರಸ್ಥಿಗೆ ಕ್ರಮ ವಹಿಸಲಾಗುತ್ತಿದೆ ಎಂದರು.
1689 ರೈತರಿಗೆ 2 ಕೋಟಿಗೂ ಅಧಿಕ ಮೌಲ್ಯದ ಸಲಕರಣೆ:ಜಲಾನಯನ ಕಾರ್ಯಕ್ರಮದಡಿ ರೈತರ ಜೀವನೋಪಾಯ ಚಟುವಟಿಕೆ, ಉತ್ಪಾದನಾ ಪದ್ಧತಿ ಹಾಗೂ ಖುಷ್ಕಿ ತೋಟಗಾರಿಕೆ ಘಟಕದಡಿ ಹಿಟ್ಟಿನ ಗಿರಣಿ, ಎಣ್ಣೆ ಗಾಣ, ಹಪ್ಪಳ ತಯಾರಿಸುವ ಯಂತ್ರ, ನಾಟಿಕೋಳಿ, ಫೈಬರ್ ದೋಟಿ, ಲ್ಯಾಡರ್ ಸೇರಿದಂತೆ ವಿವಿಧ ಬಗೆಯ ಹಣ್ಣಿನ ಸಸಿಗಳನ್ನು ವಿತರಿಸಲಾಯಿತು.
ಎತ್ತಿನಗಾಡಿ ಮೆರವಣಿಗೆ:ಸಮಾರಂಭಕ್ಕೆ ಆಗಮಿಸಿದ ನಿರ್ಮಲಾನಂದನಾಥ ಶ್ರೀಗಳು ಮತ್ತು ಸಚಿವ ಎನ್.ಚಲುವರಾಯಸ್ವಾಮಿ ಅವರನ್ನು ದೇವಲಾಪುರ ಮುಖ್ಯರಸ್ತೆಯಿಂದ ವೇದಿಕೆವರೆಗೆ ಪೂರ್ಣಕುಂಭ ಸ್ವಾಗತ ಮತ್ತು ವಿವಿಧ ಜಾನಪದ ಕಲಾತಂಡಗಳೊಂದಿಗೆ ಎತ್ತಿನ ಗಾಡಿಯಲ್ಲಿ ಮೆರವಣಿಗೆ ಮೂಲಕ ಕರೆತರಲಾಯಿತು.
ಸಮಾರಂಭದಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಜಲಾನಯನ ಇಲಾಖೆಯ ಆಯುಕ್ತ ಗಿರಿಶ್, ನಿರ್ದೇಶಕ ಶ್ರೀನಿವಾಸ್, ಜಂಟಿ ಕೃಷಿ ನಿರ್ದೇಶಕ ಅಶೋಕ್, ಉಪ ವಿಭಾಗದ ಉಪ ಕೃಷಿ ನಿರ್ದೇಶಕರಾದ ಮಾಲತಿ, ಮಮತ, ಸಹಾಯಕ ಕೃಷಿ ನಿರ್ದೇಶಕಿ ಪ್ರತಿಭಾ, ರೈತ ಉತ್ಪಾದಕ ಕಂಪನಿ ಅಧ್ಯಕ್ಷ ಎನ್.ಜೆ.ರಾಜೇಶ್ ಸೇರಿದಂತೆ ಅನೇಕ ಮುಖಂಡರು ಮತ್ತು ರೈತರು ಪಾಲ್ಗೊಂಡಿದ್ದರು.11ಕೆಎಂಎನ್ ಡಿ25,26ನಾಗಮಂಗಲ ತಾಲೂಕಿನ ದೇವಲಾಪುರದಲ್ಲಿ ನಡೆದ ಸಮಾರಂಭದಲ್ಲಿ ಆದಿಚುಂಚನಗರಿ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥಸ್ವಾಮೀಜಿ ಮತ್ತು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ರೈತರಿಗೆ ಪರಿಕರಗಳನ್ನು ವಿತರಿಸಿದರು.
ಜಲಾನಯನ ಮೇಳ ಹಾಗೂ ಫಲಾನುಭವಿಗಳಿಗೆ ಪರಿಕರ ವಿತರಣಾ ಸಮಾರಂಭಕ್ಕೂ ಶ್ರೀ ನಿರ್ಮಲಾನಂದನಾಥಸ್ವಾಮೀಜಿ ಮತ್ತು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅವರನ್ನು ಎತ್ತಿನ ಗಾಡಿ ಮೆರವಣಿಗೆಯಲ್ಲಿ ಕರೆತರಲಾಯಿತು.