ಕನ್ನಡಪ್ರಭ ವಾರ್ತೆ ಹಾಸನ
ನಗರದ ತಾಲೂಕು ಪಂಚಾಯ್ತಿಯಲ್ಲಿ ಸಭೆ ನಡೆಸಿದ ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಬೌರಿಂಗ್ ಆಸ್ಪತ್ರೆಯಲ್ಲಿ ಸಂಭವಿಸಿದ ಈ ದುರಂತದ ದೃಶ್ಯ ನೋಡಿದಾಗ ನಿಜಕ್ಕೂ ಹೊಟ್ಟೆ ಉರಿದು ಹೋಗುತ್ತದೆ. ಬದುಕಿಗಾಗಿ ಬೆಳಿಗ್ಗೆ ಎದ್ದು ದುಡಿಯಲು ಹೋಗಿದ್ದ ಬಡ ಕುಟುಂಬಗಳ ಸದಸ್ಯರು ಹೀಗೆ ಅಕಾಲಿಕವಾಗಿ ಸಾವನ್ನಪ್ಪಿರುವುದು ಅತ್ಯಂತ ನೋವು ತಂದಿದೆ. ಅವರು ಯಾವ ದೊಡ್ಡ ಅಪರಾಧವೂ ಮಾಡಿಲ್ಲ. ಕೇವಲ ಹೊಟ್ಟೆಪಾಡಿಗಾಗಿ ಗೋಡೆ ಪಕ್ಕದ ಬೀದಿಯಲ್ಲಿ ಕುಳಿತು ಸಣ್ಣಪುಟ್ಟ ವ್ಯಾಪಾರ ಮಾಡಿಕೊಂಡು ತಮ್ಮ ಕುಟುಂಬವನ್ನು ನಡೆಸುತ್ತಿದ್ದರು. ದಿನವೂ ದುಡಿದು ಬಂದ ಹಣದಿಂದಲೇ ರಾತ್ರಿ ಊಟ ಮಾಡುತ್ತಿದ್ದವರು ಇಂದು ಇಲ್ಲವಾಗಿದ್ದಾರೆ. ಈಗ ಅವರ ಕುಟುಂಬಗಳ ಬದುಕೇ ಸಂಪೂರ್ಣ ಕುಸಿದು ಹೋಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಸರ್ಕಾರ ಘೋಷಿಸಿರುವ ಪರಿಹಾರ ಯಾವುದೇ ರೀತಿಯಲ್ಲೂ ಸಾಕಾಗುವುದಿಲ್ಲ. ಒಬ್ಬ ಕುಟುಂಬದ ಆಧಾರಸ್ತಂಭವೇ ಇಲ್ಲವಾಗಿರುವ ಸಂದರ್ಭದಲ್ಲಿ ಕೇವಲ ಹೆಸರುಮಾತ್ರದ ಪರಿಹಾರದಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಕನಿಷ್ಠ ರಾಜ್ಯ ಸರ್ಕಾರವು ತಲಾ ೧೦ ಲಕ್ಷ ರು. ಪರಿಹಾರ ನೀಡಬೇಕು. ಜೊತೆಗೆ ಕೇಂದ್ರ ಸರ್ಕಾರವು ಪ್ರಧಾನಮಂತ್ರಿಗಳ ಪರಿಹಾರ ನಿಧಿಯಿಂದ ತಲಾ ₹ ೫ ಲಕ್ಷ ನೀಡಬೇಕು. ಒಟ್ಟಾರೆ ಕನಿಷ್ಠ ೧೫ ಲಕ್ಷ ರು. ಪರಿಹಾರ ನೀಡಿದರೆ ಆ ಕುಟುಂಬಗಳಿಗೆ ಮುಂದಿನ ಜೀವನಕ್ಕೆ ಸ್ವಲ್ಪ ಧೈರ್ಯ ಸಿಗಬಹುದು ಎಂದು ಹೇಳಿದರು.ಮೃತರಾದವರು ಬಹುತೇಕ ಬಡವರು, ದಿನಗೂಲಿ ಕಾರ್ಮಿಕರು ಹಾಗೂ ರಸ್ತೆಬದಿ ವ್ಯಾಪಾರ ನಡೆಸುತ್ತಿದ್ದ ಸಾಮಾನ್ಯ ಜನರಾಗಿದ್ದು, ಅವರ ಕುಟುಂಬಗಳು ದಿನನಿತ್ಯದ ಆದಾಯದ ಮೇಲೆ ಸಂಪೂರ್ಣ ಅವಲಂಬಿತವಾಗಿದ್ದವು. ಇಂತಹ ಸಂದರ್ಭದಲ್ಲಿ ಆ ಕುಟುಂಬಗಳಿಗೆ ಕೇವಲ ತಾತ್ಕಾಲಿಕ ನೆರವಷ್ಟೇ ಅಲ್ಲ, ದೀರ್ಘಕಾಲಿಕ ಭದ್ರತೆಯೂ ಅಗತ್ಯವಾಗಿದೆ ಎಂದು ರೇವಣ್ಣ ಅಭಿಪ್ರಾಯಪಟ್ಟರು.ಒಬ್ಬ ವ್ಯಕ್ತಿ ಸಾವನ್ನಪ್ಪಿದರೆ ಅದು ಕೇವಲ ಒಂದು ಜೀವ ಕಳೆದುಹೋದಂತೆ ಅಲ್ಲ. ಅದರ ಹಿಂದೆ ಸಂಪೂರ್ಣ ಕುಟುಂಬದ ಭವಿಷ್ಯ ಅಡಗಿರುತ್ತದೆ. ಮಕ್ಕಳ ಶಿಕ್ಷಣ, ಮನೆಯ ಖರ್ಚು, ವೃದ್ಧ ಪೋಷಕರ ಆರೈಕೆ ಎಲ್ಲವೂ ಆ ವ್ಯಕ್ತಿಯ ಆದಾಯದ ಮೇಲೆ ನಿಂತಿರುತ್ತದೆ. ಈಗ ಆ ಕುಟುಂಬಗಳು ಅನಾಥರಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ತಕ್ಷಣ ಸ್ಪಂದಿಸಿ ಆರ್ಥಿಕ ನೆರವಿನ ಜೊತೆಗೆ ಪುನರ್ವಸತಿ ಕ್ರಮಗಳನ್ನೂ ಕೈಗೊಳ್ಳಬೇಕು ಎಂದು ಹೇಳಿದರು. ಬೌರಿಂಗ್ ಆಸ್ಪತ್ರೆಯಂತಹ ಪ್ರಮುಖ ಸರ್ಕಾರಿ ಆಸ್ಪತ್ರೆಯಲ್ಲಿ ಈ ರೀತಿಯ ದುರಂತ ಸಂಭವಿಸಿರುವುದು ಆಡಳಿತ ವೈಫಲ್ಯಕ್ಕೆ ಸ್ಪಷ್ಟ ಉದಾಹರಣೆ ಎಂದು ಅವರು ಟೀಕಿಸಿದರು. “ಜನರ ಸುರಕ್ಷತೆ ಕಾಪಾಡಬೇಕಾದ ಸ್ಥಳದಲ್ಲೇ ಜೀವಹಾನಿ ಸಂಭವಿಸಿರುವುದು ಅತ್ಯಂತ ಗಂಭೀರ ವಿಷಯ. ಆಸ್ಪತ್ರೆಗಳ ಕಟ್ಟಡಗಳ ಸುರಕ್ಷತೆ, ಗೋಡೆಗಳ ಸ್ಥಿತಿ, ಮೂಲಸೌಕರ್ಯಗಳ ನಿರ್ವಹಣೆ ಕುರಿತು ಸರ್ಕಾರ ತಕ್ಷಣ ರಾಜ್ಯವ್ಯಾಪಿ ಪರಿಶೀಲನೆ ನಡೆಸಬೇಕು. ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.ಇದೇ ವೇಳೆ ಶಿಕ್ಷಣ ಕ್ಷೇತ್ರದ ಸಮಸ್ಯೆಗಳ ಕುರಿತೂ ಮಾತನಾಡಿದ ರೇವಣ್ಣ, ಗ್ರಾಮೀಣ ಭಾಗದ ಶಾಲೆಗಳ ದುಸ್ಥಿತಿಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ರಾಜ್ಯದ ಅನೇಕ ಪ್ರಾಥಮಿಕ, ಮಾಧ್ಯಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳೇ ಇಲ್ಲದ ಪರಿಸ್ಥಿತಿ ಇದೆ. ಶೌಚಾಲಯಗಳ ಕೊರತೆ, ಕುಡಿಯುವ ನೀರಿನ ಸಮಸ್ಯೆ, ಹಾಳಾದ ಕಟ್ಟಡಗಳು, ಶಿಕ್ಷಕರ ಕೊರತೆ, ಇವೆಲ್ಲವೂ ಗ್ರಾಮೀಣ ಮಕ್ಕಳ ಶಿಕ್ಷಣದ ಮೇಲೆ ನೇರ ಪರಿಣಾಮ ಬೀರುತ್ತಿವೆ ಎಂದು ಹೇಳಿದರು. ಶಿಕ್ಷಣ ಸಚಿವರಿಗೆ ನಾನು ಸ್ಪಷ್ಟವಾಗಿ ಒತ್ತಾಯ ಮಾಡುತ್ತೇನೆ. ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡಬೇಕು. ವಿಶೇಷವಾಗಿ ಹಳ್ಳಿಗಳ ಶಾಲೆಗಳಲ್ಲಿ ಶಿಕ್ಷಕರ ಕೊರತೆ ತೀವ್ರವಾಗಿದೆ. ಮಕ್ಕಳು ಸರಿಯಾದ ಬೋಧನೆ ಇಲ್ಲದೆ ಹಿಂದುಳಿಯುತ್ತಿದ್ದಾರೆ. ನಗರ ಮಕ್ಕಳಿಗೆ ಸಿಗುವ ಗುಣಮಟ್ಟದ ಶಿಕ್ಷಣ ಹಳ್ಳಿ ಮಕ್ಕಳಿಗೂ ಸಿಗಬೇಕು. ಶಿಕ್ಷಣದಲ್ಲಿ ಅಸಮಾನತೆ ಮುಂದುವರಿಯಬಾರದು ಎಂದು ಹೇಳಿದರು. *ಬೌರಿಂಗ್ ಆಸ್ಪತ್ರೆ ದುರಂತದಂತಹ ಘಟನೆಗಳು ಮರುಕಳಿಸದಂತೆ ಸರ್ಕಾರ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಮೃತರ ಕುಟುಂಬಗಳಿಗೆ ತಕ್ಷಣ ನ್ಯಾಯ ಸಿಗಬೇಕು. ಬಡವರ ಬದುಕಿನ ಬೆಲೆ ಸರ್ಕಾರ ಅರಿತು ಮಾನವೀಯತೆ ತೋರಬೇಕು ಎಂದು ಮಾಜಿ ಸಚಿವ ಎಚ್. ಡಿ. ರೇವಣ್ಣ ಒತ್ತಾಯಿಸಿದರು.*ಬಾಕ್ಸ್: ಶಾಲೆ ಮುಚ್ಚುವುದು ಯಾವುದೇ ಸಮಸ್ಯೆಗೆ ಪರಿಹಾರವಲ್ಲ
ಇತ್ತೀಚೆಗೆ ಶಾಲೆಗಳನ್ನು ಮುಚ್ಚುವ ಕುರಿತು ಕೇಳಿಬರುತ್ತಿರುವ ಚರ್ಚೆಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, “ಶಾಲೆ ಮುಚ್ಚುವುದು ಯಾವುದೇ ಸಮಸ್ಯೆಗೆ ಪರಿಹಾರವಲ್ಲ. ಗ್ರಾಮೀಣ ಪ್ರದೇಶದಲ್ಲಿ ಶಾಲೆ ಮುಚ್ಚಿದರೆ ಮಕ್ಕಳ ಭವಿಷ್ಯವೇ ಮುಚ್ಚಿದಂತಾಗುತ್ತದೆ. ದೂರದ ಶಾಲೆಗೆ ಹೋಗಲು ಸಾಧ್ಯವಾಗದೇ ಅನೇಕ ಮಕ್ಕಳು ಓದನ್ನು ನಿಲ್ಲಿಸುವ ಪರಿಸ್ಥಿತಿ ಉಂಟಾಗುತ್ತದೆ. ಆದ್ದರಿಂದ ಶಾಲೆ ಮುಚ್ಚುವ ಬದಲು ಅವುಗಳನ್ನು ಬಲಪಡಿಸಬೇಕು ಎಂದು ಅಭಿಪ್ರಾಯಪಟ್ಟರು. ಶಾಲೆಗಳಲ್ಲಿ ಉತ್ತಮ ಕಟ್ಟಡ, ಶೌಚಾಲಯ, ಕುಡಿಯುವ ನೀರು, ಆಟದ ಮೈದಾನ, ಶಿಕ್ಷಕರ ನೇಮಕ ಇವೆಲ್ಲವೂ ಮಕ್ಕಳ ಮೂಲಭೂತ ಹಕ್ಕುಗಳು. ಸರ್ಕಾರ ಇವುಗಳನ್ನು ಒದಗಿಸುವ ಜವಾಬ್ದಾರಿ ಹೊಂದಿದೆ. ಹಳ್ಳಿ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಕ್ಕಾಗ ಮಾತ್ರ ರಾಜ್ಯದ ಭವಿಷ್ಯ ಬಲವಾಗುತ್ತದೆ ಎಂದು ಶಾಸಕ ರೇವಣ್ಣ ಹೇಳಿದರು.