ಶೀಘ್ರದಲ್ಲೇ ‌ಹಲವು ಅಭಿವೃದ್ಧಿ ಕಾಮಗಾರಿಗಳು ಪೂರ್ಣ: ಕೆ.ಎಂ.ಉದಯ್

KannadaprabhaNewsNetwork |  
Published : Jul 14, 2026, 01:45 AM IST
13ಕೆಎಂಎನ್ ಡಿ24 | Kannada Prabha

ಸಾರಾಂಶ

ಮದ್ದೂರು ತಾಲೂಕಿನಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳು ತ್ವರಿತಗತಿಯಲ್ಲಿ ನಡೆಯುತ್ತಿವೆ. ಮೂರು ತಿಂಗಳಲ್ಲಿ ಭಾರತಿ ನಗರದಲ್ಲಿ ನೂತನವಾಗಿ ನಿರ್ಮಿಸುತ್ತಿರುವ‌ ಕಾವೇರಿ ನೀರಾವರಿ ನಿಗಮದ ಸಬ್ ಡಿವಿಜನ್ ಕಾಂಗ್ರೆಸ್ ಕಚೇರಿ, ತಾಪಂ ನೂತನ ಕಟ್ಟಡ ನಿರ್ಮಾಣಕ್ಕೆ ‌ಶಿಲಾನ್ಯಾಸ, ವಿದ್ಯಾರ್ಥಿಗಳ ವಸತಿ, ನಿಲಯ ಸೂಳೆಕೆರೆ ಅಭಿವೃದ್ಧಿ, ಬನ್ನಳ್ಳಿ ಏತ ನೀರಾವರಿ ಯೋಜನೆ ಸೇರಿದಂತೆ ಹಲವು ಕಾಮಗಾರಿಗಳು ಪೂರ್ಣಗೊಳ್ಳಲಿವೆ.

ಕನ್ನಡಪ್ರಭ ವಾರ್ತೆ ಮದ್ದೂರು

ಶೀಘ್ರದಲ್ಲೇ ‌ತಾಲೂಕಿನಾದ್ಯಂತ ಹಲವು ಅಭಿವೃದ್ಧಿ ಕಾಮಗಾರಿಗಳು ಪೂರ್ಣಗೊಳ್ಳಲಿವೆ. ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಲೋಕಾರ್ಪಣೆಗೊಳಿಸಿ ಸಾರ್ವಜನಿಕ ಸೇವೆಗೆ ಸಮರ್ಪಿಸಲಿದ್ದಾರೆ ಎಂದು ಶಾಸಕ‌ ಕೆ.ಎಂ.ಉದಯ್ ತಿಳಿಸಿದರು.

ತಾಲೂಕಿನ ಬೆಸಗರಹಳ್ಳಿ ಜಿಪಂ ವ್ಯಾಪ್ತಿಯ ನಿಲುವಾಗಿಲು ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ 7 ಲಕ್ಷ ರು. ವೆಚ್ಚದ ಬಸ್ ತಂಗುದಾಣ ಹಾಗೂ ಮಾರಸಿಂಗನಹಳ್ಳಿಯಲ್ಲಿ 50 ಲಕ್ಷ ರು.ಗಳ ನೂತನ ಎಂಪಿಸಿಎಸ್ ಹಾಗೂ ಬಿಸಿಎಂ ಕಟ್ಟಡ ನಿರ್ಮಾಣ ಮತ್ತು ಶಿಥಿಲಗೊಂಡಿದ್ದ ಪುರಾತನ ತಿರುಮಲ ದೇವಾಲಯದ ಜೀರ್ಣೊದ್ಧಾರಕ್ಕೆ ಬಿಡುಗಡೆಗೊಂಡಿರುವ 30 ಲಕ್ಷ ರು.ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.

ತಾಲೂಕಿನಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳು ತ್ವರಿತಗತಿಯಲ್ಲಿ ನಡೆಯುತ್ತಿವೆ. ಮೂರು ತಿಂಗಳಲ್ಲಿ ಭಾರತಿ ನಗರದಲ್ಲಿ ನೂತನವಾಗಿ ನಿರ್ಮಿಸುತ್ತಿರುವ‌ ಕಾವೇರಿ ನೀರಾವರಿ ನಿಗಮದ ಸಬ್ ಡಿವಿಜನ್ ಕಾಂಗ್ರೆಸ್ ಕಚೇರಿ, ತಾಪಂ ನೂತನ ಕಟ್ಟಡ ನಿರ್ಮಾಣಕ್ಕೆ ‌ಶಿಲಾನ್ಯಾಸ, ವಿದ್ಯಾರ್ಥಿಗಳ ವಸತಿ, ನಿಲಯ ಸೂಳೆಕೆರೆ ಅಭಿವೃದ್ಧಿ, ಬನ್ನಳ್ಳಿ ಏತ ನೀರಾವರಿ ಯೋಜನೆ ಸೇರಿದಂತೆ ಹಲವು ಕಾಮಗಾರಿಗಳು ಪೂರ್ಣಗೊಳ್ಳಲಿವೆ. ಸಿಎಂ ಡಿ.ಕೆ.ಶಿವಕುಮಾರ್ ಅವರು ಒಂದೇ ವೇದಿಕೆಯಲ್ಲಿ ಹಲವು ಕಾಮಗಾರಿ ಲೋಕಾರ್ಪಣೆಗೊಳಿಸಲಿದ್ದಾರೆ ಎಂದರು.

ಡಿ.ಕೆ.ಶಿವಕುಮಾರ್ ಅವರು ಸಿಎಂ ಆಗಿ ಸಮರ್ಥವಾಗಿ ಅಧಿಕಾರ ನಡೆಸುತ್ತಿದ್ದಾರೆ. ಮುಂದಿನ ಒಂದು ವಾರದೊಳಗೆ ಸಚಿವ ಸಂಪುಟ ವಿಸ್ತರಣೆ ಮಾಡಿ ಎಲ್ಲಾ ಖಾತೆಗಳನ್ನು ಹಂಚಿಕೆ ಮಾಡಲಿದ್ದಾರೆ. ಕಳೆದ ಹಲವು ದಿನಗಳಿಂದ ಮಳೆ ಇಲ್ಲದೆ ರೈತರು ಸಂಕಷ್ಟ ಎದುರಿಸುವಂತಾಗಿದೆ. ಹೀಗಾಗಿ ಅಧಿಕಾರಿಗಳು ಮತ್ತು ಸ್ಥಳೀಯ ಶಾಸಕರೊಟ್ಟಿಗೆ ಚರ್ಚಿಸಿದ‌ ಬಳಿಕ ಸರ್ಕಾರ ಜಿಲ್ಲೆಯನ್ನು ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಲಿದ್ದಾರೆ ಎಂದರು.

ವಿಸಿ ನಾಲೆಗಳಲ್ಲಿ ನೀರಿಲ್ಲದೆ ಮತ್ತು ಸಕಾಲದಲ್ಲಿ ಮಳೆ ಬಾರದ ಹಿನ್ನೆಲೆಯಲ್ಲಿ ರೈತರ ಜಮೀನುಗಳಲ್ಲಿ ಬೆಳೆದು ನಿಂತಿರುವ ಬೆಳೆಗಳು ಒಣಗಿ ಅಪಾರ ಪ್ರಮಾಣದ ನಷ್ಟ ಉಂಟಾಗಿರುವ ಬಗ್ಗೆ ಕಂದಾಯ ಇಲಾಖೆ ಅಧಿಕಾರಿಗಳು ಸಮೀಕ್ಷೆ ಕೈಗೊಳ್ಳಲು ಸರ್ಕಾರ ಸೂಚನೆ ನೀಡಲಿದೆ. ಬೆಳೆ ನಷ್ಟ ವರದಿ ಬಂದ ಬಳಿಕ ರೈತರಿಗೆ ಸರ್ಕಾರದಿಂದ ಸಿಗುವ ಪರಿಹಾರ ಕೊಡಿಸಲು ಕ್ರಮ ವಹಿಸುವುದಾಗಿ ಹೇಳಿದರು.

ಕೆಮ್ಮಣ್ಣು ನಾಲೆ ಕಾಮಗಾರಿ ಪೂರ್ಣಗೊಂಡಿದೆ. ಕೆಲ ತುಂಡು ಕಾಮಗಾರಿಗಳು ಉಳಿಕೆ ಇದ್ದು, ಇದರಿಂದ ನಾಲೆಗಳಲ್ಲಿ ನೀರು ಹರಿಸಲು ವಿಳಂಬವಾಗಿದೆ. ಮುಂದಿನ ದಿನಗಳಲ್ಲಿ ನೀರು ಹರಿಸಲು ಕ್ರಮ ವಹಿಸಲಾಗುವುದು. ಬೈರನ್ ನಾಲೆ ಮತ್ತು ವೈದ್ಯನಾಥಪುರ ನಾಲೆಗಳ ಕಾಮಗಾರಿಗೂ ಚಾಲನೆ ದೊರೆತಿದೆ. ಹೀಗಾಗಿ ನೀರು ಹರಿಸಲು ಸಾಧ್ಯವಿಲ್ಲ ಎಂದರು.

ಗಾನ ಕೋಗಿಲೆ ಎಸ್.ಜಾನಕಿ ನಿಧನ ರಾಜ್ಯ ಹಾಗೂ ದೇಶಕ್ಕೆ ತುಂಬಲಾರದ ನಷ್ಟ. ಕನ್ನಡ ಸೇರಿದಂತೆ ವಿವಿಧ ಭಾಷೆಗಳಲ್ಲಿ 45ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡುವ ಮೂಲಕ ‌‌ದಾಖಲೆ ಬರೆದಿದ್ದು, ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿರುವ ಜಾನಕಮ್ಮನವರು ಹಲವು ಯುವಕರಿಗೆ ಮಾರ್ಗದರ್ಶಕರಾಗಿದ್ದಾರೆ ಎಂದು‌‌‌ ಬಣ್ಣಿಸಿದರು.

ಈ ವೇಳೆ ಶಾಸಕ ದಿನೇಶ್ ಗೂಳಿಗೌಡ, ಕದಲೂರು ಉದಯ್ ಚಾರಿಟೇಬಲ್ ಟ್ರಸ್ಟ್ ನಿರ್ದೇಶಕಿ ವಿನುತುಉದಯ್, ಮನ್ಮುಲ್ ನಿರ್ದೇಶಕ ಎಂ.ಕೆ.ಹರೀಶ್ ಬಾಬು, ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ.ಸಂದರ್ಶ, ಎಂಪಿಸಿಎಸ್ ಅಧ್ಯಕ್ಷ ಪುಟ್ಟಸ್ವಾಮಿ, ಉಪಾಧ್ಯಕ್ಷೆ ಶೋಭಾ ಗೂಳಿಗೌಡ, ನಿರ್ದೇಶಕರಾದ ಗೂಳಿಗೌಡ, ಹರೀಶ್ ಬಾಬು, ಅಪ್ಪಾಜಿಗೌಡ, ಅಪ್ಪಾಜಿ, ದೇವಿರಮ್ಮ, ಸವಿತಾ, ಜಯಶೀಲ, ಕೆ. ಟಿ.ಲಕ್ಷ್ಮಿ ಶ್ರೀಕಂಠ, ಆನಂದಮ್ಮ, ಸ್ಥಳೀಯ ಮುಖಂಡರಾದ ರಾಮಚಂದ್ರ, ಕೃಷ್ಣೆಗೌಡ, ಗೂಳೇಶ್, ಉಮೇಶ್, ರಮೇಶ್, ಕಿರಣ್, ದೇವಸ್ಥಾನದ ಪ್ರಧಾನ ಅರ್ಚಕರಾದ ಎಂ.ಆರ್ ಚಕ್ರಪಾಣಿ. ಶ್ರೀನಿವಾಸ್ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾವೇರಿ ನದಿಯಲ್ಲಿ ಗಾಯಕಿ ಎಸ್.ಜಾನಕಿ ಅಸ್ಥಿ ವಿಸರ್ಜನೆ
ಪಿ.ಎಂ.ನರೇಂದ್ರಸ್ವಾಮಿಗೆ ಸಚಿವ ಸ್ಥಾನ ದೊರಕಲಿ ಎಂದು ಪ್ರಾರ್ಥಿಸಿ ದರ್ಗಾದಲ್ಲಿ ವಿಶೇಷ ಪೂಜೆ