ಶಾಲಾ ಆವರಣದೊಳಗೆ ಚರಂಡಿ ನೀರು, ಮಾಜಿ ಸಚಿವ ಗರಂ

KannadaprabhaNewsNetwork |  
Published : Sep 25, 2025, 01:01 AM IST
ಪೊಟೋ- ಲಕ್ಷ್ಮೇಶ್ವರದ ಕಲಾಂ ನಗರದ ಹತ್ತಿರವಿರುವ ಡಾ.ಬಿ.ಆರ್.ಅಂಬೇಡ್ಕರ್ ಪ್ರೌಢಶಾಲೆಯ ಪಕ್ಕದಲ್ಲಿ ಕೊಳಚೆ ನೀರು ಹರಿದು ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದ್ದು ಅದನ್ನು ಸರಿಪಡಿಸುವಂತೆ ಮಾಜಿ ಸಚಿವ ಹಾಗೂ ಸಂಸ್ಥೆಯ ಅಧ್ಯಕ್ಷ ಹನುಮಂತಪ್ಪ ಅಲ್ಕೋಡ್ ಪುರಸಭೆ ಅಧಿಕಾರಿಗಳಿಗೆ ಒತ್ತಾಯಿಸಿದರು. | Kannada Prabha

ಸಾರಾಂಶ

ಶಾಲೆಯ ಮಕ್ಕಳಿಗೆ ಶುದ್ಧ ವಾತಾವರಣ ಇರಬೇಕು ಎನ್ನುವ ಸರ್ಕಾರದ ನೀತಿಯಾಗಿದೆ. ಅದನ್ನು ಇಲ್ಲಿ ಸಂಪೂರ್ಣವಾಗಿ ಧಿಕ್ಕರಿಸಲಾಗಿದೆ.

ಲಕ್ಷ್ಮೇಶ್ವರ: ಪಟ್ಟಣದ ಕಲಾಂ ನಗರದ ಹತ್ತಿರವಿರುವ ಮಾತೋಶ್ರೀ ರಮಾಬಾಯಿ ಅಂಬೇಡ್ಕರ್ ವಿದ್ಯಾಸಂಸ್ಥೆಯ ಡಾ. ಬಿ.ಆರ್. ಅಂಬೇಡ್ಕರ್ ಅನುದಾನಿತ ಪ್ರೌಢಶಾಲೆಯ ಬಳಿ ಚರಂಡಿ ನೀರು ತುಂಬಿಕೊಳ್ಳುತ್ತಿದ್ದು, ಪುರಸಭೆ ನಿರ್ಲಕ್ಷ್ಯ ತಾಳುತ್ತಿರುವುದಕ್ಕೆ ಮಾಜಿ ಸಚಿವ ಹಾಗೂ ಸಂಸ್ಥೆಯ ಅಧ್ಯಕ್ಷ ಹನುಮಂತಪ್ಪ ಅಲ್ಕೋಡ ಅವರು ಆಕ್ರೋಶ ವ್ಯಕ್ತಪಡಿಸಿ, ಪುರಸಭೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ಬುಧವಾರ ನಡೆದಿದೆ.

ಮಾಜಿ ಸಚಿವ ಅಲ್ಕೋಡ ಹನಮಂತಪ್ಪ ಅವರು ಪುರಸಭೆಗೆ ಆಗಮಿಸಿ ಪುರಸಭೆಯ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಿಡಿಮಿಡಿಗೊಂಡ ಘಟನೆ ಕಂಡುಬಂದಿತು.

ಈ ವೇಳೆ ಅವರು ಮಾತನಾಡಿದ ಅವರು, ಕಳೆದ ೩-೪ ವರ್ಷಗಳಿಂದ ಪಟ್ಟಣದ ಬಸ್ ನಿಲ್ದಾಣದ ಹಿಂಭಾಗದಲ್ಲಿನ ತಟ್ಟಿ ಬಡಾವಣೆಯಲ್ಲಿನ ಬಸವೇಶ್ವರ ನಗರ, ಇಂದಿರಾನಗರ ಹಾಗೂ ಅಬ್ದುಲ್ ಕಲಾಂ ನಗರದ ಚರಂಡಿ ನೀರು ಶಾಲೆಯ ಆವರಣಕ್ಕೆ ನುಗ್ಗಿ ಮಕ್ಕಳಿಗೆ ತೊಂದರೆಯಾಗುತ್ತಿದೆ. ಅದರ ವಾಸನೆಯಿಂದ ಮಕ್ಕಳು ಊಟ ಮಾಡಲು ಸಹ ಹಿಂಜರಿಯುವಂತಾಗಿದೆ.

ಈ ಗಲೀಜು ನೀರಿನಿಂದ ಶಾಲೆಯ ಮಕ್ಕಳು ಹಾಗೂ ಶಿಕ್ಷಕರಿಗೆ ಆರೋಗ್ಯದ ಸಮಸ್ಯೆಗಳು ಹೆಚ್ಚುತ್ತಿವೆ. ಈ ಕುರಿತಂತೆ ಪುರಸಭೆಗೆ ಪದೇ ಪದೇ ಮನವಿ ಮಾಡಿದರೂ ಯಾವುದೇ ಕ್ರಮ ಕೈಗೊಳ್ಳದಿರುವದಕ್ಕೆ ಕಾರಣವೇನು ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಶಾಲೆಯ ಮಕ್ಕಳಿಗೆ ಶುದ್ಧ ವಾತಾವರಣ ಇರಬೇಕು ಎನ್ನುವ ಸರ್ಕಾರದ ನೀತಿಯಾಗಿದೆ. ಅದನ್ನು ಇಲ್ಲಿ ಸಂಪೂರ್ಣವಾಗಿ ಧಿಕ್ಕರಿಸಲಾಗಿದೆ. ಬಡಾವಣೆಯ ನಿರ್ಮಿಸಿರುವ ಚರಂಡಿಗಳನ್ನು ಅವೈಜ್ಞಾನಿಕವಾಗಿ ನಿರ್ಮಿಸಲಾಗಿದೆ. ನೀರು ಹರಿದು ಹೋಗುವ ಮಾರ್ಗವನ್ನೆ ಸರಿಯಾಗಿ ಮಾಡಿಲ್ಲ. ಹೊಸ ಬಡಾವಣೆ ನಿರ್ಮಾಣ ಮಾಡುವಾಗ ಅಧಿಕಾರಿಗಳು ಕಣ್ಮುಚ್ಚಿ ಪರವಾನಗಿ ನೀಡಿದ್ದಾರೆ. ಚರಂಡಿ ನೀರು ಹರಿದು ಶಾಲೆಯ ಆವರಣದೊಳಗೆ ನುಗ್ಗುತ್ತಿದೆ.

ಇದು ಅಧಿಕಾರಿಗಳಿಗೆ ಗೊತ್ತಿದ್ದರೂ ಕಣ್ಮುಚ್ಚಿ ಕುಳಿತುಕೊಂಡಿದ್ದಾರೆ ಎಂದು ಆರೋಪಿಸಿದ ಅವರು ಶಾಲಾ ಮಕ್ಕಳಿಗೆ ತೊಂದರೆಯಾಗದಂತೆ ಸ್ಥಳೀಯ ಆಡಳಿತ ಕ್ರಮ ಕೈಗೊಳ್ಳಬೇಕೆಂಬ ನಿರ್ದೇಶನವಿದೆ. ಆದರೆ ಹಿಂದುಳಿದ ವರ್ಗಗಳ ಸಂಸ್ಥೆಯ ಶಾಲೆ ಇದಾಗಿದ್ದು, ಅದೇ ಉದ್ದೇಶದಿಂದಲೆ ಇದನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಹನುಮಂತಪ್ಪ ಅಲ್ಕೋಡ ಗಂಭೀರ ಆರೋಪ ಮಾಡಿದರು.ನಂತರ ಪುರಸಭೆ ಆರೋಗ್ಯ ನೀರಿಕ್ಷಕ ಮಂಜುನಾಥ ಮುದಗಲ್ಲ, ಎಂಜಿನಿಯರ್ ಕಾಟೇವಾಲೆ ಹಾಗೂ ಸಿಬ್ಬಂದಿ ಮಾಜಿ ಸಚಿವರೊಂದಿಗೆ ಜಾಗಕ್ಕೆ ತೆರಳಿ ಜೆಸಿಬಿ ಮೂಲಕ ಗಲೀಜು ನೀರು ತೆರವುಗೊಳಿಸುವ ಕಾರ್ಯ ಮಾಡಿದರು. ಆದರೆ ಇದು ತಾತ್ಕಾಲಿಕ ಉಪಶಮನ ಮಾಡುವ ಕಾರ್ಯ. ಶಾಶ್ವತ ಪರಿಹಾರ ಕಂಡುಹಿಡಿಯಬೇಕು ಎಂದರು. ಶೀಘ್ರ ಸರಿಪಡಿಸುವುದಾಗಿ ಅಧಿಕಾರಿಗಳು ಮಾಜಿ ಸಚಿವರಿಗೆ ಭರವಸೆ ನೀಡಿದರು. ಈ ವೇಳೆ ಜಾಕೀರ್‌ಹುಸೇನ್ ಹವಾಲ್ದಾರ ಇದ್ದರು.

PREV

Recommended Stories

ಪಾಲಿಕೆಗಳ ಚುನಾವಣೆ ಮುಗಿವವರೆಗೆ ಬೆಂಗಳೂರಲ್ಲಿ ಮತಪಟ್ಟಿ ಪರಿಷ್ಕರಣೆ ಮುಂದೂಡಿ : ಕೇಂದ್ರ ಆಯುಕ್ತರಿಗೆ ಪತ್ರ
ಡ್ರಾಪ್‌ ನೆಪದಲ್ಲಿ ಗುತ್ತಿಗೆದಾರನ ದರೋಡೆ ಮಾಡಿದ್ದ ನಾಲ್ವರ ಬಂಧನ