ಸೇವಾಲಾಲ್‌, ಸವಿತಾ ಮಹರ್ಷಿ ಅರ್ಥಪೂರ್ಣ ಆಚರಣೆಗೆ ನಿರ್ಧಾರ

KannadaprabhaNewsNetwork | Published : Feb 6, 2024 1:33 AM

ಸಾರಾಂಶ

ವಿಜಯಪುರ ಜಿಲ್ಲಾಡಳಿತದಿಂದ ಫೆ.೧೦ ರಂದು ಕಾಯಕ ಶರಣರ ಜಯಂತಿ, ಫೆ.೧೫ರಂದು ಶ್ರೀ ಸಂತ ಸೇವಾಲಾಲ್ ಜಯಂತಿ, ಫೆ.೧೬ರಂದು ಸವಿತಾ ಮಹರ್ಷಿ ಜಯಂತಿ ಕಾರ್ಯಕ್ರಮಗಳನ್ನು ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಯಿತು.

ಕನ್ನಡಪ್ರಭ ವಾರ್ತೆ ವಿಜಯಪುರ

ಜಿಲ್ಲಾಡಳಿತದಿಂದ ಫೆ.೧೦ ರಂದು ಕಾಯಕ ಶರಣರ ಜಯಂತಿ, ಫೆ.೧೫ರಂದು ಶ್ರೀ ಸಂತ ಸೇವಾಲಾಲ್ ಜಯಂತಿ, ಫೆ.೧೬ರಂದು ಸವಿತಾ ಮಹರ್ಷಿ ಜಯಂತಿ ಕಾರ್ಯಕ್ರಮಗಳನ್ನು ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಯಿತು.

ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ವಿವಿಧ ಶರಣ, ಸಂತರ ಜಯಂತಿ ಆಚರಿಸಲು ತೀರ್ಮಾನಿಸಲಾಯಿತು.

ಫೆ.೧೦ರಂದು ಕಾಯಕ ಶರಣರ ಜಯಂತಿ ಆಚರಣೆಯನ್ನು ಬೆಳಗ್ಗೆ ೯.೩೦ಕ್ಕೆ ಶ್ರೀ ಸಿದ್ಧೇಶ್ವರ ದೇವಸ್ಥಾನದಿಂದ ಭಾವಚಿತ್ರದ ಮೆರವಣಿಗೆ, ಬೆಳಗ್ಗೆ ೧೧ಕ್ಕೆ ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದ್ದು, ಓರ್ವ ಉಪನ್ಯಾಸಕರನ್ನು ಆಹ್ವಾನಿಸಿ, ಮಹನೀಯರ ಕುರಿತ ಉಪನ್ಯಾಸ ನೀಡಲು ತೀರ್ಮಾನಿಸಲಾಯಿತು.

ಫೆ.೧೫ರಂದು ಶ್ರೀ ಸಂತ ಸೇವಾಲಾಲ್ ಜಯಂತಿ:

ಜಯಂತಿ ಕಾರ್ಯಕ್ರಮದ ಅಂಗವಾಗಿ ಶ್ರೀ ಸಿದ್ಧೇಶ್ವರ ದೇವಸ್ಥಾನದಿಂದ ವಿವಿಧ ಕಲಾ ತಂಡಗಳೊಂದಿಗೆ ೧೧ ಗಂಟೆಗೆ ಭಾವಚಿತ್ರದ ಮೆರವಣಿಗೆ ಹಾಗೂ ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಸಭಾ ಕಾರ್ಯಕ್ರಮ, ಉಪನ್ಯಾಸ ನೀಡಲು ಹಾಗೂ ಬಹು ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಿತು.

ಫೆ.೧೬ರಂದು ಸವಿತಾ ಮಹರ್ಷಿ ಜಯಂತಿ:

ಕಾರ್ಯಕ್ರಮದ ಅಂಗವಾಗಿ ಫೆ.೧೬ರಂದು ಬೆಳಗ್ಗೆ ೯.೩೦ಕ್ಕೆ ಶ್ರೀ ಸಿದ್ಧೇಶ್ವರ ದೇವಸ್ಥಾನದಿಂದ ಮೆರವಣಿಗೆ ಹಾಗೂ ಸವಿತಾ ಮಹರ್ಷಿ ಜಯಂತಿ ಹಿನ್ನೆಲೆಯಲ್ಲಿ ರಂಗಮಂದಿರದಲ್ಲಿ ಉಪನ್ಯಾಸ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದರ ಮೂಲಕ ಅಚ್ಚುಕಟ್ಟಾಗಿ ಜಯಂತಿ ಕಾರ್ಯಕ್ರಮ ಆಯೋಜಿಸಲು ನಿರ್ಧರಿಸಲಾಯಿತು. ಅವರ ವಿಚಾರಧಾರೆಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಲು ನಿರ್ಧರಿಸಲಾಯಿತು.

ಸಭೆಯಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಂಕರ ಮಾರಿಹಾಳ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಈರಣ್ಣ ಆಶಾಪೂರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕರಣಕುಮಾರ ಸೇರಿದಂತೆ ಅಡಿವೆಪ್ಪ ಸಾಲಗಲ್, ಭೀಮರಾಯ ಜಿಗಜಿಣಗಿ, ರಾಜ ಪಾಲ ಚವ್ಹಾಣ, ಸೋಮನಗೌಡ ಕಲ್ಲೂರ, ಮಲ್ಲು ನಾಯಕ, ಸುರೇಶ ಬಿಜಾಪೂರ ಇದ್ದರು.

Share this article