ಕನ್ನಡಪ್ರಭ ವಾರ್ತೆ ಬೆಂಗಳೂರು
ಕನ್ನಡ ಚಿತ್ರರಂಗದಲ್ಲಿ ಕೇಳಿ ಬರುತ್ತಿರುವ ಲೈಂಗಿಕ ಶೋಷಣೆ ಬಗ್ಗೆ ಸತ್ಯ ಸತ್ಯತೆಯನ್ನು ತಿಳಿಯಲು ಸಮಿತಿಯೊಂದನ್ನು ರಚಿಸುವ ನಿಟ್ಟಿನಲ್ಲಿ ಮಹತ್ವ ಸಭೆಯನ್ನು ನಡೆಸಲು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನಿರ್ಧರಿಸಿದೆ ಎಂದು ತಿಳಿದುಬಂದಿದೆ.ಈ ಮಹತ್ವದ ಸಭೆಯು ಇಂದು (ಸೆ.15) ಬೆಳಗ್ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಆವರಣದಲ್ಲಿ ನಡೆಯಲಿದೆ. ಈ ಕುರಿತು ‘ಕನ್ನಡಪ್ರಭ’ ಜೊತೆ ಮಾತನಾಡಿದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಎನ್.ಎಂ.ಸುರೇಶ್, ರಾಜ್ಯ ಮಹಿಳಾ ಆಯೋಗದವರ ಮನವಿ ಮೇರೆಗೆ ವಾಣಿಜ್ಯ ಮಂಡಳಿಯಲ್ಲಿ ಸಭೆ ಕರೆಯುತ್ತಿದ್ದೇವೆ. ಕನ್ನಡ ಚಿತ್ರರಂಗದಲ್ಲಿ ನಡೆಯುತ್ತಿದೆ ಎನ್ನಲಾಗಿರುವ ಲೈಂಗಿಕ ಶೋಷಣೆಯ ಬಗ್ಗೆ ಚರ್ಚೆ ಮಾಡಲಿದ್ದೇವೆ. ಆದರೆ, ಚಲನಚಿತ್ರ ವಾಣಿಜ್ಯ ಮಂಡಳಿಗೆ ಇದುವರೆಗೂ ಲೈಂಗಿಕ ಶೋಷಣೆ ಕುರಿತ ಯಾವುದೇ ರೂಪದಲ್ಲಿ ದೂರುಗಳು ಬಂದಿಲ್ಲ. ಒಂದು ವೇಳೆ ದೂರು ಬಂದರೆ ಅಂತಹವರ ವಿರುದ್ಧ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ತನ್ನ ವ್ಯಾಪ್ತಿಯಲ್ಲಿ ಏನೆಲ್ಲ ಕ್ರಮಗಳನ್ನು ಕೈಗೊಳ್ಳಬಹುದೋ ಅಷ್ಟು ಕ್ರಮಗಳನ್ನು ಕೈಗೊಳ್ಳುವುದಕ್ಕೆ ನಾವು ಸಿದ್ಧವಾಗಿದ್ದೇವೆ ಎಂದು ತಿಳಿಸಿದರು.
ನಟ ಚೇತನ್ ಅವರ ಸಾರಥ್ಯದ ಫೈರ್ ಸಂಸ್ಥೆಗೂ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೂ ಯಾವುದೇ ರೀತಿಯ ಸಂಬಂಧವಿಲ್ಲ. ನಾಳೆ ನಡೆಯಲಿರುವ ಸಭೆಗೆ ಎಲ್ಲರಿಗೂ ಕೂಡ ಆಹ್ವಾನ ಕಳಿಸಿದ್ದೇವೆ. ಸಭೆಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರು ಕೂಡ ಬರಲಿದ್ದಾರೆ. ಸಭೆಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಪದಾಧಿಕಾರಿಗಳು, ಉದ್ಯಮದ ಗಣ್ಯರು ಭಾಗವಹಿಸಲಿದ್ದಾರೆ ಎಂದು ಎನ್.ಎಂ.ಸುರೇಶ್ ತಿಳಿಸಿದರು.ಅಧ್ಯಕ್ಷನಾಗಿ ನಾನು ಈಗಲೂ ಮನವಿ ಮಾಡುತ್ತಿದ್ದೇನೆ. ನಿಮ್ಮ ಮೇಲೆ ಲೈಂಗಿಕ ದೌರ್ಜನ್ಯ ಆಗಿದ್ದರೆ ದಯವಿಟ್ಟು ಬಂದು ವಾಣಿಜ್ಯ ಮಂಡಳಿಗೆ ದೂರ ನೀಡಿ. ವಾಣಿಜ್ಯ ಮಂಡಳಿ ನಿಮ್ಮ ಜೊತೆ ನಿಂತು ನಿಮಗೆ ನ್ಯಾಯ ಸಲ್ಲಿಸುತ್ತದೆ.-ಎನ್.ಎಂ.ಸುರೇಶ್, ಅಧ್ಯಕ್ಷ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ.