ಭಾರತ ವಿದ್ಯಾರ್ಥಿ ಫೆಡರೇಷನ್ ಜಿಲ್ಲಾ ಸಮಿತಿಯಿಂದ ಪ್ರತಿಭಟನೆಗದಗ: ರಾಜ್ಯದಲ್ಲಿ 430 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನ.23ರಿಂದ ರಾಜ್ಯದಲ್ಲಿ ತರಗತಿಗಳನ್ನು ಬಹಿಷ್ಕರಿಸಿ ಹೋರಾಟ ನಡೆಸುತ್ತಿದ್ದಾರೆ. ಅದಕ್ಕೆ ಬೆಂಬಲ ಸೂಚಿಸಿ ಅತಿಥಿ ಉಪನ್ಯಾಸಕರ ನ್ಯಾಯಯುತ ಬೇಡಿಕೆ ಈಡೇರಿಸಬೇಕೆಂದು ಒತ್ತಾಯಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ ಜಿಲ್ಲಾ ಸಮಿತಿಯಿಂದ ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ಎಸ್ಎಫ್ಐ ರಾಜ್ಯ ಪದಾಧಿಕಾರಿಗಳಾದ ಗಣೇಶ ರಾಠೋಡ್ ಮಾತನಾಡಿ, ಕೋವಿಡ್ ಸಂದರ್ಭದಲ್ಲಿ ಖಾಸಗಿ ಕಾಲೇಜುಗಳ ಶುಲ್ಕ ಕಟ್ಟಲಾಗದೇ ಕಾಲೇಜು ತೊರೆದು ಸರ್ಕಾರಿ ಕಾಲೇಜಿಗೆ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಸಮಯಕ್ಕೆ ಸರಿಯಾದ ಸಾರಿಗೆ ಸೌಲಭ್ಯವಿಲ್ಲದೆ ಗ್ರಾಮೀಣ ಭಾಗದಿಂದ ನಗರಕ್ಕೆ ಬಂದು ಸಾವಿರಾರು ವಿದ್ಯಾರ್ಥಿಗಳು ಸರ್ಕಾರಿ ಕಾಲೇಜುಗಳಲ್ಲಿ ಅಧ್ಯಯನ ನಡೆಸಲು ಬರುತ್ತಿದ್ದಾರೆ. ಇಷ್ಟು ಕಷ್ಟಗಳ ಮದ್ಯ ವಿದ್ಯಾರ್ಥಿಗಳಿಗೆ ಪಾಠ ಮಾಡಲು ಇಲ್ಲಿ ಅತಿಥಿ ಉಪನ್ಯಾಸಕರೇ ಇಲ್ಲಾ ಕಳೆದ 14 ದಿನಗಳಿಂದ ಹೋರಾಟ ಮಾಡುತ್ತಿದ್ದು ಸರ್ಕಾರ ಅವರ ಬೇಡಿಕೆ ಈಡೇರಿಸಬೇಕು ಇಲ್ಲಾವಾದರೆ ರಾಜ್ಯವಾಪಿ ವಿದ್ಯಾರ್ಥಿಗಳು ಬೀದಿಗಿಳಿದು ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.ಜಿಲ್ಲಾ ಮುಖಂಡ ಚಂದ್ರು ರಾಠೋಡ ಮಾತನಾಡಿ, ಪ್ರತಿ ವರ್ಷ ಸರ್ಕಾರಿ ಕಾಲೇಜುಗಳಲ್ಲಿ ಬೋಧನೆ ಮಾಡುವ ನೂರಾರು ಉಪನ್ಯಾಸಕರು ತರಗತಿಗಳನ್ನು ಬಹಿಷ್ಕರಿಸಿ ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಹೋರಾಟ ಮಾಡುತ್ತಿದ್ದಾರೆ. ಇದರಿಂದ ವಿದ್ಯಾರ್ಥಿಗಳು ಪಾಠಗಳಿಂದ ದೂರ ಉಳಿಯುತ್ತಿದ್ದಾರೆ. ಇದರಿಂದ ಸಾಕಷ್ಟು ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ಸಮಸ್ಯೆಯಾಗುತ್ತಿದೆ. ಈ ಸಮಸ್ಯೆಯನ್ನು ದೂರ ಮಾಡುವುದಕ್ಕೆ ಎಲ್ಲಾ ಸರ್ಕಾರಿ ಕಾಲೇಜುಗಳಿಗೆ ಖಾಯಂ ಉಪನ್ಯಾಸಕರ ಅಗತ್ಯವಿದೆ ಎಂದರು.ಅತಿಥಿ ಉಪನ್ಯಾಸಕ ನಾರಾಯಣ ಗೌಡ ಮಾತನಾಡಿ, ರಾಜ್ಯದ ಅತಿಥಿ ಉಪನ್ಯಾಸಕರ ಪರವಾಗಿ ನೀತಿ ನಿಯಮಾವಳಿಗಳನ್ನು ರೂಪಿಸಿ ಸೇವಾ ಭದ್ರತೆ ಒದಗಿಸಿ ಸಕಾಲಕ್ಕೆ ವೇತನವನ್ನು ನೀಡಿ ಅವರ ನ್ಯಾಯಯುತ ಬೇಡಿಕೆಗಳನ್ನು ಶೀಘ್ರವೇ ಬಗೆಹರಿಸಲು ಮುಂದಾಗಿ ತರಗತಿಗಳು ಸುಸಜ್ಜಿತವಾಗಿ ನಡೆಯಲು ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸಿದರು.ವಿದ್ಯಾರ್ಥಿ ಮುಖಂಡರಾದ ಕಾವ್ಯ ಪಾಟೀಲ ಮಾತನಾಡಿ, ಸ್ಥಳೀಯವಾಗಿ ಬಸ್ ಸಮಸ್ಯೆ, ಸ್ಕಾಲರ್ಶಿಪ್, ಶುಲ್ಕ ಸಮಸ್ಯೆ ಇದ್ದು ಈ ಕುರಿತು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆ ಕರೆಯಲು ಒತ್ತಾಯಿಸಿದರು.ವಿದ್ಯಾರ್ಥಿನಿಯರಾದ ಸುಮಾ, ಮಧು ಹಾಗೂ ನೇತ್ರಾ ಮಾತನಾಡಿ, ನಮಗೆ ತಕ್ಷಣ ತರಗತಿ ಪ್ರಾರಂಭಿಸಬೇಕು. ಕಳೆದ 22 ದಿನದಿಂದ ತರಗತಿಗಳು ನಡೆಯುತ್ತಿಲ್ಲಾ ಮನೆಯಲ್ಲಿ ಪಾಲಕರು ನಮಗೆ ಕಾಲೇಜು ಬಿಡಿಸುವ ಪರಿಸ್ಥಿತಿ ನಿರ್ಮಾಣ ಆಗಿದೆ ಅದಕ್ಕೆ ಅನಿವಾರ್ಯವಾಗಿ ಹೋರಾಟ ಮಾಡುತ್ತಿದ್ದೆವೆ ಎಂದರು.ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ರು ಮನವಿ ಸ್ವೀಕರಿಸಿ, ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಮುಟ್ಟಿಸುತ್ತೇನೆ ಎಂದು ಭರವಸೆ ನೀಡಿದರು. ಸ್ಥಳೀಯ ಬೇಡಿಕೆಗಳ ಕುರಿತು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಆದಷ್ಟು ಬೇಗ ಸಭೆ ಮಾಡಲು ದಿನಾಂಕ ನಿಗದಿ ಮಾಡಿ ಆದಷ್ಟು ಬೇಗ ಸಭೆ ಮಾಡುತ್ತೇವೆ ಎಂದು ತಿಳಿಸಿದರು.ನಂತರ ಪ್ರತಿಭಟನೆಯನ್ನು ಹಿಂಪಡೆಯಲಾಯಿತು. ಈ ವೇಳೆ ವಿದ್ಯಾರ್ಥಿ ಮುಖಂಡರಾದ ನೇಹಾ, ಪಲ್ಲವಿ, ಸುಜಾತಾ, ಶೈಲಾ, ಮಂಜುಳಾ, ವೀಣಾ, ಭಾರತಿ, ನೇತ್ರಾ, ಮೇಘಾ, ರಕ್ಷಿತಾ, ತನುಜಾ, ವಿಜಯಲಕ್ಷೀ, ಆರತಿ, ಶ್ರವಾಣ, ಚಂದಾಭಿ, ಅತಿಥಿ ಉಪನ್ಯಾಸಕರಾದ ಡಾ. ಎಸ್.ಎಸ್. ಸರ್ವಿ, ಡಾ. ವಿ.ಡಿ. ಮುಳಗುಂದ, ನಾರಾಯಣ ಕರ್ಲವಾಡ, ಶ್ರೀನಿವಾಸ ಪೂಜಾರ ಹಾಗೂ ಮುಂತಾದ ಅಥಿತಿ ಉಪನ್ಯಾಸಕರು, ವಿದ್ಯಾರ್ಥಿಗಳು ಇದ್ದರು.