ಪತ್ನಿ ಸಮಾಧಿ ಪಕ್ಕದಲ್ಲೇ ಚಿರನಿದ್ರೆಗೆ ಶಾಮನೂರು

KannadaprabhaNewsNetwork |  
Published : Dec 16, 2025, 02:00 AM IST
15ಕೆಡಿವಿಜಿ1-ದಾವಣಗೆರೆಯ ಶ್ರೀ ಕಲ್ಲೇಶ್ವರ ಮಿಲ್‌ನಲ್ಲಿ ಪತ್ನಿ ದಿವಂಗತ ಪಾರ್ವತಮ್ಮ ಶಿವಶಂಕರಪ್ಪ ಸಮಾಧಿ ಬಳಿ ಪ್ರತಿ ವರ್ಷ ಪಾರ್ವತಮ್ಮ ಸ್ಮರಣೆಯ ದಿನದಂದು ಕೆಲ ಸಮಯ ಕಳೆಯುತ್ತಿದ್ದ ಶಾಮನೂರು ಶಿವಶಂಕರಪ್ಪ ಶಿವನೂರಿನಲ್ಲಿರುವ ಪಾರ್ವತಮ್ಮನ ಸೇರಲು ತೆರಳಿದರು. | Kannada Prabha

ಸಾರಾಂಶ

ವಯೋಸಹಜ ಅನಾರೋಗ್ಯದಿಂದ ನಿಧನರಾದ ಹಿರಿಯ ರಾಜಕಾರಣಿ, ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪನವರ (95) ಕ್ರಿಯಾಸಮಾಧಿಯನ್ನು ಸರ್ಕಾರಿ ಗೌರವದೊಂದಿಗೆ, ವೀರಶೈವ ಸಂಪ್ರದಾಯದಂತೆ ಸೋಮವಾರ ನೆರವೇರಿಸಲಾಯಿತು.

ಕನ್ನಡಪ್ರಭ ವಾರ್ತೆ ದಾವಣಗೆರೆ

ವಯೋಸಹಜ ಅನಾರೋಗ್ಯದಿಂದ ನಿಧನರಾದ ಹಿರಿಯ ರಾಜಕಾರಣಿ, ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪನವರ (95) ಕ್ರಿಯಾಸಮಾಧಿಯನ್ನು ಸರ್ಕಾರಿ ಗೌರವದೊಂದಿಗೆ, ವೀರಶೈವ ಸಂಪ್ರದಾಯದಂತೆ ಸೋಮವಾರ ನೆರವೇರಿಸಲಾಯಿತು. ದಾವಣಗೆರೆಯಲ್ಲಿರುವ ಶಾಮನೂರು ಒಡೆತನದ ಕಲ್ಲೇಶ್ವರ ಮಿಲ್ ಆವರಣದಲ್ಲಿ ಅವರ ಪತ್ನಿ ದಿ.ಪಾರ್ವತಮ್ಮನವರ ಸಮಾಧಿಯ ಪಕ್ಕದಲ್ಲೇ ಅಂತ್ಯಸಂಸ್ಕಾರ ನೆರವೇರಿತು.ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಸೇರಿ ಸಚಿವರುಗಳು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿದಂತೆ ರಾಜಕೀಯ ನಾಯಕರು, ವಿವಿಧ ಮಠಾಧೀಶರು, ಅಭಿಮಾನಿಗಳು, ಸಾರ್ವಜನಿಕರು ಈ ವೇಳೆ ಹಾಜರಿದ್ದು, ಅಗಲಿದ ನಾಯಕನಿಗೆ ಅಶ್ರುತರ್ಪಣ ಸಲ್ಲಿಸಿ, ಶಿವ-ಪಾರ್ವತಿ ಸಂಗಮಕ್ಕೆ ಸಾಕ್ಷಿಯಾದರು.

ಬೆಂಗಳೂರಿನ ಸ್ಪರ್ಶ ಆಸ್ಪತ್ರೆಯಲ್ಲಿ ಭಾನುವಾರ ಸಂಜೆ ನಿಧನರಾದ ಶಿವಶಂಕರಪ್ಪ ಅವರ ಪಾರ್ಥೀವ ಶರೀರವನ್ನು ಝೀರೋ ಟ್ರಾಫಿಕ್‌ನಲ್ಲಿ ಭಾನುವಾರ ಬೆಳಗಿನ ಜಾವ ದಾವಣಗೆರೆಗೆ ಕರೆತರಲಾಯಿತು. ಮೊದಲಿಗೆ ಹಿರಿಯ ಪುತ್ರ ಎಂ.ಜಿ.ಬಕ್ಕೇಶ ಅವರ ಮನೆಗೆ ಪಾರ್ಥೀವ ಶರೀರವನ್ನು ತರಲಾಯಿತು. ಅಲ್ಲಿಂದ 2ನೇ ಪುತ್ರ ಎಸ್.ಎಸ್.ಗಣೇಶ್‌ ಅವರ ನಿವಾಸಕ್ಕೆ ಕರೆ ತಂದು, ನಂತರ, ಕಿರಿಯ ಪುತ್ರ, ಗಣಿ ಮತ್ತು ಭೂವಿಜ್ಞಾನ, ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ನಿವಾಸ ಶಿವ ಪಾರ್ವತಿಗೆ ಪಾರ್ಥೀವ ಶರೀರವನ್ನು ತರಲಾಯಿತು. ಅಲ್ಲಿ ಕಣ್ವಕುಪ್ಪೆ ಗವಿಮಠದ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ಆ‍ವರಗೊಳ್ಳ ಪುರವರ್ಗ ಮಠದ ಓಂಕಾರ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ಪಾರ್ಥೀವ ಶರೀರದ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲಾಯಿತು.

ಬೆಳಗ್ಗೆ 11.30ರವರೆಗೆ ಶಿವ ಪಾರ್ವತಿಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ವಿವಿಧ ಕ್ಷೇತ್ರಗಳ ಗಣ್ಯರು ಆಗಮಿಸಿ, ಅಂತಿಮ ನಮನ ಸಲ್ಲಿಸಿದರು. ನಂತರ, ಪಾರ್ಥಿವ ಶರೀರವನ್ನು ಹೈಸ್ಕೂಲ್ ಮೈದಾನದಲ್ಲಿರಿಸಿ, ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಲಾಯಿತು. ಬಳಿಕ, ಮಧ್ಯಾಹ್ನ 3ಕ್ಕೆ ಮೆರವಣಿಗೆ ಮೂಲಕ ಕಲ್ಲೇಶ್ವರ ಮಿಲ್‌ ಆವರಣಕ್ಕೆ ಪಾರ್ಥಿವ ಶರೀರವನ್ನು ತರಲಾಯಿತು. ಮಾರ್ಗದುದ್ದಕ್ಕೂ ಅಭಿಮಾನಿಗಳು ಅವರ ಪಾರ್ಥೀವ ಶರೀರಕ್ಕೆ ಹೂವು, ಹಾರ ಹಾಕಿ, ನಮಿಸಿ, ಜೈಕಾರ ಕೂಗಿದರು. ಶಿವಶಂಕರಪ್ಪ ಅಮರ್‌ ರಹೆ ಎಂಬ ಜಯಘೋಷಗಳು ಮೊಳಗಿದವು.

ಸಂಜೆ 4.30ರ ವೇಳೆಗೆ ಕಲ್ಲೇಶ್ವರ ಮಿಲ್ ಆವರಣದಲ್ಲಿ ಕ್ರಿಯಾಸಮಾಧಿಯ ಅಂತಿಮ ವಿಧಿ-ವಿಧಾನಗಳು ಆರಂಭವಾದವು. ಈ ವೇಳೆ, ಮೂರು ಸುತ್ತು ಕುಶಾಲತೋಪು ಸಿಡಿಸಿ, ರಾಷ್ಟ್ರಗೀತೆ ನುಡಿಸಿ, ಸರ್ಕಾರಿ ಗೌರವ ಸಲ್ಲಿಸಲಾಯಿತು. ಬಳಿಕ, ಪತ್ನಿ ದಿವಂಗತ ಪಾರ್ವತಮ್ಮ ಶಿವಶಂಕರಪ್ಪ ಅವರ ಸಮಾಧಿ ಪಕ್ಕದಲ್ಲೇ ಪಾರ್ಥೀವ ಶರೀರವಿರಿಸಿ, ಪಂಚಪೀಠಾಧೀಶ್ವರ ಪಾದೋದಕ ಮೂಲಕ ಪೂಜೆ ನಡೆಸಿ, ಪಾರ್ಥಿವ ಶರೀರಕ್ಕೆ ಅಭಿಷೇಕ ಮಾಡಿ, ಮಣ್ಣು ಬಳಸದೇ ವಿಭೂತಿ ಬಳಸಿ ಕ್ರಿಯಾಸಮಾಧಿ ಮಾಡಿ, ವೀರಶೈವ ಸಂಪ್ರದಾಯ, ಪದ್ಧತಿಯಂತೆ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಈ ವೇಳೆ, ವಿವಿಧ ಮಠಾಧೀಶರು, ರಾಜಕೀಯ ನಾಯಕರು, ಬೆಂಬಲಿಗರು, ಶಾಮನೂರು ನೇತೃತ್ವದ ಸಂಸ್ಥೆಯ ಅಧಿಕಾರಿ, ನೌಕರರು, ಮಿಲ್ ಕೈಗಾರಿಕೆಗಳ ಸಿಬ್ಬಂದಿ ಹಾಜರಿದ್ದರು.26ಕ್ಕೆ ಕೈಲಾಸ ಶಿವ ಗಣರಾಧನೆ:

ಈ ಮಧ್ಯೆ, ದಿವಂಗತ ಶಿವಶಂಕರಪ್ಪನವರ ಕೈಲಾಸ ಶಿವ ಗಣರಾಧನೆಯನ್ನು ಡಿಸೆಂಬರ್‌ 26ರಂದು ಮಧ್ಯಾಹ್ನ 12.30ಕ್ಕೆ ಕಲ್ಲೇಶ್ವರ ರೈಸ್‌ ಮಿಲ್‌ ಆವರಣದಲ್ಲಿ ನಡೆಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.ಮತ್ತೆ ಶಾಸಕ ಆಗಬಯಸಿದ್ದರು ಶಾಮನೂರು:ದೇಶದ ಹಿರಿಯ ಶಾಸಕ, ಅಖಿಲ ಭಾರತ ವೀರಶೈವ ಮಹಾಸಭಾದ ಸುದೀರ್ಘಾವಧಿ ಅಧ್ಯಕ್ಷ, ಕೆಪಿಸಿಸಿಗೆ ದೀರ್ಘ ಕಾಲ ಖಜಾಂಚಿಯಾಗಿದ್ದ ಶಾಮನೂರು ಶಿವಶಂಕರಪ್ಪ ಅವರು ದಾವಣಗೆರೆಗೆ ಬ್ರ್ಯಾಂಡ್ ನೇಮ್‌ ತಂದುಕೊಟ್ಟ ಸಾಧಕರು. ಕಷ್ಟದ ಸಂದರ್ಭದಲ್ಲಿ ಜನರಿಗೆ ಸದಾ ಸಹಾಯ ಹಸ್ತ ಚಾಚುತ್ತಿದ್ದ ಅವರ ಅಗಲಿಕೆ ತುಂಬಲಾರದ ನಷ್ಟ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ದಾವಣಗೆರೆಯ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಬೆಳವಣಿಗೆಗೆ ಶಾಮನೂರು ಅವರು ಕಾರಣ. ಕೋವಿಡ್ ಸಂದರ್ಭದಲ್ಲಿ ಆರು ಕೋಟಿ ರು.ಗೂ ಹೆಚ್ಚು ವೆಚ್ಚ ಮಾಡಿ ಆಕ್ಸಿಜನ್ ಸರಬರಾಜು ಮಾಡಿದ್ದು ಅವರ ಸಹಾಯಗುಣಕ್ಕೆ ಸಾಕ್ಷಿ. 15 ದಿನಗಳ ಹಿಂದೆ ಆಸ್ಪತ್ರೆಯಲ್ಲಿ ಭೇಟಿಯಾದಾಗ ಮಾತನಾಡುವ ಸ್ಥಿತಿಯಲ್ಲಿರಲಿಲ್ಲ. ಅದಕ್ಕೂ ಮೊದಲು ಮತ್ತೊಂದು ಅವಧಿಗೂ ಶಾಸಕನಾಗುತ್ತೇನೆ ಎನ್ನುತ್ತಿದ್ದರು ಎಂದು ಸಿದ್ದರಾಮಯ್ಯ ನೆನೆದರು.ವಿಧಾನಸಭೆಯಲ್ಲಿ ಸಭಾಧ್ಯಕ್ಷ ಯು.ಟಿ. ಖಾದರ್‌ ಅವರು ಮಂಡಿಸಿದ ಸಂತಾಪ ಸೂಚನೆ ನಿರ್ಣಯ ಬೆಂಬಲಿಸಿ ಮಾತನಾಡಿದ ಅವರು, ಶಾಮನೂರು ಅವರ ಜಾಗದಲ್ಲೇ ನನ್ನ 75ನೇ ಜನ್ಮದಿನ ಆಚರಿಸಲಾಗಿತ್ತು. ಪ್ರತಿ ಬಾರಿ ದಾವಣಗೆರೆಗೆ ಹೋದಾಗಲೂ ಅವರ ಅತಿಥಿಗೃಹದಲ್ಲೇ ನನ್ನ ವಾಸ್ತವ್ಯ. ಅವರ ಮನೆಯಲ್ಲೇ ನನ್ನ ಊಟ. ಎಲ್ಲರೊಂದಿಗೂ ಸ್ನೇಹ ಸಂಪಾದಿಸಿದ್ದ ಅಜಾತಶತ್ರು ಎಂದು ಒಡನಾಟ ಸ್ಮರಿಸಿದರು.

ಶಾಮನೂರು ಶಿವಶಂಕರಪ್ಪ ಅವರು ತಮ್ಮ 63ನೇ ವಯಸ್ಸಿನಲ್ಲಿ ವಿಧಾನಸಭೆ ಪ್ರವೇಶಿಸಿ ಆರು ಬಾರಿ ಶಾಸಕರಾದವರು. ಒಮ್ಮೆ ಸಂಸತ್ ಸದಸ್ಯರಾಗಿದ್ದರು. ದೀರ್ಘ ಕಾಲ ರಾಜಕೀಯ, ಸಾಮಾಜಿಕ ಸೇವೆಯಲ್ಲಿದ್ದವರು. ದಾವಣಗೆರೆಯಲ್ಲಿ ಬಾಪೂಜಿ ವಿದ್ಯಾ ಕೇಂದ್ರದ ಮೂಲಕ ಎಂಜಿನಿಯರಿಂಗ್, ವೈದ್ಯಕೀಯ ಕಾಲೇಜುಗಳು ಸೇರಿದಂತೆ ಅನೇಕ ಸಂಸ್ಥೆಗಳನ್ನು ಕಟ್ಟಿ ಜಿಲ್ಲೆಯನ್ನು ವಿದ್ಯಾಕಾಶಿಯಾಗಿಸಿದರು. ಉದ್ಯಮಿಯಾಗಿ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ ಎಂದರು.ಹಿಂದಿನ ಅವಧಿಯಲ್ಲಿ ನಾನು ಮುಖ್ಯಮಂತ್ರಿಯಾಗಿದ್ದಾಗ ನನ್ನ ಮಂತ್ರಿ ಮಂಡಲದಲ್ಲಿ ಶಾಮನೂರು ಶಿವಶಂಕರಪ್ಪ ಅವರು ಸಚಿವರಾಗಿ ಕಾರ್ಯನಿರ್ವಹಿಸಿದ್ದರು. 2016ರಲ್ಲಿ ಸಂಪುಟ ಪುನರ್ ರಚನೆಯಾದಾಗ ಅವರ ಪುತ್ರ ಎಸ್.ಎಸ್. ಮಲ್ಲಿಕಾರ್ಜುನ್ ಅವರನ್ನು ಸಚಿವರನ್ನಾಗಿ ಮಾಡಲು ಕೋರಿಕೊಂಡಿದ್ದರು. ಮಲ್ಲಿಕಾರ್ಜುನ್ ಅವರು ನಮ್ಮ ಈಗಿನ ಸಚಿವ ಸಂಪುಟದಲ್ಲೂ ಮಂತ್ರಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದರು.

ಮಾತನಾಡುವ ಸ್ಥಿತಿಯಲ್ಲಿರಲಿಲ್ಲ:15 ದಿನಗಳ ಹಿಂದೆ ಆಸ್ಪತ್ರೆಯಲ್ಲಿ ಆಸ್ಪತ್ರೆಯಲ್ಲಿ ಅವರನ್ನು ಭೇಟಿ ಮಾಡಿದಾಗ ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ. ಅವರ ನಿಧನದಿಂದ ಜನಪರ ನಾಯಕನನ್ನು ಕಳೆದುಕೊಂಡಂತಾಗಿದೆ. ದೊಡ್ಡ ಕುಟುಂಬ ಹಾಗೂ ಲಕ್ಷಾಂತರ ಅಭಿಮಾನಿಗಳನ್ನು ಅವರು ಅಗಲಿದ್ದು ಭಗವಂತ ಅವರಿಗೆ ದುಃಖ ಭರಿಸುವ ಶಕ್ತಿಯನ್ನು ನೀಡಲಿ ಹಾಗೂ ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!