ಶಂಕರಾಚಾರ್ಯರು ಸಾಕ್ಷಾತ್ ಪರಮೇಶ್ವರನ ಅವತಾರ

KannadaprabhaNewsNetwork |  
Published : May 04, 2025, 01:33 AM IST
ಫೊಟೊಒಐಲ್-೩ಎಸ್ಡಿಪಿ೨- ಸಿದ್ದಾಪುರ ತಾಲೂಕಿನ ಭಾನ್ಕುಳಿಮಠದಲ್ಲಿ ಜರುಗಿದ ಶಂಕರಪAಚಮೀ ಉತ್ಸವದ ಸಂದರ್ಭದಲ್ಲಿ ಶ್ರೀ ರಾಘವೇಶ್ವರ ಮಹಾಸ್ವಾಮಿಗಳು ಶ್ರೀಕ್ಷೇತ್ರ ಶಕಟಪುರದ ಶ್ರೀಮಠಕ್ಕೆ ಹಸುವನ್ನು ನೀಡಿದರು- | Kannada Prabha

ಸಾರಾಂಶ

ಸನಾತನ ಧರ್ಮದ ಸಂರಕ್ಷಣೆಗಾಗಿ ವೇದೋಕ್ತವಾದ ಭಗವಂತನ ಅವತಾರ ಶಂಕರ ಭಗವತ್ಪಾದರು.

ಸಿದ್ದಾಪುರ: ಸನಾತನ ಧರ್ಮದ ಸಂರಕ್ಷಣೆಗಾಗಿ ವೇದೋಕ್ತವಾದ ಭಗವಂತನ ಅವತಾರ ಶಂಕರ ಭಗವತ್ಪಾದರು. ಶಂಕರಾಚಾರ್ಯರು ಸಾಕ್ಷಾತ್ ಪರಮೇಶ್ವರನ ಅವತಾರ ಎಂದು ಶಕಟಪುರದ ವಿದ್ಯಾಪೀಠಾಧೀಶ್ವರ ಬದರಿ ವಿದ್ಯಾಭಿನವ ಕೃಷ್ಣಾನಂದತೀರ್ಥರು ನುಡಿದರು.ಅವರು ತಾಲೂಕಿನ ರಾಮದೇವ ಭಾನ್ಕುಳಿಮಠದಲ್ಲಿ ಶ್ರೀರಾಮಚಂದ್ರಾಪುರ ಮಠಾಧೀಶರಾದ ರಾಘವೇಶ್ವರ ಶ್ರೀ ನೇತೃತ್ವದಲ್ಲಿ ನಡೆಯುತ್ತಿರುವ ಶಂಕರಪಂಚಮಿ ಉತ್ಸವದ ಮೂರನೇ ದಿನ ಜರುಗಿದ ಧರ್ಮಸಭೆಯ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಜಗದ್ಗುರು ಎನ್ನುವ ಹೆಸರಿಗೆ ಅರ್ಹರಾದ ಶಂಕರರು ಸನಾತನ ಧರ್ಮವನ್ನು ಕಾಪಾಡಿದವರು. ಸನಾತನ ಧರ್ಮ ಪ್ರಚಾರದ ಜೊತೆಗೆ ಎಲ್ಲ ದೇವತೆಗಳನ್ನು ಒಟ್ಟಾಗಿಯೇ ಪೂಜಿಸುವ ಪಂಚಾಯತನ ಪೂಜಾ ಕಲ್ಪನೆಯ ಜೊತೆಗೆ ಯತಿಗಳೆಲ್ಲ ಸಮಾನರು ಎನ್ನುವದನ್ನು ಸೂಚಿಸಿದರು. ಇದು ನಿಜವಾದ ಅದ್ವೈತ. ಕೇವಲ ಉಪದೇಶ ನೀಡದೇ ಆಚರಣೆಯಲ್ಲೂ ತಂದವರು ಶಂಕರರ ಉಪದೇಶಗಳನ್ನು ಅಚ್ಚುಕಟ್ಟಾಗಿ ಅನುಸರಿಸುವುದೇ ಅವರಿಗೆ ಸಲ್ಲಿಸುವ ಗೌರವ. ಶಂಕರರ ತತ್ವಗಳನ್ನು ಈ ಉತ್ಸವದಲ್ಲಿ ಒಳಗೊಂಡಿರುವದು ಮಾದರಿಯಾದದ್ದು ಎಂದರು.

ದಿವ್ಯ ಸಾನಿಧ್ಯವಹಿಸಿದ್ದ ಶ್ರೀರಾಮಚಂದ್ರಾಪುರ ಮಠಾಧೀಶ ರಾಘವೇಶ್ವರ ಶ್ರೀ ಆಶೀರ್ವಚನ ನೀಡಿ, ಅನೇಕ ಸ್ವತಂತ್ರ ರಾಜ್ಯಗಳಿದ್ದ ಅಂದಿನ ಅಖಂಡ ಭಾರತವನ್ನು ಒಂದು ರಾಷ್ಟ್ರವಾಗಿ ಕಲ್ಪಿಸಿಕೊಟ್ಟವರು ಆಚಾರ್ಯ ಶಂಕರರು. ಮೂರ್ತಿಯಿಂದ ಅಮೂರ್ತಕ್ಕೆ ಸಾಗುವ ಮಾರ್ಗವನ್ನು ತೋರಿಸಿಕೊಟ್ಟವರು ಅವರು. ಭಾರತದ ನಾಲ್ಕು ದಿಕ್ಕುಗಳ ಮತ್ತು ಮಧ್ಯ ಭಾರತದ ಐದು ಶಿಲಾಬಿಂಬಗಳನ್ನು ಆಯ್ಕೆ ಮಾಡಿ ಅಂಬಿಕೆ, ಶಿವ, ಸೂರ್ಯ, ಗಣಪತಿ, ಮಹಾವಿಷ್ಣು ಮುಂತಾದ ದೇವರುಗಳ ಪಂಚಾಯತನ ಪೂಜೆಯನ್ನು ಅನುಷ್ಠಾನಗೊಳಿಸಿದರು. ಪಂಚಾಯತನ ಪೂಜೆ ಮಾಡುವವರು ಭಾರತವನ್ನು ಪೂಜೆ ಮಾಡಿದಂತೆ. ಇಂದು ಭಾರತ ದೇಶ ಒಂದೇ ಆಗಿದ್ದರೂ ಮನಸ್ಸು ಬೇರೆಯಾಗಿವೆ. ವಿಚಿತ್ರವಾದ ಈ ಕಾಲದಲ್ಲಿ ಜನಿವಾರ ತುಂಡರಿಸುವ, ಮಂಗಲಸೂತ್ರ ಕಳಚುವ ಸ್ಥಿತಿ ಬಂದಿದೆ. ಭಸ್ಮ, ತಿಲಕ ಧರಿಸಿದರೆ ಆಶ್ಚರ್ಯದಿಂದ ನೋಡುವ ಸಂದರ್ಭ ಈಗಿನದು. ಶಂಕರರು ನಮ್ಮೆಲ್ಲರ ತಾಯಿ ಬೇರು. ನಮ್ಮಂತ ಎಲೆಗಳಿಗೆ ತಾಯಿಬೇರಿನ ಸಂಬಂಧ ಬೇಕೇಬೇಕು. ನಮ್ಮ-ಶಂಕರರ ನಡುವೆ ಸ್ಮೃತಿ ಸೇತುವೆಯಾಗಬೇಕು. ಪ್ರಪಂಚವೇ ಸನಾತನ ಧರ್ಮದ ವ್ಯಾಪ್ತಿಯಲ್ಲಿದ್ದ ಕಾಲ ಮರುಕಳಿಸಲು ನಮ್ಮೆಲ್ಲರ ಶ್ರಮ ಅಗತ್ಯ. ಸನಾತನದ ರಕ್ಷಣೆಗೆ ನಾವೆಲ್ಲ ಮುಂದಾಗಬೇಕು ಎಂದರು.

ಈ ಸಂದರ್ಭದಲ್ಲಿ ರಾಘವೇಶ್ವರ ಶ್ರೀ ಶಕಟಪುರದ ಮಠಕ್ಕೆ ಓಂಗೋಲ್ ತಳಿಯ ಹಸು ನೀಡಿದರು. ಚಿತ್ರರಚನೆಕಾರ ನಿರ್ನಳ್ಳಿ ಗಣಪತಿ ಚಿತ್ರಿಸಿದ ಶ್ರೀಮಠದ ಪರಂಪರೆಯ ಅಷ್ಟಮ ರಾಘವೇಶ್ವರ ಶ್ರೀಗಳ ಚಿತ್ರವನ್ನು ಶಕಟಪುರದ ಶ್ರೀ ಅನಾವರಣಗೊಳಿಸಿದರು.

ರಾಘವೇಶ್ವರ ಶ್ರೀ ಮುಂದಿನ ಒಂದು ವರ್ಷ ಕಾಲ ೯ ಶ್ಲೋಕಗಳಿರುವ ಶ್ರೀಪಾದುಕಾ ಸ್ತೋತ್ರವನ್ನು ಒಂದೂವರೆ ಕೋಟಿ ಪಠಣ ಮಾಡಲು ಮಾತೆಯರಿಗೆ ಗುರಿಯಾಗಿ ನೀಡಿದರು.

ಶಂಕರಪಂಚಮಿ ಉತ್ಸವ ಸಮಿತಿ ಅಧ್ಯಕ್ಷ ಆರ್.ಎಸ್.ಹೆಗಡೆ ಹರಗಿ ದಂಪತಿಗಳು ಸಭಾಪೂಜೆ ನೆರವೇರಿಸಿದರು. ಉತ್ಸವ ಸಮಿತಿ ಗೌರವಾಧ್ಯಕ್ಷ ಜಿ.ಕೆ. ಹೆಗಡೆ ಗೋಳಗೋಡ ಪ್ರಾಸ್ತಾವಿಕ ಮಾತನಾಡಿದರು. ರವೀಂದ್ರಭಟ್ ಸೂರಿ ನಿರೂಪಿಸಿದರು.

ಸಿದ್ದಾಪುರ ತಾಲೂಕಿನ ಭಾನ್ಕುಳಿಮಠದಲ್ಲಿ ಜರುಗಿದ ಶಂಕರಪಂಚಮಿ ಉತ್ಸವದ ಸಂದರ್ಭದಲ್ಲಿ ರಾಘವೇಶ್ವರ ಶ್ರೀ ಶಕಟಪುರದ ಶ್ರೀಮಠಕ್ಕೆ ಹಸು ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ