ಕನ್ನಡಪ್ರಭ ವಾರ್ತೆ ಬೇಲೂರುಮಠಗಳು ಸಮಾಜಕ್ಕೆ ಸಂಸ್ಕಾರ, ಸಂಸ್ಕೃತಿ, ಒಳ್ಳೆಯ ನಡೆನುಡಿಯನ್ನು ನೀಡುವುದರ ಜೊತೆಗೆ ತಪ್ಪನ್ನು ತಿದ್ದಿ, ಒಳ್ಳೆಯವಾರನ್ನಾಗಿ ಬೆಳೆಸುವ ಕೆಲಸವನ್ನು ನಿರಂತರವಾಗಿ ಮಾಡುತ್ತಿವೆ ಎಂದು ಶಾಸಕ ಎಚ್ ಕೆ ಸುರೇಶ್ ಹೇಳಿದರು.ಪಟ್ಟಣದ ಶೃಂಗೇರಿ ಶಂಕರಮಠದ ಸಭಾಂಗಣದಲ್ಲಿ ಆದಿ ಶಂಕರಾಚಾರ್ಯರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ ಸಮಾಜ ಮತ್ತು ಹಿಂದುತ್ವ ಉಳಿದಿದೆ ಎಂದು ನಾವು ಹೇಳುವುದಾದರೆ, ಅದರ ಹಿಂದೆ ಇರುವ ಮೂಲ ಕಾರಣಗಳನ್ನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳಬೇಕು. ಬ್ರಾಹ್ಮಣ ಸಮಾಜದ ಪಾತ್ರ ಈ ವಿಚಾರದಲ್ಲಿ ಅತ್ಯಂತ ಮಹತ್ವದ್ದಾಗಿದೆ. ಸಮಾಜದಲ್ಲಿ ಆಚಾರ - ವಿಚಾರಗಳು, ಸಂಸ್ಕಾರಗಳು ಮತ್ತು ಜೀವನ ಮೌಲ್ಯಗಳು ಉಳಿಯಲು ಈ ಸಮುದಾಯದ ಕೊಡುಗೆ ಪ್ರಮುಖವಾಗಿದೆ ಎಂದು ಹೇಳಿದರು. ಶತಮಾನಗಳ ಹಿಂದೆ ನೀಡಿದ ಅವರ ಸಂದೇಶ ಇಂದಿಗೂ ಜೀವಂತವಾಗಿದೆ. ದೇಶದ ವಿವಿಧ ಭಾಗಗಳಲ್ಲೂ, ವಿದೇಶಗಳಲ್ಲೂ ಅವರ ಪ್ರಭಾವ ಕಾಣಬಹುದು. ಶೃಂಗೇರಿ ಮಠ ಪರಂಪರೆ ನಮ್ಮ ದೇಶದ ಆತ್ಮವನ್ನು ಪ್ರತಿನಿಧಿಸುತ್ತದೆ. ಆದ್ದರಿಂದ ಈ ಪರಂಪರೆಯನ್ನು ಗೌರವಿಸಿ ಕಾಪಾಡುವುದು ಎಲ್ಲರ ಹೊಣೆಗಾರಿಕೆಯಿದೆ. ಹಿಂದುತ್ವವು ಕೇವಲ ವಿಧಿವಿಧಾನಗಳಿಗೆ ಸೀಮಿತವಲ್ಲ; ಅದು ಮಾನವೀಯತೆ, ತ್ಯಾಗ ಮತ್ತು ಸೇವಾ ಮನೋಭಾವವನ್ನು ಒಳಗೊಂಡಿದೆ “ಸಮಾಜದ ಏಕತೆ ಮತ್ತು ಮೌಲ್ಯಗಳ ಉಳಿವಿಗಾಗಿ ಎಲ್ಲರೂ ಕೈಜೋಡಿಸಬೇಕು. ಶಂಕರಾಚಾರ್ಯರು ನೀಡಿದ ದಾರಿಯನ್ನು ಮುಂದುವರಿಸಬೇಕು ಎಂದು ಕರೆ ನೀಡಿದರು.ಶೃಂಗೇರಿ ಶಾರದ ಮಠದ ಧರ್ಮದರ್ಶಿ ಹಾಗೂ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ವಿಜಯಕೇಶವ ಮಾತನಾಡಿ ಶಂಕರಾಚಾರ್ಯರ ಜಯಂತಿಯನ್ನು ಪ್ರತೀ ವರ್ಷ ತಾಲೂಕು ಕಚೇರಿ ಮುಂದೆ ಆಚರಿಸುತ್ತಿದ್ದೆವು. ಆದರೆ ಅಲ್ಲಿ ಕೇವಲ ಕೆಲವೇ ಜನರು ಭಾಗವಹಿಸುತ್ತಿದ್ದರಿಂದ ಕಾರ್ಯಕ್ರಮಕ್ಕೆ ಗಂಭೀರತೆ ಕಾಣಿಸುತ್ತಿರಲಿಲ್ಲ. ಈ ಬಾರಿ ಶಾಸಕರ ಸಹಕಾರದಿಂದ ಕಾರ್ಯಕ್ರಮವನ್ನು ಶೃಂಗೇರಿ ಶಾರದ ಮಠದ ಸಭಾಂಗಣದಲ್ಲಿ ವಿಜೃಂಭಣೆಯಿಂದ ನಡೆಸಲು ಸಾಧ್ಯವಾಯಿತು. ಸರ್ಕಾರಿ ಕಾರ್ಯಕ್ರಮವಾಗಿದ್ದರೂ ಶಿಸ್ತು ಮತ್ತು ಗೌರವ ಇರಬೇಕು. ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಿರುವುದು ಸಂತೋಷ ತಂದಿದೆ ಎಂದರು ಎಂದರು.ಈ ಸಂದರ್ಭದಲ್ಲಿ ತಹಸೀಲ್ದಾರ್ ಸಂತೋಷ್, ಕ್ಷೇತ್ರ ಶಿಕ್ಷಣಾಧಿಕಾರಿ ಭಾಗ್ಯಮ್ಮ, ಸಮನ್ವಯಾಧಿಕಾರಿ ಶಿವಮರಿಯಪ್ಪ, ಪುರಸಭೆ ಮುಖ್ಯಾಧಿಕಾರಿ ಬಸವರಾಜು ಶಿಗ್ಗಾವಿ, ವೇದಬ್ರಹ್ಮ ಕೆ. ಆರ್. ಮಂಜುನಾಥ್, ಪ್ರಧಾನ ಅರ್ಚಕ ಸುಮಂತ್ ಕುಮಾರ್ ಶರ್ಮಾ, ರಮೇಶ್ ಆನಂಬಿ, ಸುರೇಶ್, ನಾಗರಾಜು ಅನಂತಮೂರ್ತಿ, ಶ್ರೀವತ್ಸ, ಗುಂಡಣ್ಣ, ಶಿರಸ್ತೇದಾರ್ ದೇವರಾಜು, ನರಸಿಂಹಮೂರ್ತಿ, ಅನಂತಮೂರ್ತಿ, ರವೀಂದ್ರ, ಗಾಯತ್ರಿ ಭಜನಾ ಮಂಡಳಿ ಶಾರದಮ್ಮ ಹಾಗೂ ಸದಸ್ಯರು ಉಪಸ್ಥಿತರಿದ್ದರು.