ಲಕ್ಷ್ಮೇಶ್ವರ: ಹಿಂದೂ ಸಮಾಜಕ್ಕೆ ಶಂಕರಾಚಾರ್ಯರ ಕೊಡುಗೆ ಅಪಾರ, ಹಿಂದೂ ಸಮಾಜ ಸಂಘಟನೆಗೆ ಅವರು ಒತ್ತು ನೀಡಿದ್ದರು. ಅವರ ಜಯಂತಿ ನಾಡಿನೆಲ್ಲೆಡೆ ಅದ್ಧೂರಿಯಾಗಿ ಆಚರಿಸುವಂತಾಗಬೇಕು ಎಂದು ಪಟ್ಟಣದ ಬ್ರಹ್ಮವೃಂದದ ಅಧ್ಯಕ್ಷ ಗೋಪಾಲ ಪಡ್ನೀಸ್ ಹೇಳಿದರು.
ಸೋಮವಾರ ಪಟ್ಟಣದ ಶಂಕರ ಭಾರತಿ ಮಠದಲ್ಲಿ ವಿಪ್ರ ಸಮಾಜದಿಂದ ಶಂಕರಾಚಾರ್ಯರ ಜಯಂತಿ ಅಂಗವಾಗಿ ಸಮಾಜದ ಪ್ರತಿಭಾವಂತ ಮಕ್ಕಳಿಗೆ ಮತ್ತು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ, ವಿವಿಧ ವೃತ್ತಿಯಲ್ಲಿ ಸಾರ್ಥಕ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಸಮಾಜ ಹಿರಿಯರಿಗೆ ನಡೆದ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಶಂಕರಾಚಾರ್ಯರು ಪ್ರತಿಪಾದಿಸಿದ್ದ ಸಿದ್ಧಾಂತ ಮನುಕುಲದ ಒಳಿತಿನ ಆಶಯ ಹೊಂದಿದ್ದವು. ದೇಶದಲ್ಲಿ ಶಾಂತಿ, ಸೌಹರ್ದತೆಗೆ ಧಾರ್ಮಿಕ ಚಿಂತನೆಗಳ ಅಡಿಪಾಯ ಒದಗಿಸಿದ್ದರು ಎಂದು ಹೇಳಿದ ಅವರು, ಬ್ರಾಹ್ಮಣ ಸಮಾಜದ ವತಿಯಿಂದ ವರ್ಷವಿಡಿ ಹತ್ತು ಹಲವು ಸಮಾಜಮುಖಿ ಕಾರ್ಯಕ್ರಮ ಆಯೋಜಿಸಲಾಗುತ್ತಿದ್ದು, ಪ್ರತಿಭಾವಂತರಿಗೆ ಪ್ರೋತ್ಸಾಹ ನೀಡುವ ಕಾರ್ಯ ಮಾಡುತ್ತಿದ್ದು, ಸಮಾಜದ ಸಂಘಟನೆಯಲ್ಲಿ ಎಲ್ಲರೂ ಪಾಲ್ಗೊಳ್ಳುವಂತೆ ಮನವಿ ಮಾಡಿದರು.ತಾಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷ ಕೃಷ್ಣ ಕುಲಕರ್ಣಿ ಮಾತನಾಡಿ, ದೇಶದ ಧಾರ್ಮಿಕ ಪರಂಪರೆ, ಸಂಸ್ಕೃತಿ ಉಳಿವಿಗೆ ಶಂಕರಾಚಾರ್ಯರರ ಕೊಡುಗೆ ಅಪಾರ, ತಮ್ಮ ಜೀವಿತಾವಧಿಯ ಅಲ್ಪ ಅವಧಿಯಲ್ಲೇ ಅಗಾಧ ಪಾಂಡಿತ್ಯ ಬೆಳೆಸಿಕೊಂಡು ಇಡೀ ವಿಶ್ವದಲ್ಲೇ ಅಪ್ರತಿಮ ಸಾಧನೆ ಮಾಡಿದರು. ಶಂಕರಾಚಾರ್ಯರು ಹಿಂದೂ ಧರ್ಮವನ್ನು ಪುನರುತ್ಥಾನಗೊಳಿಸಿದರು. ಶಂಕರರು ಒಂದು ವರ್ಗಕ್ಕೆ, ಒಂದು ಪಂಗಡಕ್ಕೆ ಸೀಮಿತರಾಗಿಲ್ಲ. ಇಡೀ ಹಿಂದೂ ಸಮಾಜಕ್ಕೆ ಸೇರಿದವರಾಗಿದ್ದಾರೆ. ಹಿಂದೂ ಸಮಾಜಕ್ಕೆ ಅಪಾರ ಕೊಡುಗೆ ನೀಡಿದ ಸಾಧಕ ಶಂಕರಾಚಾರ್ಯರ ಜಯಂತಿಯನ್ನು ಇಡೀ ಹಿಂದೂ ಸಮಾಜ ಆಚರಿಸಿದಾಗ ಶಂಕರ ಜಯಂತಿಗೆ ಸಾರ್ಥಕತೆ ಬರುತ್ತದೆ ಎಂದ ಅವರು ಬ್ರಾಹ್ಮಣ ಸಮಾಜದ ಮಕ್ಕಳು ಇಂದು ರಾಜ್ಯಮಟ್ಟದಲ್ಲಿ ಹೆಚ್ಚು ಅಂಕಗಳಿಸಿ ಸಾಧನೆ ಮಾಡಿರುವದು ಹೆಮ್ಮೆಯ ಸಂಗತಿಯಾಗಿದೆ. ವಿವಿಧ ಕ್ಷೇತ್ರದಲ್ಲಿ ತಮ್ಮದೆ ಹೆಸರು ಸಂಪಾದಿಸಿದ ಹಾಗೂ ಅನೇಕ ವೃತ್ತಿಗಳಲ್ಲಿ ಪ್ರಾಮಾಣಿಕತೆ ಮತ್ತು ನಿಸ್ವಾರ್ಥ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಸಮಾಜದ ಹಿರಿಯರು ಸಮಾಜ ಸಂಘಟನೆಗೆ ಒತ್ತು ನೀಡಿ ಮಾರ್ಗದರ್ಶನ ಮಾಡಲಿ ಎಂದು ಹೇಳಿದರು.ಈ ವೇಳೆ ಸಮಾಜದ ಹಿರಿಯ ಮುಖಂಡ ನಾರಾಯಣಭಟ್ ಪುರಾಣಿಕ, ಕೆ.ಎಸ್. ಕುಲಕರ್ಣಿ, ಗುರುರಾಜ ಪಾಟೀಲ ಕುಲಕರ್ಣಿ, ಶಂಕರ ಬೆಟಗೇರಿ, ದೃವ ಬೆಟಗೇರಿ, ಡಿ.ಪಿ. ಹೇಮಾದ್ರಿ, ಅರವಿಂದ ದೇಶಪಾಂಡೆ, ಡಾ. ಪ್ರಸನ್ನ ಕುಲಕರ್ಣಿ, ಕೃಷ್ಣಕುಮಾರ ಕುಲಕರ್ಣಿ ಸೇರಿದಂತೆ ಅನೇಕರು ಇದ್ದರು.