- ದತ್ತಿ ಉಪನ್ಯಾಸದಲ್ಲಿ ಡಾ.ಮಂಜುನಾಥ ಕುರ್ಕಿ - - - ದಾವಣಗೆರೆ: ಬಂಡವಾಳಶಾಹಿಗಳ ಸಾಮ್ರಾಜ್ಯದಿಂದ ದೂರವಿದ್ದ ದಲಿತ, ಶೋಷಿತ ವ್ಯಕ್ತಿಗಳು ತಮ್ಮ ಅಂತರಂಗದ ಅರಿವಿನ ಮೂಲಕ ತಾಯಿನುಡಿಯ ಭಾಷೆಯಿಂದ ಹೊರಹಾಕಿದ ನುಡಿಗಳೇ ಶರಣ ಸಾಹಿತ್ಯ. ಜನಸಾಮಾನ್ಯರ ನೋವು ನಲಿವುಗಳಿಗೆ, ದುಡಿಯುವ ವರ್ಗಗಳ ಧ್ವನಿಯಾಗಿ ಅವರ ಅಪೇಕ್ಷೆ, ಅಗತ್ಯತೆಗಳಿಗೆ ದೃಢ ನಿರ್ಧಾರವನ್ನು ಶರಣ ಸಾಹಿತ್ಯ ಒದಗಿಸಿದೆ ಎಂದು ದಾವಣಗೆರೆ ಜಿಲ್ಲಾ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಡಾ. ಎಚ್.ಎಸ್. ಮಂಜುನಾಥ ಕುರ್ಕಿ ಅಭಿಪ್ರಾಯಪಟ್ಟರು.
ಶರಣ ಸಾಹಿತ್ಯವನ್ನು ಯಾರು ಓದಿ ಅಧ್ಯಯನ ಮಾಡಿ, ಅವಲೋಕನ ಮಾಡಿ, ಆ ನುಡಿಯನ್ನು ತಮ್ಮ ನಡೆಯಲ್ಲಿ ಅಳವಡಿಸಿಕೊಳ್ಳುತ್ತಾರೆಯೋ, ಆ ವ್ಯಕ್ತಿ ಮೃಗತ್ವದಿಂದ, ಮನುಷ್ಯತ್ವ ಮತ್ತು ದೈವತ್ವದ ಕಡೆಗೆ ಕೊಂಡೊಯ್ಯುವ ಶಕ್ತಿಯೇ ಶರಣ ಸಾಹಿತ್ಯದ ಮೌಲ್ಯ ಎಂದರು.
ವಿನೂತನ ಮಹಿಳಾ ಸಮಾಜದ ಅಧ್ಯಕ್ಷೆ ರೇಖಾ ಓಂಕಾರಪ್ಪ ವಚನ ಸಾಹಿತ್ಯದ ಮಹತ್ವವನ್ನು ವಿವರಿಸಿ ವಿದ್ಯಾರ್ಥಿಗಳು ಪ್ರತಿದಿನ ವಚನಗಳನ್ನು ಅಭ್ಯಾಸ ಮಾಡಬೇಕೆಂದು ತಿಳಿಸಿದರು.ಶರಣ ಸಾಹಿತ್ಯ ಪರಿಷತ್ತಿನ ನಗರ ಘಟಕ ಅಧ್ಯಕ್ಷ ಎಂ.ಪರಮೇಶ್ವರಪ್ಪ ಸಿರಿಗೆರೆ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಶರಣತತ್ವ ಪ್ರತಿಪಾದಕ ಶಿವಕುಮಾರ ಚಿತ್ರಿಕಿ ವಚನ ಗಾಯನ ಮೂಲಕ ಸಭಿಕರನ್ನು ರಂಜಿಸಿದರು.
ನಗರ ಘಟಕದ ಎಂ.ಎಸ್. ನಾಗರಾಜಪ್ಪ, ಬುಳ್ಳಾಪುರದ ಮಲ್ಲಿಕಾರ್ಜುನಪ್ಪ, ಶೈಲಜಾ ಪಾಲಾಕ್ಷಪ್ಪ, ಎನ್.ಎಸ್.ರಾಜು, ಆರ್.ಯೋಗೇಶ್ವರಪ್ಪ ಇತರರು ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಲಿಂ:ಗೌರಮ್ಮ ಮತ್ತು ವೀರಭದ್ರಯ್ಯ ಹಂಜಗಿಮಠ ದತ್ತಿಯ ಕುಟುಂಬದ ಶಾಂಭವಿಯವರನ್ನು ಸನ್ಮಾನಿಸಲಾಯಿತು. ಶ್ರೀಕುಮಾರ್ ಆನೆಕೊಂಡ ಸ್ವಾಗತಿಸಿದರು, ಬಿ.ಜಿ. ಲೀಲಾವತಿ ಶೇಖರಪ್ಪ ವಂದಿಸಿದರು. ಶಿಕ್ಷಕ ಪಂಪಾಪತಿ ಕಾರ್ಯಕ್ರಮ ನಿರೂಪಿಸಿದರು.
- - - -3ಕೆಡಿವಿಜಿ31.ಜೆಪಿಜಿ:ಉಪನ್ಯಾಸ ಕಾರ್ಯಕ್ರಮದಲ್ಲಿ ಡಾ.ಮಂಜುನಾಥ ಕುರ್ಕಿ ಮಾತನಾಡಿದರು.