ಹರಪನಹಳ್ಳಿ: ಇಂದಿನ ಬದುಕಿಗೆ ಶರಣ ಸಂಸ್ಕೃತಿ ಅತ್ಯಗತ್ಯವಾಗಿದೆ. ಮುಂದಿನ ಪೀಳಿಗೆಯ ಸುಖ ಜೀವನಕ್ಕೆ ದಾರಿದೀಪವಾಗಲಿದೆ ಎಂದು ಹೂವಿನ ಹಡಗಲಿ ಗವಿಮಠದ ಡಾ.ಹಿರಿಶಾಂತವೀರ ಸ್ವಾಮೀಜಿ ಹೇಳಿದರು.
ಎಲ್ಲೆಡೆ ಶರಣ ಸಾಹಿತ್ಯ ಪ್ರಸಾರ ಮಾಡಿ ಸುಗಮ ಜೀವನಕ್ಕೆ ಅನುವು ಮಾಡಿಕೊಡಬೇಕಾಗಿದೆ. ಶರಣರ ಸಂದೇಶ ಸಾರುವ ವಚನಗಳು ನಮ್ಮ ಬದುಕಿನಲ್ಲಿ ಹಾಸು ಹೊಕ್ಕಾಗಿ ಕಾಯಕ ಸಂಸ್ಕೃತಿಯನ್ನು ಸಾರಬೇಕಿದೆ ಎಂದರು.
ದತ್ತಿ ಉಪನ್ಯಾಸ ನೀಡಿದ ನಿವೃತ್ತ ಶಿಕ್ಷಣಾಧಿಕಾರಿ ಮೈಸೂರು ಭರಮಪ್ಪ ಮಾತನಾಡಿ, ಶರಣ ಚಳವಳಿಯು ಸರ್ವ ಜನಾಂಗದ ಅಭ್ಯುದಯಕ್ಕೆ ಕಾರಣವಾಗುವ ಮೂಲಕ ವಿಶ್ವಕ್ಕೆ ಮೊದಲ ಸಂಸತ್ತು ನೀಡಿದ ಗೌರವಕ್ಕೆ ಪಾತ್ರವಾಗಿದೆ ಎಂದರು.ಎಲ್ಲ ಸಂಸ್ಕೃತಿಯ ತೊಟ್ಟಿಲಾಗಿ ಜಗತ್ತನ್ನು ಮುನ್ನಡೆಸುವ ದಿಕ್ಸೂಚಿಯಾಗಿ, ಮಾನವರ ಅಭಿವೃದ್ಧಿಗೆ ದೂರ ದೃಷ್ಟಿ ಹೊಂದಿದ ಶರಣ ಸಂಸ್ಕೃತಿ ಇಂದಿನ ಅಗತ್ಯವಾಗಿದೆ ಎಂದರು.
ಬಿಜೆಪಿ ಮುಖಂಡ ಆರುಂಡಿ ನಾಗರಾಜ, ಸಾಹಿತಿ ಪಿ.ರಾಮ ನಮಲಿ, ಸಿ.ಸಿದ್ದಪ್ಪ ಬಣಕಾರ ರೇವಣ್ಣ, ಬಾಗಳಿ ಶಿವಯೋಗಿ, ಡಿ.ಶಂಕ್ರಪ್ಪ ಕೆ.ವಿಜಯಕುಮಾರ, ಪುಷ್ಪ ದಿವಾಕರ, ಶರಣ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಉಪಸ್ಥಿತರಿದ್ದರು.