ಆದಿಚುಂಚನಗಿರಿಯಲ್ಲಿ ಶರನ್ನವರಾತ್ರಿ ಪೂಜಾ ಮಹೋತ್ಸವಕ್ಕೆ ಚಾಲನೆ

KannadaprabhaNewsNetwork |  
Published : Sep 24, 2025, 01:00 AM IST
23ಕೆಎಂಎನ್ ಡಿ11 | Kannada Prabha

ಸಾರಾಂಶ

ನಿರ್ಮಲಾನಂದನಾಥ ಶ್ರೀಗಳು ಚಿನ್ನದ ಕಿರೀಟಧಾರಣೆಯೊಂದಿಗೆ ಕಂಠಿಹಾರ ಹಾಗೂ ಚಿನ್ನಲೇಪಿತ ಶಾಲು ಧರಿಸಿ ಸರ್ವಾಲಂಕೃತಗೊಂಡು ಶರನ್ನವರಾತ್ರಿ ಪೂಜಾ ಮಹೋತ್ಸವದಲ್ಲಿ ಭಾಗಿಯಾದ ಶ್ರೀಗಳನ್ನು ಶ್ರೀ ಮಠದ ವಟುಗಳು ಬಹುಪರಾಕ್ ನೊಂದಿಗೆ ಬರಮಾಡಿಕೊಂಡು ಸಿಂಹಾಸನ ಹಾಗೂ ಷೋಡಶೋಪಚಾರ ಪೂಜೆ.

ಕನ್ನಡಪ್ರಭ ವಾರ್ತೆ ನಾಗಮಂಗಲ

ತಾಲೂಕಿನ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದಲ್ಲಿ ಶರನ್ನವರಾತ್ರಿ ಪ್ರಯುಕ್ತ ಸೋಮವಾರ ಸಂಜೆ ಮಠದ ಪೀಠಾಧ್ಯಕ್ಷ ಶ್ರೀನಿರ್ಮಲಾನಂದನಾಥ ಸ್ವಾಮೀಜಿ ಅವರ ಸಾನಿಧ್ಯದಲ್ಲಿ ವಿವಿಧ ಪೂಜಾ ಮಹೋತ್ಸವಗಳು ಬಹಳ ವಿಜೃಂಭಣೆಯಿಂದ ನೆರವೇರಿದವು.

ಕ್ಷೇತ್ರದ ಶ್ರೀಕಾಲಭೈರವೇಶ್ವರ ಸ್ವಾಮಿ ಸೇರಿದಂತೆ ಎಲ್ಲಾ ದೇವತೆಗಳಿಗೂ ಶ್ರೀಗಳು ಪೂಜೆ ಸಲ್ಲಿಸಿದರು. ನಂತರ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರ ಸಿದ್ಧ ಸಿಂಹಾಸನ ಪೂಜೆ ಹಾಗೂ ಷೋಡಶೋಪಚಾರ ಪೂಜೆಗಳು ಶ್ರೀಮಠದ ವಟುಗಳಿಂದ ನೆರೆವೇರಿತು.

ನಿರ್ಮಲಾನಂದನಾಥ ಶ್ರೀಗಳು ಚಿನ್ನದ ಕಿರೀಟಧಾರಣೆಯೊಂದಿಗೆ ಕಂಠಿಹಾರ ಹಾಗೂ ಚಿನ್ನಲೇಪಿತ ಶಾಲು ಧರಿಸಿ ಸರ್ವಾಲಂಕೃತಗೊಂಡು ಶರನ್ನವರಾತ್ರಿ ಪೂಜಾ ಮಹೋತ್ಸವದಲ್ಲಿ ಭಾಗಿಯಾದ ಶ್ರೀಗಳನ್ನು ಶ್ರೀ ಮಠದ ವಟುಗಳು ಬಹುಪರಾಕ್ ನೊಂದಿಗೆ ಬರಮಾಡಿಕೊಂಡು ಸಿಂಹಾಸನ ಹಾಗೂ ಷೋಡಶೋಪಚಾರ ಪೂಜೆಯನ್ನು ನೆರೆವೇರಿಸಿದರು. ನಂತರ ಸಿಂಹಾಸನದಲ್ಲಿ ಕುಳಿತು ಶ್ರೀಗಳು ನೆರೆದಿದ್ದ ಭಕ್ತಾದಿಗಳಿಗೆ ದರ್ಶನ ಆಶೀರ್ವಾದ ನೀಡಿದರು.

ಈ ವೇಳೆ ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ, ವಿಜಯನಗರ ಶಾಖಾ ಮಠದ ಕಾರ್ಯದರ್ಶಿ ಸೌಮ್ಯನಾಥ ಸ್ವಾಮೀಜಿ, ಶ್ರೀಮಠದ ಚೈತನ್ಯನಾಥ ಸ್ವಾಮೀಜಿ ಸೇರಿದಂತೆ ಮಾವಿನಕೆರೆ, ನಾಗಲಾಪುರ, ಮುತ್ತುಗದಹಳ್ಳಿ, ಕರಡಕೆರೆ, ಬ್ಯಾಡರಹಳ್ಳಿ, ಕಲ್ಲುನಾಗತಿಹಳ್ಳಿ, ಚಿಕ್ಕಶೆಟ್ಟಿಕೆರೆ, ದೊಡ್ಡಶೆಟ್ಟಿಕೆರೆ, ಡಣಾಯಕನಪುರ ಮತ್ತು ಡಿ.ಬಿ.ಹಟ್ಟಿ ಗ್ರಾಮಗಳ ಭಕ್ತರು ಹಾಗೂ ಗ್ರಾಮಸ್ಥರು ಇದ್ದರು.

ನಾಳೆ ಎಚ್.ಡಿ.ಚೌಡಯ್ಯ ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ

ಕನ್ನಡಪ್ರಭ ವಾರ್ತೆ ಮಂಡ್ಯ

ಜನತಾ ಶಿಕ್ಷಣ ಟ್ರಸ್ಟ್‌ನಿಂದ ಸೆ.೨೫ರಂದು ನಗರದ ಪಿಇಎಸ್ ಎಂಜಿನಿಯರಿಂಗ್ ಕಾಲೇಜಿನ ನಿತ್ಯ ಸಚಿವ ಕೆ.ವಿ.ಶಂಕರಗೌಡ ತರಬೇತಿ ಮತ್ತು ಉದ್ಯೋಗ ಕೇಂದ್ರದ ಸಭಾಂಗಣದಲ್ಲಿ ಡಾ.ಎಚ್.ಡಿ.ಚೌಡಯ್ಯನವರ ೯೮ನೇ ಜನ್ಮ ದಿನಾಚರಣೆ ಹಾಗೂ ೨೦೨೫ನೇ ಸಾರಿನ ರಾಜ್ಯ ಮಟ್ಟದ ಶಿಕ್ಷಣ, ಸಹಕಾರ ಮತ್ತು ಕ್ರೀಡಾ ಪ್ರಶಸ್ತಿಗಳ ಪ್ರದಾನ ಸಮಾರಂಭ ವಿದ್ಯಾರ್ಥಿ ಪುರಸ್ಕಾರ ಸಮಾರಂಭ ನಡೆಯಲಿದೆ ಎಂದು ಪಿಇಟಿ ನಿರ್ದೇಶಕ ಡಾ.ರಾಮಲಿಂಗಯ್ಯ ತಿಳಿಸಿದರು.

ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯ್ ಆನಂದ್ ಅವರು ಅಧ್ಯಕ್ಷತೆ ವಹಿಸುವ ಸಮಾರಂಭವನ್ನು ಪಿಇಟಿ ಉಪಾಧ್ಯಕ್ಷ ಎಂ.ಬಿ. ಶ್ರೀಧರ್ ಉದ್ಘಾಟಿಸುವರು. ವಿಶ್ರಾಂತ ಕುಲಪತಿ ಡಾ.ಕೆ.ಎಸ್.ರಂಗಪ್ಪ ಅವರು ಪ್ರಶಸ್ತಿ ಪ್ರದಾನ ಮಾಡುವರು. ಪಿಇಟಿ ಕಾರ್ಯದರ್ಶಿ ಎಸ್.ಎಲ್. ಶಿವಪ್ರಸಾದ್, ಧರ್ಮದರ್ಶಿ ಎಚ್.ಸಿ.ಮೋಹನ್‌ಕುಮಾರ್ ಅವರು ಸಮಾರಂಭದಲ್ಲಿ ಭಾಗವಹಿಸುವರು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ನಿವೃತ್ತ ಸಹಾಯಕ ನಿರ್ದೇಶಕ ಎಂ.ಕೆ.ರಾಮಸ್ವಾಮಿ ಅವರಿಗೆ ಡಾ.ಎಚ್.ಡಿ.ಚೌಡಯ್ಯ ಶಿಕ್ಷಣ ಪ್ರಶಸ್ತಿ, ಮಂಡ್ಯ ಡಿಸಿಸಿ ಬ್ಯಾಂಕ್‌ಗೆ ಚೌಡಯ್ಯ ಸಹಕಾರ ಪ್ರಶಸ್ತಿ, ಮೈಸೂರಿನ ವಿಶೇಷ ಚೇತನ ಮಾತೃಮಂಡಳಿ ನಿರ್ದೇಶಕ ವಿಲ್ಟ್ರೇಡ್ ಡಿಸೋಜ ಅವರಿಗೆ ಡಾ.ಎಚ್.ಡಿ.ಚೌಡಯ್ಯ ಕ್ರೀಡಾ ಪ್ರಶಸ್ತಿ ಹಾಗೂ ಹೊಳಲು ಪ್ರೌಢಶಾಲೆಯ ವಿದ್ಯಾರ್ಥಿನಿ ಲಿಖಿತ್ ಎಚ್.ಪಿ., ಪ್ರಜ್ವಲ್ ಎಚ್.ಎಂ., ವೆಂಕಟೇಶ್ವರ ವಿದ್ಯಾನಿಕೇತನ ಪ್ರೌಢಶಾಲೆಯ ಪುಣ್ಯಶ್ರೀ ಕೆ.ಎಸ್., ಚೇತನ್‌ಗೌಡ ಎಚ್.ಸಿ. ಅವರಿಗೆ ಪ್ರಸಕ್ತ ಸಾಲಿನ ವಿದ್ಯಾರ್ಥಿ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗುವುದು ಎಂದರು.

ಪಿಇಟಿ ಕಾರ್ಯದರ್ಶಿ ಎಸ್.ಎಲ್. ಶಿವಪ್ರಸಾದ್ ಗೋಷ್ಠಿಯಲ್ಲಿದ್ದರು.

PREV

Recommended Stories

ಪಾಲಿಕೆಗಳ ಚುನಾವಣೆ ಮುಗಿವವರೆಗೆ ಬೆಂಗಳೂರಲ್ಲಿ ಮತಪಟ್ಟಿ ಪರಿಷ್ಕರಣೆ ಮುಂದೂಡಿ : ಕೇಂದ್ರ ಆಯುಕ್ತರಿಗೆ ಪತ್ರ
ಡ್ರಾಪ್‌ ನೆಪದಲ್ಲಿ ಗುತ್ತಿಗೆದಾರನ ದರೋಡೆ ಮಾಡಿದ್ದ ನಾಲ್ವರ ಬಂಧನ