- ಜ.24ರಂದು ನಡೆಯಲಿರುವ ಸಮ್ಮೇಳನ,
ಕಡೂರು ತಾಲೂಕಿನ ಗಿರಿಯಾಪುರ ಶ್ರೀ ಗುರುಕೃಪಾ ಪ್ರೌಢ ಶಾಲಾ ಆವರಣದಲ್ಲಿ ಜನವರಿ 24 ರಂದು ನಡೆಯುವ ಜಿಲ್ಲಾಮಟ್ಟದ ಪ್ರಥಮ ಮಕ್ಕಳ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಕೊಪ್ಪದ ಕುಮಾರಿ ಅವನಿ ಎನ್. ಗೋಗಟೆಯನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಸರ್ವಾನುಮತದಿಂದ ಆಯ್ಕೆ ಮಾಡಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸೂರಿ ಶ್ರೀನಿವಾಸ್ ತಿಳಿಸಿದ್ದಾರೆ.
ಸಂಗೀತ, ನೃತ್ಯ, ಭಾಷಣ, ನಾಟಕ, ಬರಹ, ಕ್ರೀಡೆ ಹಾಗೂ ಓದಿನಲ್ಲೂ ಮುಂತಾದ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿರುವ ಅಪ್ಪಟ ಮಲೆನಾಡಿನ ಗ್ರಾಮೀಣ ಪ್ರತಿಭೆ ಕುಮಾರಿ ಅವನಿ ಎನ್. ಗೋಗಟೆ, ಕೊಪ್ಪ ,ಸರ್ವಾಧ್ಯಕ್ಷರಾಗಿದ್ದು ಮಲೆನಾಡಿನ ಗೋಗಟೆ, ಕುಟುಂಬದ ಪ್ರತಿನಿಧಿಯಾಗಿರುವ ಈಕೆಯ ತಂದೆ ನಾಗರಾಜ್ ಗೋಗಟೆ ಕೀಬೋರ್ಡ್ ವಾದಕರು ಸಂಗೀತ ನಿರ್ದೇಶಕರು ಹಾಗೂ ಹಾಡುಗಾರರು ಇವರ ತಾಯಿ ನಾಗರತ್ನ ರಾಜ್ಯದ ಪ್ರತಿಷ್ಠಿತ ಸುಗಮ ಸಂಗೀತ ಗಾಯಕಿ ಆದ್ದರಿಂದ ಈಕೆಗೂ ಸಂಗೀತ ಕ್ಷೇತ್ರದಲ್ಲಿ ಅಪಾರ ಜ್ಞಾನವಿದೆ. ಪ್ರಸ್ತುತ ಕೊಪ್ಪ ಪಟ್ಟಣದ ಬಿಜಿಎಸ್ ವೆಂಕಟೇಶ್ವರ ವಿದ್ಯಾ ಮಂದಿರ ಶಾಲೆಯಲ್ಲಿ 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದು ಎಲ್ಲಾ ಗುರುಗಳ ನೆಚ್ಚಿನ ವಿದ್ಯಾರ್ಥಿನಿಯಾಗಿದ್ದಾಳೆ.ಶಾಸ್ತ್ರೀಯ ಸಂಗೀತ ಅಭ್ಯಾಸವನ್ನು ತನ್ನ ಆರನೇ ವಯಸ್ಸಿನಲ್ಲಿಯೇ ಪ್ರಾರಂಭಿಸಿ ಪ್ರಸ್ತುತ ವಿದುಷಿ ಗಾಯತ್ರಿ ನಾಗರಾಜ್ ಇವರ ಬಳಿ ಅಭ್ಯಾಸ ಮಾಡುತ್ತಿದ್ದಾರೆ. ಪ್ರತಿಭಾ ಕಾರಂಜಿ ಚುಂಚೋತ್ಸವ ಮುಂತಾದ ಕಾರ್ಯಕ್ರಮಗಳಲ್ಲಿ ರಾಜ್ಯಮಟ್ಟದಲ್ಲಿ ಪ್ರತಿನಿಧಿಸಿ ಮೂರು ಬಾರಿ ಜಾನಪದ ಗೀತೆ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಬಹುಮಾನ ಪಡೆದಿರುವ ಈಕೆ ಭಾಷಾ ಯಾನ ಸಾಂಸ್ಕೃತಿಕ ಪ್ರತಿಷ್ಠಾನ ನಡೆಸುವ ಕಾರ್ಯಕ್ರಮದಲ್ಲಿ ರಾಜ್ಯಾದ್ಯಂತ ಇವರ ಹಾಡುಗಳು ಹೆಗ್ಗಳಿಕೆ ಪಡೆದಿದೆ. ಪ್ರತಿಷ್ಠಿತ ರೋಟರಿ ಸಂಸ್ಥೆ ನಡೆಸುವ ಹಾಡು, ನಾಟಕ, ನೃತ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರತಿ ವರ್ಷ ಸಮಗ್ರ ಪ್ರಶಸ್ತಿ ಪಡೆಯುವಲ್ಲಿ ಇವರ ಕೊಡುಗೆ ಅಪಾರ.
ಇವರು ಮಕ್ಕಳ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಆಯ್ಕೆಯಾದುದಕ್ಕೆ ಶೃಂಗೇರಿ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಗುಣನಾಥ ಸ್ವಾಮೀಜಿ, ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಮಹಾಸ್ವಾಮಿಗಳು ಹರಿಹರಪುರ, ಶೃಂಗೇರಿ ಪೀಠದ ಆಡಳಿತ ಅಧಿಕಾರಿಗಳಾದ ಮುರಳಿಯವರು, ಶೃಂಗೇರಿ ಕ್ಷೇತ್ರದ ಶಾಸಕ ಟಿ. ಡಿ. ರಾಜೇಗೌಡ, ಕಡೂರು ಕ್ಷೇತ್ರದ ಶಾಸಕ ಕೆ. ಎಸ್. ಆನಂದ್ ಮತ್ತು ಕೊಪ್ಪ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಜೆ.ಎಂ. ಹರ್ಷ, ಕಡೂರು ತಾಲೂಕಿನ ಅಧ್ಯಕ್ಷರಾದ ಚಿಕ್ಕನಲ್ಲೂರು ಎಸ್. ಪರಮೇಶ್ ಹೋಬಳಿ ಅಧ್ಯಕ್ಷರಾದ ಶಿವಲಿಂಗಸ್ವಾಮಿ ಹಾಗೂ ಸ್ವಾಗತ ಸಮಿತಿ ಅಧ್ಯಕ್ಷ ಜಿ. ಪ್ರಭುಕುಮಾರ್ ಅವರು ಈ ಆಯ್ಕೆಗೆ ಹರ್ಷ ವ್ಯಕ್ತಪಡಿಸಿ ಶುಭಾಶಯ ಕೋರಿದ್ದಾರೆ. 13 ಕೆಸಿಕೆಎಂ 1ಕುಮಾರಿ ಅವನಿ ಎನ್. ಗೋಗಟೆ