ಆಶ್ರಯ ನಿವೇಶನ ಹಂಚಿಕೆ, ಮೂಲಸೌಕರ್ಯದಲ್ಲೂ ಗೋಲ್ ಮಾಲ್

KannadaprabhaNewsNetwork |  
Published : Mar 04, 2026, 02:30 AM IST
3ಕೆಪಿಎಲ್21 ಪಾಳುಬಿದ್ದಿರುವ ನಗರ ವಸತಿ ಯೋಜನೆಯ ಮನೆಗಳು | Kannada Prabha

ಸಾರಾಂಶ

ಮನೆ ನಿರ್ಮಾಣ ಕೈಬಿಟ್ಟು,ನಿವೇಶವನ್ನೇನು ನೀಡಲು ನಿರ್ಧರಿಸಿ ಇದುವರೆಗೂ 1400 ನಿವೇಶನ ಹಂಚಿಕೆ ಮಾಡಲಾಗಿದೆ

ಸೋಮರಡ್ಡಿ ಅಳವಂಡಿ ಕೊಪ್ಪಳ

ಸೂರಿಲ್ಲದವರಿಗೆ ಸೂರು ನೀಡುವ ಸದಾಯಶದಿಂದ 2012 ರಲ್ಲಿಯೇ ಜಾರಿಯಾಗಿರುವ ನಗರ ವಸತಿ ಯೋಜನೆಯಡಿ ಹಿರೇಸಿಂದೋಗಿ ರಸ್ತೆಯಲ್ಲಿರುವ 2 ಸಾವಿರ ನಿವೇಶನಗಳ ಹಂಚಿಕೆ ಮತ್ತು ಮೂಲಭೂತ ಸೌಕರ್ಯ ಕಲ್ಪಿಸುವಲ್ಲಿ ಗೋಲ್ಮಾಲ್ ಆಗಿರುವುದು ಗುಟ್ಟಾಗಿ ಉಳಿದಿಲ್ಲ.

ಎರಡು ಸಾವಿರ ಮನೆ ನಿರ್ಮಾಣ ಕೈಬಿಟ್ಟು ನಿವೇಶನ ನೀಡಲು ನಿರ್ಧರಿಸಲಾಯಿತು. ಅದರಲ್ಲಿ ಕೆಲವೊಂದಿಷ್ಟು ನಿರ್ಮಾಣ ಮಾಡಿದ ಮನೆ ಹಾಳು ಬಿದ್ದು, ಕೊಂಪೆಯಂತಾಗಿವೆ. ಅವುಗಳ ಸ್ಥಿತಿ ನೋಡುವಂತಿಲ್ಲ.

ಮನೆ ನಿರ್ಮಾಣ ಕೈಬಿಟ್ಟು,ನಿವೇಶವನ್ನೇನು ನೀಡಲು ನಿರ್ಧರಿಸಿ ಇದುವರೆಗೂ 1400 ನಿವೇಶನ ಹಂಚಿಕೆ ಮಾಡಲಾಗಿದೆ. ಉಳಿದ 600 ಹಂಚಿಕೆ ಮಾಡಬೇಕಾಗಿದೆ. ಆದರೆ, ಇವುಗಳ ಹಂಚಿಕೆಯಲ್ಲಿ ಭಾರಿ ಗೋಲ್ ಮಾಲ್ ಆಗಿದೆ. ನಗರ ನಿವಾಸಿಗಳಿಗೆ ಹಂಚಿಕೆ ಮಾಡಬೇಕಾಗಿರುವುದನ್ನು ಗ್ರಾಮೀಣ ವಾಸಿಗಳಿಗೂ ನೀಡಲಾಗಿದೆ. ಒಂದೇ ಕುಟುಂಬಕ್ಕೆ ನಾಲ್ಕಾರು ನಿವೇಶನ ನೀಡಲಾಗಿದೆ ಎನ್ನುವ ಆರೋಪ ಇದ್ದು, ಈ ಕುರಿತು ದಲಿತ ಸಂಘಟನೆಯಿಂದ ಸರ್ಕಾರಕ್ಕೆ ಮನವಿ ಸಲ್ಲಿಸುವುದಾಗಿ ರಾಮಣ್ಣ ಕಂದಾರಿ ಹೇಳುತ್ತಾರೆ.

ಕನ್ನಡಪ್ರಭ ವರದಿಗಳನ್ನಾಧರಿಸಿಯೇ ಸಮಗ್ರ ತನಿಖೆಗೆ ಆಗ್ರಹಿಸುತ್ತೇವೆ ಎನ್ನುತ್ತಾರೆ. ಅಗತ್ಯಬಿದ್ದರೆ ಹೋರಾಟ ಮಾಡುವುದಾಗಿ ಹೇಳಿದ್ದಾರೆ.

ಕೊಪ್ಪಳ ಪಾಲಿಗೆ ಇದೊಂದು ವರವಾಗಬೇಕಾಗಿದ್ದ ಯೋಜನೆ. ಒಟ್ಟು 6 ಸಾವಿರ ಮನೆ ನಿರ್ಮಾಣ ಮಾಡುವ ಈ ಯೋಜನೆ ಇಚ್ಛಾಶಕ್ತಿಯ ಕೊರತೆಯಿಂದ ಪ್ರಾರಂಭದಲ್ಲಿ ಕೇವಲ 2ಸಾವಿರ ನಿವೇಶನ ಮಾತ್ರ ಮಾಡುವಲ್ಲಿ ಸಾಧ್ಯವಾಯಿತು. ಅವುಗಳನ್ನು ಸಹ ಮನೆ ನಿರ್ಮಾಣ ಮಾಡುವ ಯೋಜನೆ ಕೈಬಿಟ್ಟು, ಈಗ ಕೇವಲ ನಿವೇಶನ ಮಾತ್ರ ಮಾಡಲಾಗುತ್ತಿದೆ. ಇವುಗಳ ಹಂಚಿಕೆ ಹಾಗೂ ಮೂಲಭೂತ ಸೌಕರ್ಯದಲ್ಲೂ ಗೋಲ್ ಮಾಲ್ ಆಗಿದೆ ಎನ್ನುತ್ತಾರೆ ಹೋರಾಟಗಾರ ಡಾ. ಜ್ಞಾನಸುಂದರ.

ಕೊಪ್ಪಳ ನಗರದ ಪಾಲಿಗೆ ಇಷ್ಟೊಂದು ಮಹಾತ್ವಾಕಾಂಕ್ಷಿ ಯೋಜನೆ ಹಳ್ಳಹಿಡಿದಿರುವುದು ಮಾತ್ರ ದುರಂತವೇ ಸರಿ. ಸೂರಿಲ್ಲದವರ ಬಾಳಲ್ಲಿ ಬೆಳಕಾಗಬೇಕಾಗಿತ್ತು. ಆದರೆ, ಯೋಜನೆ ಹಳ್ಳ ಹಿಡಿದು, ಈಗಲೂ ಜಾಲಿ ಕಂಟಿ ಬೆಳೆದು ನಿಂತಿದ್ದು, ಕನಿಷ್ಠ ಸೌಕರ್ಯ ಇಲ್ಲ. ಆದರೆ, ಇದಕ್ಕೆ ಮೂಲಭೂತ ಸೌಕರ್ಯ ಒದಗಿಸುವುದಕ್ಕಾಗಿ ಹಲವಾರು ಬಾರಿ ಕೊಪ್ಪಳ ನಗರಸಭೆಯಲ್ಲಿ ಲಕ್ಷಾಂತರ ಖರ್ಚು ಹಾಕಲಾಗಿದೆ. ಆದರೆ, ಅಲ್ಲಿ ಒಂದೇ ಒಂದು ಕಂಟಿ ತೆರವು ಮಾಡಿಲ್ಲ ಎನ್ನುವ ಆರೋಪವೂ ಇದೆ. ಹೀಗಾಗಿ, ಈ ಕುರಿತು ಸಮಗ್ರ ತನಿಖೆ ಮಾಡಿದರೆ ಅದೆಲ್ಲವೂ ಬೆಳಕಿಗೆ ಬರಲಿದೆ.

ಜಿಲ್ಲಾಧಿಕಾರಿಗಳೇ ಇತ್ತ ನೋಡಿ

ಕೊಪ್ಪಳ ನಗರಸಭೆಯಲ್ಲಿ ಅಧ್ಯಕ್ಷರು, ಸದಸ್ಯರ ಅವಧಿ ಮುಗಿದಿರುವುದರಿಂದ ಜಿಲ್ಲಾಧಿಕಾರಿ ಡಾ.ಸುರೇಶ ಇಟ್ನಾಳ ಈಗ ಆಡಳಿತಾಧಿಕಾರಿಗಳಾಗಿದ್ದಾರೆ. 2012 ರಿಂದ ಇಲ್ಲಿಯವರೆಗೂ ಹಿರೇಸಿಂದೋಗಿ ರಸ್ತೆಯಲ್ಲಿರುವ 2 ಸಾವಿರ ನಿವೇಶನಗಳ ಕರ್ಮಕಾಂಡದತ್ತ ಕಣ್ಣಾಡಿಸಬೇಕಾಗಿದೆ. ಏನೇನು ಆಗಿದೆ ಎನ್ನುವುದನ್ನು ಪರಿಶೀಲನೆ ಮಾಡಿ ಅದಕ್ಕೊಂದು ಮುಕ್ತಿ ನೀಡಬೇಕಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೋಣ ತಾಲೂಕಿನಲ್ಲಿ 36 ಶುದ್ಧ ನೀರಿನ ಘಟಕಗಳೇ ಬಂದ್!
ಮಕ್ಕಳಲ್ಲಿ ಮೌಲ್ಯಯುತ ಶಿಕ್ಷಣ ಬೆಳೆಸುವುದು ಅವಶ್ಯಕ