ಶಿವಾನಂದ ಗೊಂಬಿ ಹುಬ್ಬಳ್ಳಿ
ಕಳೆದ ವಿಧಾನಸಭೆಯಲ್ಲಿ ಬಿಜೆಪಿಯೊಂದಿಗೆ ಮುನಿಸಿಕೊಂಡು ಶೆಟ್ಟರ್ ಕಾಂಗ್ರೆಸ್ ಸೇರಿದ್ದರು. ಕಾಂಗ್ರೆಸ್ಗೆ ಲಿಂಗಾಯತ ಸಮುದಾಯದ ದೊಡ್ಡ ಲೀಡರ್ ಸಿಕ್ಕಂತಾಗಿತ್ತು. ಅಂದುಕೊಂಡಂತೆ ಕಾಂಗ್ರೆಸ್ ಕೂಡ ಅತ್ಯಂತ ಗೌರವಯುತವಾಗಿಯೇ ಶೆಟ್ಟರ್ ಅವರನ್ನು ನಡೆಸಿಕೊಂಡಿದೆ. ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಿಂದ ಟಿಕೆಟ್ ಕೂಡ ಕೊಟ್ಟಿತ್ತು. ಆದರೆ ಅಲ್ಲಿ ಪರಾಭವಗೊಂಡಿದ್ದರು.ಆದರೆ ಪ್ರಮುಖ ಲಿಂಗಾಯತ ಸಮುದಾಯಕ್ಕೆ ಸೇರಿದ ದೊಡ್ಡ ಲೀಡರ್ ಆಗಿದ್ದ ಕಾರಣ ಅವರ ಕ್ಷೇತ್ರದಲ್ಲಿ ಸೋತರೂ ಸುತ್ತಮುತ್ತಲಿನ ಕ್ಷೇತ್ರಗಳ ಮೇಲೆ ಅವರ ಪ್ರಭಾವ ಜಾಸ್ತಿ ಇತ್ತು. ಹಾವೇರಿ, ಧಾರವಾಡ, ಕೊಪ್ಪಳ ಸೇರಿದಂತೆ ಕೆಲ ಜಿಲ್ಲೆಗಳಲ್ಲಿ ಶೆಟ್ಟರ್ ಪ್ರಭಾವದಿಂದ ಬಿಜೆಪಿ ಅಭ್ಯರ್ಥಿಗಳು ಸೋತಿದ್ದು ಸುಳ್ಳಲ್ಲ.
ಆಪರೇಷನ್ ಹಸ್ತಕ್ಕೆ ಹಿನ್ನಡೆ: ಇವರು ಕಾಂಗ್ರೆಸ್ಗೆ ಬಂದಿದ್ದರಿಂದ ಕೈಪಡೆಗೆ ಲಾಭವಾಗಿದ್ದಂತೂ ಸತ್ಯ. ಹೀಗಾಗಿ ಸೋತರೂ ವಿಧಾನ ಪರಿಷತ್ ಸದಸ್ಯತ್ವ ನೀಡಿತ್ತು. ಜತೆಗೆ ಉತ್ತರ ಕರ್ನಾಟಕದ ಭಾಗದಲ್ಲಿ ಆಪರೇಷನ್ ಹಸ್ತ ಮಾಡುವ ಜವಾಬ್ದಾರಿ ಶೆಟ್ಟರ್ ಹೆಗಲಿಗೆ ಕೈಪಡೆ ಹಾಕಿತ್ತು ಎಂದು ಹೇಳಲಾಗಿದೆ.ಅದಕ್ಕೆ ತಕ್ಕಂತೆ ಶೆಟ್ಟರ್ ಕೂಡ ಪ್ರಯತ್ನ ನಡೆಸಿದ್ದರು. ಈ ಕಾರಣದಿಂದ ಶಿರಹಟ್ಟಿಯ ಮಾಜಿ ಶಾಸಕ ರಾಮಣ್ಣ ಲಮಾಣಿ, ಕುಂದಗೋಳ ಮಾಜಿ ಶಾಸಕ ಎಸ್.ಐ. ಚಿಕ್ಕನಗೌಡರ, ತವನಪ್ಪ ಅಷ್ಟಗಿ ಸೇರಿದಂತೆ ಕೆಲ ಮಾಜಿ ಶಾಸಕರು, ಮುಖಂಡರು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದರು. ಇದು ಲೋಕಸಭೆ ಚುನಾವಣೆವರೆಗೂ ನಡೆಯುತ್ತದೆ. ಇನ್ನು ಹಲವರು ಕಾಂಗ್ರೆಸ್ ಬರುತ್ತಾರೆ ನೋಡ್ತಾ ಇರಿ ಎಂದು ಶೆಟ್ಟರ್ ಅವರೇ ಬಹಿರಂಗವಾಗಿಯೇ ಹೇಳುತ್ತಿದ್ದರು. ಇದೀಗ ಶೆಟ್ಟರ್ ಬಿಜೆಪಿ ಸೇರಿದ್ದರಿಂದ "ಆಪರೇಷನ್ ಹಸ್ತ "ಕ್ಕೆ ಹಿನ್ನಡೆಯಾದಂತಾಗಿದೆ ಎಂಬುದು ಮಾತ್ರ ಸ್ಪಷ್ಟ.
ಹಿಡಿದಿಟ್ಟುಕೊಳ್ಳಲು ಕೈ ಯತ್ನ: ಶೆಟ್ಟರ್ ಮಧ್ಯಸ್ಥಿಕೆಯಲ್ಲಿ ಸೇರ್ಪಡೆಯಾಗಿರುವವರು ಕಥೆಯೇನು? ಎಂಬ ಪ್ರಶ್ನೆ ಉದ್ಭವವಾಗಿದೆ. ಚಿಕ್ಕನಗೌಡರ ಅವರು ಶೆಟ್ಟರ್, ಡಿ.ಕೆ. ಶಿವಕುಮಾರ ಸಮ್ಮುಖದಲ್ಲೇ ಕಾಂಗ್ರೆಸ್ ಸೇರಿದ್ದರು. ಇವರು ಸೇರ್ಪಡೆಯಾಗಿ ಕೆಲ ದಿನಗಳಲ್ಲಿ ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿದ್ದರು. ಯಡಿಯೂರಪ್ಪ ಸಂಬಂಧಿಯೂ ಆಗಿದ್ದ ಚಿಕ್ಕನಗೌಡರ ನಾನು ಕಾಂಗ್ರೆಸ್ ಸೇರಿಲ್ಲ. ಬಿಜೆಪಿಯಲ್ಲೂ ಇಲ್ಲ. ಪಕ್ಷೇತರನಾಗಿ ಸ್ಪರ್ಧಿಸಿದ್ದೆ ಎರಡು ಪಕ್ಷಗಳೊಂದಿಗೆ ಅಂತರ ಕಾಯ್ದುಕೊಂಡಿದ್ದೇನೆ ಎಂದು ತಿಳಿಸಿದ್ದರು. ಇದೀಗ ಅವರು ಕೂಡ ಬಿಜೆಪಿಗೆ ಮರಳಿ ಸೇರುವ ಸಾಧ್ಯತೆಯಿದೆ.
ಒಟ್ಟಿನಲ್ಲಿ ಶೆಟ್ಟರ್ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವುದು ಭಾರೀ ಸಂಚಲನವನ್ನುಂಟು ಮಾಡಿರುವುದಂತೂ ಸತ್ಯ.
9 ತಿಂಗಳು 8 ದಿನ: ಜಗದೀಶ ಶೆಟ್ಟರ್ 9 ತಿಂಗಳು ಎಂಟು ದಿನಕ್ಕೆ ಸರಿಯಾಗಿ ಕಾಂಗ್ರೆಸ್ ತೊರೆದಿದ್ದಾರೆ. ಕಳೆದ ವಿಧಾನಸಭೆ ಹೊಸ್ತಿಲಲ್ಲಿ ಅಂದರೆ ಏ. 17ರಂದು ಬಿಜೆಪಿಯೊಂದಿಗೆ ಮುನಿಸಿಕೊಂಡು ಕಾಂಗ್ರೆಸ್ ಸೇರಿದ್ದರು. ಇದೀಗ ಜ. 25ಕ್ಕೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದಾರೆ. ಬರೋಬ್ಬರಿ 9 ತಿಂಗಳು 8 ದಿನದಲ್ಲಿ ಕಾಂಗ್ರೆಸ್ ತೊರೆದಂತಾಗಿದೆ.