ವಾಸ್ತುದೋಷಕ್ಕೆ ಮನೆ ಖಾಲಿ ಮಾಡಿದ ಶೆಟ್ಟರ್‌

KannadaprabhaNewsNetwork |  
Published : Aug 14, 2024, 12:52 AM IST
ಸಂಸದ ಜಗದೀಶ ಶೆಟ್ಟರ್‌ ಬಾಡಿಗೆಗೆ ಇದ್ದ ಬೆಳಗಾವಿಯ ಕುಮಾರಸ್ವಾಮಿ ಲೇಔಟ್‌ನಲ್ಲಿರುವ ಮನೆ. | Kannada Prabha

ಸಾರಾಂಶ

ಲೋಕಸಭೆ ಚುನಾವಣೆ ವೇಳೆ ಬೆಳಗಾವಿ ನಗರದಲ್ಲಿ ಬಾಡಿಗೆ ಮನೆ ಮಾಡಿದ್ದ ಮಾಜಿ ಸಿಎಂ ಜಗದೀಶ ಶೆಟ್ಟರ್‌ ಚುನಾವಣೆಯಲ್ಲಿ ಗೆದ್ದ ಬಳಿಕ ವಾಸ್ತುದೋಷದ ನೆಪದಲ್ಲಿ ಬಾಡಿಗೆ ಮನೆಯನ್ನು ಖಾಲಿ ಮಾಡಿದ್ದಾರೆ.

ಶ್ರೀಶೈಲ ಮಠದ

ಕನ್ನಡಪ್ರಭ ವಾರ್ತೆ ಬೆಳಗಾವಿ

ಲೋಕಸಭೆ ಚುನಾವಣೆ ವೇಳೆ ಬೆಳಗಾವಿ ನಗರದಲ್ಲಿ ಬಾಡಿಗೆ ಮನೆ ಮಾಡಿದ್ದ ಮಾಜಿ ಸಿಎಂ ಜಗದೀಶ ಶೆಟ್ಟರ್‌ ಚುನಾವಣೆಯಲ್ಲಿ ಗೆದ್ದ ಬಳಿಕ ವಾಸ್ತುದೋಷದ ನೆಪದಲ್ಲಿ ಬಾಡಿಗೆ ಮನೆಯನ್ನು ಖಾಲಿ ಮಾಡಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಜಗದೀಶ ಶೆಟ್ಟರ್‌ ಬೆಳಗಾವಿಯ ಕುಮಾರಸ್ವಾಮಿ ಬಡಾವಣೆಯ ಮೊದಲ ಮುಖ್ಯ ರಸ್ತೆಯಲ್ಲಿನ 3ನೇ ತಿರುವಿನಲ್ಲಿ ಬಾಡಿಗೆ ಮನೆ ಮಾಡಿದ್ದರು. ಬೆಳಗಾವಿಯಲ್ಲಿಯೇ ಇದ್ದು, ಕ್ಷೇತ್ರದ ಜನತೆಗೆ ಸ್ಪಂದಿಸುವುದಾಗಿಯೂ ಭರವಸೆ ನೀಡಿದ್ದರು. ಆದರೆ, ಇದೀಗ ಇದ್ದಕ್ಕಿದಂತೆಯೇ ಬಾಡಿಗೆ ಮನೆಯನ್ನ ಶೆಟ್ಟರ್‌ ಖಾಲಿ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ. ಈ ಮನೆಯನ್ನು ಮಾಲೀಕ ಬೇರೆಯವರಿಗೆ ಬಾಡಿಗೆಗೆ ನೀಡಿದ್ದಾರೆ. ಆದರೆ, ಮನೆಯ ಕಾಂಪೌಂಡ್‌ ಮೇಲೆ ಶೆಟ್ಟರ್‌ ಅ‍ವರ ನೇಮ್‌ ಪ್ಲೇಟ್‌ ಇನ್ನೂ ಹಾಗೆಯೇ ಇದೆ. ಲೋಕಸಭೆ ಚುನಾವಣೆಗೂ ಮುನ್ನ ಬಾಡಿಗೆ ಮನೆ ಪಡೆದು ಪತ್ನಿ, ಪುತ್ರ ಸೇರಿದಂತೆ ಕುಟುಂಬ ಸಮೇತರಾಗಿ ಬೆಳಗಾವಿಗೆ ಸ್ಥಳಾಂತರವಾಗಿದ್ದರು. ಯುಗಾದಿ ಬಳಿಕ ಗೃಹ ಪ್ರವೇಶ ಮಾಡಿ ಹಾಲು ಉಕ್ಕಿಸುವ ಸಂಪ್ರದಾಯ ನೆರವೇರಿಸಿದ್ದರು. ಆದರೆ, ಆ ಮನೆಯಲ್ಲಿ ವಾಸ್ತವ್ಯ ಮಾಡಿದ್ದು ಅಪರೂಪ. ಜಗದೀಶ ಶೆಟ್ಟರ್‌ ಆಗಲಿ, ಅವರ ಕುಟುಂಬಸ್ಥರಾಗಲಿ ಯಾರೂ ಕೂಡ ಬಾಡಿಗೆ ಮನೆಯಲ್ಲಿ ಹೆಚ್ಚು ದಿನ ವಾಸವಾಗಿಲ್ಲ. ಹಾಗಾಗಿ, ಮನೆ ಆವರಣ ಬಿಕೋ ಎನ್ನುತ್ತಲೇ ಇತ್ತು. ಚುನಾವಣೆ ಸಂದರ್ಭದಲ್ಲಿ ಐಷಾರಾಮಿ ಹೊಟೇಲ್‌ನಲ್ಲೇ ತಂಗಿದ್ದರು.

ಚುನಾವಣೆ ಸಂದರ್ಭದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಬಿಜೆಪಿ ಅಭ್ಯರ್ಥಿ ಶೆಟ್ಟರ ಸ್ಥಳೀಯರಲ್ಲ, ಹೊರಗಿನವರು, ಬೆಳಗಾವಿಯಲ್ಲಿ ಅವರಿಗೆ ಅಡ್ರೆಸ್‌ ಎಲ್ಲಿದೆ ಎಂದು ಪ್ರಶ್ನಿಸುತ್ತಿದ್ದರು. ಹೀಗಾಗಿ, ಶೆಟ್ಟರ್‌ ಅವರು ಸಚಿವೆ ಲಕ್ಷ್ಮೀ ಹೆಬ್ಬಾಳಕರ ಪ್ರತಿನಿಧಿಸುವ ಬೆಳಗಾವಿ ಗ್ರಾಮೀಣ ಕ್ಷೇತ್ರ ವ್ಯಾಪ್ತಿಯ ಎಚ್‌.ಡಿ.ಕುಮಾರಸ್ವಾಮಿ ಬಡಾವಣೆಯಲ್ಲಿಯೇ ಬಾಡಿಗೆ ಮನೆ ಮಾಡುವ ಮೂಲಕ ತಿರುಗೇಟು ನೀಡಿದ್ದರು.

ಆದರೆ, ಚುನಾವಣೆಗೆ ಆಯ್ಕೆ ಬಯಸಿ ಸಲ್ಲಿಸಿದ್ದ ನಾಮಪತ್ರದ ಜೊತೆಗೆ ಸಲ್ಲಿಸಿದ್ದ ಅಫಿಡವೀಟ್‌ನಲ್ಲಿ ಬೇರೆ ವಿಳಾಸವನ್ನು ನಮೂದಿಸಿದ್ದರು. ಬೆಳಗಾವಿಯಲ್ಲಿಯೇ ಕಾಯಂ ಆಗಿ ಇದ್ದು, ಜನಸೇವೆ ಮಾಡುವುದಾಗಿ ಭರವಸೆ ನೀಡಿದ್ದ ಅವರು ಚುನಾವಣೆಯಲ್ಲಿ ಗೆದ್ದ ಬಳಿಕ ಬೆಳಗಾವಿಯಿಂದಲೇ ದೂರ ಉಳಿದಿದ್ದರು. ಇದೀಗ, ಈಗ ಬಾಡಿಗೆ ಮನೆ ಖಾಲಿ ಮಾಡಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ವಾಸ್ತು ದೋಷ?: ಜಗದೀಶ ಶೆಟ್ಟರ್‌ ಅವರದ್ದು ಮಕರ ರಾಶಿ. ಮಕರ ರಾಶಿಗೆ ದಕ್ಷಿಣ ಮತ್ತು ಪಶ್ಚಿಮ ಶುಭ ದಿಕ್ಕುಗಳು. ಬಾಡಿಗೆ ಮನೆಗೆ ಮುಖ್ಯ ಪ್ರವೇಶ ದ್ವಾರ ಉತ್ತರ ದಿಕ್ಕಿನಲ್ಲಿದ್ದರೆ, ಪೂರ್ವ ದಿಕ್ಕಿನಲ್ಲಿ ಪ್ರವೇಶದ್ವಾರ ಇದೆ. ಈ ಎರಡೂ ದಿಕ್ಕುಗಳು ತಮಗೆ ಶುಭಕರವಲ್ಲ ಎಂಬುದನ್ನು ಅರಿತು ಅವರು ಮನೆ ಖಾಲಿ ಮಾಡಿದ್ದಾರೆ ಎನ್ನಲಾಗಿದೆ. ಆದರೆ, ಮನೆಯನ್ನು ವಾಸ್ತು ಶಾಸ್ತ್ರದ ಪ್ರಕಾರವೇ ನಿರ್ಮಿಸಲಾಗಿದೆ.ಬಾಡಿಗೆ ಮನೆಯಲ್ಲಿ ವಾಸ್ತು ದೋಷ ಇರಲಿಲ್ಲ. ಎಲ್ಲವೂ ಸರಿಯಿತ್ತು. ಕಾಯಂ ಆಗಿ ಮನೆ ನಿರ್ಮಿಸುವ ಹಿನ್ನೆಲೆಯಲ್ಲಿ ನಿವೇಶನ ನೋಡುತ್ತಿದ್ದೇನೆ. ಶೀಘ್ರದಲ್ಲೇ ನಿವೇಶನ ಖರೀದಿಸಿ, ಮನೆ ಕಟ್ಟಲಾಗುವುದು. ಕ್ಷೇತ್ರದ ಜನತೆಗೆ ಲಭ್ಯವಾಗುವ ನಿಟ್ಟಿನಲ್ಲಿ ವಾರದಲ್ಲಿ ಮೂರ್ನಾಲ್ಕು ದಿನ ಬೆಳಗಾವಿಯಲ್ಲೇ ಇರುತ್ತೇನೆ.

-ಜಗದೀಶ ಶೆಟ್ಟರ್‌, ಸಂಸದ ಬೆಳಗಾವಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೇಲ್ಸೇತುವೆಗಳ ಕೆಳಭಾಗದ ಸ್ಥಳಗಳ ಸುಂದರೀಕರಣಕ್ಕೆ ಯೋಜನೆ
ಕ್ಯಾಬಿನೆಟ್‌ ಸಬ್‌ ಕಮಿಟಿ ವರದಿ ಬಳಿಕ ನೈಸ್‌ ಕಂಪನಿ ವಿರುದ್ಧ ಕ್ರಮ: ಸತೀಶ್‌