ಶೆಟ್ಟಿಕೊಪ್ಪ ಅಯ್ಯಪ್ಪ ದೇಗುಲ, ಸಮುದಾಯ ಭವನಕ್ಕೆ 6 . 41ಕೋಟಿ ಮಂಜೂರು

KannadaprabhaNewsNetwork |  
Published : Oct 07, 2024, 01:35 AM IST
ಎಂ.ಶ್ರೀನಿವಾಸ್ | Kannada Prabha

ಸಾರಾಂಶ

ನರಸಿಂಹರಾಜಪುರ, ತಾಲೂಕಿನ ರಸ್ತೆ, ದೇವಸ್ಥಾನ, ಸಮುದಾಯ ಭವನಗಳಿಗೆ ಒಟ್ಟು ₹6.41 ಕೋಟಿ ರು. ಮಂಜೂರಾಗಿದೆ ಎಂದು ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಶ್ರೀನಿವಾಸ್ ತಿಳಿಸಿದರು.

35 ಕೋಟಿ ರು. ವೆಚ್ಚದ ಹೊನ್ನೇಕೊಡಿಗೆ ಸೇತುವೆ ಕಾಮಗಾರಿ ಪ್ರಗತಿ । ಡಿಸೆಂಬರ್‌ ತಿಂಗಳಲ್ಲಿ ಉದ್ಘಾಟನೆ

: ಎಂ.ಶ್ರೀನಿವಾಸ್‌ ಮಾಹಿತಿ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ತಾಲೂಕಿನ ರಸ್ತೆ, ದೇವಸ್ಥಾನ, ಸಮುದಾಯ ಭವನಗಳಿಗೆ ಒಟ್ಟು ₹6.41 ಕೋಟಿ ರು. ಮಂಜೂರಾಗಿದೆ ಎಂದು ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಶ್ರೀನಿವಾಸ್ ತಿಳಿಸಿದರು.

ಭಾನುವಾರ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಶೆಟ್ಟಿಕೊಪ್ಪ ಅಯ್ಯಪ್ಪಸ್ವಾಮಿ ದೇವಸ್ಥಾನದ ಸಮುದಾಯ ಭವನಕ್ಕೆ 50 ಲಕ್ಷ ರು. ಮಂಜೂರಾಗಿದೆ. ಶೀಘ್ರದಲ್ಲೇ ಸಮುದಾಯದ ಕಾಮಗಾರಿ ಪ್ರಾರಂಭವಾಗಲಿದೆ. ತಾಲೂಕು ಭಾವಸಾರ ಕ್ಷತ್ರಿಯ ಸಮಾಜದವರಿಗೆ ಸಮುದಾಯ ಭವನ ನಿರ್ಮಿಸಲು ₹25 ಲಕ್ಷ ಅನುದಾನ ಮಂಜೂರು ಮಾಡಿಸಿದ್ದು. ಮುಂದೆ ಸಮುದಾಯ ಭವನಕ್ಕೆ ಹಣ ಕಡಿಮೆಯಾದರೆ ಮತ್ತೆ ಹಣ ಮಂಜೂರು ಮಾಡಿಸುತ್ತೇನೆ. ಸವಿತ ಸಮಾಜದವರು ಸಹ ಸಮುದಾಯ ಭವನಕ್ಕೆ ಬೇಡಿಕೆ ಇಟ್ಟಿದ್ದು ಅವರ ಸಮುದಾಯ ಭವನಕ್ಕೆ ₹25 ಲಕ್ಷ , ವಿಶ್ವ ಕರ್ಮ ಬ್ರಾಹ್ಮಣ ಸಮಾಜದವರು ಪಟ್ಟಣದ ಕಾಳಿಕಾಂಬ ದೇವಸ್ಥಾನ ನಿರ್ಮಿಸಲು ಮುಜರಾಯಿ ಇಲಾಖೆಯಿಂದ ₹10 ಲಕ್ಷ , ಕಳ್ಳಿಕೊಪ್ಪ ಆಂಜನೇಯ ದೇವಸ್ಥಾನ ನಿರ್ಮಿಸಲು ₹3 ಲಕ್ಷ , ಮೇದರ ಬೀದಿಯ ಅಂತರಘಟ್ಟಮ್ಮ ದೇವಸ್ಥಾನದ ಅಭಿವೃದ್ದಿಗೆ 3 ಲಕ್ಷ ಮಂಜೂರು ಮಾಡಿಸಿದ್ದೇನೆ. ಈ ಹಿಂದೆ ಅಂತರಘಟ್ಟಮ್ಮ ದೇವಸ್ಥಾನಕ್ಕೆ ಸಮುದಾಯ ಭವನ ನಿರ್ಮಿಸಿಕೊಟ್ಟಿದ್ದೇನೆ ಎಂದರು.

ಡಿಸೆಂಬರ್‌ ನಲ್ಲಿ ಸೇತುವೆ ಉದ್ಘಾಟನೆ: ₹ 35 ಕೋಟಿ ವೆಚ್ಚದ ನರಸಿಂಹರಾಜಪುರ- ಹೊನ್ನೇಕೊಡಿಗೆ ಸಂಪರ್ಕ ಸೇತುವೆ ಕಾಮಗಾರಿ ಪ್ರಗತಿಯಲ್ಲಿದೆ. ಡಿಸೆಂಬರ್‌ ತಿಂಗಳ ಹೊತ್ತಿಗೆ ಕಾಮಗಾರಿ ಮುಗಿಯಲಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೇತುವೆ ಉದ್ಘಾಟಿಸಲಿದ್ದಾರೆ. ಹೊನ್ನೇಕೊಡಿಗೆ ಗ್ರಾಪಂತಿ ವ್ಯಾಪ್ತಿಯ ಸಾವಿರಾರು ಜನರಿಗೆ ಅನುಕೂಲವಾಗಲಿ ಎಂದು ನಾನು ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿ ಹಣ ಮಂಜೂರು ಮಾಡಿಸಿಕೊಂಡು ಬಂದಿದ್ದೇನೆ. ಹೊಸ ಸೇತುವೆಯಿಂದ ನರಸಿಂಹರಾಜಪುರಕ್ಕೆ ಬರುವ ರಸ್ತೆ ಹಾಳಾಗಿದ್ದು ರಸ್ತೆ ಅಭಿವೃದ್ಧಿಗೆ ಲೋಕೋಪಯೋಗಿ ಸಚಿವರು ₹5 ಕೋಟಿ ಮಂಜೂರು ಮಾಡಿದ್ದಾರೆ ಎಂದರು.

ರಸ್ತೆ ಅಗಲೀಕರಣಕ್ಕೆ 60 ಕೋಟಿ: ಪಟ್ಟಣದ ಬಸ್ಸು ನಿಲ್ದಾಣದಿಂದ ಪ್ರವಾಸಿ ಮಂದಿರವರೆಗೆ ರಸ್ತೆ ಅಗಲೀಕರಣಕ್ಕೆ ₹60 ಕೋಟಿ ಬೇಕಾಗಲಿದ್ದು ಈ ಅನುದಾನಕ್ಕಾಗಿ ಸರ್ಕಾರದ ಮಟ್ಟದಲ್ಲಿ ಪ್ರಯತ್ನ ನಡೆಸಿದ್ದೇನೆ. ಶೀಘ್ರ ಹಣ ಮಂಜೂರಾಗಲಿದೆ. ರಾಜ್ಯ ಪ್ರವಾಸೋದ್ಯಮ ನಿಗಮದ ಸಿ.ಎಸ್‌.ಆರ್‌. ಫಂಡ್‌ ನಿಂದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅಭಿವೃದ್ಧಿಗೆ ₹25 ಲಕ್ಷ ನೀಡುತ್ತಿದ್ದೇವೆ.ಕಾಂಪೌಂಡು ಹಾಗೂ ಇತರ ಕಾಮಗಾರಿಗಳಿಗೆ ₹1 ಕೋಟಿ ಬೇಕಾಗಲಿದ್ದು ಈ ಬಗ್ಗೆ ಉನ್ನತ ಶಿಕ್ಷಣ ಸಚಿವರಲ್ಲಿ ಬೇಡಿಕೆ ಇಟ್ಟಿದ್ದೇವೆ ಎಂದರು.

ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಅಂಬೇಡ್ಕರ್‌ ಪ್ರತಿಮೆ ಸ್ಥಾಪಿಸಲು ₹1 ಕೋಟಿ ಹಣಕ್ಕೆ ಬೇಡಿಕೆ ಇಡಲಾಗಿದೆ. ಗಾಂಧಿ ಗ್ರಾಮದ ಪ.ವರ್ಗ, ಪ.ಜಾತಿ ಕಾಲೋನಿ ಸಮುದಾಯ ‍ಭವನ ನಿರ್ಮಿಸಲು ₹40 ಲಕ್ಷ, ಮುತ್ತಿನಕೊಪ್ಪ- ಆಲ್ದರ ರಸ್ತೆ ಅಭಿವೃದ್ದಿಗೆ ₹80 ಲಕ್ಷ ,ನ.ರಾ.ಪುರ ತಾಲೂಕಿನ ಪ.ಜಾತಿ ಕಾಲೋನಿಗಳಿಗೆ ಹೈಮಾಸ್ಕ್‌ ದೀಪಗಳಿಗೆ ₹60 ಲಕ್ಷ ಬೇಡಿಕೆ ಇಡಲಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತಶೆಟ್ಟಿ ಇದ್ದರು.

PREV

Recommended Stories

ಶ್ರೀ ಶ್ರೀ ರವಿಶಂಕರ್‌ಗೆ ವರ್ಲ್ಡ್ ಲೀಡರ್ ಫಾರ್ ಪೀಸ್ ಆ್ಯಂಡ್‌ ಸೆಕ್ಯೂರಿಟಿ ಪ್ರಶಸ್ತಿ
ಹಾಡಹಗಲೇ ಮನೆಗೆ ನುಗ್ಗಿ ಚಹಾ ವ್ಯಾಪಾರಿಯ ಕತ್ತು ಕೊಯ್ದು ಹತ್ಯೆ