ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಇಂಡಿಗೊ ಸಂಸ್ಥೆ ನಿತ್ಯ ಶಿವಮೊಗ್ಗ-ಬೆಂಗಳೂರು ಮಧ್ಯೆ ವಿಮಾನ ಹಾರಾಟ ನಡೆಸುತ್ತಿತ್ತು. ಮೂರು ತಿಂಗಳ ಅವಧಿಗೆ (ಅಕ್ಟೋಬರ್) ಕಾರ್ಯಾಚರಣೆ ಸ್ಥಗಿತಗೊಳಿಸುವುದಾಗಿ ಸಂಸ್ಥೆ ತಿಳಿಸಿದೆ.
ಶಿವಮೊಗ್ಗ-ಬೆಂಗಳೂರು ನಡುವೆ ಹೆಚ್ಚಿನ ಜನದಟ್ಟಣೆ ಇರುವುದರಿಂದ ವಿಮಾನ ಹಾರಾಟ ನಿಲ್ಲಿಸದಂತೆ ಇಂಡಿಗೊ ಸಂಸ್ಥೆಗೆ ಸರ್ಕಾರ ಮನವಿ ಮಾಡಿತ್ತು. ಆದರೆ ಅದಕ್ಕೆ ಸಂಸ್ಥೆ ಒಪ್ಪಿಲ್ಲ. ಡಿಜಿಸಿಎ ಮಾರ್ಗಸೂಚಿ ಪಾಲನೆಗಾಗಿ ಬೆಂಗಳೂರು-ಶಿವಮೊಗ್ಗ ಮಾತ್ರವಲ್ಲ ಕಡಿಮೆ ದೂರದ ಮಾರ್ಗಗಳಲ್ಲಿ ಬಹಳಷ್ಟು ಕಡೆ ಶುಕ್ರವಾರದಿಂದ ಸಂಸ್ಥೆ ವಿಮಾನ ಹಾರಾಟ ನಿಲ್ಲಿಸುತ್ತಿದೆ.ಗುಜರಾತ್ನ ಅಹಮದಾಬಾದ್ನಲ್ಲಿ 2025ರ ಜೂನ್ 12 ರಂದು ಏರ್ಇಂಡಿಯಾ ವಿಮಾನ (ಎಐ171) ಪತನದ ನಂತರ ವಿಮಾನಗಳ ಸುರಕ್ಷಿತ ಕಾರ್ಯಾಚರಣೆಗೆ ಡಿಜಿಸಿಎ ಕೆಲವು ನಿಯಮಾವಳಿ ರೂಪಿಸಿದೆ. ಅವುಗಳ ಅಳವಡಿಕೆಗೆ ಒಂದು ವರ್ಷದ ಕಾಲಾವಕಾಶ ವಿಮಾನಯಾನ ಸಂಸ್ಥೆಗಳಿಗೆ ನೀಡಲಾಗಿದೆ. ಆ ನಿಯಮಾವಳಿ ಪಾಲನೆಯಿಂದ ಇಂಡಿಗೊ ಸಂಸ್ಥೆಗೆ ಪೈಲಟ್ಗಳ ಕೊರತೆ ಆಗಿದೆ.
ವಿಜಿಎ- ಒಪ್ಪಂದ ಮುಕ್ತಾಯ:
ಬೆಂಗಳೂರು- ಶಿವಮೊಗ್ಗ- ಬೆಂಗಳೂರು ಮಾರ್ಗದ ರದ್ದತಿ ತಾತ್ಕಾಲಿಕ.ಆದರೆ ಸಮಸ್ಯೆಗಳೆಲ್ಲ ಪರಿಹಾರವಾಗಿ ಸೇವೆ ಪುನಾರಂಭ ಆಗುವುದಕ್ಕೆ ಯಾವುದೇ ಕಾಲಮಿತಿ ಘೋಷಣೆ ಆಗಿಲ್ಲ. ಇದರ ಬೆನ್ನಿಗೆ ಇತರೆ ವಿಮಾನಯಾನ ಸಂಸ್ಥೆಗಳ ಜತೆಗೆ ಚರ್ಚೆ ಆರಂಭವಾಗಿದೆ.
ಪ್ರತಿ ದಿನವು ಈ ವಿಮಾನ ಬಹುತೇಕ ಭರ್ತಿಯಾಗಿಯೇ ತೆರಳುತ್ತಿತ್ತು. ಶಿವಮೊಗ್ಗ ವಿಮಾನ ನಿಲ್ದಾಣದ ಮಟ್ಟಿಗೆ ಈ ವಿಮಾನ ಅತಿ ಹೆಚ್ಚು ಪ್ರಯಾಣಿಕರು ಸಂಚರಿಸುವ ವಿಮಾನವಾಗಿತ್ತು. 2026ರ ಮೇ 1 ರಿಂದ ಶಿವಮೊಗ್ಗ - ಬೆಂಗಳೂರು ನಡುವೆ ವಿಮಾನಯಾನ ಸೇವೆ ಸ್ಥಗಿತಗೊಳಿಸಿದೆ.
ಇಂಡಿಗೋ ವಿಮಾನ ನಿಲ್ದಾಣದ ಹಿನ್ನೆಲೆ
2023ರ ಫೆ.27 ರಂದು ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆಯಾಯಿತು. ಆದರೆ ನಾಗರಿಕ ವಿಮಾನ ಸೇವೆ ಆರಂಭವಾಗಿದ್ದು ಆಗಸ್ಟ್ ತಿಂಗಳಲ್ಲಿ. ಆ.31 ರಿಂದ ಬೆಂಗಳೂರು - ಶಿವಮೊಗ್ಗ ಇಂಡಿಗೋ ವಿಮಾಯಾನ ಸೇವೆ ಶುರುವಾಯಿತು. ಅಂದು ಬೆಳಗ್ಗೆ 9.50 ಕ್ಕೆ ಬೆಂಗಳೂರಿನಿಂದ ಹೊರಟ ವಿಮಾನ ಶಿವಮೊಗ್ಗದಲ್ಲಿ ಲ್ಯಾಂಡ್ ಆಯಿತು. ಮೊದಲ ವಿಮಾನಕ್ಕೆ ವಾಟರ್ ಸಲ್ಯೂಟ್ ನೀಡಲಾಗಿತ್ತು. ಈ ಬೆಳವಣಿಗೆ ಕಂಡು ಶಿವಮೊಗ್ಗದ ಜನ ಪುಳಕಿತರಾಗಿದ್ದರು.ಇಂಡಿಗೋ ವಿಮಾನಯಾನ ಸಂಸ್ಥೆಯ ಎಟಿಆರ್ ಮಾದರಿಯ ವಿಮಾನ ಶಿವಮೊಗ್ಗ - ಬೆಂಗಳೂರು ಮಧ್ಯೆ ನಿತ್ಯ ಹಾರಾಟ ಮಾಡುತ್ತಿತ್ತು. 72 ಸೀಟುಗಳಿದ್ದ ವಿಮಾನ ಇದು.